KKRTC: ನೌಕರರ ಮೇ ತಿಂಗಳ ವೇತನ ನಾಳೆ ಆಗುತ್ತದೆ, ಗೊಂದಲ ಬೇಡ: ಸಿಎಒ ಸ್ಪಷ್ಟನೆ
ಈ ಬಗ್ಗೆ ಸ್ಪಷ್ಟಪಡಿಸಿರುವ ಮುಖ್ಯ ಲೆಕ್ಕಾಧಿಕಾರಿಗಳು ಕೆಲ ತಾಂತ್ರಿಕ ಕಾರಣದಿಂದ ಈ ಬಾರಿಯಷ್ಟೇ ವೇತನ ಕೊಡುವುದು ವಿಳಂಬವಾಗಿದೆ, ಮತ್ತೆ ಬರುವ ತಿಂಗಳಿನಿಂದ ಯಥಾಪ್ರಕಾರ ತಿಂಗಳ ಒಂದನೇ ತಾರೀಖಿನಂದೆ ಆಗುತ್ತದೆ ಎಂದು ವಿಜಯಪಥಕ್ಕೆ ತಿಳಿಸಿದ್ದಾರೆ.

ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರಿಗೆ ಪ್ರತಿ ತಿಂಗಳ ಒಂದನೇ ತಾರೀಖಿಗೆ ವೇತನವಾಗುತ್ತಿತ್ತು. ಆದರೆ, ಈ ಬಾರಿ ಮೇ ತಿಂಗಳ ವೇತನ ಜೂನ್ 5ನೇ ತಾರೀಖು ಬಂದರೂ ಇನ್ನು ಆಗಿಲ್ಲ ಎಂಬ ಬಗ್ಗೆ ವಿಜಯಪಥ ವರದಿ ಮಾಡಿತ್ತು. ಈ ವರದಿ ಬೆನ್ನಲೇ ಜೂನ್ 8ರ ಸೋಮವಾರ ವೇತನ ಆಗುತ್ತದೆ ಎಂದು ನಿಗಮದ ಮುಖ್ಯ ಲೆಕ್ಕಾಧಿಕಾರಿ ತಿಳಿಸಿದ್ದಾರೆ.
ಈ ಬಗ್ಗೆ ನೌಕರರಿಗೆ ಯಾವುದೇ ಮಾಹಿತಿ ನೀಡದ ಕಾರಣ ವೇತನ ಯಾವಾಗ ಆಗುತ್ತದೆ? ಯಾರನ್ನು ಕೇಳಬೇಕು ಎಂಬ ಗೊಂದಲದಲ್ಲಿ ಸಂಸ್ಥೆಯ 9 ವಿಭಾಗದ ನೌಕರರು ಇದ್ದರು. ಆದರೆ, ಈ ಬಗ್ಗೆ ಸ್ಪಷ್ಟಪಡಿಸಿರುವ ಮುಖ್ಯ ಲೆಕ್ಕಾಧಿಕಾರಿಗಳು ಕೆಲ ತಾಂತ್ರಿಕ ಕಾರಣದಿಂದ ಈ ಬಾರಿಯಷ್ಟೇ ವೇತನ ಕೊಡುವುದು ವಿಳಂಬವಾಗಿದೆ, ಮತ್ತೆ ಬರುವ ತಿಂಗಳಿನಿಂದ ಯಥಾಪ್ರಕಾರ ತಿಂಗಳ ಒಂದನೇ ತಾರೀಖಿನಂದೆ ಆಗುತ್ತದೆ ಎಂದು ವಿಜಯಪಥಕ್ಕೆ ತಿಳಿಸಿದ್ದಾರೆ.
ವಿಜಯಪಥ ವರದಿ?: ಪ್ರತಿ ತಿಂಗಳು ಶನಿವಾರ ಭಾನುವಾರ 1ನೇ ತಾರೀಖು ಬಂದರೆ ಅದರ ಮಾರನೇದಿನ ಅಂದರೆ 2 ಅಥವಾ 3ನೇ ತಾರೀಖಿಗೆ ವೇತನ ಪಾವತಿಸಲಾಗುತ್ತಿತ್ತು. ಆದರೆ, ಈ ಬಾರಿ ಒಂದನೇ ತಾರೀಖು ಸೋಮವಾರವೇ ಬಂದಿದ್ದರೂ ಈವರೆಗೂ ವೇತನ ಪಾವತಿಸಲಾಗಿಲ್ಲ. ಈ ಸಂಬಂಧ ನಿಗಮದ ಮುಖ್ಯ ಲೆಕ್ಕಾಧಿಕಾರಿ ಹಾಗೂ ಉಪ ಮುಖ್ಯ ಲೆಕ್ಕಾಧಿಕಾರಿಗಳಿಗೆ ಫೋನ್ ಮಾಡಿದರೆ ಅವರು ಫೋನ್ ಪಿಕ್ ಮಾಡುತ್ತಿಲ್ಲ.
ಇನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಬಿ.ಸುಶೀಲಾ ಅವರಿಗೂ ಫೋನ್ ಮಾಡಲಾಯಿತು. ಅವರು ಕೂಡ ಫೋನ್ ಪಿಕ್ ಮಾಡಿಲ್ಲ. ಈ ರೀತಿ ಫೋನ್ಗಳನ್ನು ಪಿಕ್ ಮಾಡುತ್ತಿಲ್ಲ. ಅತ್ತ ನೌಕರರಿಗೆ ವೇತನ ಕೊಡುವುದಕ್ಕೆ ವಿಳಂಬವಾಗುತ್ತಿರುವ ಬಗ್ಗೆಯೂ ಸರಿಯಾದ ಮಾಹಿತಿ ಕೊಡುತ್ತಿಲ್ಲ ಎಂದರೆ ನೌಕರರು ಏನು ತಿಳಿದುಕೊಳ್ಳಬೇಕು ಎಂದು ಪ್ರಶ್ನಿಸಲಾಗಿತ್ತು.
