NEWSನಮ್ಮಜಿಲ್ಲೆಬೆಂಗಳೂರು

ಬ್ರ್ಯಾಂಡ್ ಬೆಂಗಳೂರು ಯೋಜನೆ- ನಾಗರೀಕರ ಧ್ವನಿಯೇ ನಮ್ಮ ಸರ್ಕಾರದ ಧ್ವನಿ: ಡಿಸಿಎಂ ಡಿ.ಕೆ.ಶಿವಕುಮಾರ್

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: “ನಾಗರೀಕರ ಧ್ವನಿಯೇ ನಮ್ಮ ಸರ್ಕಾರದ ಧ್ವನಿ. ಹೀಗಾಗಿ ಬ್ರ್ಯಾಂಡ್ ಬೆಂಗಳೂರು ಯೋಜನೆಯಲ್ಲಿ ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಬೆಂಗಳೂರಿನ ಜನರ ಅಭಿಪ್ರಾಯ ಸಂಗ್ರಹಿಸಿ, ಅವರ ನಿರೀಕ್ಷೆಗೆ ತಕ್ಕಂತೆ ನಾವು ಬೆಂಗಳೂರು ಅಭಿವೃದ್ಧಿಯ ನೀಲನಕ್ಷೆ ಸಿದ್ಧಪಡಿಸುತ್ತೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಇಂದು ನಡೆದ ಬ್ರ್ಯಾಂಡ್ ಬೆಂಗಳೂರು ಚಿಂತನ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಅಭಿವೃದ್ಧಿಗೆ ತಾವು ಕೈಗೊಳ್ಳಲಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು.

“ಬೆಂಗಳೂರಿಗೆ ಅಂಟಿರುವ ಗ್ರಾಬೇಜ್ ಸಿಟಿ, ಟ್ರಾಫಿಕ್ ಸಿಟಿ ಎಂಬ ಕಳಂಕವನ್ನು ನಾವು ತೊಡೆದು ಹಾಕುತ್ತೇವೆ. ಪ್ರತಿ ರಸ್ತೆಯಲ್ಲಿ ಕ್ಯೂಆರ್ ಕೋಡ್ ಹಾಕಿ ಅಲ್ಲಿನ ಕಾಮಗಾರಿ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡಲಾಗುವುದು. ಜನರಿಗೆ ಆ ರಸ್ತೆಯ ಕಾಮಗಾರಿ ಕುರಿತು ಜನರಿಗೆ ಮಾಹಿತಿ ನೀಡಿ ಪಾರದರ್ಶಕತೆ ನೀಡಲಾಗುವುದು. ಬಿಬಿಎಂಪಿ ಚುನಾವಣೆಗೆ 225 ವಾರ್ಡ ಮಾಡಲಾಗಿದೆ. ವಾರ್ಡ್ ಸಮಿತಿ ಇಲ್ಲದ ಕಾರಣ ಜನರು ಕೆಲವು ಸಲಹೆ ನೀಡಿದ್ದಾರೆ. ಅದೇನೆಂದರೆ ಪಾರ್ಕ್, ಆಟದ ಮೈದಾನಗಳ ಮೇಲುಸ್ತುವಾರಿಯನ್ನು ಸ್ಥಳೀಯರಿಗೆ ನೀಡಿ ಎಂದು ಹೇಳಿದ್ದಾರೆ. ಈ ಬಗ್ಗೆ ನಾನು ಎಲ್ಲ ಶಾಸಕರ ಜತೆ ಚರ್ಚೆ ಮಾಡುತ್ತೇನೆ. ಇದರಲ್ಲಿ ಯಾವುದೇ ಪಕ್ಷದವರು ಸದಸ್ಯರಿಲ್ಲದ ನಾಗರೀಕ ಸಮೂಹಕ್ಕೆ ಜವಾಬ್ದಾರಿ ವಹಿಸಲು ಚಿಂತನೆ ನಡೆಸಿದ್ದೇವೆ” ಎಂದು ತಿಳಿಸಿದರು.

