ವಿಜಯಪಥ ಸಮಗ್ರ ಸುದ್ದಿ
ಬೆಳಗಾವಿ: ಟಿಕೆಟ್ ಇದ್ದರು ರೈಲಿನಿಂದ ವೃದ್ಧ ದಂಪತಿ ದಾರಿ ತಪ್ಪಿಸಿ ಬೇರೆ ಸ್ಥಳದಲ್ಲಿ ಇಳಿಯುವಂತೆ ಮಾಡಿದ್ದಕ್ಕೆ ರೈಲ್ವೆ ಇಲಾಖೆಗೆ 3 ಲಕ್ಷ ರೂಪಾಯಿ ದಂಡ ವಿಧಿಸಿದ್ದು, ಆ ದಂಡ ರೂಪದ ಹಣವನ್ನು ಸಂತ್ರಸ್ತ ಕುಟುಂಬಕ್ಕೆ ನೀಡಬೇಕು. ಜೊತೆಗೆ 2,500 ರೂಪಾಯಿ ದಾವೆ ವೆಚ್ಚವನ್ನು ಸಹ ಭಾರತೀಯ ರೈಲ್ವೆ ಸರಿದೂಗಿಸಿ ಕೊಡಬೇಕು ಎಂದು ಕರ್ನಾಟಕ ನ್ಯಾಯಾಲಯ ಆದೇಶಿಸಿದೆ.
ಸುಮಾರು 11 ವರ್ಷಗಳ ಸುದೀರ್ಘ ಹೋರಾಟದ ಬಳಿಕ ಸಂತ್ರಸ್ತ ದಂಪತಿಗೆ ಈ ಮೂಲಕ ಕರ್ನಾಟಕ ನ್ಯಾಯಾಲಯ ನ್ಯಾಯ ಒದಗಿಸಿಕೊಟ್ಟಿದೆ.
ಏನಿದು ಪ್ರಕರಣ?:
2010ರಲ್ಲಿ ಈ ವೃದ್ಧ ದಂಪತಿ ಸೋಲಾಪುರದಿಂದ ಬೆಳಗಾವಿಗೆ 3 ಟಯರ್ ಎಸಿ ಟಿಕೆಟ್ ಖರೀದಿ ಮಾಡಿದ್ದರು. ದಂಪತಿಯ ಪೈಕಿ ಒಬ್ಬರು ವಿಶೇಷ ಚೇತನರಾಗಿದ್ದರು. ಈ ವೃದ್ಧ ದಂಪತಿ ತಮ್ಮ ಬರ್ತ್ಗೆ ನಿಗದಿಯಾಗಿದ್ದ ಕೋಟಾ ಅಡಿಯಲ್ಲಿ ಸೀಟನ್ನು ಕಾಯ್ದಿರಿಸಿದ್ದರು. ಆದರೆ ಟಿಕೆಟ್ ಪರೀಕ್ಷಕರು ಅವರಿಗೆ ಕಾಯ್ದಿರಿಸಲಾಗಿದ್ದ ಕೆಳಗಿನ ಬರ್ತ್ ನೀಡಲು ನಿರಾಕರಿಸಿದ್ದಾರೆ.
ಅಲ್ಲದೆ ಅವರು ವೃದ್ಧ ದಂಪತಿ ಮತ್ತು ವಿಶೇಷ ಚೇತನ ಎನ್ನುವ ಸಾಮಾನ್ಯ ಕಾಳಜಿಯನ್ನು ಸಹ ಮರೆತಿದ್ದಾರೆ. ಕಂಪಾರ್ಟ್ಮೆಂಟ್ನಲ್ಲಿ ಆರು ಲೋವರ್ ಬರ್ತ್ ಸೀಟುಗಳು ಖಾಲಿ ಇದ್ದರೂ ಸಹ ಟಿಕೆಟ್ ಪರೀಕ್ಷಕರು ಸೀಟು ಕೊಡಲು ನಿರಾಕರಣೆ ಮಾಡಿದ್ದಾರೆ. ಅಸಹಾಯಕ ವೃದ್ಧ ದಂಪತಿ ಅಂತಹ ಪರಿಸ್ಥಿಯಲ್ಲಿ ಏನು ಮಾಡಬೇಕು? ಯಾರ ನೆರವಿಗೆ ಹೋಗಬೇಕು? ಎನ್ನುವುದು ತಿಳಿಯದೇ ಆತಂಕಕ್ಕೆ ಒಳಗಾಗಿದ್ದಾರೆ.
