₹5 ಸಾವಿರ ಕೊಟ್ಟರೆ ಕೆಲಸಕ್ಕೆ ವಾಪಸ್: ವಜಾಗೊಂಡ ನೌಕರರ ಸುಲಿಗೆಗೆ ನಿಂತಿದೆಯೇ KSRTC ನೌಕರರ ಸಂಘ!?
ಬೆಂಗಳೂರು: 2021ರ ಸಾರಿಗೆ ಮುಷ್ಕರದ ಸಮಯದಲ್ಲಿ ಸಾರಿಗೆ ನೌಕರರು ಮತ್ತು ಅವರ ಕುಟುಂಬ ಸದಸ್ಯರ ಮೇಲೆ ದಾಖಲಿಸಿರುವ ನೂರಕ್ಕೂ ಹೆಚ್ಚು ಪೊಲೀಸ್ ಕೇಸ್ಗಳು ಇತ್ಯರ್ಥವಾಗುವ ಹಂತ ತಲುಪಿವೆ. ಇನ್ನು ಈ ನಡುವೆ ಈ ಕೇಸ್ ವಾಪಸ್ ಪಡೆಯಲು ಅಧಿಕಾರಿಗಳಿಗೆ ಹೇಳುತ್ತೇವೆ. ಆದರೆ ಅವರಿಗೆ 5 ಸಾವಿರ ರೂ. ಲಂಚ ಕೊಡಬೇಕು ಎಂದು ಸಾರಿಗೆ ಸಂಸ್ಥೆಯ ಸಂಘಟನೆಯೊಂದರ ಪದಾಧಿಕಾರಿಗಳು ಪೊಲೀಸ್ ಕೇಸ್ ದಾಖಲಾಗಿರುವ ನೌಕರರ ಬೆನ್ನುಬಿದ್ದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಅಂದರೆ, 2021ರ ಸಾರಿಗೆ ಮುಷ್ಕರದ ಸಮಯದಲ್ಲಿ ಬಸ್ ಚಾಲನೆ ಮಾಡಿದ ನೌಕರರಿಗೆ ಮುಷ್ಕರದ ಸಮಯದಲ್ಲಿ ಬಸ್ ಏಕೆ ಓಡಿಸುತ್ತಿದ್ದೀಯ ಎಂದು ಕೇಳಿದ ಕಾರಣ ಬಿಎಂಟಿಸಿ ಆಡಳಿತ ಮಂಡಳಿ ಫೋನ್ ಮಾಡಿರುವವರ ವಿರುದ್ಧ ಪೊಲೀಸ್ ಕೇಸನ್ನು ದಾಖಲಿಸಿ ಕೆಲಸದಿಂದ ವಜಾ ಮಾಡಿದೆ.
ಈ ಆಡಳಿತ ಮಂಡಳಿ ದಾಖಲಿಸಿರುವ ಪೊಲೀಸ್ ಕೇಸ್ಗಳನ್ನು ಹಿಂಪಡೆಯಲು ಸರ್ಕಾರಕ್ಕೆ ಸಲ್ಲಿಸಿರುವ ಮನವಿಯಲ್ಲಿ 98 ಕೇಸುಗಳು ಇದ್ದು, ಈ ಕೇಸ್ಗಳನ್ನು ಈಗಾಗಲೇ ಸರ್ಕಾರದ ಮಟ್ಟದಲ್ಲಿ ಹಿಂಪಡೆಯುವ ಬಗ್ಗೆ ಅಂತಿಮಘಟ್ಟ ತಲುಪಿದ್ದು ಅತೀ ಶೀಘ್ರದಲ್ಲೇ ಈ ಎಲ್ಲ ಕೇಸ್ಗಳನ್ನು ಆಡಳಿತ ಮಂಡಳಿ ಹಿಂಪಡೆಯಲಿದೆ. ಹೀಗಾಗಿ ಇದನ್ನು ತಿಳಿದ ಸಾರಿಗೆ ನೌಕರರ ಸಂಘದ ಖಜಾಂಚಿ ಯೋಗೇಶ್ ಎಂಬುವರು ವಜಾಗೊಂಡಿರುವ ನೌಕರರಿಗೆ ಲಂಚಕೊಟ್ಟರೆ ನಿಮ್ಮ ಕೇಸ್ ವಾಪಸ್ ಪಡೆಯುತ್ತಾರೆ ಇಲ್ಲದಿದ್ದರೆ ಕಷ್ಟವಾಗುತ್ತದೆ ಹೇಳಿದ್ದಾರೆ ಎನ್ನಲಾದ ಫೋನ್ ರೆಕಾರ್ಡ್ ಆಡಿಯೋವೊಂದು ಸಿಕ್ಕಿದೆ.
ವಜಾಗೊಳಿಸಿರುವುದರ ವಿರುದ್ಧ ನ್ಯಾಯಾಲಯದಲ್ಲಿ ಕೇಸ್ ನಡೆಸುತ್ತಿರುವ ನೌಕರರೊಬ್ಬರಿಗೆ ಇವರು ಫೋನ್ ಮಾಡಿ ಸರ್ಕಾರದಿಂದ ಕೇಸು ಹಿಂಪಡೆಯಲು ಅಧಿಕಾರಿಗಳಿಗೆ 5 ಸಾವಿರ ರೂ. ಲಂಚ ಕೊಡಬೇಕು. ಮೊದಲಿಗೆ 3000 ರೂ. ಕೊಡು ಕೇಸು ವಾಪಸ್ ಪಡೆದ ನಂತರ ಉಳಿದ 2,000 ಕೊಡುವೆಯಂತೆ ಎಂದು ಹೇಳಿದ್ದಾರೆ.
ಅದಕ್ಕೆ ನೌಕರ ನಾನು ಫೋನ್ ಪೇ ಮಾಡುತ್ತೇನೆ ಎಂದರೆ ಬೇಡ ಬೇಡ ನಗದನ್ನುತಂದು ಕೊಡು ಎಂದು ಹೇಳಿದ್ದಾರೆ. ಕಾರಣ ಫೋನ್ ಪೇ ಗೂಗಲ್ ಪೇ ಆದರೆ ದಾಖಲೆಗಳು ಸೃಷ್ಟಿಯಾಗುತ್ತವೆ. ಅವುಗಳನ್ನು ಹಿಡಿದುಕೊಂಡು ಕೇಸ್ ಹಾಕಿದರೆ ನಾವು ಸಿಕ್ಕಿಕೊಳ್ಳುತ್ತೇವೆ ಎಂಬ ಭಯ. ಇನ್ನು ವಜಾಗೊಂಡ ಈ ನೌಕರ ತನ್ನ ಅಸಹಾಯಕತೆ ಮತ್ತು ತಾನು ಕಷ್ಟದಲ್ಲಿ ಇದ್ದೇನೆ ಎಂದರೂ ಮಾನವೀಯತೆ ಇಲ್ಲದೆ ಹಣಕ್ಕಾಗಿ ಪೀಡಿಸಿದ್ದಾರೆ.
Related











