ಚಾಲನೆಯಲ್ಲಿದ್ದ ಬಸ್ನ ಸ್ಟೇರಿಂಗ್ ಹಿಡಿದ ಕುಡುಕ- ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಬಸ್ ಡಿಕ್ಕಿ, 11 ಮಂದಿಗೆ ಗಂಭೀರ ಗಾಯ
ಬಸ್ ಶಹಾಪುರ ಗೇಟ್ ಬಳಿ ಬರುತ್ತಿದ್ದಂತೆ ಕಂಠಮಟ್ಟ ಕುಡಿದು ಬಂದಿದ್ದ ಮಹಾರಾಷ್ಟ್ರ ಮೂಲದ ಪ್ರಯಾಣಿಕನೊಬ್ಬ ಸ್ಟೇರಿಂಗ್ನ್ನು ಗಟ್ಟಿಯಾಗಿ ಹಿಡಿದಿದ್ದಾನೆ. ಪರಿಣಾಮ ಬಸ್ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.

ಬೀದರ್: ಕುಡಿದ ಮತ್ತಿನಲ್ಲಿ ಪ್ರಯಾಣಿಕನೊಬ್ಬ ಗಟ್ಟಿಯಾಗಿ ಬಸ್ನ ಸ್ಟೇರಿಂಗ್ ಹಿಡಿದ ಪರಿಣಾಮ, ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ಮರಕ್ಕೆ ಡಿಕ್ಕಿಯಾಗಿ 11 ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಹಾಪೂರ ಗೇಟ್ ಬಳಿ ಇಂದು ನಡೆದಿದೆ.
ಮಹಾರಾಷ್ಟ್ರದ ಸರ್ಕಾರಿ ಸಾರಿಗೆ ಬಸ್ ಹೈದರಾಬಾದ್ನಿಂದ ಉದ್ಗೀರ್ಗೆ ತೆರಳುತ್ತಿತ್ತು. ಬಸ್ ಶಹಾಪುರ ಗೇಟ್ ಬಳಿ ಬರುತ್ತಿದ್ದಂತೆ ಕಂಠಮಟ್ಟ ಕುಡಿದು ಬಂದಿದ್ದ ಮಹಾರಾಷ್ಟ್ರ ಮೂಲದ ಪ್ರಯಾಣಿಕನೊಬ್ಬ ಸ್ಟೇರಿಂಗ್ನ್ನು ಗಟ್ಟಿಯಾಗಿ ಹಿಡಿದಿದ್ದಾನೆ. ಪರಿಣಾಮ ಬಸ್ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.
ಅಪಘಾತದಲ್ಲಿ ಬಸ್ ಚಾಲಕ ವಿಕಾಸ್, ಉದ್ಗೀರ್ ಮೂಲದ ಬಾಲಾಜಿ, ಪವನ್, ನೂರ್ ಅಹ್ಮದ್, ನರಸಿಂಗ್, ಪೂಜಾ, ಸುರೇಖಾ, ಸೃಷ್ಠಿ ಸೇರಿ 11 ಜನರಿಗೆ ಗಂಭೀರ ಗಾಯಗಳಾಗಿವೆ.
ಇವರಲ್ಲಿ ಕುಟುಂಬ ಸಮೇತ ತಿರುಪತಿಗೆ ಹೋಗಿ ವಾಪಸ್ ತೆರಳುತ್ತಿದ್ದ ಒಂದೇ ಕುಟುಂಬದ 8 ಜನರಿಗೆ ಗಾಯಗಳಾಗಿವೆ. ಗಾಯಾಳುಗಳಿಗೆ ಬೀದರ್ನ ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆ ಸಂಬಂಧ ಶಹಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ.