“ನಾನು ಬಹಳ ಉತ್ಸುಕನಾಗಿ ಈ ಇಲಾಖೆ ಅಧಿಕಾರ ವಹಿಸಿಕೊಂಡಿದ್ದೇನೆ. “By Birth I am an Agriculturist, By Profession I am a Businessman, By Choice I am an Educationist, By Passion I am a Politician” ಎಂದು ನಾನು ಅನೇಕ ಬಾರಿ ಹೇಳಿದ್ದೇನೆ. ಅದೇ ರೀತಿ ಬೆಂಗಳೂರು ನಗರಾಭಿವೃದ್ಧಿ ಸಚಿವಾಲಯದ ಜವಾಬ್ದಾರಿಯನ್ನು ವಹಿಸಿದ್ದೇನೆ.

ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ನಗರಾಭಿವದ್ಧಿ ಸಚಿವಾನಾಗಿದ್ದಾಗ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬಿಎಂಐಸಿಪಿ ರಸ್ತೆ ಯೋಜನೆಗೆ ಸಹಿ ಹಾಕಿದೆ. ಜೆ.ಎಚ್.ಪಟೇಲರ ಅವಧಿಯಲ್ಲಿ ಬೆಂಗಳೂರಿನಲ್ಲಿ ಮೋನೋ ರೈಲು ತರಲು ನಿರ್ಧರಿಸಲಾಗಿತ್ತು, ನಾನು ಹಾಗೂ ಅನಂತಕುಮಾರ್ ಅವರು ಚರ್ಚೆ ಮಾಡಿ, ಬೇರೆ ಬೇರೆ ಕಡೆ ಹೋಗಿ ಅಧ್ಯಯನ ಮಾಡಿ ನಂತರ ದೆಹಲಿ ಮಾದರಿಯಂತೆ ಮೆಟ್ರೋ ರೈಲು ಜಾರಿಗೆ ತಂದೆವು.

ಇಂದು ಕೂಡ ಬೈಯ್ಯಪನಹಳ್ಳಿಯಿಂದ ಕೆ.ಆರ್ ಪುರಂ, ಕೆಂಗೇರಿಯಿಂದ ಚಲ್ಲಘಟ್ಟಕ್ಕೆ ಮೆಟ್ರೋ ಮಾರ್ಗ ಆರಂಭವಾಗಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿಗಳನ್ನು ಆಹ್ವಾನಿಸಲು ಕಾಲಾವಕಾಶ ಕೇಳಿದೆವು. ಅವರು ಕಾಲಾವಕಾಶ ಕೇಳಿದ ಕಾರಣ ಇಂದು ಈ ಮಾರ್ಗಗಳ ಉದ್ಘಾಟನೆ ಮಾಡಿದ್ದಾರೆ. ನೀವು ಈ ಮಾರ್ಗಗಳಲ್ಲಿ ಪ್ರಯಾಣ ಮಾಡಬಹುದು.

ಬ್ರಾಂಡ್ ಬೆಂಗಳೂರು ಯೋಜನೆಗೆ 70 ಸಾವಿರ ಸಲಹೆ ಬಂದಿವೆ. ಪುಟಾಣಿಮಕ್ಕಳಿಂದ ಹಿರಿಯರವರೆಗೂ ಎಲ್ಲಾ ವರ್ಗದವರು ಸಲಹೆ ನೀಡಿದ್ದೀರಿ. ಈ ಬೆಂಗಳೂರು ನಮ್ಮದಲ್ಲ ಜನರದ್ದು. ನಾವು ನಮ್ಮದೇ ರೀತಿಯಲ್ಲಿ ಆಲೋಚನೆ ಮಾಡುತ್ತೇವೆ. ಅಧಿಕಾರಿಗಳು ಅವರದೇ ಆದ ರೀತಿ ಯೋಚಿಸುತ್ತಾರೆ. ಯೋಜನೆ ಆರಂಭಿಸುವ ಮುನ್ನ ನಾಗರೀಕರ ಅಭಿಪ್ರಾಯ ಮುಖ್ಯ. ಹೀಗಾಗಿ ನಾವು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದ್ದೇವೆ.

ಈ ಯೋಜನೆ ವಿಚಾರವಾಗಿ ಪಕ್ಷಬೇಧ ಮರೆತು ಬೆಂಗಳೂರಿನ ಶಾಸಕರು, ಸಂಸದರ ಅಭಿಪ್ರಾಯ, ಹಿರಿಯ ನಾಗರಿಕರು, ಸಂಘ ಸಂಸ್ಥೆಗಳು, ಮಕ್ಕಳು ಸೇರಿದಂತೆ ಅಧಿಕಾರಿಗಳ ಸಭೆ ಮಾಡಿದ್ದೇವೆ. ಜನರ ಅಭಿಪ್ರಾಯ ಕ್ರೂಢೀಕರಿಸಿ ನಂತರ ಬೆಂಗಳೂರನ್ನು ಮುಂದಿನ ದಿನಗಳಲ್ಲಿ ಹೇಗೆ ಮುನ್ನಡೆಸಬೇಕು ಎಂದು ರೂಪುರೇಷೆ ರೂಪಿಸಲು ತೀರ್ಮಾನಿಸಿದ್ದೇವೆ.

ನಮ್ಮ ಆರ್ಥಿಕ ಪರಿಸ್ಥಿತಿ ಗಮನದಲ್ಲಿ ಇಟ್ಟುಕೊಳ್ಳಬೇಕು. ನಾವು ನಾಗರೀಕರ ಮೇಲೆ ವಿಶ್ವಾಸ ಇಟ್ಟು ಸ್ವಯಂ ಘೋಷಿತ ಆಸ್ತಿ ತೆರಿಗೆ ಕಟ್ಟಲು ಅವಕಾಶ ನೀಡಿದೆವು. ಆದರೆ ಈಗ ಕೇವಲ 3 ಸಾವಿರ ಕೋಟಿ ಮಾತ್ರ ಆಸ್ತಿ ತೆರಿಗೆ ಬರುತ್ತಿದೆ. ಇದು ನಮಗೆ ನಾಚಿಕೆ ತರುವ ವಿಚಾರ. ಈಗ ಬರುತ್ತಿರುವ ಆಸ್ತಿ ತೆರಿಗೆ ಯಾವುದಕ್ಕೂ ಸಾಲುವುದಿಲ್ಲ. ಈ ವ್ಯವಸ್ಥೆಯಲ್ಲಿ ಸಂಪನ್ಮೂಲ ಸೋರಿಕೆ ಆಗುತ್ತಿದೆ. ಇದನ್ನು ಸರಿಪಡಿಸಲು ಮುಂದಾಗಿದ್ದೇವೆ. ಯಾರೂ ಕೂಡ ಹೆಚ್ಚಿನ ತೆರಿಗೆ ಕಟ್ಟುವಂತಿಲ್ಲ. ತಮ್ಮ ಆಸ್ತಿಗೆ ತಕ್ಕಂತೆ ಪ್ರಾಮಾಣಿಕತೆಯಿಂದ ತೆರಿಗೆ ಪಾವತಿ ಮಾಡಬೇಕು ಎಂದರು.

ಬೆಂಗಳೂರಿನಲ್ಲಿ ಮಳೆನೀರು ಹರಿಯದೇ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಬೆಂಗಳೂರಿನ ಬಗ್ಗೆ ಬಹಳ ಟೀಕೆ ಮಾಡಲಾಗುತ್ತಿತ್ತು. ಸಂಚಾರದಟ್ಟಣೆ ವಿಚಾರದಲ್ಲೂ ಬೇರೆ ನಗರಗಳಿಗಿಂತ ಬೆಂಗಳೂರಿನ ಮೇಲೆ ಕಳಂಕ ರೂಪಿಸಿದ್ದಾರೆ. ಬೆಂಗಳೂರು ವಿಶ್ವದ ಗಮನದಲ್ಲಿರುವ ಕಾರಣ ಇಲ್ಲಿನ ಸಮಸ್ಯೆ ಹೆಚ್ಚು ಪ್ರಚಾರ ಆಗುತ್ತಿದೆ. ಕೆಂಪೇಗೌಡರು ಬೆಂಗಳೂರು ಕಟ್ಟಿದಾಗ ವಿವಿಧ ಸಮುದಾಯಗಳ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟು ಅಡಿಪಾಯ ಹಾಕಿಕೊಟ್ಟಿದ್ದರು. ನೆಹರೂ ಅವರು ಅವರ ಕಾಲದಿಂದಲೂ ಅನೇಕ ನಾಯಕರು ಬೆಂಗಳೂರಿನಲ್ಲಿ ಇಸ್ರೋ, ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್, ಹೆಚ್ ಎಎಲ್, ಹೆಚ್ಎಂಟಿ, ಕಾನೂನು ಕಾಲೇಜು ಸೇರಿದಂತೆ ಅನೇಕ ಮಹತ್ತರ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಅಡಿಪಾಯ ಹಾಕಿ ಬೆಳೆಸಿದ್ದಾರೆ. ಈ ಬೆಂಗಳೂರು ರಕ್ಷಿಸಿ ಬೆಳೆಸುವುದು ನಮ್ಮ ಜವಾಬ್ದಾರಿ ಎಂದು ತಿಳಿಸಿದರು.

ನಾನು ಅಧಿಕಾರಕ್ಕೆ ಬಂದ ನಂತರ ಮಳೆ ನೀರು ಚರಂಡಿ ವ್ಯವಸ್ಥೆ, ಕಸ ವಿಲೇವಾರಿ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಬೇರೆ ರಾಜ್ಯಗಳಲ್ಲಿನ ಮಾದರಿಯನ್ನು ನೋಡಿದ್ದೇನೆ. ಬೆಂಗಳೂರಿನಲ್ಲಿ ಕಸ ನಿರ್ವಹಣೆಯಲ್ಲಿ ಎಲ್ಲಾ ಸರ್ಕಾರಗಳು ಎಡವಿದ್ದೇವೆ. ಎಂಟು ಕಡೆ ಕಸದಿಂದ ಇಂಧನ ಉತ್ಪಾದನೆ ಕೇಂದ್ರ ಆರಂಭಿಸಿದ್ದು ಯಾವುದೂ ಚಾಲ್ತಿಯಲ್ಲಿ ಇಲ್ಲ. ಕೇವಲ ಕಸ ತುಂಬುತ್ತಿದ್ದೇವೆ. ಇದಕ್ಕೆ ಶಾಶ್ವತ ಪರಿಹಾರ ನೀಡಬೇಕಾಗಿದೆ. ಈ ವಿಚಾರದಲ್ಲಿ ಹೈದರಾಬಾದ್, ದೆಹಲಿ, ಚೆನ್ನೈನಲ್ಲಿ ಮಾದರಿಯನ್ನು ಗಮನಿಸಿದ್ದೇವೆ. ಸಂಚಾರ ದಟ್ಟಣೆ ಕಡಿಮೆ ಮಾಡಲು ಅನೇಕ ಕ್ರಮ ಕೈಗೊಳ್ಳಲಾಗುತ್ತಿದೆ. ಬೆಂಗಳೂರು ಯೋಜಿತ ನಗರ ಅಲ್ಲ. ಇರುವ ನಗರವನ್ನು ಅಚ್ಚುಕಟ್ಟಾಗಿ ಮಾಡಬೇಕಿದೆ ಎಂದರು.

ಯಾರಿಗೂ ಸಾರ್ವಜನಿಕ ಸಾರಿಗೆ ಮೇಲೆ ಹೆಚ್ಚು ಅವಲಂಬನೆ ಆಗಲು ಇಷ್ಟವಿಲ್ಲ. ಎಲ್ಲರೂ ಕಾರು ಬೈಕ್‌ನಲ್ಲಿ ಓಡಾಡಬೇಕು. ಮೆಟ್ರೋ ಬಂದ ನಂತರ ಸ್ವಲ್ಪ ಹೆಚ್ಚು ಓಡಾಟ ಆಗಿದೆ. ಮಹಿಳೆಯರಿಗೆ ನಾವು ಉಚಿತ ಬಸ್ ಪ್ರಯಾಣ ಮಾಡಿದ ನಂತರ ಬಸ್ ನಲ್ಲಿ ಮಹಿಳೆಯರ ಸಂಚಾರ ಹೆಚ್ಚಾಗಿದೆ. ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಮೇಲ್ಸೇತುವೆ ಯೋಜನೆ ಮಾಡಿದ್ದೇವೆ. ಈಗ ಟನಲ್ ರಸ್ತೆ ಮಾಡಲು ಮುಂದಾಗಿದ್ದೇವೆ.

ಈಗಾಗಲೇ 8 ಕಂಪನಿಗಳು ಈ ಯೋಜನೆ ಮಾಡಲು ಅರ್ಹತೆ ಪಡೆದಿದ್ದಾರೆ. ಮುಂದಿನ 45 ದಿನಗಳಲ್ಲಿ ಟೆಂಡರ್ ಕರೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಹಂತಹಂತವಾಗಿ ಯೋಜನೆ ಜಾರಿ ಮಾಡುತ್ತೇವೆ. ಟನಲ್ ರಸ್ತೆ ಎಲ್ಲೆಲ್ಲಿ ತೆರೆದುಕೊಳ್ಳಲು ಜಾಗದ ಬಗ್ಗೆ ಚರ್ಚೆ ಆಗುತ್ತಿದೆ. ಅರಮನೆ ಮೈದಾನ ಅಥವಾ ಗಾಲ್ಫ್ ಕೋರ್ಸ್ ಅಥವಾ ರೇಸ್ ಕೋರ್ಸ್ ನಲ್ಲಿ ಮಾಡಬೇಕು. ಕಬ್ಬನ್ ಪಾಕ್ ಅಥವಾ ಇತರೆ ಕಡೆಗಳಲ್ಲಿ ಮಾಡಿದರೆ ನೀವು ನಮ್ಮ ಮೇಲೆ ದಾಳಿ ಮಾಡುತ್ತೀರಿ. ಹೀಗಾಗಿ ಸರಿಯಾದ ರೀತಿಯಲ್ಲಿ ನಾವು ಯೋಜನೆ ರೂಪಿಸುತ್ತೇವೆ.

ರಸ್ತೆ ಗುಂಡಿ ವಿಚಾರದಲ್ಲಿ ಸಂಚಾರಿ ಪೊಲೀಸ್ ಇಲಾಖೆ ಹಾಗೂ ಪಾಲಿಕೆ ಜತೆಗೂಡಿ ಕೆಲಸ ಮಾಡಲಿದೆ. ಸಾರ್ವಜನಿಕರು ರಸ್ತೆಗುಂಡಿ ಬಗ್ಗೆ ಆಯುಕ್ತರಿಗೆ ಮಾಹಿತಿ ನೀಡುವ ಅವಕಾಶ ನೀಡಲಾಗುವುದು. ಜನ ಟ್ರಾಫಿಕ್ ನಲ್ಲಿ ಜನ ಕಾಲ ಕಳೆಯುವಂತೆ ಆಗಿದೆ. ಅದನ್ನು ತಪ್ಪಿಸುವುದು ನಮ್ಮ ಗುರಿ. ನಮ್ಮ ಈ ಕಾರ್ಯಕ್ಕೆ ಎಲ್ಲಾ ಶಾಸಕರು ಪಕ್ಷಾತೀತವಾಗಿ ಬೆಂಬಲ ನೀಡಬೇಕು. ಇತ್ತೀಚೆಗೆ ಟೆಂಡರ್ ಶ್ಯೂರ್ ರಸ್ತೆಗಳನ್ನು ಪರಿಶೀಲಿಸಿದೆ. ಆಗ ನಾವು ರಸ್ತೆಯಲ್ಲಿ ಅಂಡರ್ ಗ್ರೌಂಡ್ ನಲ್ಲಿ ಕೆಬಲ್ ಅಳವಡಿಕೆಗೆ ಅವಕಾಶ ನೀಡಿದ್ದರೂ ಎಲ್ಲಾ ಕೇಬಲ್ ಗಳು ಮೇಲೆಯೇ ನೇತಾಡುತ್ತಿದ್ದವು. ಆಮೂಲಕ ಬೆಂಗಳೂರಿನ ಸೈಂದರ್ಯ ಹಾಳು ಮಾಡಲಾಗುತ್ತಿದೆ. ಇದನ್ನು ಸರಿಮಾಡಬೇಕು ಎಂದರು.

ಇಂದಿನ ಮಂಥನ ಕಾರ್ಯಕ್ರಮದಲ್ಲಿ ನೂರಾರು ಬೆಂಗಳೂರಿಗಳೂ ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಿದರು. ಈ ವೇಳೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಬಿಬಿಎಂಪಿ ಅಧಿಕಾರಿಗಳು ಇದ್ದರು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು