NEWSನಮ್ಮಜಿಲ್ಲೆ

ಗ್ಯಾರಂಟಿ ಯೋಜನೆಗಳಿಂದ ಆಧುನಿಕ ಅಭಿವೃದ್ಧಿಯತ್ತ ಕರ್ನಾಟಕ: ಸೂರಜ್ ಹೆಗಡೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು ಗ್ರಾಮಾಂತರ: ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಅನುಷ್ಠಾನ ಗೊಳಿಸಿದನಂತರ ಕರ್ನಾಟಕವು ಆಧುನಿಕ ಅಭಿವೃದ್ಧಿಯತ್ತ ದಾಪುಗಾಲು ಇಟ್ಟಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಸೂರಜ್ ಎಂ.ಎನ್ ಹೆಗಡೆ ಹೇಳಿದರು.

ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಸಿವು ಮುಕ್ತ ಕರ್ನಾಟಕ, ಮಹಿಳೆಯರ ಸಬಲೀಕರಣ, ಸ್ವಾವಲಂಬಿ ಬದುಕಿಗೆ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆ. ಯಾರ ಹಸ್ತಕ್ಷೇಪ, ಮಧ್ಯವರ್ತಿಗಳ ಹಾವಳಿ ಇಲ್ಲದೆ ರಾಜ್ಯದ ಜನತೆಗೆ ಪಂಚ ಗ್ಯಾರಂಟಿಗಳು ತಲುಪುತ್ತಿರುವುದು ಹೆಮ್ಮೆಯ ಸಂಗತಿ. ಈ ಯಶಸ್ಸಿಗೆ ಅಧಿಕಾರಿಗಳು ಕೂಡ ಭಾಗಿಗಳು.

ಕರ್ನಾಟಕದ ಪಂಚ ಗ್ಯಾರಂಟಿಗಳು ದೇಶದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದುಕೊಂಡು, ಇತರೆ ರಾಜ್ಯಗಳು ಕೂಡ ನಮ್ಮ ರಾಜ್ಯದ ಪಂಚ ಗ್ಯಾರಂಟಿ ಯೋಜನೆಗಳ ಮಾದರಿಯನ್ನು ಜಾರಿಗೊಳಿಸುತ್ತಿರುವುದು ವಿಶೇಷ ಎಂದರು.

ಕರ್ನಾಟಕ ರಾಜ್ಯವು ಆಧುನಿಕವಾಗಿ ಅಭಿವೃದ್ಧಿ ಆಗುತ್ತಿದ್ದು ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ, ಬಡವರ, ಹಿಂದುಳಿದವರ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಇಂತಹ ಅನುಕೂಲಕರ ವಾತಾವರಣ ಸೃಷ್ಟಿಗೊಳಿಸಿದ ಪಂಚ ಗ್ಯಾರಂಟಿಗಳ ಬಗ್ಗೆ ಹೆಚ್ಚು ಪ್ರಚಾರ ಆಗಬೇಕಿದೆ. ಜಿಲ್ಲೆ, ತಾಲ್ಲೂಕು, ಪಂಚಾಯಿತಿ ವಾರು ಶಿಬಿರ, ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಿ ಪಂಚ ಗ್ಯಾರಂಟಿ ಯೋಜನೆಗಳ ಅನುಕೂಲದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರುಗಳಿಗೆ ತಿಳಿಸಿದರು.

ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಇನ್ನೂ ಕೂಡ ಯಾರು ಅರ್ಹ ಫಲಾನುಭವಿಗಳು ಗ್ಯಾರಂಟಿ ಸೌಲಭ್ಯ ಪಡೆಯುತ್ತಿಲ್ಲ ಅಂತವರ ಮಾಹಿತಿ ಕಲೆ ಹಾಕಿ ಯಾಕೆ ಸೌಲಭ್ಯ ಸಿಗುತ್ತಿಲ್ಲ? ಎಂಬುದರ ಬಗ್ಗೆ ಅರಿತು ಅವರ ಸಮಸ್ಯೆ ಬಗೆ ಹರಿಸುವ ಮೂಲಕ ಶೇಕಡ 100% ಪ್ರಗತಿ ಸಾಧಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಫಲಾನುಭವಿಗಳ ಅಭಿಪ್ರಾಯ ಆಲಿಸಿದ ಗ್ಯಾರಂಟಿ ಉಪಾಧ್ಯಕ್ಷ: ಸಭೆಯ ನಂತರ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಗ್ರಾಮಕ್ಕೆ ಭೇಟಿ ನೀಡಿದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸೂರಜ್ ಹೆಗಡೆ ಅವರು ಅಲ್ಲಿನ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು ಅಭಿಪ್ರಾಯ, ಅನಿಸಿಕೆ ಪಡೆದುಕೊಂಡರು. ಅಕ್ಕಿ ಖರೀದಿಗೆ ಸಾಕಷ್ಟು ಹಣ ಖರ್ಚಾಗುತ್ತಿತ್ತು. ಉಚಿತ ಅಕ್ಕಿ ನೀಡುತ್ತಿರುವುದರಿಂದ ಕುಟುಂಬದ ಎಲ್ಲ ಸದಸ್ಯರು ಹೊಟ್ಟೆ ತುಂಬಾ ಊಟ ಮಾಡುವಂತಾಗಿದೆ ಹಾಗೆಯೇ ಆರ್ಥಿಕವಾಗಿ ಕೂಡ ಉಳಿತಾಯವಾಗುತ್ತಿದೆ. ಅನ್ನಭಾಗ್ಯ ಯೋಜನೆಯಿಂದ ನಮಗೆ ಸಾಕಷ್ಟು ಅನುಕೂಲ ವಾಗಿದೆ ಎಂದು ಫಲಾನುಭವಿಗಳ ತಮ್ಮ ಅಭಿಪ್ರಾಯ ಅನಿಸಿಕೆ ವ್ಯಕ್ತಪಡಿಸಿದರು.

ದೇವನಹಳ್ಳಿಯ ಕೆ.ಇ.ಬಿ ಕಚೇರಿ ಬಳಿಯ ಜಿಲ್ಲಾ ಸಂಪನ್ಮೂಲ ಕೇಂದ್ರದಲ್ಲಿ ಗೃಹ ಲಕ್ಷ್ಮೀ, ಗೃಹ ಜ್ಯೋತಿ, ಯುವ ನಿಧಿ, ಶಕ್ತಿ ಯೋಜನೆಯ ಫಲಾನುಭವಿಗಳನ್ನು ಮಾತನಾಡಿಸಿದರು. ಗೃಹ ಲಕ್ಷ್ಮೀ ಹಣದಿಂದ ದಿನ ನಿತ್ಯದ ಮಾತ್ರೆ ಸೇವನೆಗೆ ಔಷಧಿ ಖರೀದಿ, ಮಕ್ಕಳ ಫೀಸ್ ಕಟ್ಟಲು, ವಾಶಿಂಗ್ ಮಶೀನ್, ಫ್ರಿಡ್ಜ್ ಖರೀದಿಗೆ ಸಹಾಯವಾಗಿದೆ. ಬಟ್ಟೆ ವ್ಯಾಪಾರ, ಚಿಲ್ಲರೆ ಅಂಗಡಿ ತೆರೆಯಲು ಸಹಾಯವಾಗಿದೆ ಎಂದು ಫಲಾನುಭವಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಯುವ ನಿಧಿ ಯೋಜನೆಯ ಫಲಾನುಭವಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪುಸ್ತಕ ಖರೀದಿಸಲು, ತರಬೇತಿ ಪಡೆದುಕೊಳ್ಳಲು ಹೆಚ್ಚು ಅನುಕೂಲ ವಾಗಿದೆ ಎಂದರು. ದೇವನಹಳ್ಳಿ ಟೌನ್ ಸಹಕಾರ ಕೇಂದ್ರದಲ್ಲಿನ ಅಕ್ಕಿ ಗೋದಾಮುಗೆ ಭೇಟಿ ನೀಡಿ ಅನ್ನಭಾಗ್ಯ ಫಲಾನುಭವಿಗಳ ಅಭಿಪ್ರಾಯ ಪಡೆದರು. ದೇವನಹಳ್ಳಿ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಯ ಫಲಾನುಭವಿಗಳ ಅಭಿಪ್ರಾಯ ಆಲಿಸಿದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ಬಿ.ರಾಜಣ್ಣ ಅವರು ಮಾತನಾಡಿ ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ನೇರವಾಗಿ ಅರ್ಹ ಫಲಾನುಭವಿಗಳಿಗೆ ತಲುಪುತ್ತಾ, ಜನ-ಸಾಮಾನ್ಯರ ಆರ್ಥಿಕ ಮಟ್ಟವನ್ನು ಸುಧಾರಿಸುವಲ್ಲಿ ಪಂಚ ಗ್ಯಾರಂಟಿಗಳು ಯಶಸ್ವಿಯಾಗಿವೆ ಎಂದು ಹೇಳಿದರು.