ಅಲ್ಲದೆ ಏಕೆ ಸಂಸ್ಥೆಯಲ್ಲಿ ಆರ್ಥಿಕ ಸಮಸ್ಯೆಯಾಗಿದೆಯೇ? ಒಂದುವೇಳೆ ಆರ್ಥಿಕ ಸಮಸ್ಯೆ ಆಗಿದ್ದರೆ ಈ ಬಾರಿ ನಾವು 1ನೇ ತಾರೀಖಿಗೆ ವೇತನ ಹಾಕಲು ಆಗುತ್ತಿಲ್ಲ ಎಂದು ನೌಕರರಿಗೆ ಮಾಹಿತಿ ನೀಡಬಹುದಿತ್ತಲ್ಲವೇ. ಅದನ್ನು ಮಾಡದೆ ನೌಕರರಿಗೆ ವೇತನವನ್ನು ಹಾಕದೆ ಗೊಂದಲದಲ್ಲಿ ದೂಡಿರುವುದು ಸರಿಯೆ? ಇದಕ್ಕೆ ಸಂಬಂಧಪಟ್ಟ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಸುಶೀಲಾ ಅವರು ಉತ್ತರ ಕೊಡಬೇಕು ಎಂದು ಆಗ್ರಹಿಸಲಾಗಿತ್ತು.
ಜತೆಗೆ ಈ ಹಿಂದೆ ಬಿಎಂಟಿಸಿಯಲ್ಲೂ ಇದೇ ರೀತಿ ತಮಗೆ ಇಷ್ಟ ಬಂದಾಗ ವೇತನ ಹಾಕುವ ಪದ್ಧತಿಯನ್ನು ಅಧಿಕಾರಿಗಳು ರೂಢಿಸಿಕೊಂಡಿದ್ದರು. ಅದು 2023-24ರ ಆ ವೇಳೆ ಎಂಡಿಯಾಗಿದ್ದ ಖಡಕ್ ಐಎಎಸ್ ಅಧಿಕಾರಿ ಜಿ. ಸತ್ಯವತಿ ಅವರು ಈ ರೀತಿ ವೇತನವನ್ನು ಇಷ್ಟಬಂದ ದಿನ ಕೊಡುವುದರಿಂದ ನೌಕರರು ಗೊಂದಲಕ್ಕೆ ಸಿಲುಕುತ್ತಾರೆ. ಹಾಗಾಗಿ ಈ ಪದ್ಧತಿ ಹೋಗಬೇಕು ನೀವು ಎಂದು ವೇತನ ಕೊಡುತ್ತೀರಿ ಎಂದು ಒಂದು ನಿಗದಿತ ದಿನಾಂಕವನ್ನು ನಮಗೆ ಕೊಡಿ ಎಂದು ಕೇಳಿದ್ದರು.
ಆ ವೇಳೆ ಸಂಸ್ಥೆಯಲ್ಲಿದ್ದ ಮುಖ್ಯ ಲೆಕ್ಕಾಧಿಕಾರಿಗಳು ಪ್ರತಿ ತಿಂಗಳ 5ನೇ ತಾರೀಖಿಗೆ ವೇತನ ಕೊಡುತ್ತೇವೆ ಎಂದು ಲಿಖಿತವಾಗಿ ತಿಳಿಸಿದ್ದರು. ಅಂದಿನಿಂದ ಇಂದಿನವರೆಗೂ ಪ್ರತಿ ತಿಂಗಳು 5ನೇ ತಾರೀಖಿಗೆ ವೇತನವಾಗುತ್ತಿದೆ. ಈ ರೀತಿ ಕೆಕೆಆರ್ಟಿಸಿ ಎಂಡಿ ಡಾ.ಸುಶೀಲಾ ಅವರು ಏಕೆ ಅಧಿಕಾರಿಗಳಿಗೆ ಒಂದು ಖಡಕ್ ಎಚ್ಚರಿಕೆ ಸಂದೇಶ ಕೊಡಬಾರದು ಎಂಬುವುದು ನೌಕರರ ಒತ್ತಾಯವಾಗಿದೆ ಎಂದು ವರದಿ ಪ್ರಸಾರವಾಗಿತ್ತು.
ಅಲ್ಲದೆ ಇನ್ನಾದರೂ ಈ ರೀತಿ ಇಷ್ಟಬಂದಂತೆ ವೇತನವನ್ನು ಕೊಡುವುದಕ್ಕೆ ಪೂರ್ಣವಿರಾಮಹಾಕಿ ಒಂದು ನಿಗದಿತ ತಾರೀಖಿನಂದು ನೌಕರರ ಬ್ಯಾಂಕ್ ಖಾತೆಗೆ ವೇತನ ಹಾಕುವ ಪದ್ಧತಿಯನ್ನು ನಿಗಮದ ಅಧಿಕಾರಿಗಳು ರೂಢಿಸಿಕೊಳ್ಳಬೇಕು ಎಂದು ನೌಕರರ ಆಗ್ರಹವಾಗಿದೆ ಎಂದು ವಿವರವಾದ ವರದಿ ಪ್ರಸಾರವಾಗಿತ್ತು. ವರದಿ ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತ ಅಧಿಕಾರಿಗಳು ಜೂನ್ 8ರಂದು ವೇತನ ಹಾಕುವುದಾಗಿ ಹಾಗೂ ತಾಂತ್ರಿಕ ಸಮಸ್ಯೆಯಿಂದ ವಿಳಂಬವಾಗಿದೆ ಎಂದು ತಿಳಿಸಿದ್ದಾರೆ.
Related









