NEWSಕೃಷಿದೇಶ-ವಿದೇಶ

ಎಂಎಸ್ಪಿ ಗ್ಯಾರಂಟಿ ಕಾನೂನು ಜಾರಿಯಾಗುವ ತನಕ ಹೋರಾಟ ನಿಲ್ಲದು: ಕುರುಬೂರು

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಎಂಎಸ್ಪಿ ಗ್ಯಾರಂಟಿ ಕಾನೂನು ಜಾರಿಯಾಗುವ ತನಕ ಹೋರಾಟ ನಿಲ್ಲುವುದಿಲ್ಲ ಎಂಬುದರ ಬಗ್ಗೆ ದೆಹಲಿಯ ಬೃಹತ್ ರೈತ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಎಸ್‌ಕೆಎಂನ ರಾಷ್ಟ್ರೀಯ ಸಹ ಸಂಚಾಲಕ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.

ದೇಶಾದ್ಯಂತ ರೈತರ ಜಾಗೃತಿ ಮೂಡಿಸಲು ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ರೈತ ಜಾಗೃತಿ ಯಾತ್ರೆಯನ್ನು 40 ದಿನಗಳ ಕಾಲ 32 ಸಾವಿರ ಹಳ್ಳಿಗಳ ರೈತರಿಂದ 10 ಲಕ್ಷ ರೈತರ ಸಹಿ ಸಂಗ್ರಹ ಪಡೆದು ಅಂತಿಮವಾಗಿ ಇಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ರೈತ ಸಮಾವೇಶದಲ್ಲಿ ಮಾತನಾಡಿದರು.

ಭಾರತ ಸರ್ಕಾರ ಅಮೆರಿಕದ ಜತೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡು ರೈತರನ್ನು ಬಲಿ ಕೊಡುವ ಕಾರ್ಯಕ್ಕೆ ಮುಂದಾಗಿದೆ ಇದನ್ನು ನಾವು ಸಹಿಸುವುದಿಲ್ಲ. ಸರ್ಕಾರ ಎಚ್ಚೆತ್ತು ಒಪ್ಪಂದದಿಂದ ಹೊರಗೆ ಬರಬೇಕು ಎಂದು ಆಗ್ರಹಿಸಿದರು.

ಇನ್ನು ದೇಶದಲ್ಲಿ ಗೃಹ ಬಳಕೆ ಗ್ಯಾಸ್ ಕೊರತೆ ಉಂಟಾಗಿದೆ. ಯುದ್ಧ ನಿಲ್ಲುವ ತನಕ ನಾವೆಲ್ಲ ಗ್ಯಾಸ್‌ಗಾಗಿ ಪರದಾಡಬೇಕಾಗಿದೆ ಆದ್ದರಿಂದ ರೈತರು ಎಥನಾಲ್ ಉತ್ಪಾದಿಸಲು ಹಾಗೂ ಮಾರಾಟ ಮಾಡಲು ಅನುಮತಿ ನೀಡಬೇಕು. ಎಥನಾಲ್ ಲಿಕ್ವಿಡ್ ಆದ ಕಾರಣ ಯಾವುದೇ ಆತಂಕ ಗಾಬರಿ ಇಲ್ಲ. ದೇಶಕ್ಕೆ ವಿದೇಶಿ ವಿನಿಮಯ ಉಳಿತಾಯವಾಗುತ್ತದೆ ರೈತರಿಗೂ ಲಾಭ ಅಧಿಕವಾಗುತ್ತದೆ ಆದ್ದರಿಂದ ಕೇಂದ್ರ ಸರ್ಕಾರ ಕೂಡಲೇ ಚಿಂತನೆ ನಡೆಸಬೇಕು ಎಂದು ಒತ್ತಾಯಿಸಿದರು.

ಯಾತ್ರೆಯ ಮುಖಂಡತ್ವವನ್ನು ವಹಿಸಿದ್ದ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯತರ) (ಎಸ್‌ಕೆಎಂ) ಸಂಘಟನೆಯ ರಾಷ್ಟ್ರೀಯ ಸಂಚಾಲಕ ಜಗಜಿತ್ ಸಿಂಗ್ ದಲೈವಾಲಾ ಮಾತನಾಡಿ, ಸ್ವಾತಂತ್ರ ಬಂದ 76 ವರ್ಷಗಳಿಂದ ಎಲ್ಲ ಸರ್ಕಾರಗಳು ರೈತರನ್ನು ನ್ಯಾಯಯುತ ಬೆಲೆ ನೀಡದೆ ಮೋಸಗೊಳಿಸುತ್ತಿವೆ. ಇದರಿಂದ ಏಳು ಲಕ್ಷ ರೈತರು ಸಾಲಗಾರರಾಗಿ ಆತ್ಮಹತ್ಯೆ ಶರಣಾಗಿದ್ದಾರೆ.

