NEWSಉದ್ಯೋಗನಮ್ಮರಾಜ್ಯ

ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರದ ಯು-ಟರ್ನ್‌ ನಡೆ ಸಲ್ಲ: ಮುಖ್ಯಮಂತ್ರಿ ಚಂದ್ರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಸಂಬಂಧ ಯಾರದ್ದೋ ಒತ್ತಡಕ್ಕೆ ಮಣಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಿಢೀರ್ ಯು-ಟರ್ನ್ ಹೊಡೆದಿರುವುದು ಆಕ್ಷೇಪಾರ್ಹ ನಡೆಯಾಗಿದೆ. ಕನ್ನಡಿಗರಿಗೆ ಎಸಗಿದ ದ್ರೋಹವಾಗಿದೆ ಎಂದು ಮುಖ್ಯಮಂತ್ರಿ ಚಂದ್ರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಿಗರಿಗೆ ಖಾಸಗಿ ಕ್ಷೇತ್ರಗಳ ಉದ್ಯೋಗಗಳಲ್ಲಿನ ಮೀಸಲಾತಿ ನೀಡುವ ಬಗೆಗಿನ ಮಸೂದೆಯ ವಿಚಾರವಾಗಿ ನಗರದಲ್ಲಿ ಗುರುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಉದ್ಯೋಗದಲ್ಲಿ ಮೀಸಲಾತಿ ನೀಡುವುದಾಗಿ ಹೇಳಿದ್ದ ರಾಜ್ಯ ಸರ್ಕಾರದ ನಡೆ ಸ್ವಾಗತಾರ್ಹವಾಗಿತ್ತು. ಸರೋಜಿನಿ ಮಹಿಷಿ ವರದಿಯ ಜಾರಿಗೆ ಒತ್ತಾಯಿಸಿದ ಬಹು ದಿನಗಳ ಬೇಡಿಕೆಯಾಗಿತ್ತು. ಆದರೆ ಈಗ ಯು-ಟರ್ನ್ ಹೊಡೆದಿರುವುದು ಸಲ್ಲ ಎಂದು ಕಿಡಿಕಾರಿದರು.

ಕನ್ನಡಿಗರ ಮೀಸಲಾತಿ ಮಸೂದೆಗೆ ಸಂಬಂಧಿಸಿದಂತೆ ಸರ್ಕಾರದ ಯು ಟರ್ನ್ ನಿಲುವನ್ನು ವಿರೋಧಿಸಿ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ರಾಜ್ಯ ಸಂಘ ಕಾರ್ಯದರ್ಶಿ ಮೋಹನ್ ದಾಸರಿ, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ .ಸರಂ , ರಾಜ್ಯ ಸಾಮಾಜಿಕ ಜಾಲತಾಣದ ಮುಖ್ಯಸ್ಥ ದರ್ಶನ್ ಜೈನ್ ಸಾಂಕೇತಿಕ ವಿರೋಧ ವ್ಯಕ್ತಪಡಿಸಿದರು.

ಇನ್ನು ಆರಂಭದಲ್ಲಿ ರಾಜ್ಯದ ಖಾಸಗಿ ಉದ್ದಿಮೆಗಳ ‘ಸಿ’ ಮತ್ತು ‘ಡಿ’ ದರ್ಜೆಯ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇಕಡಾ 100ರಷ್ಟು ಮೀಸಲಾತಿ ನೀಡುವ ಮಸೂದೆಗೆ ಒಪ್ಪಿಗೆ ನೀಡಿರುವ ಕುರಿತು ಸಿದ್ದರಾಮಯ್ಯನವರು ತಮ್ಮ ಅಧಿಕೃತ ‘ಎಕ್ಸ್’ ಖಾತೆಗಳಲ್ಲೂ ಘೋಷಣೆ ಮಾಡಿದ್ದರು. ಆದರೆ, ಕೆಲವೇ ಸಮಯದಲ್ಲಿ ಪೋಸ್ಟ್ ಡಿಲೀಟ್ ಮಾಡಿದ್ದಾರೆ.

