ಬೆಂಗಳೂರು: ಮೆಟ್ರೋ ಪ್ರಯಾಣ ದರ ಏರಿಕೆಗೆ ತಾತ್ಕಾಲಿಕ ತಡೆ ನೀಡಿರುವ ಹಿನ್ನೆಲೆ, ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಇಂದು ಸಂಜೆ 4 ಗಂಟೆಗೆ ನಿರ್ದೇಶಕರ ಮಂಡಳಿ ಸಭೆ ಕರೆದಿದೆ.

ಬೆಂಗಳೂರಿನ ಶಾಂತಿನಗರದಲ್ಲಿರುವ BMRCL ಕಚೇರಿಯಲ್ಲಿ ಈ ಮಹತ್ವದ ಸಭೆ ನಡೆಯಲಿದ್ದು, ಒಟ್ಟು 14 ಸದಸ್ಯರನ್ನೊಳಗೊಂಡ BMRCL ನಿರ್ದೇಶಕರ ಮಂಡಳಿ ಸಭೆಯಲ್ಲಿ ಭಾಗವಹಿಸಲಿದೆ.
ಮೆಟ್ರೋ ಪ್ರಯಾಣಿಕರಿಗೆ ನೇರವಾಗಿ ಪರಿಣಾಮ ಬೀರುವ ದರ ಏರಿಕೆ ವಿಚಾರವೇ ಇಂದು ನಡೆಯಲಿರುವ ಸಭೆಯ ಪ್ರಮುಖ ಅಜೆಂಡಾ ಆಗಿರಲಿದೆ. ಇತ್ತೀಚೆಗೆ ದರ ಏರಿಕೆ ಕುರಿತಂತೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ಷೇಪ ವ್ಯಕ್ತವಾಗಿದ್ದು, ಈ ಹಿನ್ನೆಲೆ ದರ ಏರಿಕೆಗೆ ತಾತ್ಕಾಲಿಕ ತಡೆ ನೀಡಲಾಗಿದೆ.
ಇನ್ನು ಈ ಹಿನ್ನೆಲೆಯಲ್ಲಿ ಇಂದು ನಡೆಯುವ ಸಭೆಗೆ ಕೇಂದ್ರ ಸರ್ಕಾರದ ಪರವಾಗಿ ಚೇರ್ಮನ್ ಸೇರಿದಂತೆ ಐವರು ಹಿರಿಯ ಅಧಿಕಾರಿಗಳು, ರಾಜ್ಯ ಸರ್ಕಾರದ ಪರವಾಗಿ BMRCL ವ್ಯವಸ್ಥಾಪಕ ನಿರ್ದೇಶಕರನ್ನು ಒಳಗೊಂಡಂತೆ ಐವರು ಅಧಿಕಾರಿಗಳು ಹಾಗೂ BMRCLನ ನಾಲ್ವರು ನಿರ್ದೇಶಕರು ಹಾಜರಾಗಲಿದ್ದಾರೆ. ಜತೆಗೆ ಕೇಂದ್ರ ಸರ್ಕಾರದ ಕೆಲ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ನಿರ್ದೇಶಕರ ಮಂಡಳಿಯ ಈ ಸಭೆಯಲ್ಲಿ ದರ ನಿಗದಿ ಸಮಿತಿಯೂ ಭಾಗವಹಿಸುವ ಸಾಧ್ಯತೆ ಇದೆ. ದರ ಏರಿಕೆಯ ಮುಂದುವರಿಸಬೇಕೇ ಇಲ್ಲ ತಿದ್ದುಪಡಿ ಮಾಡಬೇಕೇ ಅಥವಾ ಸಂಪೂರ್ಣವಾಗಿ ಹಿಂಪಡೆಯಬೇಕೇ ಎಂಬುದರ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಸಭೆ ಮುಗಿದ ಬಳಿಕ ಮೆಟ್ರೋ ದರ ಏರಿಕೆ ಕುರಿತು ಅಂತಿಮ ತೀರ್ಮಾನ ಪ್ರಕಟವಾಗುವ ನಿರೀಕ್ಷೆಯಿದ್ದು, ಲಕ್ಷಾಂತರ ಮೆಟ್ರೋ ಪ್ರಯಾಣಿಕರು ಸಭೆಯ ಫಲಿತಾಂಶದತ್ತ ಕಾದು ನೋಡುತ್ತಿದ್ದಾರೆ.
Related










