NEWSನಮ್ಮಜಿಲ್ಲೆ

KSRTC: ನೌಕರರಿಗೆ ಸರಿ ಸಮಾನ ವೇತನ ಕೊಡುವುದು ಸರ್ಕಾರದ ಆದ್ಯ ಕರ್ತವ್ಯ-ಬೈರೇಗೌಡ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹೊರತಂದಿರುವ ನೂತನ ವರ್ಷದ ಕ್ಯಾಲೆಂಡರ್ ಅನ್ನು ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಬಿಡುಗಡೆಗೊಳಿಸಿದರು.

ನಗರದ ಸುಂಕದಕಟ್ಟೆಯಲ್ಲಿರುವ ಸಂಘದ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕ್ಯಾಲೆಂಡರ್ ಲೋಕಾರ್ಪಣೆಗೊಳಿಸಿ, ನಂತರ ಮಾತನಾಡಿದ ಸಂಘದ ಅಧ್ಯಕ್ಷ ಬೈರೇಗೌಡ ಅವರು, ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಕೊಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಕಾರಣ ಈಗಾಗಲೇ ಕಾಂಗ್ರೆಸ್‌ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಅದನ್ನು ಘೊಷಿಸಿದೆ. ಹೀಗಾಗಿ ಜಾರಿ ಮಾಡಲೇಬೇಕು ಎಂದು ಒತ್ತಾಯಿಸಿದರು.

ಇನ್ನು ನಾಲ್ಕೂ ಸಾರಿಗೆ ನಿಗಮಗಳ ಅಧಿಕಾರಿಗಳು/ನೌಕರರಿಗೆ ಸಿಗಬೇಕಿರುವ ಸೌಲಭ್ಯಗಳನ್ನು ಕೊಡುವ ನಿಟ್ಟಿನಲ್ಲಿ ಈ ಸರ್ಕಾರ ಮುಂದಾಗಿರುವುದು ತುಂಬ ಸಂತೋಷದ ವಿಷಯವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಎಲ್ಲರೂ ಕೂಡ ಆರ್ಥಿಕವಾಗಿ ಸಬಲರಾಗುತ್ತಾರೆ ಎಂದು ಹೇಳಿದರು.

ಸಾರಿಗೆ ನೌಕರರು ಸರ್ಕಾರದ ಪ್ರಮುಖ ಕೊಂಡಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಒಂದು ದಿನ ಬಸ್‌ಗಳನ್ನು ನಿಲ್ಲಿಸಿದರೆ ಅದರ ಪರಿಣಾಮ ಸರ್ಕಾರದ ಮೇಲೆ ಬೀಳುತ್ತದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಸೇರಿ ಸಾರಿಗೆ ಸಚಿವರು ನೌಕರರಿಗೆ ಕೊಟ್ಟಿರುವ ಭರವಸೆಯನ್ನು ಉಳಿಸಿಕೊಳ್ಳಬೇಕು ಎಂದರು.

ಇನ್ನು 2024ರಲ್ಲಿ ಸಾರಿಗೆ ನೌಕರರು ಸಾಕಷ್ಟು ನೋವು ನಲಿವು ಕಂಡಿದ್ದೇವೆ. ಹೀಗಾಗಿ ಹೊಸ ವರ್ಷ ಎಲ್ಲರ ಬದುಕಿನಲ್ಲಿ ಸಂತಸ ತರಲಿ, ಜತೆಗೆ ಈಗ ಇರುವ ಸಣ್ಣಪುಟ್ಟ ಗೊಂದಲಗಳು ದೂರಾಗಿ ಪ್ರತಿಯೊಬ್ಬರಿಗೂ ಉಚಿತ ವೈದ್ಯಕೀಯ ಸೌಲಭ್ಯ ಸಿಗಲಿ ಎಂದು ಶುಭಕೋರಿದರು.

ಸಂಘದ ಗೌರವ ಅಧ್ಯಕ್ಷ ಗೋವಿಂದರಾಜ ಮಾತನಾಡಿ, ನಿತ್ಯ ನಮ್ಮ ಬದುಕು ಆರಂಭವಾಗುವುದೇ ಕ್ಯಾಲೆಂಡರ್‌ನಿಂದ. ಹೀಗಾಗಿ ಈ ಕ್ಯಾಲೆಂಡರ್ ಕೇವಲ ಅಂಕಿ ಅಂಶಗಳ ಪುಟವಲ್ಲ, ನಮ್ಮ ಬದುಕನ್ನು ನಿರ್ಧರಿಸುತ್ತದೆ ಎಂದರು.

ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಸಂಘದ ಕಾರ್ಯಧ್ಯಕ್ಷ ವೇಣುಗೋಪಾಲ್, ಪ್ರಧಾನ ಕಾರ್ಯದರ್ಶಿ ಪ್ರೇಮಕುಮಾರ್, ಖಜಾಂಚಿ ಮಂಜಣ್ಣ, ಹಾಸನ ವಿಭಾಗದ ಅಧ್ಯಕ್ಷ ರುಕೇಶ್, ಪುರುಷೋತ್ತಮ, ಶಾಂತಕುಮಾರ, ಚನ್ನರಾಯಪಟ್ಟಣ ಘಟಕದ ಅಧ್ಯಕ್ಷ ನಟರಾಜ್, ಮೊಹನಾಚಾರ್ಯ, ಸಂಘದ ಉಪಾಧ್ಯಕ್ಷರಾದ ಪ್ರಕಾಶ್, ನಿರ್ದೇಶಕರಾದ ರಾಮ ಲಕ್ಷ್ಮಮ್ಮ ಮತ್ತಿತರರು ಇದ್ದರು.

Deva
the authorDeva

Leave a Reply

error: Content is protected !!