NEWSನಮ್ಮರಾಜ್ಯ

KSRTC: ನೌಕರರ ವೇತನ ಸೇರಿ ಇತರ ಬೇಡಿಕೆಗಳ ಈಡೇರಿಕೆಗಾಗಿ ಒಗ್ಗಟ್ಟಾದ ಸಂಘಟನೆಗಳು-ಸಿಎಂ ಭೇಟಿಗೆ ನಿರ್ಧಾರ

ವಿಜಯಪಥ ಸಮಗ್ರ ಸುದ್ದಿ
  • ಮಂಗಳವಾರದ ಸಭೆಯಲ್ಲಿ ಒಕ್ಕೋರಲಿನ ತೀರ್ಮಾನ
  • ಬಣಗಳಾಗದೆ ಒಂದೇ ವೇದಿಕೆಯಡಿ ಸಿಎಂ, ಸಾರಿಗೆ ಸಚಿವರ, ಎಂಡಿಗಳ ಭೇಟಿಗೆ ನಿರ್ಧಾರ

ಬೆಂಗಳೂರು: ನಾಲ್ಕೂ ನಿಗಮಗಳ ಸಾರಿಗೆ ನೌಕರರಿಗೆ 38 ತಿಂಗಳ ಹಿಂಬಾಕಿ ವೇತನ, 1-1-2024ರ ವೇತನ ಹೆಚ್ಚಳದ ವಿಳಂಬ ಹಾಗೂ 7-4-2021ರಲ್ಲಿ ವಜಾಗೊಂಡಿರುವ ನೌಕರರನ್ನು ಯಥಾವತ್ತಾಗಿ ಯಾವುದೇ ಶಿಕ್ಷೆ ಇಲ್ಲದೇ ಡ್ಯೂಟಿ ಕೊಡಬೇಕು ಎಂದು ಸರ್ಕಾರ ಹಾಗೂ ಆಡಳಿತ ವರ್ಗಕ್ಕೆ ಒತ್ತಾಯಿಸುವ ಬಗ್ಗೆ ಎಲ್ಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘಟನೆಗಳು ಒಕ್ಕೋರಲಿನ ತೀರ್ಮಾನ ತೆಗೆದುಕೊಂಡವು.

ಮಂಗಳವಾರ ಮೇ 6ರ ಮಧ್ಯಾಹ್ನ ನಗರದ ಜೈಭೀಮ್ ಭವನದಲ್ಲಿ ನಡೆದ ಸರ್ವ ಸಂಘಟನೆಗಳ ಸಭೆಯಲ್ಲಿ ಭಾಗವಹಿಸಿದ್ದ ಸಂಘಟನೆಗಳ ಪದಾಧಿಕಾರಿಗಳು ಈ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳೆಂದರೆ, ಒಂದೇ ವೇದಿಕೆಯಲ್ಲಿ ಸಂಘಟಿತರಾಗಿ ನೌಕರರಿಗೆ ಬರಬೇಕಿರುವ 38 ತಿಂಗಳ ಹಿಂಬಾಕಿ ವೇತನ, 1-1-2024ರ ವೇತನ ಹೆಚ್ಚಳ ಹಾಗೂ 7-4-2021ರಲ್ಲಿ ನಡೆದ ಮುಷ್ಕರದಲ್ಲಿ ವಜಾಗೊಂಡಿರುವ ನೌಕರರನ್ನು ಯಥಾವತ್ತಾಗಿ ಯಾವುದೇ ಶಿಕ್ಷೆ ಇಲ್ಲದೇ ಡ್ಯೂಟಿಗೆ ತೆಗೆದುಕೊಳ್ಳಬೇಕು.

