ಇದುವರೆಗೂ ನಡೆಸಿರುವ ಹೋರಾಟ ವ್ಯರ್ಥವಾಗಲು ಬಿಡುವುದಿಲ್ಲ: ಕೇಂದ್ರ ಸರ್ಕಾರದ ವಿರುದ್ಧ EPS ನಿವೃತ್ತರು ಆಕ್ರೋಶ
ಇಪಿಎಸ್ ನಿವೃತ್ತರು ಸಾಕಷ್ಟು ದೂರ ಕ್ರಮಿಸಿದ್ದು, ಇದುವರೆಗೂ ನಡೆಸಿರುವ ಹೋರಾಟ ವ್ಯರ್ಥವಾಗಲು ಬಿಡುವುದಿಲ್ಲ. ಇದು ನಮ್ಮ ನಾಳಿನ ಸ್ವರೂಪವನ್ನು ನಿರ್ಧರಿಸುತ್ತದೆ. ನಾವು ಏನನ್ನು ಕಳೆದುಕೊಂಡಿದ್ದೇವೆಯೋ? ಅದನ್ನು ಪಡೆಯಬೇಕಾದರೆ ತಾಳ್ಮೆ ಇರಬೇಕು.

ಬೆಂಗಳೂರು: ಇಪಿಎಸ್-95, ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ನಿವೃತ್ತ ನೌಕರರ ಸಂಘದ ಐತಿಹಾಸಿಕ 101ನೇ ಶತಮಾನೋತ್ಸವ ಮಾಸಿಕ ಸಭೆ ಲಾಲ್ಬಾಗ್ ಆವರಣದಲ್ಲಿ ನಿನ್ನೆ ಭಾನುವಾರ ಯಶಸ್ವಿಯಾಗಿ ಜರುಗಿತು ಎಂದು ಬಿಎಂಟಿಸಿ & ಕೆಎಸ್ಆರ್ಟಿಸಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.
ಒಂದು ಸಂಘಟನೆಯನ್ನು ದಶಕಗಳ ಕಾಲ ಮುನ್ನಡೆಸುವುದು ಸಾಮಾನ್ಯ ಸಂಗತಿಯಲ್ಲ. ಕಾರ್ಯಕರ್ತರ ಸಮರ್ಪಣಾ ಮನೋಭಾವ, ಪರಿಸ್ಥಿತಿಯನ್ನು ನಿಭಾಯಿಸುವ ಗಟ್ಟಿ ನಿರ್ಧಾರ, ಜತೆಗೆ ಸಾಧಿಸುವ ಛಲ, ಇವೇ ಮೂಲ ಕಾರಣ ಎಂದರೆ ತಪ್ಪಾಗಲಾರದು.
ಇಪಿಎಸ್ ನಿವೃತ್ತರು ಸಾಕಷ್ಟು ದೂರ ಕ್ರಮಿಸಿದ್ದು, ಇದುವರೆಗೂ ನಡೆಸಿರುವ ಹೋರಾಟ ವ್ಯರ್ಥವಾಗಲು ಬಿಡುವುದಿಲ್ಲ. ಇದು ನಮ್ಮ ನಾಳಿನ ಸ್ವರೂಪವನ್ನು ನಿರ್ಧರಿಸುತ್ತದೆ. ನಾವು ಏನನ್ನು ಕಳೆದುಕೊಂಡಿದ್ದೇವೆಯೋ? ಅದನ್ನು ಪಡೆಯಬೇಕಾದರೆ ತಾಳ್ಮೆ ಇರಬೇಕು. ಕೇಂದ್ರ ಸರ್ಕಾರಕ್ಕೆ ಕಾಲವೇ ಬುದ್ಧಿ ಕಲಿಸಲಿದೆ ಎಂದು ಹೇಳಿದ್ದಾರೆ.
