NEWSನಮ್ಮಜಿಲ್ಲೆನಮ್ಮರಾಜ್ಯ

7ನೇ ವೇತನ ಆಯೋಗದ ಮುಂದೆ ಗ್ರೂಪ್ ‘ಡಿ’ ನೌಕರನ ಕನಿಷ್ಠ ಮೂಲ ವೇತನ 31,000 ರೂ.ಗೆ ನಿಗದಿ ಸೇರಿದಂತೆ 29 ಬೇಡಿಕೆಗಳನ್ನಿಟ್ಟ ನೌಕರರ ಸಂಘ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸರ್ಕಾರಿ ನೌಕರರ ವೇತನ, ಮನೆ ಬಾಡಿಗೆ, ಪಿಂಚಣಿ, ಭತ್ಯೆ ಪರಿಷ್ಕರಣೆ ಕುರಿತು ಹಲವಾರು ಬೇಡಿಕೆಗಳನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಕೆ.ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ಮುಂದೆ ಇಟ್ಟಿದೆ.

7ನೇ ವೇತನ ಆಯೋಗದ ಪ್ರಶ್ನೆಗೆ ನೌಕರರ ಸಂಘ ಸಲ್ಲಿಸಿರುವ ಉತ್ತರಗಳು ಮತ್ತು ಬೇಡಿಕೆಗಳ ಬಗ್ಗೆ ಪೂರ್ಣ ವಿವರನ್ನು ನೋಡುವುದಾದರೆ. ಮೊದಲನೆಯದಾಗಿ ಹೊಸ ವೇತನ ಶ್ರೇಣಿಗಳ ರಚನೆಗೆ ಅಳವಡಿಸಿಕೊಂಡಿರುವ ಮಾನಂದಂಡಗಳು: ಸಮಾನ ಕೆಲಸಕ್ಕೆ ಸಮಾನ ವೇತನ, ವಿದ್ಯಾರ್ಹತೆ, ಜವಾಬ್ದಾರಿಯ ಗುಣಮಟ್ಟ, ಕಾರ್ಯಕ್ಷಮತೆ, ಕಾರ್ಯಕ್ಷೇತ್ರದ ವ್ಯಾಪ್ತಿ, ಜತೆಗೆ ನೆರೆ ರಾಜ್ಯ ಮತ್ತು ಕೇಂದ್ರ ವೇತನ ಮತ್ತು ಭತ್ಯೆಗಳ ಹೋಲಿಕೆ.

ಎರಡನೆಯದಾಗಿ ಕಚೇರಿ ವೇಳೆಯನ್ನು ಹೆಚ್ಚಿಸಿ, ವಾರದ ಕರ್ತವ್ಯ ದಿನಗಳನ್ನು ಕಡಿಮೆ ಮಾಡಬೇಕು. ಕೇಂದ್ರ ಸರ್ಕಾರದಂತೆ ಬೆಳಗ್ಗೆ 10ಕ್ಕೆ ಬದಲಾಗಿ ಬೆಳಗ್ಗೆ 9.30 ರಿಂದ ಹಾಗೂ ಸಂಜೆ 5.30ಕ್ಕೆ ಬದಲಾಗಿ ಸಂಜೆ 6 ರವರೆಗೆ ಬದಲಾಯಿಸಬೇಕು. ತಿಂಗಳ ಮೊದಲ ಮತ್ತು ಮೂರನೆ ಶನಿವಾರ ಸಾರ್ವತ್ರಿಕ ರಜೆ ನೀಡಬೇಕು.

ಮೂರನೆಯದಾಗಿ ಅನುಕೂಲವಾಗುವ ಕೇಂದ್ರ ಮತ್ತು ಕೇರಳ ರಾಜ್ಯ ನೌಕರರ ವೇತನ-ಭತ್ಯೆಗಳನ್ನು ಪರಿಗಣಿಸಬೇಕು. ನಾಲ್ಕನೆಯದಾಗಿ 6ನೇ ವೇತನ ಆಯೋಗದಲ್ಲಿ ಪ್ರಸ್ತುತ ಮೂಲ ವೇತನಕ್ಕೆ ಹಾಲಿ ಇರುವ ಶೇ.31ರಷ್ಟು ತುಟ್ಟಿಭತ್ಯೆಯನ್ನು ವಿಲೀನಗೊಳಿಸಿ ಶೇ. 40 ರಷ್ಟು ಫಿಟ್ ಮೆಂಟ್ ಸೌಲಭ್ಯವನ್ನು 01.07.2022ರಿಂದ ಜಾರಿಗೆ ತರಬೇಕು.

