ಬೆಂಗಳೂರು: ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರು ಸಣ್ಣ ಫೈನಾನ್ಸ್ ಸಂಸ್ಥೆಗಳಲ್ಲಿ ಸಾಲ ಪಡೆದು ಮರುಪಾವತಿಸುವಲ್ಲಿ ವಿಳಂಬಮಾಡುವ ಸಾಲಗಾರರ ಮೇಲೆ ಮೈಕ್ರೋಫೈನಾನ್ಸ್ ಸಂಸ್ಥೆಗಳು, ಸಾಲ ನೀಡಿಕೆ ಏಜೆನ್ಸಿಗಳು ಹಾಗೂ ಲೇವಾದೇವಿಗಾರರು ನೀಡುವ ಕಿರುಕುಳ ಹಾಗೂ ಬಲವಂತದ ವಸೂಲಾತಿ ಕ್ರಮಗಳನ್ನು ನಿಯಂತ್ರಿಸಲು ಸರ್ಕಾರವು ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧ್ಯಾದೇಶ 2025ನ್ನು ಫೆಬ್ರವರಿ 12 ರಿಂದ ಜಾರಿಗೊಳಿಸಿದೆ.
ಆ ಆದೇಶದ ಪ್ರಮುಖಾಂಶಗಳು ಎಂದರೆ, ಮೈಕ್ರೋಫೈನಾನ್ಸ್ ಸಂಸ್ಥೆಗಳು ಸಾಲಗಾರರಿಂದ ಯಾವುದೇ ಭದ್ರತೆ ಪಡೆಯಬಾರದು. ಗ್ರಾಹಕರಿಗೆ ವಿಧಿಸುವ ಬಡ್ಡಿದರಗಳ ಬಗ್ಗೆ ಪಾರದರ್ಶಕವಾಗಿ ಲಿಖಿತ ರೂಪದಲ್ಲಿ ತಿಳಿಸಬೇಕು. ಈ ಆದೇಶವು ಭಾರತೀಯ ರಿಸರ್ವ್ ಬ್ಯಾಂಕ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ನೋಂದಣಿಯಾಗದ ಮೈಕ್ರೋಫೈನಾನ್ಸ್ ಸಂಸ್ಥೆಗಳಿಗೆ ಮಾತ್ರ ಅನ್ವಯಿಸುತ್ತದೆ.
ನೋಂದಾಯಿತ ಸಂಸ್ಥೆಗಳಿಂದ ಅಂದಾಜು 60 ಸಾವಿರ ಕೋಟಿ ರೂ. ಸಾಲವನ್ನು ಸುಮಾರು 1.09 ಕೋಟಿ ಸಾಲಗಾರರು ಪಡೆದಿದ್ದಾರೆ. ನೋಂದಣಿಯಾಗದ ಸಂಸ್ಥೆಗಳಿಂದ ಸಾಲ ಪಡೆದವರ ಮಾಹಿತಿ ನಿಖರವಾಗಿ ಲಭ್ಯವಿಲ್ಲವಾದರೂ, ಅಂದಾಜು 40 ಸಾವಿರ ಕೋಟಿ ರೂ. ಸಾಲ ಪಡೆದಿದ್ದಾರೆ ಎಂಬ ಮಾಹಿತಿ ಇದೆ.
ಮೈಕ್ರೋಫೈನಾನ್ಸ್ ಸಂಸ್ಥೆಗಳು ತಾವು ವ್ಯವಹರಿಸುತ್ತಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳಲ್ಲಿ ನೋಂದಣಿಯಾಗುವುದು ಕಡ್ಡಾಯವಾಗಿದೆ. ಈ ಸಂಸ್ಥೆಗಳು ವಿಧಿಸುವ ಬಡ್ಡಿದರ, ಸಾಲಗಾರರ ಮಾಹಿತಿ ಹಾಗೂ ಸುಸ್ತಿ ಸಾಲಗಳ ವಿವರಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಬೇಕು. ತ್ರೈ ಮಾಸಿಕ ಮತ್ತು ವಾರ್ಷಿಕ ವ್ಯವಹಾರದ ವಿವರಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು.
