KSRTC ನೌಕರರ ವೇತನ ಸಂಬಂಧ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳ ಸಭೆ ಮತ್ತೊಮ್ಮೆ ವಿಫಲ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು/ನೌಕರರ ವೇತನ ಹೆಚ್ಚಳ ಸಂಬಂಧ ಇಂದು ಸಂಜೆ ವಿಧಾನಸೌಧದಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ಸುಮಾರು 2ಗಂಟೆಗಳ ಕಾಲ ನಡೆದ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಯಾವುದೇ ಅಂತಿಮ ತೀರ್ಮಾನವಾಗದೆ ವಿಫಲಗೊಂಡಿದೆ.

ಮತ್ತೆ ಡಿಸೆಂಬರ್ 6ರಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳ ಸಭೆ ಆಯೋಜಿಸುವಂತೆ ಸಿಎಂ ತಿಳಿಸಿದ್ದಾರೆ ಅಂದು ಮತ್ತೆ ಚರ್ಚೆಯಾಗಿಲಿದೆ ಎಂದು ಜಂಟಿ ಕ್ರಿಯಾ ಸಮಿತಿ ಮುಖಂಡರು ಮಾಧ್ಯಮದವರಿಗೆ ತಿಳಿಸಿದ್ದಾರೆ.
ಸಭೆಯಲ್ಲಿ ಏನಾಯಿತು?: ಸಿಎಂ ಅವರು 2026ರ ಜನವರಿ 1ರಿಂದ ವೇತನ ಪರಿಷ್ಕರಣೆ ಮಾಡುತ್ತೇವೆ ಎಂದು ಹೇಳಿದರು, ಅದಕ್ಕೆ ನಾವು ಒಪ್ಪಿಲ್ಲ. ನಮಗೆ 2024 ಜನವರಿ 1ರಿಂದಲೇ ವೇತನ ಹೆಚ್ಚಳವಾಗಬೇಕು ಹಾಗೂ 2020 ಜನವರಿ 1ರಿಂದ ಶೇ.15ರಷ್ಟು ಆಗಿರುವ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿಯನ್ನು ಕೊಡಬೇಕು ಎಂದು ಸಭೆಯಲ್ಲಿ ಒತ್ತಾಯಿಸಿದ್ದೇವೆ ಎಂದು ತಿಳಿಸಿದರು.
ಇನ್ನು ನಾವು 1957ರಿಂದ ಸಾರಿಗೆ ನೌಕರರಿಗೆ ಪ್ರತಿ 4 ವರ್ಷಕ್ಕೊಮ್ಮೆ ಅಗ್ರಿಮೆಂಟ್ ಮಾಡಿಕೊಂಡು ಬಂದಿದ್ದೇವೆ. ಈ ನಡುವೆ ಅದನ್ನು 5ವರ್ಷಕ್ಕೊಮ್ಮೆ ಎಂದು ಮಾಡಲಾಗಿತ್ತು. ಅಲ್ಲದೆ ಒಮ್ಮೆ ವೀರಪ್ಪ ಮೋಯ್ಲಿ ಅವರು 6 ವರ್ಷಕ್ಕೆ ಏರಿಕೆ ಮಾಡಿದ್ದರು ಅದನ್ನು ಮೂರು ವರ್ಷಗಳ ಕಾಲ ಫೈಟ್ ಮಾಡಿ ಎಚ್.ಡಿ.ದೇವೆಗೌಡ ಅವರು ಸಿಎಂ ಆಗಿದ್ದಾಗ ಮತ್ತೆ 4 ವರ್ಷಕ್ಕೊಮ್ಮೆ ಮಾಡಿಸಿದ್ದೇವೆ.
ಹೀಗೆ ನಮ್ಮ ಹೋರಾಟಕ್ಕೆ ಇತಿಹಾಸವಿದೆ. ಹಾಗಾಗಿ ನಾವು ಸಿಎಂ ಅವರು 2026ಕ್ಕೆ ವೇತನ ಹೆಚ್ಚಳ ಮಾಡುತ್ತೇವೆ ಎಂದು ಹೇಳಿರುವುದನ್ನು ಒಪ್ಪುವುದಿಲ್ಲ ಅಲ್ಲದೆ 2024 ಜನವರಿ 1ರಿಂದಲೇ ವೇತನ ಹೆಚ್ಚಳವಾಗಬೇಕು ಎಂದರು.
ಇಂದು ನಡೆದ ಸಭೆಯಲ್ಲಿ ಯಾವುದೂ ಕೂಡ ಅಂತಿಮವಾಗಿಲ್ಲ ಹೀಗಾಗಿ ಮತ್ತೆ ಡಿಸೆಂಬರ್ 6ರಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಜತೆಗೆ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳ ಮತ್ತೊಂದು ಸಭೆ ಮಾಡುವುದಕ್ಕೆ ಇಂದಿನ ಸಭೆಯಲ್ಲೇ ತಿಳಿಸಿದ್ದಾರೆ ಎಂದರು.
ಒಟ್ಟಾರೆ ಇಂದು ಸಿಎಂ ಜತೆ ನಡೆದ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳ ಯಾವುದೇ ಅಂತಿಮ ನಿರ್ಧಾರವಾಗದೆ ಮತ್ತೆ ಡಿಸೆಂಬರ್ 6ಕ್ಕೆ ಮುಂದೂಡಿದೆ ಎಂದು ಹೇಳಬಹುದು.
Related