ಇನ್ನು ಈಗಿನ ಪರಿಸ್ಥಿತಿಯಲ್ಲಿ ನೌಕರರು ತುಂಬಾ ಗಂಭೀರ ಸ್ಥಿತಿಯಲ್ಲಿ ಕರ್ತವ್ಯ ಮಾಡುತ್ತಿದ್ದು ಸಂಸ್ಥೆಯ ಹಲವಾರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಘಟಕಗಳ ಮಟ್ಟದಲ್ಲಿ ಕಿರುಕುಳ ಕೂಡ ಹೆಚ್ಚಾಗಿದೆ. ಜತೆಗೆ ಅಧಿಕಾರಿಗಳ ದೌರ್ಜನ್ಯ ಎಲ್ಲೆಮೀರಿದೆ. ಇಂತಹ ಸಂದರ್ಭಗಳಲ್ಲಿ 38 ತಿಂಗಳ ವೇತನದ ಹಿಂಬಾಕಿಯೂ ಇಲ್ಲ, ದುಡಿಮೆಗೆ ತಕ್ಕ ವೇತನವೂ ಇಲ್ಲದೆ ನೌಕರರು ಪರಿತಪಿಸುತ್ತಿದ್ದಾರೆ.

ಈಗಿರುವ ಪ್ರತಿಯೊಂದು ವಸ್ತುವಿನ ಬೆಲೆ ಏರಿಕೆ ದಿನಮಾನದಲ್ಲಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುವ ಸಂದರ್ಭವು ಬಂದಿದೆ. ಬೆಲೆ ಏರಿಕೆ ಗಗನಕ್ಕೆ ಏರುತ್ತೀರುವಂತೆ ಶಾಲೆಗಳ ಶುಲ್ಕವು ಕೂಡ ಹೆಚ್ಚಳವಾಗಿದೆ. ಈ ಎಲ್ಲದರಿಂದ ನೌಕರರು ಹೀನಾಯ ಪರಿಸ್ಥಿತಿಯಲ್ಲಿ ಜೀವನ ನಡೆಸುವ ಸ್ಥಿತಿ ನಿರ್ಮಾಣವಾಗುತ್ತಿದೆ.

ಈ ಎಲ್ಲವೂ ನೂರಕ್ಕೆ ನೂರರಷ್ಟು ಸತ್ಯ ಎಂಬುದು ನಮ್ಮ ಕಣ್ಣಿಗೆ ಕಾಣುತ್ತಿದೆ. ಇಂತಹ ಕಷ್ಟದ ದಿನಗಳಲ್ಲಿ ಸಂಘಟನೆಗಳು ನೌಕರರ ಪಾಲಿಗೆ ಸಂಜೀವಿನಿ ಆಗಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಬಣಗಳಾಗದೆ ಒಂದಾಗಿ ಒಗ್ಗಟ್ಟಿನಿಂದ ಸರ್ಕಾರದ ಮುಂದೆ ಹೋಗಿ ಈ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳೋಣ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ನೌಕರರ ಮತ್ತು ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ರುದ್ರೇಶ್ ಎಸ್. ನಾಯಕ ತಮ್ಮ ಅಭಿಪ್ರಾಯ ಮಂಡಿಸಿದರು.

ಎಲ್ಲ ಸಂಘಟನೆಗಳು ಜತೆಯಲ್ಲಿ ಹೋಗಿದ್ದೆ ಆದರೆ ನಮ್ಮ ಸಮಸ್ಯೆ ಯಾವುದು ಸಮಸ್ಯೆಯೇ ಅಲ್ಲ. ಆದರೆ ಎತ್ತು ಏರಿಗೆ ಕೋಣ ನೀರಿಗೆ ಎಂಬ ನಿಲುವು ಸಂಘಟನೆಗಳದ್ದಾಗಿದೆ. ಹಾಗಾಗಿ ಇನ್ನು ಮುಂದಾದರೂ ಬದಲಾಗಿ ಎಲ್ಲ ಸಂಘಟನೆಗಳು ಒಂದೇ ವೇದಿಕೆಯಲ್ಲಿ ಹೋಗಿ ನೌಕರರಿಗೆ ನ್ಯಾಯ ಕೊಡಿಸುವಂತ ಕೆಲಸ ಮಾಡೋಣ ಎಂದರು. ಅದಕ್ಕೆ ಸಭೆಯಲ್ಲಿದ್ದವರು ಒಕ್ಕೋರಲಿನಲ್ಲಿ ಇದೇ ಸರಿ ಎಂದು ನಿರ್ಧರಿಸಿದರು.

