ಮೈಸೂರು: ಎರಡು ಪ್ರತ್ಯೇಕ ಅಪಘಾತಗಳಲ್ಲಿ ಟೆಂಪೋ ಟ್ರಾವೆಲರ್ ವಾಹನ ಡಿಕ್ಕಿ ಹೊಡೆದು ಪಾದಚಾರಿ ಮೃತಪಟ್ಟಿರುವ ಹಾಗೂ ತಿರುವಿನಲ್ಲಿ ಬೈಕ್ ನಿಯಂತ್ರಣ ಕಳೆದುಕೊಂಡು ಕಳಗೆ ಬಿದ್ದು ಸವಾರ ಅಸುನೀಗಿರುವ ಘಟನೆ ತಾಲೂಕಿನ ಬೆಳವಾಡಿ ಹಾಗೂ ಕಡಕೊಳ ಬಳಿ ನಡೆದಿದೆ.

ಬ್ರೆಡ್ ತರಲೆಂದು ಬೇಕರಿಗೆ ಹೋಗಿದ್ದ ವೇಳೆ ವ್ಯಕ್ತಿಗೆ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದ ಪರಿಣಾಮ ಆತ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಕಡಕೊಳದ ನಿವಾಸಿ ನಂಜನಾಯಕ ಮೃತಪಟ್ಟವರು ಎಂದು ತಿಳಿದು ಬಂದಿದೆ.
ಅನಾರೋಗ್ಯಕ್ಕೀಡಾಗಿದ್ದ ಈ ನಂಜನಾಯಕ ಅವರು ರಾತ್ರಿ 9 ಗಂಟೆ ವೇಳೆಯಲ್ಲಿ ಬ್ರೆಡ್ ತರಲೆಂದು ಕಡಕೊಳದ ಬೇಕರಿ ಬಳಿಗೆ ತೆರಳಿದ್ದರು ಈ ಸಂದರ್ಭದಲ್ಲಿ ನಂಜನಗೂಡು ಕಡೆಯಿಂದ ಬಂದ ಟಿಟಿ ವಾಹನ ಅವರಿಗೆ ಡಿಕ್ಕಿ ಹೊಡೆದಿದ್ದರಿಂದ ಈ ಅವಘಡ ಸಂಭವಿಸಿದೆ.
ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಅವರನ್ನು ಆಂಬುಲೆನ್ಸ್ ಮೂಲಕ ಕೆಆರ್ ಆಸ್ಪತ್ರೆಗೆ ಕರೆತರುತ್ತಿದ್ದರು ಈ ವೇಳೆ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದರು ಎಂದು ವೈದ್ಯರು ಖಚಿತಡಿಸಿದ್ದಾರೆ. ಈ ಸಂಬಂಧ ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಮತ್ತೊಂದು ಘಟನೆಯಲ್ಲಿ ಮಧ್ಯಪ್ರದೇಶ ಮೂಲದ ರವಿಕಾಂತ್ ಎಂಬವರು ಅಸುನೀಗಿದ್ದಾರೆ. ವಾಹನದ ಹಿಂಬದಿ ಕುಳಿತಿದ್ದ ದೀಪು ಎಂಬವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರವಿಕಾಂತ್ ಖಾಸಗಿ ಕಾರ್ಖಾನೆಯೊಂದರಲ್ಲಿ ಉದ್ಯೋಗಿಯಾಗಿದ್ದು ಲಿಂಗದೇವರಕೊಪ್ಪಲಿನಲ್ಲಿ ವಾಸವಿದ್ದರು. ಕ್ರಿಕೆಟ್ ಆಡುವುದಕ್ಕೆಂದು ಬೆಳವಾಡಿಯ ಮೈದಾನಕ್ಕೆ ತೆರಳಿದ್ದರು. ನಂತರ ನೀರು ಕುಡಿಯಬೇಕೆನಿಸಿ ಮತ್ತೆ ಬೈಕ್ನಲ್ಲಿ ಮನೆಗೆ ತೆರಳಿದಾಗ ತಿರುವಿನಲ್ಲಿ ಬೈಕ್ ನಿಯಂತ್ರಣ ಕಳೆದುಕೊಂಡು ಕಳಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.
Related