ಪುನಃ 50% ನಿಂದ 75% ಮೀಸಲಾತಿ ನಿಗದಿಪಡಿಸುವ ಮಸೂದೆಗೆ ಒಪ್ಪಿಗೆ ನೀಡಿರುವುದಾಗಿ ಸಮಜಾಯಿಷಿ ನೀಡಿದ್ದಾರೆ. ಕೊನೆಗೆ ಅದನ್ನೂ ಡಿಲೀಟ್ ಮಾಡಿ ಮಸೂದೆ ಇನ್ನೂ ಸಿದ್ಧತೆಯ ಹಂತದಲ್ಲಿರುವುದಾಗಿ ಸ್ಪಷ್ಟನೆ ಕೊಟ್ಟಿದ್ದಾರೆ. ಸಿದ್ಧತೆಯಲ್ಲಿರುವ ಮಸೂದೆಯ ಬಗ್ಗೆ ಈಗಲೇ ತರಾತುರಿಯಿಂದ ಘೋಷಿಸುವ ಇರಾದೆ ಏನಿತ್ತು ಎಂದು ಪ್ರಶ್ನಿಸಿದರು.

ಇನ್ಕನು ನ್ನಡಿಗರ ಪರ ಎಂದು ಸದಾ ಎದೆಯುಬ್ಬಿಸಿಕೊಂಡು ಹೇಳುವ ಸಿದ್ದರಾಮಯ್ಯನವರು ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕೊಡಲು ಏಕೆ ಇಚ್ಛಾಶಕ್ತಿಯನ್ನು ತೋರದೆ ದಿಟ್ಟ ಹೆಜ್ಜೆಯನ್ನು ಇಡದೆ ಹಿಂಜರಿಯುತ್ತಿದ್ದಾರೆ ಏಕೆ ಎಂದರು.

ಖಾಸಗಿ ಹಾಗೂ ಸರ್ಕಾರಿ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂಬುದು ಆಮ್ ಆದ್ಮಿ ಪಕ್ಷದ ಸ್ಪಷ್ಟ ನಿಲುವಾಗಿದೆ. ಪಕ್ಷವು ಸ್ಪರ್ಧಿಸಿರುವ ಅನೇಕ ರಾಜ್ಯಗಳಲ್ಲಿ ಚುನಾವಣೆಗಳಲ್ಲಿನ ಪ್ರಣಾಳಿಕೆಗಳಲ್ಲಿ ಈ ಅಂಶಗಳನ್ನು ಪ್ರಮುಖವಾಗಿ ಘೋಷಿಸಿದೆ. ಈಗಾಗಲೇ ದೆಹಲಿ ಮತ್ತು ಪಂಜಾಬ್ ರಾಜ್ಯಗಳಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ 100% ಹಾಗೂ ಖಾಸಗಿ ಉದ್ಯೋಗಗಳಲ್ಲಿ 80% ಮೀಸಲಾತಿ ಒದಗಿಸುತ್ತಿವೆ. ಇದೇ ಮಾದರಿಯಲ್ಲಿ ಕರ್ನಾಟಕ ರಾಜ್ಯದಲ್ಲೂ ಕನ್ನಡಿಗರಿಗೆ ಮೀಸಲಾತಿ ಒದಗಿಸಬೇಕು ಎಂದು ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದರು.

ಕನ್ನಡಿಗರು ಎಲ್ಲಾ ರೀತಿಯಲ್ಲೂ ಕೌಶಲ್ಯವಂತರಾಗಿದ್ದಾರೆ. ಬುದ್ಧಿವಂತರಾಗಿದ್ದಾರೆ. ಅವರಿಗೆ ಕೇವಲ ಸಿ ಮತ್ತು ಡಿ ದರ್ಜೆಯಲ್ಲಿ ಉದ್ಯೋಗ ಮೀಸಲಿಡುವ ಚರ್ಚೆಯೇ ಅನಗತ್ಯ. ಎಲ್ಲ ಹಂತದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಉದ್ಯೋಗಗಳನ್ನು ಮೀಸಲಿಡಬೇಕು. ಕನ್ನಡಿಗರ ಭೂಮಿಯಲ್ಲಿ ಉದ್ದಿಮೆಗಳನ್ನು ಸ್ಥಾಪಿಸಿಕೊಂಡು ಕನ್ನಡಿಗರನ್ನೇ ಉದ್ಯೋಗಗಳಿಂದ ಹೊರಗಿಟ್ಟರೆ ಹೇಗೆ?

