NEWSಕ್ರೀಡೆದೇಶ-ವಿದೇಶ

ಕಿವೀಸ್ ವಿರುದ್ಧ 2019ರ ಸೋಲಿನ ಸೇಡು ತೀರಿಸಿಕೊಳ್ಳಲು ಭಾರತಕ್ಕಿದೆ ಸುವರ್ಣಾವಕಾಶ

ವಿಜಯಪಥ ಸಮಗ್ರ ಸುದ್ದಿ

ಮುಂಬೈ: ನಾಲ್ಕು ವರ್ಷದ ಹಿಂದೆ ಅಂದರೆ, 2019ರ ಏಕದಿನ ವಿಶ್ವಕಪ್​ ಟೂರ್ನಿಯ ಸಮಿಫೈನಲ್​ ಪಂದ್ಯ ಮತ್ತೆ ನೆನಪು ಮಾಡಿಕೊಳ್ಳುವ ಕ್ಷಣ ಮರುಕಳಿಸಿದ್ದು, ಆ ಪಂದ್ಯವನ್ನು ಎಂದಿಗೂ ಮರೆಯುವಂತಿಲ್ಲ. ಅಂದು ನ್ಯೂಜಿಲೆಂಡ್​ ಪಡೆ ಇಂಗ್ಲೆಂಡ್​ ನೆಲದಲ್ಲಿ ಭಾರತವನ್ನು ಮಣಿಸಿ, ವಿಶ್ವಕಪ್​ ಟೂರ್ನಿಯಿಂದ ಹೊರಗಟ್ಟಿತ್ತು. ಅಂದು ಕೊಹ್ಲಿ ನಾಯಕರಾಗಿದ್ದರು. ಈ ಸೋಲಿಗೆ ಇಂದು ಪ್ರತೀಕಾರ ತೀರಿಸಿಕೊಳ್ಳುವ ಸಮಯ ಬಂದಿದೆ.

ಪ್ರಸಕ್ತ ವಿಶ್ವಕಪ್​ ಟೂರ್ನಿಯಲ್ಲಿ ನವೆಂಬರ್​ 15ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್​ ಮೊದಲ ಸೆಮಿಫೈನಲ್​ ಪಂದ್ಯ ನಡೆಯಲಿದೆ. ಇದು 2019ರ ಸಮಿಫೈನಲ್​ ಪಂದ್ಯದ ಮರು ಪಂದ್ಯ ಎಂದೇ ಬಿಂಬಿತವಾಗಿದೆ.

ಹೌದು! ನಾಲ್ಕು ವರ್ಷಗಳ ಹಿಂದೆ ಇಂಗ್ಲೆಂಡ್​ ಆಯೋಜಿಸಿದ್ದ ಟೂರ್ನಿಯಲ್ಲಿ ಕಿವೀಸ್​ ಮತ್ತು ಇಂಡಿಯಾ ಓಲ್ಡ್​ ಟ್ರಾಫೋರ್ಡ್​ ಕ್ರೀಡಾಂಗಣದಲ್ಲಿ ನಡೆದ ಸಮಿಫೈನಲ್​ ಪಂದ್ಯದಲ್ಲಿ ಸೆಣಸಾಡಿತ್ತು. ಈ ವೇಳೆ ಮೊದಲು ಬ್ಯಾಟ್​ ಮಾಡಿದ್ದ ಕಿವೀಸ್​ ಪಡೆ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 239 ರನ್​ ಕಲೆಹಾಕಿತ್ತು. ಗುರಿ ಬೆನ್ನತ್ತಿದ ಇಂಡಿಯಾ 221 ರನ್​ಗಳಿಗೆ ಸರ್ವಪತನ ಕಂಡು ಸೋಲಿನೊಂದಿಗೆ ವಿಶ್ವಕಪ್​ ಅಭಿಯಾನವನ್ನು ಮಗಿಸಿತು. ಅಂದು ಭಾರತದ ಎದುರು ಕಿವೀಸ್​ ರಣಕೇಕೆ ಹಾಕಿತ್ತು.