ಸರ್ಕಾರದ ಗ್ಯಾರಂಟಿ ಯೋಜನೆಯ ಗೃಹಲಕ್ಷ್ಮೀ 2ಸಾವಿರ ರೂ. ಮನೆ ಯಜಮಾನಿಗೆ ಆರ್ಥಿಕ ನೆರವು, ಗೃಹಜ್ಯೋತಿ ಉಚಿತ ವಿದ್ಯುತ್ ಕತ್ತಲು ಮನೆಗೆ ಬೆಳಕಾಗಿದೆ. ಜಿಲ್ಲೆಯ ಸಾವಿರಾರು ಮಹಿಳೆಯರ ಉಚಿತ ಪ್ರಯಾಣಕ್ಕೆ ಶಕ್ತಿ ಯೋಜನೆ
ಶಕ್ತಿ ತುಂಬಿದೆ. ಯುವನಿಧಿ ನಿರುದ್ಯೋಗ ಯುವಕ-ಯುವತಿಯರಿಗೆ ಆರ್ಥಿಕ ಸಹಾಯ ಮಾಡುತ್ತಿದೆ. ಅನ್ನಭಾಗ್ಯ ಯೋಜನೆಯಂತು ಶೇ. 100 ರಷ್ಟು ಬಡಜನರಿಗೆ ತಲುಪುತ್ತಾ, ಅನ್ನಭಾಗ್ಯ ಯೋಜನೆಯೂ ಹಸಿದ ಹೊಟ್ಟೆಗಳನ್ನು ತುಂಬಿಸುತ್ತಿದೆ ಎಂದರು‌.

ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಯ ಗೃಹಲಕ್ಷ್ಮೀ ಹಣ ಕೂಡಿಟ್ಟು ಮಹಿಳೆಯರು ಹೋಲಿಗೆ ಯಂತ್ರ ಖರೀದಿಸಿದ್ದಾರೆ. ತಂದೆ-ತಾಯಿಯ ಕಣ್ಣಿನ ಶಸ್ತ್ರ ಚಿಕಿತ್ಸೆ, ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಂಡಿದ್ದಾರೆ. ಗೃಹ ಬಳಕೆ ವಸ್ತುಗಳ ಖರೀದಿ ಹೀಗೆ ಗೃಹಲಕ್ಷ್ಮೀ ಹಣದಿಂದ ಮಹಿಳೆಯರು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ ಎಂದು ಹೇಳಿದರು.

ಸಭೆಯಲ್ಲಿ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ದುರ್ಗಶ್ರೀ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವಕುಮಾರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರುಗಳಾದ ನಾರಾಯಣಸ್ವಾಮಿ, ನರಸಿಂಹರಾಜು, ಅಬ್ದುಲ್ ಬಶೀರ್, ಲಕ್ಷಣ ಗೌಡ, ದೇವನಹಳ್ಳಿ ತಾಲೂಕು ಗ್ಯಾರಂಟಿ ಅಧ್ಯಕ್ಷ ಜಗನ್ನಾಥ, ನೆಲಮಂಗಲ ತಾಲೂಕು ಗ್ಯಾರಂಟಿ ಅಧ್ಯಕ್ಷೆ ನಾಗರತ್ನಮ್ಮ, ಹೊಸಕೋಟೆ ತಾಲೂಕು ಗ್ಯಾರಂಟಿ ಅಧ್ಯಕ್ಷ ಬಚ್ಚೆಗೌಡ ಜಿಲ್ಲಾ ಹಾಗೂ ತಾಲೂಕು ಗ್ಯಾರಂಟಿ ಯೋಜನೆಗಳ ಸರ್ವಸದಸ್ಯರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Megha
the authorMegha

Leave a Reply

error: Content is protected !!
Latest news
ಟನ್‌ ಕಬ್ಬಿಗೆ 3650 ರೂ. ಎಫ್ಆರ್‌ಪಿ ದರ ಘೋಷಣೆ ಮಾಡಿರುವ ಕೇಂದ್ರ ಸರ್ಕಾರದ ನಡೆ ಸಲ್ಲ- 4500 ರೂ. ನಿಗದಿಗೊಳಿಸಬೇಕು: ಕ... KKRTC ವಿಜಯಪುರ: ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರಬರ ಭ್ರಷ್ಟಾಚಾರ ಸಾಬೀತು- ಆದರೂ ಕ್ರಮ ತೆಗೆದುಕೊಳ್ಳದ ಎಂಡ... KSRTC: ಪಲ್ಲಕ್ಕಿಯಲ್ಲಿ ಆಕಸ್ಮಿಕ ಬೆಂಕಿ- ಧಗಧಗಿಸಿದ ಬಸ್‌- ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ KSRTC ಕಡೂರು: ಘಟಕದಲ್ಲೊಬ್ಬಳು ಟಾರ್ಚರ್‌ ಟಿಸಿ- ನೌಕರರಿಗೆ ಮಾನಸಿಕ ಕಿರುಕುಳ- ರಜೆ ಬದಲು ಗೈರು ತೋರಿಸುವ ನಟ ಭಯಂಕರಿ! EPS ಪಿಂಚಣಿದಾರರ 100ನೇ ಮಾಸಿಕ, ಶತದಿನೋತ್ಸವದಲ್ಲಿ ಮುಸ್ಸಂಜೆಯ ತರುಣರ ಸಂಭ್ರಮ KSRTC: ಫ್ರೀಡಂ ಪಾರ್ಕ್‌ನಲ್ಲಿ ಸರಿ ಸಮಾನ ವೇತನ, 38 ತಿಂಗಳ ಹಿಂಬಾಕಿಗೆ ಆಗ್ರಹಿಸಿ ಸಾರಿಗೆ ನೌಕರರ ಪ್ರತಿಭಟನೆ- ಸರ್ಕಾರ... ಗೆದ್ದ3ವರ್ಷದ ಬಳಿಕ ಶಾಸಕರಾದ ಜೀವರಾಜ್: ಅಧಿಕಾರಿಗಳ ಎಡವಟ್ಟಿಗೆ ಸೋತರು 3ವರ್ಷ ಶಾಸಕರಾಗಿದ್ದ ರಾಜೇಗೌಡ KSRTC: ಇಂದು ಸರಿ ಸಮಾನ ವೇತನ, 38 ತಿಂಗಳ ಹಿಂಬಾಕಿ ಕೊಡಲು ಆಗ್ರಹಿಸಿ ಸಾರಿಗೆ ನೌಕರರ ಧರಣಿ ಸತ್ಯಾಗ್ರಹ KSRTC: ನಾಳೆ ಸರಿ ಸಮಾನ ವೇತನ, 38 ತಿಂಗಳ ಹಿಂಬಾಕಿ ಕೊಡದ ಸರ್ಕಾರದ ವಿರುದ್ಧ ಸಾರಿಗೆ ನೌಕರರ ಧರಣಿ ಸತ್ಯಾಗ್ರಹ KKRTC: ನೋಡಿ ಎಂಡಿ ಅವರೇ ನಿಮ್ಮ ಸಂಸ್ಥೆಯಲ್ಲಿ ಚಾಲನಾ ಸಿಬ್ಬಂದಿಗಳು ಮೇ 1ರಂದು ರಜೆ ತೆಗೆದುಕೊಂಡರೆ ಆಬ್ಸೆಂಟ್‌ ಹಾಕುವ ...