ಐದನೆಯದಾಗಿ ಹಾಲಿ ಇರುವ 25 ಮಾಸ್ಟರ್ ವೇತನ ಶ್ರೇಣಿ ಹಾಗೂ 92 ವೇತನ ಹಂತಗಳನ್ನು ಮುಂದುವರಿಸಬೇಕು. ಆರನೆಯದಾಗಿ ಹೊಸ ವೇತನ ಶ್ರೇಣಿಗಳನ್ನು 2022ನೇ ಸಾಲಿನ ಬೆಲೆ ಸೂಚ್ಯಾಂಕದ 12 ತಿಂಗಳ ಸರಾಸರಿಯ ಆಧಾರದ ಮೇಲೆ ವೇತನ ಶ್ರೇಣಿಗಳ ದರಗಳನ್ನು ನಿಗದಿಪಡಿಸಬೇಕು.

ಏಳನೆಯದಾಗಿ ಕನಿಷ್ಠ ಶೇ.40ರಷ್ಟು ಫಿಟ್‌ಮೆಂಟ್‌ನೊಂದಿಗೆ ಹಾಗೂ ಜೀವನ ನಿರ್ವಹಣೆಯನ್ನಾಧರಿಸಿ, ಗ್ರೂಪ್ ‘ಡಿ’ ನೌಕರನ ಕನಿಷ್ಠ ಮೂಲ ವೇತನ 31,000 ರೂ.ಗಳಿಗೆ ನಿಗದಿಗೊಳಿಸಬೇಕು. ಎಂಟನೆಯದಾಗಿ ಪರಿಷ್ಕರಿಸಲಿರುವ ವೇತನ ಶ್ರೇಣಿಗಳಲ್ಲಿನ ಕನಿಷ್ಠ ಹಾಗೂ ಗರಿಷ್ಠ ವೇತನದ ನಡುವಿನ ಈಗಿರುವ ಅನುಪಾತ 1:5, 20 ರ ಬದಲಾಗಿ 1:8.86 ಕ್ಕೆ ನಿಗದಿಪಡಿಸಿ ಶಿಫಾರಸ್ಸು ಮಾಡಬೇಕು.

ಒಂಬತ್ತನೆಯದಾಗಿ ಒಬ್ಬ ಸರ್ಕಾರಿ ನೌಕರನಿಗೆ ಸೇವಾವಧಿಯಲ್ಲಿ ಕನಿಷ್ಠ 3-4 ಮುಂಬಡ್ತಿ ಅವಕಾಶಗಳು ಲಭ್ಯವಾಗುವಂತೆ ಶಿಫಾರಸ್ಸು ಮಾಡಬೇಕು. ವಾರ್ಷಿಕ ವೇತನ ಬಡ್ತಿಯ ದರವನ್ನು ಕೇರಳ ರಾಜ್ಯದ ಮಾದರಿಯಲ್ಲಿ ಮೂಲ ವೇತನಕ್ಕೆ ಶೇ.3.04 ರಷ್ಟು ನಿಗದಿ ಪಡಿಸಬೇಕು. ಸ್ಥಗಿತ ವೇತನ ಬಡ್ತಿಯನ್ನು ಹಾಲಿ ಇರುವ 8 ರಿಂದ 12 ಕ್ಕೆ ಹೆಚ್ಚಿಸಬೇಕು.

ಹತ್ತನೆಯದಾಗಿ ಸಚಿವಾಲಯ-ಸಚಿವಾಲಯೇತರ ಸಮಾನ ಹುದ್ದೆಗಳ ವೇತನವನ್ನು ಸಮಾನಗೊಳಿಸಲು ಶಿಫಾರಸ್ಸು ಮಾಡಬೇಕು. ಹನ್ನೊಂದನೆಯದಾಗಿ ಪ್ರತಿ 6 ತಿಂಗಳಿಗೆ ನೀಡಲಾಗುವ ತುಟ್ಟಿಭತ್ಯೆಯನ್ನು ಪರಿಷ್ಕೃತ ವೇತನದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನವಾಗಿ ರಾಜ್ಯ ಸರ್ಕಾರಿ ನೌಕರರಿಗೆ ವಿಳಂಬವಿಲ್ಲದೆ ನೀಡಬೇಕು.

