ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿದು ಎನ್ನಲಾದ ರಾಸಲೀಲೆ ಸಿಡಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಹೆಸರು ಕೇಳಿಬರುತ್ತಿದ್ದಂತೆಯೇ ಆಡಳಿತ ಪಕ್ಷವು ಕಾಂಗ್ರೆಸ್ಸನ್ನು ತರಾಟೆಗೆ ತೆಗೆದುಕೊಂಡಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯನವರನ್ನು ಕಾಲೆಳೆಯಲು ಶುರುಮಾಡಿದೆ.
ಕಾಗೆ ಹಿಕ್ಕೆ ಹಾಕಿದರೂ ಸಿದ್ದರಾಮಯ್ಯನವರು ಮೂಗು ತೂರಿಸುತ್ತಾರೆ. ಆದರೆ ಈ ಸಿಡಿ ಸಂಬಂಧ ಶಿವಕುಮಾರ್ ಅವರ ಪಾತ್ರದ ಬಗ್ಗೆ ಏನು ಮಾತನಾಡದೇ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದೆ. ಈ ರೀತಿ ಷಡ್ಯಂತರದಲ್ಲಿ ಭಾಗವಹಿಸುವುದು ಯಾವ ಸೆಕ್ಷನ್ ಪ್ರಕಾರ ಅಪರಾಧವಾಗುತ್ತದೆ ಎಂದು ಜನರ ಮುಂದೆ ಹೇಳಿ ಸಿದ್ದರಾಮಯ್ಯನವರೇ ಎಂದು ಕಾಲೆಳೆದಿದೆ.
ಸಹಾಯ ಮಾಡುವುದಕ್ಕೂ ಷಡ್ಯಂತರದಲ್ಲಿ ಭಾಗಿಯಾಗುವುದಕ್ಕೂ ವ್ಯತ್ಯಾಸವಿದೆ. ಈ ಷಡ್ಯಂತರದ ಭಾಗವಾದಿದ್ದ ಕಾರಣದಿಂದಲೇ ಹೆಗಲು ನೋಡಿಕೊಂಡಿದಲ್ಲವೆ. ಮಹಾ ನಾಯಕರೇ, ಈ ಪ್ರಕರಣ ಪ್ರಮುಖ ಮಾಸ್ಟರ್ ಮೈಂಡ್ಗಳೊಂದಿಗೆ ಅದರಲ್ಲೂಈ ಪ್ರಕರಣ ಬೆಳಕಿಗೆ ಬಂದ ನಂತರವೂ ಸಂಬಂಧ ಹೊಂದಲು ಅದು ಹೇಗೆ ಸಾಧ್ಯ ಎಂದು ಬಿಜೆಪಿ ಮತ್ತೊಂದು ಟವೀಟ್ನಲ್ಲಿ ಶಿವಕುಮಾರ್ ಅವರನ್ನು ಪ್ರಶ್ನಿಸಿದೆ.
ಶಿವಕುಮಾರ್ ಅವರೇ, ಆರಂಭದಲ್ಲಿ ಹೆಗಲು ಮುಟ್ಟಿಕೊಂಡು ನನ್ನನ್ನು ಸಿಲುಕಿಸುವ ಪ್ರಯತ್ನ ಎಂದಿರಿ. ಈಗ ಸಂತ್ರಸ್ತೆ ನನ್ನ ಭೇಟಿಗೆ ಪ್ರಯತ್ನಿಸಿದ್ದು ನಿಜ, ನರೇಶ್ ಅವರನ್ನು ನಾನು ಬಲ್ಲೆ. ಅವರ ಮನೆಗೆ ಹೋಗಿದ್ದೇನೆ ಎಂದಿದ್ದೀರಿ. ಅಂದರೆ ಪ್ರಕರಣದ ಎಲ್ಲಾ ಆಗುಹೋಗುಗಳು ನಿಮ್ಮ ನಿಯಂತ್ರಣದಲ್ಲೇ ನಡೆಯುತ್ತಿತ್ತು ಎಂಬುದು ಸ್ಪಷ್ಟ ಅಲ್ಲವೇ ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದೆ.