ತುಮಕೂರು: ಸಹೋದರ ಆಯತಪ್ಪಿ ಬಾಗಿವಿಗೆ ಬಿದ್ದು ಸಾವು ಬದಯಕಿನ ನಡುವೆ ಹೋರಾಟುತ್ತಿರುವುದನ್ನು ಕಂಡ 8 ವರ್ಷ ಬಾಲಕಿಯೊಬ್ಬರು ತನ್ನ ಪ್ರಾಣದ ಹಂಗನ್ನು ತೊರೆದು ಕಾಪಾಡಿದ ಘಟನೆ ಜಿಲ್ಲೆಯಲ್ಲಿ ಜಡೆದಿದೆ.
ತನ್ನ ಪ್ರಾಣವನ್ನೂ ಲೆಕ್ಕಿಸದೇ ಬಾವಿಗೆ ಹಾರಿ ಸಹೋದರನ ಜೀವ ಉಳಿಸುವ ಮೂಲಕ ದಿಟ್ಟತನ ಪ್ರದರ್ಶಿಸಿದ ಬಾಲಕಿ ತಾಲೂಕಿನ ಕುಚ್ಚಂಗಿಯ ಶಾಲೂ ಎಂಬ ಬಾಲಕಿ.
ಗುರುವಾರ ಮಧ್ಯಾಹ್ನ ಘಟನೆ ನಡೆದಿದ್ದು, ತನ್ನ ಏಳು ವರ್ಷದ ಸಹೋದರ ಹಿಮಾಂಶೂನನ್ನು ರಕ್ಷಣೆ ಮಾಡಿದ್ದಾಳೆ. ಕುಚ್ಚಂಗಿಯ ತೋಟದ ಮನೆಯಲ್ಲಿ ಉತ್ತರ ಪ್ರದೇಶ ಮೂಲದ ಜೀತೇಂದ್ರ-ರಾಜಕುಮಾರಿ ದಂಪತಿ ಕೆಲಸ ಮಾಡುತ್ತಿದ್ದಾರೆ. ಈ ದಂಪತಿಗೆ 8 ವರ್ಷದ ಶಾಲೂ, 7 ವರ್ಷದ ಹಿಮಾಂಶೂ, 3 ವರ್ಷದ ರಾಶಿ ಹಾಗೂ 2 ವರ್ಷದ ಕಪಿಲ್ ಎಂಬ ಮಕ್ಕಳಿದ್ದಾರೆ.
ಬಾವಿಗೆ ಬಿದ್ದ ಚೆಂಡು: ಹಿಮಾಂಶೂ ಹಾಗೂ ರಾಶಿ ತೋಟದಲ್ಲಿ ಚೆಂಡಿನೊಂದಿಗೆ ಆಟವಾಡುತ್ತಿದ್ದಾಗ ಬಾವಿಗೆ ಬಿದ್ದಿದ್ದ ಚೆಂಡನ್ನು ತೆಗೆಯಲು ಹೋಗಿ ಹಿಮಾಂಶೂ ಆಯತಪ್ಪಿ ಬಾವಿಗೆ ಬಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದ. ಅದನ್ನು ಕಂಡ ಶಾಲೂ ಮನೆಯಲ್ಲಿದ್ದ ಲೈಫ್ ಜಾಕೆಟ್ ಧರಿಸಿ ಬಾವಿಗೆ ಹಾರಿದ್ದಾಳೆ. ಇದೇ ವೇಳೆ ಅಕ್ಕ-ಪಕ್ಕದ ಜನರು ಸಹ ಶಾಲೂ ಸಹಾಯಕ್ಕೆ ಬಂದಿದ್ದಾರೆ. ಬಳಿಕ ಇಬ್ಬರನ್ನು ಬಾವಿಯಿಂದ ಮೇಲಕ್ಕೆ ಎತ್ತುವ ಮೂಲಕ ರಕ್ಷಣೆ ಮಾಡಿದರು.
ಈಜು ಕಲಿಯುತ್ತಿದ್ದಳು: ಕಳೆದ ಮೂರ್ನಾಲ್ಕು ತಿಂಗಳಿಂದ ಶಾಲೂ ಈಜು ಕಲಿಯುತ್ತಿದ್ದಳು. ಲೈಫ್ ಜಾಕೆಟ್ ಧರಿಸಿ ಬಾಡಿಗೆ ಮನೆ ಮಾಲೀಕ ಧನಂಜಯ್ಯ ಎಂಬುವರ ಬಳಿ ಶಾಲೂ ಈಜು ಕಲಿಯುತ್ತಿದ್ದಳು. ಇದೇ ನೆರವಿನಿಂದ ಬಾವಿಗೆ ಹಾರಿ ತಮ್ಮನ ಪ್ರಾಣವನ್ನು ಶಾಲೂ ರಕ್ಷಣೆ ಮಾಡಿದ್ದಾಳೆ. ಇದೀಗ ಗ್ರಾಮಸ್ಥರು ಶಾಲೂ ಸಾಹಸವನ್ನು ಕೊಂಡಾಡಿದ್ದಾರೆ.