ಬೆಳಗಾವಿ: ವಿಪಕ್ಷದ ನಾಯಕ ಆರ್.ಅಶೋಕ್ ಅವರು ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚಿಸುವ ವೇಳೆ ರೈತರಿಗೆ ಸರ್ಕಾರ ಪರಿಹಾರವನ್ನು ನೀಡಿಲ್ಲ, ರೈತರಿಗೆ ಪರಿಹಾರ ಕೊಡಲು ಸರ್ಕಾರದ ಬಳಿ ಹಣವಿಲ್ಲ ಎಂಬೆಲ್ಲಾ ಸುಳ್ಳು ಹೇಳಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಧಾನಸಭೆಯಲ್ಲಿ ಇಂದು ನಡೆಯುತ್ತಿರುವ ಉತ್ತರ ಕರ್ನಾಟಕ ಭಾಗದ ವಿಷಯಗಳ ಮೇಲಿನ ಚರ್ಚೆಯ ವೇಳೆ ಮುಖ್ಯಮಂತ್ರಿ ಮಾತನಾಡಿ, ಕಳೆದ ಸಾಲಿನಲ್ಲಿ 38 ಲಕ್ಷ ರೈತರಿಗೆ ನಷ್ಟ ಪರಿಹಾರವನ್ನು ನೀಡಲಾಗಿದೆ. ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಕೊಟ್ಟರೂ ಕೂಡ ಅವರಿಂದ ಇಲ್ಲಿಯವರೆಗೂ ಒಂದು ಪೈಸೆ ಹಣ ಬಿಡುಗಡೆಯಾಗಿಲ್ಲ. ನಾವು ₹2,245 ಕೋಟಿ ರೈತರಿಗೆ ಪರಿಹಾರ ನೀಡಿದ್ದೇವೆ ಎಂದರು.
ಇನ್ನು ವಿಪಕ್ಷದವರು ಅಸತ್ಯವನ್ನು ಹೇಳುವುದನ್ನು ಸಾಧ್ಯವಾದಷ್ಟು ನಿಲ್ಲಿಸಿ, ವಾಸ್ತವದ ತಳಹದಿಯ ಮೇಲೆ ಟೀಕೆಗಳನ್ನು ಮಾಡಬೇಕು. ಉತ್ತರಗಳನ್ನು ಕೊಡುವಾಗ ದಾರಿತಪ್ಪಿಸದೇ ಸದನದ ಗೌರವವನ್ನು ಎತ್ತಿಹಿಡಿಯುವ ಕೆಲಸ ಮಾಡಬೇಕು ಎಂದು ಹೇಳಿದರು.
ವಿಪಕ್ಷದ ನಾಯಕರು ಅಥವಾ ಸಭಾ ನಾಯಕರು ಮಾತನಾಡುವಾಗ ಇತರರು ಮಧ್ಯೆ ಮಾತನಾಡುವುದು ಸರಿಯಲ್ಲ. ವಿಧಾನಮಂಡಲದಲ್ಲಿ ಗುಣಾತ್ಮಕ ಚರ್ಚೆಗಳು ಕಡಿಮೆಯಾಗುತ್ತಿರುವ ಬಗ್ಗೆ ಈಗಾಗಲೇ ಸಾರ್ವಜನಿಕರಲ್ಲಿ ಅಸಮಾಧಾನವಿದೆ. ಸಂವಿಧಾನಾತ್ಮಕವಾಗಿ ಮಾತನಾಡುವಾಗ ಅಡ್ಡಿಪಡಿಸಬಾರದು. ಸದನದ ಗೌರವ ಕಾಪಾಡುವ ಹೊಣೆ ಎಲ್ಲರದ್ದಾಗಿದೆ ಎಂದರು.
Related