ಇನ್ನು ನೌಕರರ ಪಾಲಿನ ವಿಲನ್‌ಗಳಂತೆ ವರ್ತಿಸದೆ ಇನ್ನು ಮುಂದಾದರೂ ನಾವು ಅವರ ಹೆಸರಿನಲ್ಲಿ ಕಟ್ಟಿಕೊಂಡಿರುವ ಸಂಘಟನೆಗಳಾಗಿ ಅವರಿಗೆ ಸಂಸ್ಥೆಯಲ್ಲಿ ಸಿಗಬೇಕಿರುವ ಸೌಲಭ್ಯಗಳನ್ನು ಸಂಘಭೇದ ಮರೆತು ಒಂದಾಗಿ ಕೊಡಿಸಬೇಕು. ಎಲ್ಲ ಸಂಘಟನೆಗಳು ಒಂದಾಗಿ ನ್ಯಾಯ ಕೊಡಿಸುವ ಪ್ರಾಮಾಣಿಕ ಕೆಲಸ ಮಾಡೋಣ ಎಂದು ಒಕ್ಕೋರಲಿನಿಂದ ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಒಟ್ಟಾರೆ ಸರಿ ಸಮಾನವ ವೇತನವನ್ನಾದರೂ ಕೊಡಲಿ ಇಲ್ಲ ಅಗ್ರಿಮೆಂಟ್‌ ಆದರೂ ಮಾಡಲಿ ನಮ್ಮ ನೌಕರರಿಗೆ ನ್ಯಾಯಯುತವಾಗಿ ಸಿಗಬೇಕಿರುವ ವೇತನ ಸೌಲಭ್ಯಗಳು ಸಿಗಲೇಬೇಕು ಎಂದು ಸಭೆಯಲ್ಲಿದ್ದ ಎಲ್ಲ ಸಂಘಟನೆಗಳ ಪದಾಧಿಕಾರಿಗಳು ಒಂದೇ ಧ್ವನಿಯಲ್ಲಿ ನಿರ್ಣಯ ತೆಗೆದುಕೊಂಡಿದ್ದೇವೆ ಎಂದು ರುದ್ರೇಶ್ ಎಸ್. ನಾಯಕ ತಿಳಿಸಿದ್ದಾರೆ.

ಸಭೆಯಲ್ಲಿ ಕಾರ್ಯಕ್ರಮದ ಆಯೋಜಕ ನೌಕರರ ಸಂಘದ ಅಧ್ಯಕ್ಷ ಎಚ್ಆರ್. ಜಗದೀಶ್, ನೌಕರ ಕೂಟದ ಖಜಾಂಚಿ ಎನ್‌.ಸತೀಶ್, ವೆಂಕಟರಮಣಪ್ಪ, ತುಮಕೂರು ಪುಟ್ಟಣ್ಣ, ಗುತ್ತಲೇಗೌಡ, ಕೃಷ್ಣ, ಮಹೇಂದ್ರ ಅಪ್ಪಾಜಿ, ಕುಮಾರ್, ನವೀನ್, ಸುಣಗಾರ, ಕೂಟದ ಅನಿಲ್ ಕುಮಾರ್, ಶ್ರೀಧರ್ ತಹಶೀಲ್ದಾರ್, ಕುದರೆ ಜಗದೀಶ್, ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಪಿ.ಎಂ.ಪ್ರಕಾಶ್ ಸೇರಿದಂತೆ ಹಲವು ಹಿರಿಯ ಮುಖಂಡರು ಭಾಗವಹಿಸಿದ್ದರು.

Deva
the authorDeva

Leave a Reply

error: Content is protected !!