ಹದಿಮೂರನೆಯದಾಗಿ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯಲ್ಲಿ ಲಭ್ಯವಿರುವ 2021ರ ಜನಸಂಖ್ಯೆಯ ಮಾಹಿತಿಯನ್ನಾಧರಿಸಿ ನಗರ ಹಾಗೂ ಪಟ್ಟಣ ಪ್ರದೇಶಗಳನ್ನು ಪುನರ್‌ವರ್ಗೀಕರಿಸಬೇಕು ಹಾಗೂ ಬಿ.ಬಿ.ಎಂ.ಪಿ ವ್ಯಾಪ್ತಿಯನ್ನು ಬೆಂಗಳೂರು ನಗರ ಜಿಲ್ಲೆ ಗಡಿ ವ್ಯಾಪ್ತಿಗೆ ವಿಸ್ತರಿಸಬೇಕು. ಪ್ರಸ್ತುತ ಜೀವನ ನಿರ್ವಹಣೆ ಆಧಾರದ ಮೇಲೆ ಈ ಕೆಳಕಂಡ ದರದಲ್ಲಿ ಮನೆ ಬಾಡಿಗೆ ಭತ್ಯೆ ನೀಡಬೇಕು. ಕೇಂದ್ರ ಮಾದರಿಯಲ್ಲಿ ತುಟ್ಟಿಭತ್ಯೆಯು ಶೇ.25 ಮತ್ತು ಶೇ.50ರ ಹಂತವನ್ನು ತಲುಪಿದಾಗ ಮನೆ ಬಾಡಿಗೆ ಭತ್ಯೆಗಳನ್ನು ಸ್ವಯಂಚಾಲಿತವಾಗಿ ಶೇ. 3 ರಷ್ಟು ಹೆಚ್ಚಿಸಬೇಕು.

ಹದಿನಾಲ್ಕನೆಯದಾಗಿ ನಮ್ಮ ರಾಜ್ಯದಲ್ಲಿ ಸೇವಾವಧಿಯಲ್ಲಿ 2 ಬಾರಿ ಇದ್ದು, ಕೇಂದ್ರ ಸರ್ಕಾರದಲ್ಲಿ (LTC) ಸೌಲಭ್ಯವು ಪ್ರತಿ 4 ವರ್ಷಕ್ಕೊಮ್ಮೆ ನೀಡುತ್ತಿದ್ದು, ಆದರಂತೆ ನೀಡಬೇಕು ಹಾಗೂ ದಿನಭತ್ಯೆಯನ್ನು ಸಹ ನೀಡಬೇಕು. ಹದಿನೈದನೆಯದಾಗಿ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS) ಲಭ್ಯವಾಗಬೇಕು.

ಹದಿನಾರನೆಯದಾಗಿ ಮಹಿಳಾ ಉದ್ಯೋಗಿಗಳ ವಿಶೇಷ ಸಮಸ್ಯೆಗಳು-ಮಕ್ಕಳಿಗೆ ದಿನಕ್ಕೆ 2 ಬಾರಿ ಸ್ತನ್ಯಪಾನಕ್ಕಾಗಿ ಅವಕಾಶ, ಶುಚಿತ್ವವಾದ ಪ್ರತ್ಯೇಕ ಶೌಚಾಲಯ, ಬಾಡಿಗೆ ತಾಯ್ತನದ ಮಹಿಳಾ ನೌಕರರಿಗೆ ಶಿಶುಪಾಲನಾ, ಹೆರಿಗೆ ರಜೆ ಮಂಜೂರು ಮಾಡಬೇಕು. ಹದಿನೇಳನೆಯದಾಗಿ ಬೆಟ್ಟಗುಡ್ಡಗಳಿರುವ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲ ನೌಕರರಿಗೆ ಗಿರಿಭತ್ಯೆಯನ್ನು ಮಂಜೂರು ಮಾಡಬೇಕು. ನಿಗದಿತ ಪ್ರಯಾಣ ಭತ್ಯೆ, ಅನ್ಯಸೇವೆ ಭತ್ಯೆ ಹಾಗೂ ಪ್ರಭಾರ ಭತ್ಯೆ ದರವನ್ನು ಹೆಚ್ಚಿಸಬೇಖು.

