ನಿಂತಿರುವ ಕಾಲೇಜು ವಿದ್ಯಾರ್ಥಿ ಚುನಾವಣೆ ಇದೇ ವರ್ಷದಿಂದ ಮತ್ತೆ ಆರಂಭ: ಸಿಎಂ ಡಿಕೆಶಿ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರಾಗಿ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಇಂದು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು

ಬೆಂಗಳೂರು: ರಾಜ್ಯದಲ್ಲಿ ನಿಲ್ಲಿಸಿರುವ ಕಾಲೇಜು ವಿದ್ಯಾರ್ಥಿ ಚುನಾವಣೆಯನ್ನು ಈ ವರ್ಷದಿಂದಲೇ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಇಂದು ಅರಮನೆ ಮೈದಾನದಲ್ಲಿ ನಡೆದ ಕೆಪಿಸಿಸಿ (KPCC) ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ, ಅಧಿಕಾರ ಹಸ್ತಾಂತರಿಸಿ ಮಾತನಾಡಿದರು.
ತಾವು ಅಧಿಕಾರ ವಹಿಸಿಕೊಂಡ ದಿನವನ್ನು ನೆನಪಿಸಿಕೊಂಡ ಅವರು, ನನಗೆ 2020ರ ಮಾ.10 ರಂದು ಸೋನಿಯಾ ಗಾಂಧಿ ಪಕ್ಷದ ಅಧಿಕಾರ ನೀಡಿದ್ದರು. ಆಗ ಇಷ್ಟೊಂದು ದೊಡ್ಡದಾಗಿ ಕಾರ್ಯಕ್ರಮ ಮಾಡೋಕೆ ಆಗಿರಲಿಲ್ಲ. ಜೂಮ್ ಕಾಲ್ನಲ್ಲೇ ನಾನು ಅಧಿಕಾರ ಸ್ವೀಕರಿಸಿದೆ ಎಂದು ಅಂದಿನ ನೆನಪನ್ನು ಮೆಲುಕುಹಾಕಿದರು.
ಇನ್ನು ನಿಮ್ಮ ವಿಶ್ವಾಸ, ಸಹಕಾರದಿಂದ ಸೇವೆ ಮಾಡಿದ್ದೇನೆ. ನಾನು ಮನುಷ್ಯ, ನನ್ನ ಕೈಯಲ್ಲಿ ಅನೇಕ ತಪ್ಪು ಆಗಿರಬಹುದು. ಕೋವಿಡ್ ಕಾಲದಲ್ಲಿ ಸಿದ್ದರಾಮಯ್ಯ ಅವರನ್ನು ವಿಪಕ್ಷದ ನಾಯಕರನ್ನಾಗಿ ಮಾಡಿದರು. ಅಂದು ನಾನು, ಸಿದ್ದರಾಮಯ್ಯ ಅವರು ಸೇರಿ ಸಂಕಲ್ಪ ಮಾಡಿದ್ದೆವು ಮುಂದಿನ ಬಾರಿಗೆ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕು ಎಂದು ಅದು ಕೈಗೂಡಿದೆ ಎಂದರು.
ಇನ್ನು ಅಂದು ಖರ್ಗೆ ಅವರು ವಿಪಕ್ಷದ ನಾಯಕರಾಗಿದ್ದರು. ವೇಣುಗೋಪಾಲ್ ಅವರು ಪಕ್ಷದ ಕಾರ್ಯದರ್ಶಿಯಾಗಿ ಸಾಕ್ಷಿಯಾಗಿದ್ದರು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರು ನನಗೆ ಆಶೀರ್ವಾದ ಮಾಡಿದರು. ಶುಭ ಘಳಿಗೆಯಲ್ಲಿ ಅಂದು ನಾನು ಅಧಿಕಾರ ಸ್ವೀಕರಿಸಿದ್ದೆ. ಕೋವಿಡ್ ಕಾಲದಲ್ಲಿ ಮನೆಯಿಂದ ಹೊರಗೆ ಹೋಗೋಕೆ ಆಗಿರಲಿಲ್ಲ. ಜೂಮ್ ಮೀಟಿಂಗ್ ಮೂಲಕವೇ ಅನೇಕ ಸಮಸ್ಯೆ ಪರಿಹರಿಸಿದ್ದೇವೆ ಎಂದರು.
ಸಿದ್ದರಾಮಯ್ಯ ಅವರು ಕೊಟ್ಟ ಆಡಳಿತ ಇಡೀ ದೇಶಕ್ಕೆ ಒಂದು ಮಾದರಿಯಾಗಿದೆ. ಈಗ ಬಿ.ಕೆ. ಹರಿಪ್ರಸಾದ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಹರಿಪ್ರಸಾದ್ ಜತೆ ಇಡೀ ಸರ್ಕಾರ ಇರುತ್ತದೆ. 2028ರಲ್ಲಿ ಮತ್ತೊಮ್ಮೆ ನಾವು ಅಧಿಕಾರಕ್ಕೆ ಏರಬೇಕು ಎಂದರು.
ಪ್ರತಿ ಪಂಚಾಯಿತಿ, ಪ್ರತಿ ವಾರ್ಡ್ಗೆ ಹೆಚ್ಚುವರಿಯಾಗಿ 5 ಜನ ಕಾರ್ಯಕರ್ತರನ್ನು ಗ್ಯಾರಂಟಿ ಸಮಿತಿಗೆ ನೇಮಕ ಮಾಡಲು ತೀರ್ಮಾನಿಸಿದ್ದೇವೆ. ಗ್ಯಾರಂಟಿ ಪರಿಷ್ಕರಣೆಗೆ ಅವರನ್ನು ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷರಾಗಿ ಬಿ.ಕೆ.ಹರಿಪ್ರಸಾದ್ ಅಧಿಕಾರ ಸ್ವೀಕಾರ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರಾಗಿ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಇಂದು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು.
ಪ್ಯಾಲೆಸ್ ಗ್ರೌಂಡ್ನಲ್ಲಿ ಮೂರು ಚರಕಗಳಿಂದ ಸಾಂಕೇತಿಕವಾಗಿ ನೂಲು ನೇಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಸಿಎಂ ಡಿ.ಕೆ.ಶಿವಕುಮಾರ್ ಅವರು ಹರಿಪ್ರಸಾದ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು. ಅಧಿಕಾರ ಹಸ್ತಾಂತರ ದಾಖಲೆಗಳಿಗೆ ಡಿಕೆ ಶಿವಕುಮಾರ್ ಹಾಗೂ ಬಿಕೆ ಹರಿಪ್ರಸಾದ್ ಇಬ್ಬರೂ ಸಹಿ ಹಾಕಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ, ಡಿಕೆ ಸುರೇಶ್, ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ, ಎಚ್.ಕೆ ಪಾಟೀಲ್, ಕೆ.ಎಚ್ ಮುನಿಯಪ್ಪ, ಚೆಲುವರಾಯಸ್ವಾಮಿ, ಆರ್.ವಿ ದೇಶಪಾಂಡೆ, ಎಂ.ಬಿ ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್, ವೀರಪ್ಪ ಮೊಯ್ಲಿ, ಸಲೀಂ ಅಹಮದ್, ಯು.ಟಿ ಖಾದರ್, ಎಚ್.ಸಿ ಮಹದೇವಪ್ಪ, ತನ್ವೀರ್ ಸೇಠ್ ಮೊದಲಾದವರುಇದ್ದರು.