ಇಂದಿನ ಪ್ರಧಾನಿ ಮೋದಿ ಅವರು ಸ್ವಾಮಿನಾಥನ್ ವರದಿ ಜಾರಿ ಮಾಡುವ ಭರವಸೆ ನೀಡಿ ಹಾಗೂ ರೈತರ ಆದಾಯ ದ್ವಿಗುಣ ಮಾಡುವ ಭರವಸೆಯನ್ನು ಹುಷಿಗೊಳಿಸಿದ್ದಾರೆ. ಕೇಂದ್ರ ಸರ್ಕಾರದ ಸಂಸದೀಯ ಸಮಿತಿ ರೈತರ ಬೇಡಿಕೆ ಎಂಎಸ್ಪಿ ಖಾತ್ರಿ ಕಾನೂನು ಜಾರಿ ಮಾಡಬೇಕು ಎಂಬ ರೈತಪರ ವರದಿ ನೀಡಿದೆ.

ಇನ್ನು ಸರ್ವೋಚ್ಚ ನ್ಯಾಯಾಲಯ ನೇಮಿಸಿದ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ನವಾಬ್‌ಸಿಂಗ್ ಸಮಿತಿಯ ವರದಿಯು ಕೂಡ ರೈತ ಪರವಾಗಿ ಬಂದಿದೆ. ಆದರೂ ಕೇಂದ್ರ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಆದ್ದರಿಂದ ಸರ್ಕಾರ ಎಚ್ಚರಿಸಲು ರೈತರು ಜಾಗೃತರಾಗಿ ಕೇಂದ್ರವನ್ನು ಒತ್ತಾಯಿಸುತ್ತಿದ್ದೇವೆ ಎಂದರು.

ರೈತ ಮುಖಂಡ ಅಭಿಮನ್ಯು ಕೋಹರ್ ಮಾತನಾಡಿ, ರೈತ ಜಾಗೃತಿ ಯಾತ್ರೆಯಿಂದ ಕೋಟ್ಯಂತರ ರೈತರು ಸರ್ಕಾರದ ಶೋಷಣೆ ಬಗೆ ಜಾಗೃತರಾಗಿದ್ದಾರೆ. ಸರ್ಕಾರಗಳು ಬಂಡವಾಳಶಾಹಿಗಳಿಗೆ ಸಾಲ ಮನ್ನಾ ಮಾಡುತ್ತಾರೆ. ಆದರೆ ರೈತರಿಗೆ ಯಾಕೆ ಮಾಡುತ್ತಿಲ್ಲ. ಕೇಂದ್ರ ಸರ್ಕಾರದಿಂದ ಎಲ್ಲ ತರದಲ್ಲೂ ರೈತರ ಶೋಷಣೆ ನಡೆಯುತ್ತಿದೆ ಎಂದರು.

ತಮಿಳುನಾಡು ಪಿ ಆರ್ ಪಾಂಡನ್, ರಾಮನಗೌಂಡರ್, ಪಂಜಾಬ್‌ನ ಸತ್ನನಾಮಸಿಂಗ್ ಬೆಹರು, ದೆಹಲಿಯ ಋಷಿಪಾಲ್ ಅಂಬಾವತ, ಮಧ್ಯಪ್ರದೇಶದ ಲೀಲಾದರ್ ರಜಪೂತ, ಬಲದೇವ್ ಸಿಂಗ್ ಶಿರಸ, ಉತ್ತರ ಪ್ರದೇಶದ ರಜೆವೀರ್ ಸಿಂಗ್ ಸೇರಿದಂತೆ ಹಲವಾರು ರಾಜ್ಯಗಳ ರೈತ ಮುಖಂಡರು ಮಾತನಾಡಿದರು.

ಸಮಾವೇಶದ ನಂತರ ಪೊಲೀಸರ ಸಮಕ್ಷಮದಲ್ಲಿ ಪ್ರಧಾನ ಮಂತ್ರಿಗಳ ಕಚೇರಿಗೆ ರೈತರು ಸಹಿ ಮಾಡಿದ ಮೂರು ಚೀಲಗಳ ಒತ್ತಾಯ ಪತ್ರವನ್ನು ಎಸ್ ಕೆ ಎಂ ಮುಖಂಡರುಗಳು ಸಲ್ಲಿಸಿದರು.

ದೇಶದ ವಿವಿಧ ರಾಜ್ಯಗಳ ಸಹಸ್ರಾರು ರೈತರು ಭಾಗವಹಿಸಿದ್ದರು. ಭಾರಿ ಮಳೆ ಸುರಿದ ಪರಿಣಾಮವಾಗಿ ಮೈದಾನ ನೀರು ನಿಂತಿದ್ದರು ಮಳೆ ಸುರಿಯುತ್ತಿದ್ದರು ರೈತರು ಸಮಾವೇಶದ ಕೊನೆತನಕ ಭಾಗವಹಿಸಿದರು. ಅದರೆ ಅವರ ಕಿಚ್ಚು ಎಷ್ಟಿದೆ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕಿದೆ.

Megha
the authorMegha

Leave a Reply

error: Content is protected !!