ಹದಿನೆಂಟನೆಯದಾಗಿ ಕೇಂದ್ರ ಮಾದರಿಯಂತೆ ವರ್ಗಾವಣೆಗೊಂಡ/ ವಯೋನಿವೃತ್ತಿ ಹೊಂದುವ ರಾಜ್ಯ ಸರ್ಕಾರಿ ನೌಕರರಿಗೆ ಕೊನೆ ಮಾಹೆಯ ಮೂಲವೇತನದ ಶೇ. 80 ರಷ್ಟು ವರ್ಗಾವಣೆ ಅನುದಾನ ಮತ್ತು ಸಾಮಾನು ಸರಂಜಾಮು ಸಾಗಣೆ ಭತ್ಯೆಯನ್ನು ನೀಡುವಂತೆ ಶಿಫಾರಸ್ಸು ಮಾಡಬೇಕು.

ಹತ್ತೊಂಬತ್ತನೆಯದಾಗಿ ಇಂಧನ ಬೆಲೆ, ಪ್ರಯಾಣ-ಸಾರಿಗೆ ವೆಚ್ಚ. ವಸತಿ ಹಾಗೂ ಊಟ-ಉಪಾಹಾರಗಳು ದುಬಾರಿಯಾಗಿರುವುದರಿಂದ ಪ್ರಯಾಣ ಭತ್ಯೆ, ದಿನಭತ್ಯೆ ವಿಮಾನ, ರೈಲು ಮತ್ತು ಬಸ್ಸಿನ ದರಗಳನ್ನು ಹೆಚ್ಚಿಸಬೇಕು. ಇಪ್ಪನೆಯದಾಗಿ ನಿವೃತ್ತಿ ನಂತರ 300 ಗಳಿಕೆ ರಜಾ ದಿನಗಳ ನಗದೀಕರಣ ಸೌಲಭ್ಯದ ಗರಿಷ್ಠ ಮಿತಿಯನ್ನು 330ಕ್ಕೆ ಹೆಚ್ಚಿಸಬೇಕು.

ಇಪ್ಪತ್ತೊಂದನೆಯದಾಗಿ 25 ಸಾವಿರ ರೂ.ಗಳ ಬಡ್ಡಿರಹಿತ ಹಬ್ಬದ ಮುಂಗಡವನ್ನು ಯಾವುದೇ ಷರತ್ತುಗಳನ್ನು ವಿಧಿಸದೆ ಎಲ್ಲ ನೌಕರರಿಗೂ ಮಂಜೂರು ಮಾಡಬೇಕು. ಕನಿಷ್ಠ ವೇತನದ ಮಿತಿಯನ್ನು (Home take Salary) ಶೇ. 60 ರಿಂದ ಶೇ. 40ಕ್ಕೆ ನಿಗದಿಗೊಳಿಸಬೇಕು.

ಇಪ್ಪತ್ತೆರಡನೆಯದಾಗಿ ಒಂದು ಯುನಿಟ್ ದರ ರೂ. 120/-ರಿಂದ 1200/ ಕ್ಕೆ ಹೆಚ್ಚಿಸುವ ಮೂಲಕ ವಿಮಾ ಮೊತ್ತವನ್ನು ಹೆಚ್ಚಿಸಬೇಕು. ಉಳಿತಾಯ ನಿಧಿ ಮತ್ತು ವಿಮಾ ನಿಧಿ ಸದ್ಯದ 70:30ರ ಅನುಪಾತವನ್ನು 75:25 ಕ್ಕೆ ಮಾರ್ಪಡಿಸಬೇಕು. ಉಳಿತಾಯ ನಿಧಿ ಮೇಲಿನ ಬಡ್ಡಿ ದರವನ್ನು ಶೇ.2 ರಷ್ಟು ಹೆಚ್ಚಿಸಬೇಕು.

ಇಪ್ಪತ್ತಮೂರನೆಯದಾಗಿ ಸ್ವಇಚ್ಛಾ ನಿವೃತ್ತಿಗೆ 15 ವರ್ಷ ಕನಿಷ್ಠ ಸೇವೆ ಅಥವಾ 50 ವರ್ಷ ವಯಸ್ಸು ಎನ್ನುವ ಬದಲಾಗಿ 12 ವರ್ಷಗಳ ಸೇವಾವಧಿ ಅಥವಾ 45 ವರ್ಷಗಳ ವಯಸ್ಸಾಗಿರಬೇಕೆಂದು ತಿದ್ದುಪಡಿ ಮಾಡಬೇಕು. ಇಪ್ಪತ್ತನಾಲ್ಕನೆಯದಾಗಿ ನಿವೃತ್ತಿ ಪಿಂಚಣಿಗಾಗಿ ಕನಿಷ್ಠ ಸೇವೆ-30 ರಿಂದ 25 ಕ್ಕೆ ಇಳಿಸಬೇಕು. ವಿಶ್ರಾಂತಿ ಪಿಂಚಣಿ- ಕನಿಷ್ಠ ಕುಟುಂಬ ರೂ.16,500ಕ್ಕೆ ಮತ್ತು ಗರಿಷ್ಠ 3.1.50,000ಕ್ಕೆ ಏರಿಕೆ. ಮರಣ-ನಿವೃತ್ತಿಉಪದಾನ-ಗರಿಷ್ಠ ಮಿತಿಯನ್ನು 20 ಲಕ್ಷಗಳಿಂದ 25 ಲಕ್ಷಗಳಿಗೆ ಹೆಚ್ಚಿಸಬೇಕು.

