NEWSನಮ್ಮರಾಜ್ಯಸಿನಿಪಥ

ಕನ್ನಡದ ಹಾಸ್ಯನಟ ಬುಲೆಟ್‌ ಪ್ರಕಾಶ್‌ ವಿಧಿವಶ

ಕಿಡ್ನಿ ವೈಫಲ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನ l ಕಂಬನಿ ಮಿಡಿದ ಹಲವು ಗಣ್ಯರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕನ್ನಡ ಚಲನ ಚಿತ್ರ ರಂಗದ ಹಾಸ್ಯನಟ ಬುಲೆಟ್‌ ಪ್ರಕಾಶ್‌ ಅನಾರೋಗ್ಯದಿಂದ ಇಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ತಮ್ಮ ತೂಕವನ್ನು ಇಳಿಸಿಕೊಳ್ಳುವುದಕ್ಕಾಗಿ ಚಿಕಿತ್ಸೆಗೆ ಈ ಹಿಂದೆ ಒಳಗಾಗಿದ್ದ ಪ್ರಕಾಶ್‌ ಅವರು ನಂತರದ ದಿನಗಳಲ್ಲಿ ಚೇತರಿಸಿಕೊಳ್ಳಲೇ ಇಲ್ಲ. ಅಂದರೆ ಅವರು ತೂಕ ಇಳಿಸಿಕೊಳ್ಳಲು ತೆಗೆದುಕೊಂಡ ಔಷಧವೆ ಇಂದು ಅವರನ್ನು ಜವರಾಯನಾಗಿ ಬಂದು ಕರೆದುಕೊಂಡು ಹೋಗಿದೆ.

ಪ್ರಕಾಶ್‌ ಅವರು ಪ್ರಸ್ತುತ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದೆ ನಗರದ ಕನ್ನಿಂಗ್‌ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು. ಸತತ ಚಿಕಿತ್ಸೆಯ ಬಳಿಕ ಸೋಮವಾರ ಅವರ ಆರೋಗ್ಯ ಸ್ಥಿತಿ ಇನ್ನಷ್ಟು ಗಂಭಿರವಾಗಿತ್ತು.

ಹೀಗಾಗಿ ಅವರಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಮಧ್ಯಾಹ್ನವೇ ವಿಧಿವಶರಾಗಿದ್ದಾರೆ.

ಪತ್ನಿ ಇಬ್ಬರು ಮಕ್ಕಳು

ಬುಲೆಟ್ ಪ್ರಕಾಶ್ ಅವರು ಪತ್ನಿ, ಇಬ್ಬರು ಮಕ್ಕಳನ್ನು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ದುನಿಯಾ ವಿಜಯ್, ದರ್ಶನ್, ಶಿವರಾಜ್ ಕುಮಾರ್ ಅವರೊಂದಿಗೆ ಆತ್ಮೀಯ ಸಂಬಂಧವನ್ನು ಪ್ರಕಾಶ್ ಹೊಂದಿದ್ದರು.

ಬುಲೆಟ್ ಪ್ರಕಾಶ್ ಅವರು ನಿಧನರಾಗಿದ್ದಾರೆ ಎಂಬ ವಿಷಯ ತಿಳಿದ ಕೂಡಲೇ ಆಸ್ಪತ್ರೆಗೆ ಆಗಮಿಸಿದ ದುನಿಯಾ ವಿಜಯ್ ಸೇರಿದಂತೆ ಹಲವು ನಟರು ಮೃತರ ಕುಟುಂಬಕ್ಕೆ ಧೈರ್ಯ ತುಂಬಿದರು.

ತೂಕ ಇಳಿಸಿಕೊಳ್ಳುವ ಶಸ್ತ್ರ ಚಿಕಿತ್ಸೆ

ಬುಲೆಟ್ ಪ್ರಕಾಶ್ ಕೆಲವು ತಿಂಗಳ ಹಿಂದೆ ತೂಕ ಕಳೆದುಕೊಳ್ಳಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.  ಅಂದಿನಿಂದಲೂ ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಹೋಯಿತು.ಈ ಹಿಂದೆಯೂ ಅವರು ಆಸ್ಪತ್ರೆಗೆ ದಾಖಲಾಗಿ ಸಾವು-ಬದುಕಿನ ನಡುವೆ ಹೋರಾಡಿ ಚೇತರಿಸಿಕೊಂಡು ಹೊರಬಂದಿದ್ದರು. ಆದರೆ ಈ ಬಾರಿ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ.

ಶಾಂತಿ ಕ್ರಾಂತಿ ಮೊದಲ ಸಿನಿಮಾ

ಶಾಂತಿ ಕ್ರಾಂತಿ ಸಿನಿಮಾದ ಮೂಲಕ ಸಿನಿಮಾರಂಗ ಪ್ರವೇಶಿಸಿದ ಬುಲೆಟ್‌ ಪ್ರಕಾಶ್‌ ಅವರು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ದರ್ಶನ್ ಸಿನಿಮಾಗಳಲ್ಲಿ ಅವರು ಕಾಯಂ ಹಾಸ್ಯ ಕಲಾವಿದರಾಗಿದ್ದರು. ಜತೆಗೆ ಹಲವು ನಾಯಕ ನಟರೊಂದಿಗೆ ತಮ್ಮ ಹಾಸ್ಯ ಅಭಿನಯವನ್ನು ಮಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದರು., ಒಬ್ಬ ಅದ್ಬುತ ಹಾಸ್ಯ ಕಲಾವಿದರಾಗಿ ನಾಡಿನ ಪ್ರತಿ ಮನೆಯಲ್ಲೂ ಚಿರಾಯುವಾಗಿ ಬುಲೆಟ್‌ ಪ್ರಕಾಶ್‌ ಇದ್ದಾರೆ.

ಅವರು ಹಾಸ್ಯಾಭಿನಯದ ಮೂಲಕ ನಿತ್ಯ ಒಂದಲ್ಲ ಒಂದು ಸಿನಿಮಾಗಳಲ್ಲಿ ಇಂದಿಗೂ ಒತ್ತಡದಲ್ಲಿ ಸಿಲುಕಿರುವವರ ಮನಸ್ಸನ್ನು ಹಗುರಗೊಳಿಸುತ್ತಿದ್ದಾರೆ. ಹೀಗಾಗಿ ಇಂದಿಗೂ ಅವರು ಎಲ್ಲರ ಮನೆ ಮನದಲ್ಲೂ ಇದ್ದಾರೆ ಎಂದು ಅಭಿಮಾನಿಗಳು ತಮ್ಮ ಕಣ್ಣಾಲೆಗಳನ್ನು ತೇವ ಮಾಡಿಕೊಂಡು ಹೇಳುತ್ತಿದ್ದಾರೆ.

ಹಲವು ಗಣ್ಯರ ಸಂತಾಪ

ಹಾಸ್ಯನಟ ಬುಲೆಟ್‌ ಪ್ರಕಾಶ್‌ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಸಿಎಂ ಯಡಿಯೂರಪ್ಪ, ನಟರಾದ ದರ್ಶನ್‌  ಪುನೀತ್‌ ರಾಜ್‌ಕುಮಾರ್‌, ಶಿವರಾಜ್‌ಕುಮಾರ್‌, ದುನಿಯಾ ವಿಜಯ್‌,  ಸರತೀಶ್‌ ನಿನಾಸಂ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದು, ಅವರ ಕುಟುಂಬದವರಿಗೆ ಅಗಲಿಕೆಯ ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