ಕನ್ನಡಿಗರಿಗೆ ಸ್ಕಿಲ್ ಇಲ್ಲ ಎಂಬ ಕಾರಣಗಳು ಕನ್ನಡಿಗರಿಗೆ ಎಸಗುತ್ತಿರುವ ಅವಮಾನವಾಗಿದೆ. ಕನ್ನಡಿಗರು ಹೆಚ್ಚು ಸ್ಕಿಲ್ಡ್ ನೌಕರರಾಗಿರುವುದರಿಂದ ವಿದೇಶಗಳಲ್ಲಿ ಕನ್ನಡಿಗರಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ಕನ್ನಡಿಗರನ್ನು ಕಡೆಗಣಿಸಲಾಗುತ್ತಿದೆ. ಇದು ಕೇವಲ ಬಹು ರಾಷ್ಟ್ರೀಯ ಉದ್ಯಮಿಗಳ ಲಾಬಿಗೆ ರಾಜ್ಯ ಸರ್ಕಾರ ಬಲಿಯಾಗಿರುವುದರ ಉದಾಹರಣೆಯಷ್ಟೇ.

ಉತ್ತರ ಭಾರತದ ಉದ್ಯಮಿಗಳು ಅಲ್ಲಿನ ನೌಕರರನ್ನೇ ಹೆಚ್ಚಾಗಿ ಸೇರಿಸಿಕೊಳ್ಳುವ ಮೂಲಕ ಕರ್ನಾಟಕವನ್ನು ಹಿಂದಿಮಯವಾಗಿಸುತ್ತಿದ್ದಾರೆ. ರಾಜ್ಯದಲ್ಲಿ ಪ್ರಾದೇಶಿಕ ಅಸಮಾನತೆ ಎಲ್ಲಾ ಸ್ಥರಗಳಲ್ಲಿಯೂ ಕನ್ನಡಿಗರನ್ನು ಶೋಷಿಸುತ್ತಿದೆ. ಇದೆಲ್ಲವೂ ಗೊತ್ತಿದ್ದೂ ಕಳೆದ 20 ವರ್ಷಗಳಿಂದ ರಾಜ್ಯವನ್ನಾಳಿದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಕಟ್ಟುನಿಟ್ಟಿನ ಮೀಸಲಾತಿ ನಿರ್ಣಯ ತೆಗೆದುಕೊಳ್ಳಲು ವಿಫಲವಾಗುತ್ತಿದೆ ಎಂದು ಮುಖ್ಯಮಂತ್ರಿ ಚಂದ್ರು ಬೇಸರ ವ್ಯಕ್ತಪಡಿಸಿದರು.

ರಿಯಲ್ ಎಷ್ಟೇಟ್ ಮಾಫಿಯಾದ ಕಪಿಮುಷ್ಠಿಯಲ್ಲಿರುವ ರಾಜ್ಯ ಸರ್ಕಾರ ಕೇವಲ ಬೆಂಗಳೂರು ವಿಸ್ತರಣೆಯಲ್ಲೇ ಕಾಲ ಕಳೆಯುತ್ತಿದೆ. ರಾಮನಗರ ಜಿಲ್ಲೆಯನ್ನು ಬೆಂಗಳೂರಿಗೆ ಸೇರಿಸುವ ಮೂಲಕ ಕನಕಪುರ, ಚನ್ನಪಟ್ಟಣ ಇತ್ಯಾದಿ ತಮ್ಮ ಹಾಗೂ ತಮ್ಮವರ ಒಡೆತನದ ಹೆಚ್ಚು ಭೂಮಿಯಿರುವ ಪ್ರದೇಶಗಳನ್ನು ಬೆಂಗಳೂರಿಗೆ ಸೇರಿಸಿಕೊಳ್ಳುವ ಮೂಲಕ ಅಲ್ಲಿನ ಜಾಗಗಳಿಗ ಚಿನ್ನದ ಬೆಲೆ ಕೊಡಿಸುವಲ್ಲೇ ನಿರತರಾಗಿದ್ದಾರೆ.

