ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ಮುಷ್ಕರ ತೀವ್ರಗೊಂಡಿದು, ಸರ್ಕಾರದ ಬೆದರಿಕೆಗಳಿಗೆ ನೌಕರರು ಬಗ್ಗುತ್ತಿಲ್ಲ. ನಾಳೆ ಬೆಳಗ್ಗೆ 11 ಗಂಟೆಗೆ ತಟ್ಟೆ, ಲೋಟ ಬಡಿಯುವ ಮೂಲಕ ರಾಜ್ಯಾದ್ಯಂತ ಚಳವಳಿ ನಡೆಸಲಾಗುವುದು ಎಂದು ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಈ ಕುರಿತು ಇಂದು ಗಾಂಧಿನಗರದಲ್ಲಿರುವ ಕೂಟದ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿ, ತಹಸೀಲ್ದಾರ್ ಕಚೇರಿ ಮುಂದೆ ಈ ಚಳವಳಿ ನಡೆಸುತ್ತೇವೆ. ಚಳವಳಿ ಯಶಸ್ವಿಯಾಗಲಿದೆ ಎಂಬ ನಂಬಿಕೆಯಿದೆ ಎಂದು ಹೇಳಿದರು.
ನಾಳೆ ಅಪರಾಹ್ನ 3 ಗಂಟೆಗೆ ಸಭೆ ನಡೆಯಲಿದ್ದು ಅದರಲ್ಲಿ ರಾಜ್ಯ ಮಟ್ಟದ ಸಾರಿಗೆ ಮುಖಂಡರು ಭಾಗಿಯಾಗಲಿದ್ದಾರೆ. ತಟ್ಟೆ, ಲೋಟ ಬಡಿಯುವ ಮೂಲಕ ವಿಭಿನ್ನ ರೀತಿಯಲ್ಲಿ ಚಳವಳಿ ನಡೆಸುತ್ತೇವೆ ಎಂದರು.
ವೇತನ ಹೆಚ್ಚಳಕ್ಕೆ ಆಗ್ರಹಿಸಿ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದು ಇಂದು 5ನೇ ದಿನಕ್ಕೆ ಕಾಲಿಟ್ಟಿದೆ. ಆದರೂ ಸರ್ಕಾರ ಕೇವಲ 2-3 ಕ್ಷೇತ್ರದಲ್ಲಿ ನಡೆಯುತ್ತಿರುವ ಚುನಾವಣೆಯನ್ನೇ ಪ್ರತಿಷ್ಠೆಯಾಗಿ ತೆಗೆದುಕೊಂಡು ನೌಕರರ ಮುಷ್ಕರದ ಬಗ್ಗೆ ಸಭೆ ಸೇರಿ ಚರ್ಚಿಸಲು ಸಿಎಂಗೆ 2ಗಂಟೆಯೂ ಸಮಯವಿಲ್ಲ ಎಂದು ಆಕ್ರೋಶ ಯಡಿಯೂರಪ್ಪ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಮುಷ್ಕರದಿಂದ ಹಿಂದೆ ಸರಿದಿದ್ದ ಸಾರಿಗೆ ನೌಕರರ ವಿವಿಧ ಸಂಘಟನೆಗಳು ಈಗ ಒಗ್ಗೂಡಿದ್ದು ನೌಕರರ ನ್ಯಾಯಯುತ ಬೇಡಿಕೆ ಈಡೇರಿಕೆ ಮಾಡುವಂತೆ ಸರ್ಕಾರಕ್ಕೆ ಚಾಟಿ ಬೀಸಲು ನಾಳೆ (ಏ.12) ತಟ್ಟೆ ಲೋಟದೊಂದಿಗೆ ನೌಕರರು ಮತ್ತು ಅವರ ಕುಟುಂಬದವರು ಮಡುತ್ತಿರುವ ಚಳವಳಿಯನ್ನು ಬೆಂಬಲಿಸಿವೆ ಎಂದು ಸ್ವತಃ ಸಂಘಟನೆಗಳ ಮುಖಂಡರೆ ಇಂದು ತಿಳಿಸಿದ್ದಾರೆ.
ನಮ್ಮ ಹೋರಾಟ ಇಂದು ನಿನ್ನೆಯದಲ್ಲ 1981ರಿಂದಲೂ ಇದೆ. ಆದರೆ ಅಂದಿನಿಂದಲೂ ಸರ್ಕಾರ ಮತ್ತು ಅಧಿಕಾರಿಗಳು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ನೌಕರರ ಬೇಡಿಕೆ ಈಡೇರಿಸುವಲ್ಲಿ ತಾರತಮ್ಯ ಮಾಡಿವೆ ಎಂದು ಕಿಡಿಕಾರಿದ್ದಾರೆ.
ಇನ್ನು ನಾಳಿನ ಚಳವಳಿ ತೀವ್ರ ಮಟ್ಟದಲ್ಲಿ ನಡೆಯಲಿದ್ದು, ಸರ್ಕಾರಕ್ಕೆ ಚಳಿ ಬಿಡಿಸಲಾಗುವುದು ಎಂದು ಹೇಳಿದ್ದಾರೆ. ಅಲ್ಲದೆ ಎಸ್ಮಾ ಜಾರಿ ಮಾಡಲು ಹೊರಟ ಎಷ್ಟೋ ಮಂತ್ರಿಗಳು ಭಸ್ಮವಾಗಿ ಹೋಗಿದ್ದಾರೆ. ಇನ್ನು ಇವರು ಮಾಡುತ್ತೇವೆ ಎಂದರೆ ಮುಂದೆ ಅದೇ ಹಾದಿ ಹಿಡಿಯುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.