ದಂಪತಿ ಸರಿಯಾದ ನಿಯಮ ಪಾಲಿಸಿದ್ದರೂ ಸಹ ವೃದ್ಧ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೂ ಸಹ ಟಿಕೆಟ್ ಪರೀಕ್ಷಕರನ್ನು ಪರಿ ಪರಿಯಾಗಿ ಮತ್ತೆ ಮತ್ತೆ ಕೇಳಿಕೊಂಡಿದ್ದಾರೆ. ಎಷ್ಟೇ ಪ್ರಯತ್ನಪಟ್ಟರೂ ಟಿಕೆಟ್ ಪರೀಕ್ಷಕರ ಮನಸ್ಸು ಕರಗಲಿಲ್ಲ. ಅಧಿಕಾರದ ಗತ್ತಿನಲ್ಲಿ ಮಾನವೀಯತೆಯನ್ನು ಮರೆತಂತೆ ವರ್ತಿಸಿರುವುದು ಈ ಘಟನೆಯಲ್ಲಿ ಮೇಲ್ನೋಟಕ್ಕೆ ಕಂಡು ಬಂದಿದೆ.
ಜತೆಗೆ ವಯಸ್ಸಾದವರಿಗೆ ನೆರವಾಗುವುದು ಮಾನವೀಯತೆ, ಎಷ್ಟೋ ಸಂದರ್ಭಗಳಲ್ಲಿ ಸರ್ಕಾರಿ ಅಧಿಕಾರಿಗಳು ವೃದ್ಧರಿಗೆ ನೆರವಾಗುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ. ಆದರೆ ಇಲ್ಲಿ ಪರಿಸ್ಥಿತಿ ವಿಭಿನ್ನವಾಗಿದ್ದು, ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತು.
ಇಷ್ಟಾದ ನಂತರ ರೈಲ್ವೆ ಸಿಬ್ಬಂದಿಯೊಬ್ಬರು ಈ ವೃದ್ಧ ದಂಪತಿಯ ದಾರಿಯನ್ನು ತಪ್ಪಿಸಿದ್ದಾರೆ. ವೃದ್ಧ ದಂಪತಿ ಇಳಿಯಬೇಕಿದ್ದ ನಿಲ್ದಾಣದಿಂದ 100 ಕಿಲೋ ಮೀಟರ್ ದೂರದಲ್ಲಿ ತಪ್ಪು ರೈಲ್ವೆ ನಿಲ್ದಾಣದಲ್ಲಿ ಇಳಿಸಿದ್ದಾರೆ. ಈ ಘಟನೆಯಿಂದ ಏನು ಮಾಡಬೇಕೆಂದು ತೋಚದ ದಂಪತಿ ಕಂಗಾಲಾಗಿದ್ದಾರೆ.
ಇನ್ನೊಂದು ಕಡೆ ಈ ವೃದ್ಧದಂಪತಿಯನ್ನು ಕರೆದುಕೊಂಡು ಹೋಗಲು ಅವರ ಮಗ ಬೀರೂರಿನ ಬಳಿ ಕಾದು ಸುಸ್ತಾಗಿದ್ದಾರೆ. ಕಡೆಗೆ ವೃದ್ಧ ದಂಪತಿ ಮತ್ತು ಮಗ ಒಂದಾಗಿದ್ದಾರೆ. ಆ ನಂತರ ಅವರ ಮಗ ಭಾರತೀಯ ರೈಲ್ವೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಎರಡು ಕಡೆಯಿಂದ ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಕೊನೆಗೆ ವೃದ್ಧ ದಂಪತಿ ಅನುಭವಿಸಿದ ಯಾತನೆ ಮತ್ತು ನೋವನ್ನು ಪರಿಗಣಿಸಿ ರೈಲ್ವೆ ಇಲಾಖೆಗೆ ದಂಡ ವಿಧಿಸಿ ತೀರ್ಪು ನೀಡಿದೆ.