ರಾಜ್ಯದ ಇತರೆ ಭಾಗದ ಯುವಕರು ಉದ್ಯೋಗಕ್ಕಾಗಿ ಗುಳೆ ಹೋಗುತ್ತಿದ್ದಾರೆ. ತಮಿಳುನಾಡು, ಕೇರಳ ರಾಜ್ಯಗಳು ರಾಜಧಾನಿಗಳ ಜೊತೆಗೆ ಇತರ ಭಾಗಗಳ ನಗರಗಳನ್ನು ಸಮಾನವಾಗಿ ಅಭಿವೃದ್ಧಿ ಪಡಿಸುತ್ತಿವೆ. ತಮಿಳುನಾಡಿನಲ್ಲಿ ಹೊಸೂರು, ಸೇಲಂ, ವೆಲ್ಲೂರು, ಈ ರೋಡ್, ಕೊಯಂಬತ್ತೂರು, ಮಧುರೈ ಹಾಗೂ ಕೇರಳ ರಾಜ್ಯವು ತ್ರಿವೇಂಡ್ರಮ್, ಕ್ಯಾಲಿಕಟ್, ಕೊಚ್ಚಿನ್ ಕಣ್ಣೂರು,ಇಡುಕ್ಕಿ ಇತ್ಯಾದಿ ನಗರಗಳನ್ನೇ ಗಮನಿಸಿ. ಎಲ್ಲವೂ ಒಂದಕ್ಕಿಂತ ಒಂದನ್ನು ಮೀರಿಸುವಂತೆ ಅಭಿವೃದ್ಧಿಗಳಾಗಿವೆ.

ಕೈಗಾರಿಕೆಗಳು, ಉತ್ಪಾದನಾ ಘಟಕಗಳನ್ನು ಸಮಾನವಾಗಿ ನಿರ್ಮಿಸುತ್ತಿವೆ. ಇದರಿಂದ ಅಲ್ಲಿನ ರಾಜ್ಯಗಳಲ್ಲಿ ಪ್ರಾದೇಶಿಕ ಸಮಾನತೆ ನಿರ್ಮಾಣವಾಗಿದೆ. ತಮಿಳಿಗರಿಗೆ ತಾಯ್ನೆಲದಲ್ಲೇ ಉದ್ಯೋಗಗಳು ಸಿಗುತ್ತಿವೆ. ಅದೇ ಮಾದರಿಯಲ್ಲಿ ರಾಜ್ಯದ ಇತರ ನಗರಗಳನ್ನು ಅಭಿವೃದ್ಧಿ ಪಡಿಸಬೇಕು. ಕಲ್ಯಾಣ, ಕಿತ್ತೂರು, ಮಧ್ಯ, ಕರಾವಳಿ ಭಾಗಗಳ ಅನೇಕ ನಗರಗಳ ಸಮಗ್ರ ಅಭಿವೃದ್ಧಿಗೆ ಮಹತ್ವ ನೀಡಬೇಕು ಎಂದು ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದರು.

ದೆಹಲಿ ಮಾದರಿಯ ಶಿಕ್ಷಣವನ್ನು ಅಳವಡಿಸಿಕೊಳ್ಳುವ ಮೂಲಕ ರಾಜ್ಯದಲ್ಲಿ ಉದ್ಯೋಗದಾತರನ್ನು ಸೃಷ್ಟಿ ಮಾಡಬೇಕಿದೆ. ದೆಹಲಿಯಲ್ಲಿ The Entrepreneurship Mindset Curriculum (EMC) ಮೂಲಕ ಲಕ್ಷಾಂತರ ವಿದ್ಯಾರ್ಥಿಗಳನ್ನು ಉದ್ಯೋಗದಾತರನ್ನಾಗಿಸುತ್ತಿದೆ. ಅದೇ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಉದ್ಯೋಗದಾತರನ್ನು ಸೃಷ್ಟಿಸಬೇಕಿದೆ. ಇದರಿಂದ ತಾನಾಗೇ ಉದ್ಯೋಗಗಳು ಸೃಷ್ಟಿಯಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