ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಹಲವು ವಿಷಯಗಳ ಬಗ್ಗೆ ಪ್ರಸ್ತಾಪಿಸಿದೆ. ರಮೇಶ್ ಜಾರಕಿಹೊಳಿಗೆ ಜ್ವರವಂತೆ! ಪಾಪ ಹೇಗಿದ್ದಾರೋ ಎಲ್ಲಿದ್ದಾರೋ. ಪೊಲೀಸರೇ ಕೊಂಚ ವಿಚಾರಿಸಿಕೊಂಡು ಬನ್ನಿ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ದೂರು ನೀಡಿದ ಸಂತ್ರಸ್ತೆಯನ್ನು ಮೂರು ದಿನಗಳಿಂದ ನಿರಂತರವಾಗಿ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿ ರಮೇಶ್ ಜಾರಕಿಹೊಳಿಯನ್ನು ಬಂಧಿಸದೇ ತಲೆ ಮರೆಸಿಕೊಳ್ಳಲು ಸಹಕರಿಸಲಾಗುತ್ತಿದೆ. ಇತ್ತ ಯುವತಿಯನ್ನು ವಿಚಾರಣೆ ನಡೆಸುತ್ತಿದ್ದರೆ, ಅತ್ತ ಆರೋಪಿ ನಾಪತ್ತೆಯಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಮಾನ ಮುಚ್ಚಿಕೊಳ್ಳಲು ಕಾಂಗ್ರೆಸ್ ಕಡೆ ಕೈತೋರಿಸುವ ಡಾಲರ್ ನಳಿನ್ ಕುಮಾರ್ ಕಟೀಲ್ ಅವರೇ. ಯತ್ನಾಳ್ ಅವರನ್ನು ನಿಭಾಯಿಸಲಾಗಲಿಲ್ಲ. ರೇಣುಕಾಚಾರ್ಯರನ್ನು ನಿಯಂತ್ರಿಸಲಿಲ್ಲ, ಈಶ್ವರಪ್ಪರನ್ನು ಕಂಟ್ರೋಲ್ ಮಾಡಲಿಲ್ಲ. ಶಾಸಕರ, ಸಚಿವರ ಜಗಳ ನಿಲ್ಲಿಸಲಿಲ್ಲ.
ನಿಮ್ಮದೇ ಪಕ್ಷದವರಲ್ಲಿ ತಾವು ನಾಲಾಯಕ್ ಎನಿಸಿಕೊಂಡು ಮತ್ತೊಬ್ಬರ ಬಗ್ಗೆ ಮಾತಾಡುವುದು ಹಾಸ್ಯಾಸ್ಪದ ಎಂದಿದೆ. ಅಲ್ಲದೆ, ಕಾಮಿಡಿ ಕಿಲಾಡಿ ನಳಿನ್ ಬೇರೊಬ್ಬರ ಕೀಲಿಗೊಂಬೆ ಅಧ್ಯಕ್ಷರಾಗಿ ಪಕ್ಷದ ಆಂತರಿಕ ಕಲಹವನ್ನು ನಿಭಾಯಿಸಲು ಅಗದ್ದಕ್ಕೆ ತಮಗೆ ಬೆನ್ನೆಲುಬಿಲ್ಲ ಎನ್ನುವುದು! ನಿಮ್ಮ ಮನೆಯಲ್ಲಿ ಬೆಂಕಿ ಬಿದ್ದಿದ್ದರೆ ಕಾಂಗ್ರೆಸ್ ಕಡೆ ಬೆಟ್ಟು ತೋರಿಸಿ ಬಚಾವಾಗುವ ನಿಮ್ಮ ಈ ಹೇಡಿತನದಿಂದ ಪಕ್ಷವೊಂದರ ಅಧ್ಯಕ್ಷ ಸ್ಥಾನಕ್ಕೆ ನಾಲಾಯಕ್ ಎಂದು ನಿರೂಪಿಸಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಸರ್ಕಾರವನ್ನು ಬೆದರಿಸಿದ, ಸರ್ಕಾರ ಅಧಿಕಾರಿಗಳನ್ನು ಬೆದರಿಸಿತು ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ತನಿಖೆ ಆರಂಭದಲ್ಲಿಯೇ ಆರೋಪಿ ಸಾಕ್ಷ್ಯ ನಾಶಕ್ಕೆ ಕೈ ಹಾಕಿದರೆ ಏನು ಮಾಡುತ್ತೀರಿ? ಆರೋಪಿ ಸಾಕ್ಷ್ಯಗಳಿಗೆ, ಸಂತ್ರಸ್ತೆಗೆ ಬೆದರಿಕೆ ಹಾಕಿದರೆ ಏನು ಮಾಡುತ್ತೀರಿ? ಪ್ರವೀಣ್ ಸೂದ್ ಅವರೇ? ಎಂದು ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರನ್ನು ಪ್ರಶ್ನಿಸಿದೆ.
ಬಿಜೆಪಿ ಸರ್ಕಾರದ ಆಡಳಿತ ತುಘಲಕ್ ದರ್ಬಾರ್ ಇದ್ದಂಗೆ. ಇಲ್ಲಿ ಆರೋಪಿಗೆ ಸರ್ಕಾರದ ಶ್ರೀರಕ್ಷೆ, ಸಂತ್ರಸ್ತೆಗೆ ವಿಚಾರಣೆಯ ಶಿಕ್ಷೆ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಂಬಂತೆ ಮಂತ್ರಿ ಮನೆಗೆ ಕರೆಸಿ ಲಸಿಕೆ ಹಾಕಿಸಿಕೊಂಡರೆ, ಆರೋಗ್ಯಾಧಿಕಾರಿಗೆ ಅಮಾನತು ಶಿಕ್ಷೆ. ಅಮಾನತಾಗಬೇಕಿದ್ದಿದ್ದು ಸಚಿವ ಬಿ.ಸಿ.ಪಾಟೀಲ ಅಲ್ಲವೇ ಯಡಿಯೂರಪ್ಪ ಅವರೇ? ಎಂದು ಪ್ರಶ್ನಿಸಿದೆ.