ಬೆಂಗಳೂರು: ಡಿಸೆಂಬರ್ 31ರಿಂದ ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಯೋಜಿತ ಅನಿರ್ದಿಷ್ಟಾವಧಿ ಮುಷ್ಕರ ತಡೆಯಲು ಸಾರಿಗೆ ಇಲಾಖೆ ಸಕ್ರಿಯವಾಗಿದೆ. ಈ ನಡುವೆ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಲೇ ಬೇಕು ಎಂದು ಕ್ರಿಯಾ ಸಮಿತಿ ಒತ್ತಾಯಿಸುತ್ತಿದೆ.
ಈ ಸಂಬಂಧ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ಸಭೆ ನಡೆಸಿ ಮುಷ್ಕರ ತಡೆಗಟ್ಟುವ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲಾಯಿತು. ಎಲ್ಲ ನಾಲ್ಕು ನಿಗಮಗಳ ಹಿರಿಯ ಅಧಿಕಾರಿಗಳು ಚರ್ಚೆಯಲ್ಲಿ ಭಾಗವಹಿಸಿದ್ದರು.
ಆರ್ಥಿಕ ಸವಾಲುಗಳು ಮತ್ತು ನೌಕರರ ಬೇಡಿಕೆಗಳು, ನಿಗಮಗಳ ಆರ್ಥಿಕ ಸ್ಥಿತಿ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆಯಾಯಿತು. ಆದಾಗ್ಯೂ, ಮುಷ್ಕರದ ಕರೆಯನ್ನು ಹೇಗೆ ಪರಿಹರಿಸಬೇಕು ಎಂಬುದರ ಬಗ್ಗೆ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ಮುಷ್ಕರಕ್ಕೆ ಕರೆ ಕೊಟ್ಟಿರುವ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಹೆಚ್ಚಿನ ಚರ್ಚೆ ನಡೆಸಿ ಎಂದು ಸೂಚಿಸಲಾಯಿತು.
ಈ ನಡುವೆ ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ ಕಾಯ್ದೆ (ಎಸ್ಮಾ) ಯನ್ನು ಇನ್ನೂ ಆರು ತಿಂಗಳ ಕಾಲ ವಿಸ್ತರಿ ಆದೇಶ ಹೊರಡಿಸಿರುವ ಸರ್ಕಾರ ಈಗಾಗಲೇ ಜನವರಿ 1 ರಿಂದ ಸಾರಿಗೆ ನೌಕರರು ಮುಷ್ಕರದಲ್ಲಿ ಭಾಗವಹಿಸುವುದನ್ನು ತಡೆಯುವುದಕ್ಕೆ ಯತ್ನಿಸಿದೆ. ಇನ್ನೊಂದೆಡೆ ಮುಷ್ಕರದ ಅವಧಿಯಲ್ಲಿ ನಿರಂತರವಾಗಿ ಬಸ್ ಸೇವೆ ಒದಗಿಸುವ ಗುರಿಯನ್ನು ಬಿಎಂಟಿಸಿ ಹೊಂದಿದೆ.
ಮುಷ್ಕರ ತಡೆಗಟ್ಟಲು ಮುಂದಾಯಿತು: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ನಾಲ್ಕು ನಿಗಮಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ಮುಷ್ಕರದಿಂದ ಹಿಂದೆ ಸರಿಯುವಂತೆ ನಾನು ಈಗಾಗಲೇ ನೌಕರರ ಸಂಘಟನೆಗಳಿಗೆ ಮನವಿ ಮಾಡಿದ್ದೇನೆ. ನಿಗಮಗಳ ಆರ್ಥಿಕ ಪರಿಸ್ಥಿತಿಯ ಬಗ್ಗೆಯೂ ಅವರಿಗೆ ತಿಳಿದಿದೆ. ಆದ್ದರಿಂದ, ಮುಷ್ಕರ ಮಾಡದಂತೆ ನಾನು ಅವರನ್ನು ವಿನಂತಿಸಿದ್ದೇನೆ ಮತ್ತು ಮುಷ್ಕರವನ್ನು ತಡೆಯಲು ನಾವು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು ಈ ಹಿಂದೆ ಅನಿರ್ದಿಷ್ಟಾವಧಿ ಮುಷ್ಕರದ ಉದ್ದೇಶದ ಬಗ್ಗೆ ಕಾರ್ಮಿಕ ಇಲಾಖೆಗೆ ತಿಳಿಸಿತ್ತು. ಇದರ ಪರಿಣಾಮವಾಗಿ, ಡಿಸೆಂಬರ್ 30 ರಂದು ಸಮಿತಿ ಮುಖಂಡರು ಮತ್ತು ನಿಗಮದ ಅಧಿಕಾರಿಗಳ ನಡುವೆ ರಾಜೀಸಂಧಾನ ಸಭೆಯನ್ನು ನಿಗದಿಪಡಿಸಿದೆ.
ಒಂದು ಹಂತದಲ್ಲಿ ಸಾರಿಗೆಯ ನಾಲ್ಕೂ ನಿಗಮಗಳ ಎಂಡಿಗಳಲ್ಲಿ 3 ನಿಗಮಗಳ ಎಂಡಿಗಳು 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಕೊಡುವುದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಕೆಎಸ್ಆರ್ಟಿಸಿ ಎಂಡಿ ಮಾತ್ರ ನೀವು ದುಡುಕಬೇಡಿ ಸರ್ಕಾರ ಯಾವ ನಿರ್ದಾರ ತೆಗೆದುಕೊಳ್ಳುತ್ತದೋ ಆ ನಿಟ್ಟಿನಲ್ಲಿ ನಾವು ಸಾಗೋಣ ಎಂದು ಹೇಳಿರುವುದಾಗಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಇಲ್ಲಿ ಕೆಎಸ್ಆರ್ಟಿಸಿ ಎಂಡಿಯವರ ನಡೆ ಭಾರಿ ಕುತೂಹಲ ಮೂಡಿಸಿದೆ. ಇತ್ತ ಸರ್ಕಾರ ನಡೆಯೂ ನಿಗೂಢವಾಗಿದೆ. ಹೀಗಾಗಿ ಜಂಟಿ ಕ್ರಿಯಾ ಸಮಿತಿಯ ಮುಂದಿನ ನಡೆಕೂಡ ಯಾವ ರೀತಿ ಇರಲಿದೆ ಎಂಬುದು ತಿಳಿಯಬೇಕಾದರೆ ಡಿ.31ರವರೆಗೂ ಕಾದು ನೀಡಬೇಕಿದೆ.