ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದು ಹಾಗೂ ಮಕ್ಕಳ ಶಿಕ್ಷಣದ ಮುಂದಿನ ರೂಪುರೇಷೆಗಳ ಕುರಿತು ಆಮ್ ಆದ್ಮಿ ಪಕ್ಷದ ನಿಯೋಗ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನು ಭೇಟಿ ಮಾಡಿ ಚರ್ಚಿಸಿತು.
ಸೋಮವಾರ ಬೆಳಗ್ಗೆ ವಿಧಾನಸೌಧದಲ್ಲಿ ಭೇಟಿ ಮಾಡಿದ ನಿಯೋಗ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬ ಸದಸ್ಯರ ಆರೋಗ್ಯದ ದೃಷ್ಟಿಯಿಂದ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದು ಮಾಡಬೇಕು ಹಾಗೂ ಆನ್ಲೈನ್ ಶಿಕ್ಷಣ ಬೇಡ, ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕ ಹೆಚ್ಚಳಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿತು.
ನಿಯೋಗ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಸಚಿವರು, ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳ ಮಾಡಿರುವ ಬಗ್ಗೆ ಒಂದು ವಾರದ ಒಳಗೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು, ಆನ್ಲೈನ್ ತರಗತಿ ಕುರಿತಾಗಿ ಎಲ್ಲಾ ಕ್ಷೇತ್ರಗಳ ಪರಿಣಿತರನ್ನು ಒಳಗೊಂಡ ಸಮಿತಿ ರಚಿಸಲಾಗಿದ್ದು, ಕೆಲವೇ ದಿನದಲ್ಲಿ ತಜ್ಞರ ಸಮಿತಿ ಸಲ್ಲಿಸಿದ ವರದಿ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು. ಕೊರೊನಾ ಕಡಿಮೆ ಆದ ತಕ್ಷಣ ನ್ಯೂಡೆಲ್ಲಿ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಲಾಗುವುದು ಎಂದು ಭರವಸೆ ನೀಡಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಬೇಡಿ ಎಂದು ಸುಪ್ರೀಂ ಕೋರ್ಟಿಗೆ ಕೆಲವರು ಅರ್ಜಿ ಸಲ್ಲಿಸಿದ್ದಾರೆ. ಸರ್ವೋಚ್ಚ ನ್ಯಾಯಲಯ ಪರೀಕ್ಷೆ ನಡೆಸಬೇಡಿ ಎಂದರೆ, ನಾವು ಪರೀಕ್ಷೆ ನಡೆಸುವುದಿಲ್ಲ ಎಂದು ತಿಳಿಸಿದರು.
ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕರಾದ ಪೃಥ್ವಿ ರೆಡ್ಡಿ, ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್, ಬೆಂಗಳೂರು ನಗರ ಘಟಕದ ಅಧ್ಯಕ್ಷ ಮೋಹನ್ ದಾಸರಿ ಮತ್ತು ಸುಬ್ರಹ್ಮಣ್ಯಪುರಂ ವಾರ್ಡ್ ಅಧ್ಯಕ್ಷ ಶರತ್ ಖಾದ್ರಿ ನಿಯೋಗದಲ್ಲಿದ್ದರು.
ಆಮ್ ಆದ್ಮಿ ಪಕ್ಷ ಸಲಹೆ
* ಮಾಸ್ಕ್ ಹಾಕಿಕೊಂಡು ಗಂಟೆಗಟ್ಟಲೆ ಕುಳಿತುಕೊಂಡು ಪರೀಕ್ಷೆ ಬರೆಯುವುದು ಕಷ್ಟ ಹಾಗೂ ಸವಾಲಿನ ಕೆಲಸ. ಇದರಿಂದ ಬರೆಯುವ ಕ್ಷಮತೆ ಕುಗ್ಗುವ ಸಾಧ್ಯತೆ ಇದೆ* ಜೂ. 25ರಿಂದ ಪರೀಕ್ಷೆ ಆರಂಭ ಎಂದು ಸರ್ಕಾರ ಈಗಾಗಲೇ ಪ್ರಕಟಿಸಿದೆ. ಆದರೆ ವಿದ್ಯಾರ್ಥಿಗಳ ಜೀವದ ಹಿತದೃಷ್ಟಿಯಿಂದ ಈ ಸಂಕಷ್ಟದ ವೇಳೆಯಲ್ಲಿ ಪರೀಕ್ಷೆ ರದ್ದು ತೀರ್ಮಾನ ತೆಗೆದುಕೊಂಡರೇ ಲಕ್ಷ-ಲಕ್ಷ ಮಕ್ಕಳು, ಪಾಲಕರು ಆತಂಕದಿಂದ ಹೊರಬರಲು ಸಾಧ್ಯ
* ಪಿ.ಯು ವಿದ್ಯಾಭ್ಯಾಸಕ್ಕೆ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಮುಖವಾಗಿರುವುದರಿಂದ ಕಾಲೇಜು ಸೇರ ಬಯಸುವ ಮಕ್ಕಳಿಗೆ ಪ್ರವೇಶ ಪರೀಕ್ಷೆ ನಡೆಸಬೇಕು