ಪ್ರತೀಕಾರದ ಕಾಲ ಬಂದಿದೆ: ಅಂದಿನ ಸೋಲಿಗೆ ಇದೀಗ ಪ್ರತೀಕಾರ ತೀರಿಸಿಕೊಳ್ಳುವ ಕಾಲ ಕೂಡಿಬಂದಿದೆ. ನ.15ರಂದು ನಡೆಯಲಿರುವ ಪಂದ್ಯಕ್ಕೆ ಭಾರತ ತಂಡ ಎದುರು ನೋಡುತ್ತಿದೆ. ಪಾಕಿಸ್ಥಾನ ತನ್ನ ರನ್​ರೇಟ್​ ಹಿಗ್ಗಿಸಿಕೊಳ್ಳಲು ವಿಫಲವಾದ್ದರಿಂದ ನ್ಯೂಜಿಲೆಂಡ್​ ಪಡೆದ ಸೆಮೀಸ್​ ಸ್ಥಾನ ಖಚಿತವಾಗಿದೆ. ಈ ಮೂಲಕ ಭಾರತದ ವಿರುದ್ಧ ನಾಕೌಟ್​ ಹಂತದಲ್ಲಿ ಸೆಣಸಾಡಲು ಸನ್ನದ್ಧವಾಗುತ್ತಿದೆ.

ತವರು ನೆಲದಲ್ಲಿ ಭಾರತ ಕಿವೀಸ್​ ಪಡೆಯನ್ನು ಬಗ್ಗುಬಡಿಯುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಆ ಕ್ಷಣಕ್ಕಾಗಿ ಭಾರತದ ಕ್ರೀಡಾಭಿಮಾನಿಗಳು ಎದುರು ನೋಡುತ್ತಿದ್ದಾರೆ. ಸೆಮೀಸ್​ನಿಂದ ನಮ್ಮನ್ನು ಕಳುಹಿಸಿದ್ದ ನ್ಯೂಜಿಲೆಂಡ್ ಪಡೆಯನ್ನು ಇಂದು ಸಮೀಸ್​ನಿಂದಲೇ ಕಳುಹಿಸುವ ಅವಕಾಶ ಸಿಕ್ಕಿರುವುದು ನ.15ರಂದು ನಡೆಯುವ ಪಂದ್ಯದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟಾಗಿಸಿದೆ.

ಕೊಹ್ಲಿಗೂ ಇದು ಸುಸಂದರ್ಭ: ಕೊಹ್ಲಿ ನಾಯಕತ್ವದಲ್ಲಿ ಸಮಿಫೈನಲ್​ನಿಂದ ಭಾರತ ಹೊರಬಿದ್ದಿದ್ದು, ಕೊಹ್ಲಿಗೂ ಕೂಡ ತುಂಬಾ ನೋವು ಉಂಟು ಮಾಡಿತ್ತು.​ ಅಲ್ಲದೆ, ಆ ಸಮಯದಲ್ಲಿ ಸಾಕಷ್ಟು ಮಂದಿ ಕೊಹ್ಲಿ ನಾಯಕತ್ವವನ್ನು ಪ್ರಶ್ನೆ ಮಾಡಿ, ಅಣಕಿಸಿದ್ದರು ಮತ್ತು ಗೇಲಿ ಮಾಡಿದ್ದರು. ಕಿವೀಸ್​ ವಿರುದ್ಧದ ಸೋಲೇ ಇದಕ್ಕೆ ಕಾರಣವಾಗಿತ್ತು. ಆದರೆ, ಇದೀಗ ಅದೇ ಕಿವೀಸ್​ ಮತ್ತೊಮ್ಮೆ ಮುಖಾಮುಖಿಯಾಗುತ್ತಿದೆ. ಅಂದು ಕೇವಲ 1 ರನ್​ಗೆ ಔಟಾಗಿದ್ದ ಕೊಹ್ಲಿ ಈ ಬಾರಿ ಉತ್ತಮ ಫಾರ್ಮ್​ನಲ್ಲಿದ್ದು, ಕಿವೀಸ್​ ಬೌಲರ್​ಗಳನ್ನು ಕಾಡಿ, ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದಾರೆ.

ಸೋಲು ಕಾಣದ ಭಾರತ: ಭಾರತದ ಬ್ಯಾಟ್‌ಮನ್‌ಗಳಾದ ರೋಹಿತ್​ ಶರ್ಮ, ಶುಭಮಾನ್​ ಗಿಲ್​, ವಿರಾಟ್​ ಕೊಹ್ಲಿ, ಶ್ರೇಯಸ್​ ಅಯ್ಯರ್​, ಕೆಎಲ್​ ರಾಹುಲ್​ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಅಲ್ಲದೆ, ಬೌಲಿಂಗ್​ನಲ್ಲಿ ಜಸ್ಪ್ರಿತ್​ ಬೂಮ್ರಾ, ಮೊಹಮ್ಮದ್​ ಶಮಿ, ಮೊಹಮ್ಮದ್​ ಸಿರಾಜ್​ ಹಾಗೂ ರವೀಂದ್ರ ಜಡೇಜಾ ಕೂಡ ಉತ್ತಮ ಲಯದಲ್ಲಿದ್ದಾರೆ. ಹೀಗಾಗಿ ಭಾರತ ಎದುರು ಕಿವೀಸ್​ ಸುಲಭ ತುತ್ತಾಗುವ ನಿರೀಕ್ಷೆ ಇದೆ.

ಅದಕ್ಕೆ ಇಂಬು ಕೊಡುವಂತೆ ಪ್ರಸಕ್ತ ವಿಶ್ವಕಪ್​ನಲ್ಲಿ ಭಾರತ ಈವರೆಗೂ ಅಜೇಯನಾಗಿ ಉಳಿದಿದೆ. ಇದುವರೆಗೂ ಆಡಿರುವ 8 ಪಂದ್ಯದಲ್ಲೂ ಅದ್ಭುತ ಗೆಲುವು ದಾಖಲಿಸಿದೆ. ನ.12ರಂದು ನೆದರ್ಲೆಂಡ್ಸ್​ ವಿರುದ್ಧ ಗ್ರೂಪ್​ ಹಂತದ ಕೊನೆಯ ಪಂದ್ಯದ ಹಾಗೂ ನವೆಂಬರ್​ 15ರಂದು ಕಿವೀಸ್ ವಿರುದ್ಧ ಸಮಿಫೈನಲ್​ನಲ್ಲಿ ಕಾದಾಡಲಿದೆ.

ಕಿವೀಸ್ ಸವಾಲೊಡ್ಡುವ ಸಾಧ್ಯತೆ: ಪ್ರಸಕ್ತ ಟೂರ್ನಿಯಲ್ಲಿ ಕಿವೀಸ್​ ಪಡೆ 9 ಪಂದ್ಯಗಳನ್ನು ಆಡಿದ್ದು, 9ರಲ್ಲಿ 5 ರಲ್ಲಿ ಗೆದ್ದು 4ರಲ್ಲಿ ಸೋಲುಂಡಿದೆ. ಭಾರತಕ್ಕೆ ಕಿವೀಸ್​ ಸವಾಲೊಡ್ಡುವ ಸಾಧ್ಯತೆ ಇದೆ. ಅ.22ರಂದು ನಡೆದ ಲೀಗ್​ ಪಂದ್ಯದಲ್ಲಿ ಕಿವೀಸ್​ ಪಡೆ ಭಾರತಕ್ಕೆ 273 ರನ್​ಗಳ ಸವಾಲಿನ ಗುರಿ ನೀಡಿದ್ದನ್ನು ಇಲ್ಲಿ ಮರೆಯುವ ಆಗಿಲ್ಲ.

ಕಿವೀಸ್​ ತಂಡ ಟೂರ್ನಿಯಲ್ಲೇ ಅತ್ಯಂತ ವೈವಿಧ್ಯತೆಯಿಂದ ಕೂಡಿದ ವೇಗ-ಸ್ಪಿನ್​ ಬೌಲಿಂಗ್​ ವಿಭಾಗವನ್ನು ಹೊಂದಿದೆ. ಅಲ್ಲದೆ, ಡೆವೊನ್​ ಕಾನ್​ವೇ, ಡೆರಿಲ್​ ಮಿಚೆಲ್​, ಬೆಂಗಳೂರು ಮೂಲದ ರಚಿನ್​ ರವೀಂದ್ರ ಉತ್ತಮ ಫಾಮ್​ರ್ನಲ್ಲಿರುವುದರಿಂದ ಕಿವೀಸ್​ ಕೂಡ ಭಾರತಕ್ಕೆ ಒಂದೊಳ್ಳೆ ಪೈಪೋಟಿ ನೀಡಲಿದೆ ಎಂದು ಹೇಳಲಾಗಿದೆ.

ಏಕದಿನ ವಿಶ್ವಕಪ್​ ಮುಖಾಮುಖಿ: 10- ಭಾರತ: 4ರಲ್ಲಿ ಗೆಲುವು. ನ್ಯೂಜಿಲೆಂಡ್​: 5 ರಲ್ಲಿ ಗೆಲುವು – ರದ್ದು: 1

ಮುಖಾಮುಖಿಯಾಗುವ ತಂಡಗಳು: ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್​ ಸಮೀಸ್​ ಪ್ರವೇಶ ಪಡೆದಿದ್ದು, ನವೆಂಬರ್​ 15ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಸಮಿಫೈನಲ್​ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ ಮತ್ತು ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್​ ಮುಖಾಮುಖಿಯಾಗಲಿವೆ. ನ.16ರಂದು ಕೋಲ್ಕತದ ಈಡನ್​ ಗಾರ್ಡನ್​ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಸಮಿಫೈನಲ್​ನಲ್ಲಿ ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಮತ್ತು ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ.

ನ.19ಕ್ಕೆ ವಿಶ್ವಕಪ್​ ಹಬ್ಬಕ್ಕೆ ಪೂರ್ಣವಿರಾಮ: ಎರಡೂ ಸಮಿಫೈನಲ್​ಗಳಲ್ಲಿ ಗೆಲ್ಲುವ ತಂಡಗಳು ನ. 19ರಂದು ಗುಜರಾತಿನ ಅಹಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟ್ರೋಫಿಗಾಗಿ ನಡೆಯಲಿರುವ ಅಂತಿಮ ಹಾಗೂ ಫೈನಲ್​ ಪಂದ್ಯದಲ್ಲಿ ಸೆಣಸಾಡಲಿದ್ದು, ಗೆಲ್ಲುವ ತಂಡ ವಿಶ್ವಕಪ್​ ಟ್ರೋಫಿಯ ಜತೆಗೆ 4 ಮಿಲಿಯನ್​ ಡಾಲರ್ (33,30,89,400 ರೂಪಾಯಿ) ಬಹುಮಾನ ಮೊತ್ತವನ್ನು ಪಡೆಯಲಿದೆ.

ಇನ್ನು ರನ್ನರ್​ ಅಪ್​ ತಂಡಗಳು 2 ಮಿಲಿಯನ್​ ಡಾಲರ್​ ಬಹುಮಾನ ಮೊತ್ತ ಹಾಗೂ ಲೀಗ್​ ಹಂತದಲ್ಲಿ ವಿಜೇತರಾದ ಪ್ರತಿ ತಂಡ ತಲಾ 40 ಸಾವಿರ ಡಾಲರ್​ ಬಹುಮಾನ ಪಡೆಯಲಿವೆ.

Leave a Reply

error: Content is protected !!
LATEST
KSRTC ಬಸ್‌ - ಕಾರು ನಡುವೆ ಅಪಘಾತ: ಕಾರಿನಲ್ಲಿದ್ದ ನಾಲ್ವರು ಸೇರಿ ಹಲವರಿಗೆ ಗಾಯ NWKRTC: ಕರ್ತವ್ಯ ನಿರತರಾಗಿದ್ದಾಗಲೇ ಚಾಲಕರಿಗೆ ಹೃದಯಘಾತ - ವಿಜಯಪುರ ಬಸ್‌ ನಿಲ್ದಾಣದಲ್ಲೇ ಕುಸಿದು ಬಿದ್ದು ನಿಧನ ಕನ್ನಡ ಮಾಧ್ಯಮ ಶಾಲೆಗಳ ವೈಫಲ್ಯ, ಕೇಂದ್ರದ ಹಿಂದಿ ಹೇರಿಕೆಯಿಂದ ನಾಶವಾಗುತ್ತಿದೆ ಕನ್ನಡ : ರಮೇಶ್‌ ಬೆಳ್ಳಮ್ಕೊಂಡ KSRTC: 2024ರ ವೇತನ ಪರಿಷ್ಕರಣೆ ಸುಳಿವು ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ KKRTC ವಿಜಯಪುರ: ತಪ್ಪು ಮಾಡಿ ಅಮಾನತಾದ ಡಿಸಿ ಪರ ನಿಂತರೆ ನಿಗಮದ ಅಧಿಕಾರಿಗಳು!!? ಪಿರಿಯಾಪಟ್ಟಣ: ಲಂಚ ಸ್ವೀಕಾರ- ರೆಡ್ ಹ್ಯಾಂಡಾಗಿ ಲೋಕಾ ಬಲೆಗೆ ಬಿದ್ದ ಗುಮಾಸ್ತ ರಾಜಕಾಲುವೆ ಒತ್ತುವರಿ ತೆರವುಗೊಳಿಸಿ, ನೆರೆ ಭೀತಿಯಿಂದ ಬೆಂಗಳೂರಿಗರ ರಕ್ಷಿಸಿ: ಡಿಸಿಎಂಗೆ ಎಎಪಿ ರಾಜ್ಯಾಧ್ಯಕ್ಷ ಆಗ್ರಹ ಮಧ್ಯಮ ವರ್ಗದ ವ್ಯಕ್ತಿ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಮೌನಕ್ಕೆ ಶರಣಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ BBMP-ಡೆಂಗ್ಯೂ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ : ಸುರಳ್ಕರ್ ವಿಕಾಸ್ ಕಿಶೋರ್ ಉಚಿತ ಕೋಳಿ ಸಾಕಾಣಿಕೆ ತರಬೇತಿಗೆ 18 ರಿಂದ 45 ವರ್ಷದವರಿಂದ ಅರ್ಜಿ ಆಹ್ವಾನ