ಇನ್ನು ನಿಗದಿತ ಅವಧಿಯಲ್ಲಿ ಮಾಹಿತಿಯನ್ನು ಸಲ್ಲಿಸದಿದ್ದರೆ 6 ತಿಂಗಳ ಕಾರಗೃಹವಾಸ ಅಥವಾ 10 ಸಾವರಿರೂ ವರೆಗೆ ದಂಡ ಅಥವಾ ಎರಡೂ ಶಿಕ್ಷೆಗೆ ಗುರಿಯಾಗುತ್ತಾರೆ. ವಿವಾದಗಳ ಇತ್ಯರ್ಥಗಳನ್ನು ಒಂಬುಡ್ಸ್ಮನ್ಗಳನ್ನು ಸರ್ಕಾರ ಅಧಿಸೂಚನೆ ಮೂಲಕ ನೇಮಕ ಮಾಡುವ ಅಧಿಕಾರ ಹೊಂದಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ತಿಳಿಸಿದ್ದಾರೆ.
ಬಲವಂತದ ವಸೂಲಾತಿಗಳನ್ನು ಕೈಗೊಳ್ಳುವ ವ್ಯಕ್ತಿಯು ವಿಚಾರಣೆಗೆ ಒಳಪಡುತ್ತಾನೆ. ಹತ್ತು ವರ್ಷಗಳ ವರೆಗೆ ವಿಸ್ತರಿಸಬಹುದಾದ ಕಾರಗೃಹವಾಸ ಶಿಕ್ಷೆ ಹಾಗೂ 5 ಲಕ್ಷ ರೂ. ವರೆಗೆ ವಿಧಿಸಬಹುದಾದ ಜುಲ್ಮಾನೆಗೆ ಒಳಪಡುತ್ತಾನೆ. ಈ ಅಪರಾಧಗಳು ಸಂಜ್ಞೆಯ (ಕಾಗ್ನಿಜಿಬಲ್) ಹಾಗೂ ಜಾಮೀನು ರಹಿತ (ನಾನ್ ಬೇಲೆಬಲ್) ಪ್ರಕರಣಗಳಾಗಿರುತ್ತವೆ ಎಂದು ಡಾ. ಶಾಲಿನಿ ರಜನೀಶ್ ತಿಳಿಸಿದ್ದಾರೆ.
ಇನ್ನು ಯಾವುದೇ ಪೊಲೀಸ್ ಅಧಿಕಾರಿಗಳು ಇಂತಹ ಪ್ರಕರಣಗಳನ್ನು ನೋಂದಣಿ ಮಾಡಿಕೊಳ್ಳಲು ನಿರಾಕರಿಸಬಾರದು. ಪೊಲೀಸ್ ಉಪ ಅಧೀಕ್ಷಕ (ಡಿವೈಎಸ್ಪಿ) ದರ್ಜೆಗಿಂತ ಕಡಿಮೆ ಇಲ್ಲದ ಅಧಿಕಾರಿಯು ಸ್ವತಃ (ಸುಮೊಟೊ) ಪ್ರಕರಣ ದಾಖಲಿಸಬಹುದು.
ಸರ್ಕಾರವು ಈ ಅಧ್ಯಾದೇಶದ ಅನುಷ್ಠಾನಕ್ಕೆ ಕಾಲಕಾಲಕ್ಕೆ ನಿರ್ದೇಶನಗಳನ್ನು ನೀಡುವ ಅಧಿಕಾರ ಹೊಂದಿರುತ್ತದೆ. ಈ ಆದೇಶದಿಂದ ಆರ್.ಬಿ.ಐ ಮತ್ತು ಕೇಂದ್ರ / ರಾಜ್ಯ ಸರ್ಕಾರಗಳಿಂದ ನೋಂದಣಿಯಾಗದ ಮೈಕ್ರೋಫೈನಾನ್ಸ್ ಸಂಸ್ಥೆಗಳಲ್ಲಿ ಆರ್ಥಿಕ ಶಿಸ್ತು ಹೆಚ್ಚಿಸಲು ಹಾಗೂ ಸಾಲಗಾರರಿಗೆ ಕಿರುಕುಳ, ಬಲವಂತದ ವಸೂಲಿ ಕ್ರಮಗಳಿಂದ ಮುಕ್ತಿ ನೀಡುತ್ತದೆ ಎಂದು ಡಾ. ಶಾಲಿನಿ ರಜನೀಶ್ ವಿವರಿಸಿದ್ದಾರೆ.