ಗೃಹಜ್ಯೋತಿಯಿಂದ ಸರ್ಕಾರಿ ನೌಕರರ ಹೊರಗಿಡಲು ಸರ್ಕಾರದ ಚಿಂತನೆ
ಈವರೆಗೂ ಪ್ರತಿಯೊಬ್ಬ ಸರ್ಕಾರಿ ನೌಕರರಿಗೂ ಗೃಹಜ್ಯೋತಿ ಯೋಜನೆ ಸೌಲಭ್ಯ ಸಿಗುತ್ತಿದೆ. ಇದು ಕೇವಲ ಆದಾಯ ಅಥವಾ ಉದ್ಯೋಗದ ಆಧಾರದ ಮೇಲೆ ನಿರ್ಧಾರವಾಗಿಲ್ಲದೆ ಎಲ್ಲರಿಗೂ ಕೊಡಲಾಗುತ್ತಿದೆ.

ಬೆಂಗಳೂರು: ರಾಜ್ಯ ಸರ್ಕಾರ ಇದೀಗ ಗ್ಯಾರಂಟಿ ಇಕ್ಕಟ್ಟಿನಲ್ಲಿ ಸಿಲುಕಿದೆ. ಸದ್ಯ ಗ್ಯಾರಂಟಿ ಪರಿಷ್ಕರಣೆ ನಡೆಸುತ್ತಿದೆ. ನಡುವೆ ಸರ್ಕಾರಿ ನೌಕರರನ್ನು ಗ್ಯಾರಂಟಿ ಯೋಜನೆಗಳಿಂದ ಹೊರಗಿಡಲು ಚಿಂತನೆ ನಡೆಸಿದ್ದು, ಎಲ್ಲ ಸರ್ಕಾರಿ ನೌಕರರನ್ನು ಗೃಹಜ್ಯೋತಿ ಯೋಜನೆಯಿಂದಲೂ ಹೊರಗಿಡುವ ಚಿಂತನೆ ನಡೆಸುತ್ತಿದೆ.
ಹೌದು, ಈವರೆಗೂ ಪ್ರತಿಯೊಬ್ಬ ಸರ್ಕಾರಿ ನೌಕರರಿಗೂ ಗೃಹಜ್ಯೋತಿ ಯೋಜನೆ ಸೌಲಭ್ಯ ಸಿಗುತ್ತಿದೆ. ಇದು ಕೇವಲ ಆದಾಯ ಅಥವಾ ಉದ್ಯೋಗದ ಆಧಾರದ ಮೇಲೆ ನಿರ್ಧಾರವಾಗಿಲ್ಲದೆ ಎಲ್ಲರಿಗೂ ಕೊಡಲಾಗುತ್ತಿದೆ.
ಕರ್ನಾಟಕದಲ್ಲಿ ವಾಸವಿದ್ದು ಯೋಜನೆಯ ಸೌಲಭ್ಯಪಡೆಯಲು ಆಧಾರ್ ನಂಬರ್ ಲಿಂಕ್ ಮಾಡಿದರೆ ಸಾಕಾಗಿತ್ತು. ಸರ್ಕಾರಿ ನೌಕರರಾಗಿದ್ದರೂ ತಮ್ಮ ಹೆಸರಿನಲ್ಲಿ ಗೃಹ ಬಳಕೆಯ (Domestic) ವಿದ್ಯುತ್ ಸಂಪರ್ಕ ಹೊಂದಿಲು ಅವಕಾಶವಿದೆ. ಹೀಗೆ ಸರ್ಕಾರಿ ನೌಕರರು ಸೇರಿದಂತೆ ಎಲ್ಲ ನಾಗರಿಕರಿಗೂ ಮತ್ತು ಬಾಡಿಗೆದಾರರಿಗೂ ಈ ಯೋಜನೆ ಅನ್ವಯಿಸುತ್ತಿದೆ.
ಆದರೆ, ಈಗ ಸರ್ಕಾರ ಸರ್ಕಾರಿ ನೌಕರರನ್ನು ಈ ಯೋಜನೆಯಿಂದ ಹೊರಗಿಡುವ ಚಿಂತನೆ ನಡೆಸುತ್ತಿದೆ. ಆದರೆ, ಈ ಬಗ್ಗೆ ಇನ್ನೂ ಯಾವುದೆ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.
ನಿಯಮವಿದೆ: ಇಲ್ಲಿ ವಿದ್ಯುತ್ ಬಳಕೆಯು ಕಡ್ಡಾಯವಾಗಿ ತಿಂಗಳಿಗೆ 200 ಯೂನಿಟ್ಗಿಂತ ಕಡಿಮೆ ಇರಬೇಕು. ನಿಮ್ಮ ಹಿಂದಿನ ವರ್ಷದ ಸರಾಸರಿ ಬಳಕೆಯ ಆಧಾರದ ಮೇಲೆ ನಿಗದಿಯಾಗುವ ಉಚಿತ ಯೂನಿಟ್ಗಳ ಮಿತಿಯೊಳಗೆ ಮಾಸಿಕ ಬಳಕೆ ಇರಬೇಕು. ಒಬ್ಬರಿಗೆ ಕೇವಲ ಒಂದು ಮೀಟರ್ಗೆ ಮಾತ್ರ ಈ ಸೌಲಭ್ಯ ಸಿಗುತ್ತಿದೆ. ಆದರೆ ಇನ್ನು ಮುಂದೆ ಸರ್ಕಾರಿ ನೌಕರರನ್ನು ಈ ಯೋಜನೆಯಿಂದ ಹೊರಗಿಡಲು ಸರ್ಕಾರ ಚಿಂತನೆಯಲ್ಲಿ ಮುಳುಗಿದೆ.
ಈ ಬಗ್ಗೆ ಸರ್ಕಾರಿ ನೌಕರರ ಸಂಘಟನೆಗಳ ಜತೆ ಮಾತನಾಡುವ ಬಗ್ಗೆ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ತಿಳಿಸಿದ್ದಾರೆ. ತೆರಿಗೆ ವ್ಯಾಪ್ತಿಗೆ ಬರುವವರಿಗೆ ಹಾಗೂ ಐಟಿ ಸಲ್ಲಿಸುತ್ತಿರುವವರಿಗೆ ಈ ಯೋಜನೆಯ ಸೌಲಭ್ಯ ಕೊಡಬಾರದು ಅಂತಿದೆ.
ಈ ಕುರಿತು ಸರ್ಕಾರಿ ನೌಕರರ ಜತೆ ಚರ್ಚೆ ಮಾಡುತ್ತೇವೆ. ಸರ್ಕಾರದ ಗ್ಯಾರಂಟಿ ಯೋಜನೆಯ ಫಲಾನುಭವಿಗಳು ಸ್ವಯಂಪ್ರೇರಿತವಾಗಿ ಬಿಟ್ಟುಕೊಡಲು ಸರ್ಕಾರಿ ನೌಕರರ ಸಂಘ ಮತ್ತು ಇತರೆ ಸಂಘಗಳೊಂದಿಗೆ ಚರ್ಚೆ ನಡೆಸುವುದು ಕೂಡ ಗ್ಯಾರಂಟಿ ಪ್ರಾಧಿಕಾರದ ಅಜೆಂಡಾ ಆಗಿದೆ ಎಂದು ಹೇಳಿದ್ದಾರೆ.
ಇದಕ್ಕೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರು ಪ್ರತಿಕ್ರಿಯೆ ನೀಡಿದ್ದು, ಗ್ಯಾರಂಟಿ ಪ್ರಾಧಿಕಾರ ನಮ್ಮ ಬಳಿ ಚರ್ಚೆ ಮಾಡಿದರೆ ನಮ್ಮ ಅಭಿಪ್ರಾಯ ತಿಳಿಸುತ್ತೇವೆ. ಗ್ಯಾರಂಟಿ ಕೊಡಿ ಅಂತಾ ನಾವು ಕೇಳಿರಲಿಲ್ಲ, ಅವರೇ ಕೊಟ್ಟಿದ್ದಾರೆ. ಈಗ ವಾಪಸ್ ತೆಗೆದುಕೊಳ್ಳುತ್ತೇವೆ ಅಂತಿದ್ದಾರೆ. ಗೃಹಜ್ಯೋತಿ ಯೋಜನೆಯಿಂದ ನೌಕರರಿಗೆ ಅನುಕೂಲ ಆಗುತ್ತಿದೆ. ನಮ್ಮ ಬಳಿ ಚರ್ಚೆ ಮಾಡಿದಾಗ ನಮ್ಮ ಅಭಿಪ್ರಾಯ ತಿಳಿಸುತ್ತೇವೆ ಎಂದಿದ್ದಾರೆ.







