ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡರು ನಿನ್ನೆ ಸಂಜೆ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತೀವ್ರ ಅಘಾತಕ್ಕೆ ಒಳಗಾಗಿದ್ದಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮೇಗೌಡರ ಸಾವು ಬರೀ ಸಾವಲ್ಲ, ಇವತ್ತಿನ ರಾಜಕಾರಣದ ಕೊಲೆ ಎಂದು ವಿಷಾದಿಸಿದ ವ್ಯಕ್ತಪಡಿಸಿದ್ದು, ನಮ್ಮಂಥ ರಾಜಕಾರಣಿಗಳ ತೆವಲುಗಳಿಗೆ ಸಜ್ಜನ ವ್ಯಕ್ತಿತ್ವದ ಧರ್ಮೇಗೌಡರು ಬಲಿಯಾಗಿದ್ದಾರೆ. ಇವತ್ತಿನ ಎಲ್ಲಾ ರಾಜಕಾರಣಿಗಳೂ ಈ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಹೇಳಿದರು.
ಧರ್ಮೇಗೌಡರ ತಂದೆ ಲಕ್ಷ್ಮಯ್ಯ 2004ರಲ್ಲಿ ಒಂದು ಮಾತು ಕೇಳಿದ್ದರು. ನಾನು ಕಣ್ಮುಚ್ಚುವುದರೊಳಗೆ ನನ್ನ ಮಗನನ್ನು ಮಂತ್ರಿಯಾಗಿ ನೋಡುವ ಆಸೆ ಇದೆ ಎಂದು ಆಸೆ ತೋಡಿಕೊಂಡಿದ್ದರು. ನಮಗೆ ಧರ್ಮೇಗೌಡ ಅರನ್ನು ಮಂತ್ರಿ ಮಾಡಲು ಆಗಲಿಲ್ಲ. ಎಂಎಲ್ಸಿ ಮಾಡಿ ಉಪಸಭಾಪತಿ ಮಾಡಿದೆವು. ಉಪಸಭಾಪತಿಯನ್ನಾಗಿ ಮಾಡಿದ್ದೇ ಅವರ ಸಾವಿಗೆ ಕಾರಣವಾಯಿತಾ ಎಂದು ಕಣ್ಣಾಲೆಗಳನ್ನು ತೇವ ಮಾಡಿಕೊಂಡರು.
ಧರ್ಮೇಗೌಡ ಮತ್ತು ಅವರ ಸಹೋದರ ಭೋಜೇಗೌಡ ಇಬ್ಬರೂ ಒಂದು ಹಂತದಲ್ಲಿ ಕಾಂಗ್ರೆಸ್ ಸೇರಲು ಹೊರಟಿದ್ದರು. ಕಾಂಗ್ರೆಸ್ ಸೇರಲು ಯೋಚಿಸಿರುವುದಾಗಿ ನನ್ನ ಬಳಿ ಬಂದು ಹೇಳಿದರು. ನಿಮಗೆ ಕುಮಾರಣ್ಣ ಬೇಕೆಂದರೆ ಉಳಿದುಕೊಳ್ಳಿ ಎಂದು ಹೇಳಿದ್ದೆ. ಆ ಒಂದು ಮಾತಿನಿಂದ ಅವರು ಜೆಡಿಎಸ್ ಪಕ್ಷದಲ್ಲಿ ಉಳಿದುಕೊಂಡರು ಎಂದು ಧರ್ಮೇಗೌಡರ ನಿಷ್ಠೆಯನ್ನು ಕುಮಾರಸ್ವಾಮಿ ನೆನಪಿಸಿಕೊಂಡರು.
ಸದನದಲ್ಲಿ ನಡೆದ ಗಲಾಟೆ ಪ್ರಕರಣದಿಂದ ಅವರು ಮನನೊಂದಿದ್ದರು. ಆ ಪ್ರಕರಣದಲ್ಲಿ ಧರ್ಮೇಗೌಡರ ಮೇಲೆಯೇ ದೋಷ ಹೊರಿಸೋಕೆ ಪ್ರಯತ್ನ ನಡೆದಿದೆಯಂತೆ. ಅದರಿಂದಲೂ ಅವರು ಮನನೊಂದು ಈ ರೀತಿ ಮಾಡಿಕೊಂಡರೋ ಗೊತ್ತಿಲ್ಲ. ಎಲ್ಲಾ ಸತ್ಯಾಂಶಗಳು ಹೊರಬರಬೇಕು ಎಂದು ಹೇಳಿದರು.
ಸಭಾಪತಿ ಪೀಠದಲ್ಲಿ ಕೂರಲು ಧರ್ಮೇಗೌಡ ಒಪ್ಪಿರಲಿಲ್ಲ. ನಾನೂ ಕೂಡ ಬೇಡ ಎಂದು ಹೇಳಿದ್ದೆ. ಆದರೂ ಒತ್ತಡ ಹಾಕಿ ಅವರನ್ನ ತಂದು ಕೂರಿಸಿದರು. ಮನಸ್ಸಿಲ್ಲದೆ ಅವರು ಪೀಠದ ಮೇಲೆ ಕೂತರು. ಆನಂತರ ಆದ ಘಟನೆ ನಿಮಗೆ ಗೊತ್ತಿದೆ. ನಮ್ಮ ನಮ್ಮ ಸ್ವಾರ್ಥಕ್ಕೆ ಇದು ಆಗಿದೆ. ಮುಂದಿನ ದಿನಗಳಲ್ಲಿ ಈ ರೀತಿ ಯಾರೂ ಕೂಡ ಯಾವುದೇ ವ್ಯಕ್ತಿಗಳ ಜತೆ ಚೆಲ್ಲಾಟ ಆಡಬಾರದು ಎಂದರು.