ಇಪ್ಪತ್ತಐದನೆಯದಾಗಿ ಎಲೆಕ್ಟ್ರಾನಿಕ್ ಸರ್ವೀಸ್ ರಿಜಿಸ್ಟರ್ ವ್ಯವಸ್ಥೆಯನ್ನು ಶೀಘ್ರ ಜಾರಿಗೊಳಿಸಿ ನಿವೃತ್ತಿ ಹೊಂದುವ ನೌಕರರಿಗೆ ಪಿಂಚಣಿ ಸವಲತ್ತುಗಳನ್ನು ಎಚ್.ಆರ್.ಎಂ.ಎಸ್. ತಂತ್ರಾಂಶದ ಮೂಲಕವೇ ಪಡೆಯುವ ಅವಕಾಶ ಕಲ್ಪಿಸಬೇಕು. ಇಪ್ಪತ್ತ ಆರನೆಯದಾಗಿ ಸೇವಾನಿರತ ನೌಕರರಿಗೆ ನೀಡುವ ವಾರ್ಷಿಕ ವೇತನ ಬಡ್ತಿ ದರದಲ್ಲಿಯೇ ನಿವೃತ್ತ ನೌಕರರಿಗೂ ಸಹ ಸಮನಾಂತರ ತುಟ್ಟಿಭತ್ಯೆಯನ್ನು ನೀಡಲು ಶಿಫಾರಸ್ಸು ಮಾಡಬೇಕು.

ಇಪ್ಪತ್ತೇಳನೆಯದಾಗಿ 80 ವರ್ಷ ಮೇಲ್ಪಟ್ಟ ಪಿಂಚಣಿದಾರರಿಗೆ ವಯೋಮಾನವನ್ನಾಧರಿಸಿ ಹೆಚ್ಚುವರಿ ಪಿಂಚಣಿಯನ್ನು ಮಂಜೂರು ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಇಪ್ಪತ್ತೆಂಟನೆಯದಾಗಿ ರಾಷ್ಟ್ರೀಯ ಪಿಂಚಣಿ ಯೋಜನೆ ಜಾರಿಗೊಳಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು.

ಇಪ್ಪತ್ತೊಂಬತ್ತು ಮತ್ತು ಕೊನೆಯದಾಗಿ 2,50,363 ಖಾಲಿ ಹುದ್ದೆಗಳ ಭರ್ತಿ ಮಾಡಿ ನೌಕರರನ್ನು ಒತ್ತಡದಿಂದ ಮುಕ್ತಿಗೊಳಿಸಿ ಸಮುದಾಯಕ್ಕೆ ಗುಣಮಟ್ಟದ ನಾಗರೀಕ ಸೇವೆಗಳನ್ನು ನೀಡಲು ಶಿಫಾರಸ್ಸು ಮಾಡಬೇಕು. ಶವಸಂಸ್ಕಾರ ಭತ್ಯೆ 15000 ರೂ.ಗಳನ್ನು 30,000 ರೂ.ಗಳಿಗೆ ಹೆಚ್ಚಳ ಮಾಡಬೇಕು. ಕೇಂದ್ರ ಮಾದರಿಯಲ್ಲಿ ಮಕ್ಕಳ ವಿದ್ಯಾಬ್ಯಾಸಕ್ಕಾಗಿ ಶೈಕ್ಷಣಿಕ ಭತ್ಯೆ ಯೋಜನೆ ಜಾರಿಗೆ ತರಬೇಕು ಎಂದು ಬೇಡಿಕೆ ಮತ್ತು ಉತ್ತರವನ್ನು ನೀಡಿದ್ದಾರೆ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