ವಾಯವ್ಯ ಸಾರಿಗೆ ಬಸ್- ಬೈಕ್ ನಡುವೆ ಡಿಕ್ಕಿ ಹೊತ್ತಿ ಉರಿದ ಬೈಕ್- ಸವಾರ ಸಜೀವ ದಹನ
ಬಾದಾಮಿಯಿಂದ ಇಚಲಕರಂಜಿ ಕಡೆಗೆ ತೆರಳುತ್ತಿದ್ದ ಬಸ್ಗೆ ಬೈಕ್ ಡಿಕ್ಕಿಯಾಗಿದೆ. ಡಿಕ್ಕಿಯ ತೀವ್ರತೆಗೆ ಬೈಕ್ಗೆ ತಕ್ಷಣವೇ ಬೆಂಕಿ ಹೊತ್ತಿಕೊಂಡಿದ್ದು, ಸವಾರ ನವೀನ್ ಬೆಂಕಿಯಲ್ಲಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಬಾಗಲಕೋಟೆ: ವಾಯವ್ಯ ಸಾರಿಗೆ ಬಸ್ ಮತ್ತು ತ್ರಿಚಕ್ರ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 25 ವರ್ಷದ ಯುವಕನೊಬ್ಬ ಸಜೀವ ದಹನಗೊಂಡ ಘಟನೆ ಜಿಲ್ಲೆಯ ಮುಧೋಳ ತಾಲೂಕಿನ ಸೊರಗಾಂವ್ ಗ್ರಾಮದ ಬಳಿ ಭಾನುವಾರ ನಡೆದಿದೆ.
ಬಸ್ಗೆ ಬೈಕ್ ಡಿಕ್ಕಿಯಾದ ಪರಿಣಾಮ ಬೈಕ್ಗೆ ಬೆಂಕಿ ತಗುಲಿ ಅಂಗವಿಕಲ ಯುವಕ ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾನೆ. ಮೃತನನ್ನು ಮುಧೋಳ ಪಟ್ಟಣದ ಜನತಾ ಪ್ಲಾಟ್ ನಿವಾಸಿ ನವೀನ್ ಹನುಮಂತ ಗೋರ್ಕ್ ಎಂದು ಗುರುತಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಬಾದಾಮಿಯಿಂದ ಇಚಲಕರಂಜಿ ಕಡೆಗೆ ತೆರಳುತ್ತಿದ್ದ ಬಸ್ಗೆ ಬೈಕ್ ಡಿಕ್ಕಿಯಾಗಿದೆ. ಡಿಕ್ಕಿಯ ತೀವ್ರತೆಗೆ ಬೈಕ್ಗೆ ತಕ್ಷಣವೇ ಬೆಂಕಿ ಹೊತ್ತಿಕೊಂಡಿದ್ದು, ಸವಾರ ನವೀನ್ ಬೆಂಕಿಯಲ್ಲಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಧಗಧಗನೆ ಹೊತ್ತಿ ಉರಿದ ವಾಹನ: ಡಿಕ್ಕಿಯಾದ ತಕ್ಷಣವೇ ಬೈಕ್ನ ಪೆಟ್ರೋಲ್ ಟ್ಯಾಂಕ್ ಸೋರಿಕೆಯಾಗಿ ಭೀಕರವಾಗಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಜ್ವಾಲೆ ಎಷ್ಟರಮಟ್ಟಿಗೆ ಇತ್ತೆಂದರೆ, ಬೈಕ್ ಸವಾರ ನವೀನ್ ಅವರಿಗೆ ವಾಹನದಿಂದ ಕೆಳಗೆ ಇಳಿದು ಬರಲು ಸಾಧ್ಯವಾಗಿಲ್ಲ. ಪರಿಣಾಮ ಬೈಕ್ ಸಮೇತ ಧಗಧಗನೆ ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ.
ಅಪಘಾತದ ತೀವ್ರತೆಗೆ ಬಸ್ನ ಮುಂಭಾಗಕ್ಕೂ ಬೆಂಕಿ ತಗುಲಿದ್ದು, ಬಸ್ನಲ್ಲಿದ್ದ ಪ್ರಯಾಣಿಕರು ಆತಂಕದಿಂದ ಕೆಳಗೆ ಇಳಿದು ಓಡಿ ಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳದಲ್ಲಿ ಬೈಕ್ ಹಾಗೂ ಸವಾರನ ಶವ ಬೆಂಕಿಯ ಜ್ವಾಲೆಯಲ್ಲಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಸ್ಥಳೀಯರಲ್ಲಿ ಕರುಳು ಹಿಂಡುವಂತಿತ್ತು.
ವಿಷಯ ತಿಳಿಯುತ್ತಿದ್ದಂತೆಯೇ ಮುಧೋಳ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.