ಮಾಧ್ಯಮದವರು ಇಪಿಎಸ್ ನಿವೃತ್ತರ ಪರ ತಳೆದಿರುವ ನಿಲುವು ಅನನ್ಯ. ಪತ್ರಿಕಾ ಪ್ರತಿನಿಧಿಗಳು ಹಾಗೂ ದೃಶ್ಯ ಮಾಧ್ಯಮದವರು ಇಪಿಎಸ್ ನಿವೃತ್ತರು ನಡೆಸಿರುವ ಸಭೆ, ಸಮಾವೇಶಗಳನ್ನು ತಮ್ಮ ಮಾಧ್ಯಮಗಳಲ್ಲಿ ಪ್ರಚೂರ ಪಡಿಸದೆ ಹೋಗಿದ್ದಲ್ಲಿ, ಬೇಡಿಕೆಗಳು ನನೆಗುದಿಗೆ ಬಿದ್ದು, ಬದುಕು ಇಷ್ಟೇ ಎಂದು ಎಲ್ಲವೂ ಕಾಲ ಗರ್ಭದಲ್ಲಿ ಸೇರಿ ಹೋಗುತ್ತಿದ್ದವು. ನಿವೃತ್ತರು ಇಂದು ಜಾಗೃತರಾಗಿದ್ದು, ಆಳುವವರಿಗೆ ತಕ್ಕ ಪಾಠ ಕಲಿಸಲು ಸಿದ್ಧರಾಗಿದ್ದಾರೆ. ಇನ್ನು ಹೆಚ್ಚು ದಿನ ಬೇಕಾಗಿಲ್ಲ, ಇಷ್ಟರಲ್ಲಿಯೇ ನಿರ್ಧರಿಸುತ್ತೇವೆ ಎಂದು ತಿಳಿಸಿದ್ದಾರೆ.
ಖಜಾಂಚಿ ಡೋಲಪ್ಪನವರು ಸಂಘಟನೆಯ ಕುರಿತು ಪ್ರಾಸ್ತಾವಿಕ ಭಾಷಣದೊಂದಿಗೆ ಸಭೆಗೆ ಚಾಲನೆ ನೀಡಿದರು. ಚಿಕ್ಕಬಳ್ಳಾಪುರ ಕೆಎಸ್ಆರ್ಟಿಸಿ ನಿವೃತ್ತ ನೌಕರರ ಟ್ರಸ್ಟ್ ಅಧ್ಯಕ್ಷ ಬ್ರಹ್ಮಚಾರಿ ಮಾತನಾಡಿ, ನಮ್ಮ ಹೋರಾಟ ಅಂತಿಮ ಘಟ್ಟ ತಲುಪಿದ್ದು, ಸದಸ್ಯರು ನಿರಾಶರಾಗುವುದು ಬೇಡ ಎಂದು ಆತ್ಮಸ್ಥೈರ್ಯ ತುಂಬಿದರು.
ಸಂಘದ ಪದಾಧಿಕಾರಿ ನಾಗರಾಜು ಹಾಗೂ ಸದಸ್ಯರಾದ ವಸಂತರಾಜು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಮಾಸಿಕ ಸಭೆಯನ್ನು ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ, ಚಿಕ್ಕಬಳ್ಳಾಪುರ ಕೆಎಸ್ಆರ್ಟಿಸಿ ನಿವೃತ್ತ ನೌಕರರ ಟ್ರಸ್ಟ್ ವತಿಯಿಂದ ಆಯೋಜಿಸಿದ್ದು, ಸಂಘದ ನಿರ್ವಹಣೆಯನ್ನು ಸಂಘದ ಪದಾಧಿಕಾರಿಗಳಾದ ಶಂಕರ್ ಕುಮಾರ್, ಆರ್.ಮನೋಹರ್, ರುಕ್ಮಿಶ್ ಹಾಗೂ ಕೃಷ್ಣಮೂರ್ತಿ ಕೆ ರವರು ಯಶಸ್ವಿಯಾಗಿ ನಡೆಸಿ ಕೊಟ್ಟರು.
Related









