NEWSಕೃಷಿಬೆಂಗಳೂರು

ರಾಜ್ಯ ರಾಜಧಾನಿಯಲ್ಲಿ ರಾತ್ರಿಯಿಡೀ ಮಳೆ: ಮನೆಗಳು ಜಲಾವೃತ, ಧರೆಗುರುಳಿದ ಮರಗಳು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದ ರಾಜಧಾನಿಯಲ್ಲಿ ರಾತ್ರಿ ಇಡೀ ವ್ಯಾಪಕವಾಗಿ ಸುರಿದ ಮಳೆಯಿಂದಾಗಿ ಹಲವು ಕಡೆ ಸಮಸ್ಯೆಯಾಗಿದ್ದು, ಬಿಬಿಎಂಪಿ ಅಧಿಕಾರಿ ಸಮಸ್ಯೆಯಾಗಿರುವ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

ನಗರದಲ್ಲಿ ನಿನ್ನೆ ರಾತ್ರಿ 10 ಗಂಟೆಯಿಂದ ಇಂದು ಮುಂಜಾನೆ 6 ಗಂಟೆಯವರೆಗೆ ಸರಾಸರಿ 66 ಮಿ.ಮೀ ಮಳೆಯಾಗಿದೆ. ಅತಿ ಹೆಚ್ಚು ಕೆಂಗೇರಿಯಲ್ಲಿ 132 ಮಿ.ಮೀ, ಅತೀ ಕಡಿಮೆ ಗೊಟ್ಟಿಗೆರೆಯಲ್ಲಿ 32 ಮಿ.ಮೀ ಮಳೆಯಾಗಿದ್ದು, ನಗರದಲ್ಲಿ ವಲಯವಾರು ಮಳೆಯಾಗಿರುವ ವಿವರಗಳು ದಾಖಲಿಸಲಾಗಿದೆ.

ಮಹದೇವಪುರ ವಲಯ: * ಮಹದೇವಪುರ ವಲಯದಲ್ಲಿ ಸುಮಾರು 10 ಕಡೆ ಜಲಾವೃತವಾಗಿದ್ದು, ಪ್ರಮುಖವಾಗಿ ಸಾಯಿ ಲೇಔಟ್ ಪ್ರದೇಶವು ಸಂಪೂರ್ಣ ಜಲಾವೃತವಾಗಿದೆ. 6 ಟ್ರ್ಯಾಕ್ಟರ್, 2 ಜೆ.ಸಿ.ಬಿ, 35 ಸಿಬ್ಬಂದಿಗಳು, 3 ಅಗ್ನಿ ಶಾಮಕ ವಾಹನ, ಎಸ್.ಡಿ.ಆರ್.ಎಫ್ ತಂಡದಿಂದ 2 ಬೋಟ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಸ್ಥಳೀಯ ನಿವಾಸಿಗಳಿಗೆ ಉಪಾಹಾರ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ.

* ಮಾರತ್ತಹಳ್ಳಿಯ ದೀಪ ನರ್ಸಿಂಗ್ ಹೋಮ್, ಚಿನ್ನಪ್ಪನಹಳ್ಳಿ 5ನೇ ಕ್ರಾಸ್, ಪಣತ್ತೂರ್ ರೈಲ್ವೆ ಕೆಳಸೇತುವೆ, ಗ್ರೀನ್ ಹುಡ್, ಇಬ್ಬಲೂರು ಜಂಕ್ಷನ್, ಬಾಲಾಜಿ ಲೇಔಟ್ – ಕೊತ್ತನೂರು, ಎ. ನಾರಾಯಣಪುರದ ಕೃಷ್ಣ ನಗರ, ಸುನೀಲ್ ಲೇಔಟ್, ಹರಳೂರು, ಬಿ.ಎಸ್‌.ಪಿ ಲೇಔಟ್‌ನ ಕಸವನಹಳ್ಳಿ ಕಡೆಗಳಲ್ಲಿ ರಸ್ತೆಗಳ ಮಲೆ ನೀರು ಮತ್ತು ಮನೆಗಳಿಗೆ ನೀರು ನುಗ್ಗಿದೆ. ಪಾಲಿಕೆ ಸಿಬ್ಬಂದಿ ಈಗಾಗಲೇ ಕಾರ್ಯಾಚರಣೆ ನಡೆಸಿ ಬಹುತೇಕ ಕಡೆ ಸಮಸ್ಯೆ ಬಗೆಹರಿಸಿದ್ದಾರೆ.

ಪೂರ್ವ ವಲಯ: * ರಾಜಕಾಲುವೆಯಲ್ಲಿ ನೀರು ತುಂಬಿ ಹಿಮ್ಮುಖವಾಗಿ ಚಲಿಸಿದ ಪರಿಣಾಮ ಎಚ್.ಬಿ.ಆರ್ 5, 6, 7, 8ನೇ ಬ್ಲಾಕ್, ಬೈರಸಂದ್ರ ಲೇಔಟ್, ಕೆಂಪೇಗೌಡ ರಸ್ತೆ, ಕಾಮರಾಜ ನಗರ ಪ್ರದೇಶಗಳು ಜಲಾವೃತವಾಗಿವೆ. ನೀರು ಹೊರ ಹಾಕಲು ನಿರ್ವಹಣಾ ತಂಡಗಳು, 6 ಶಿಲ್ಟ್ & ಟ್ರ್ಯಾಕ್ಟರ್ ಗಳ ತಂಡಗಳು, 2 ಜೆ.ಸಿ.ಬಿ ಗಳು ಹಾಗೂ 10 ಪಂಪ್ ಗಳ ವ್ಯವಸ್ಥೆ ಮಾಡಿ ನೀರನ್ನು ಹೊರಹಾಕುವ ಕೆಲಸ ಮಾಡಲಾಗುತ್ತಿದೆ.

ಬೊಮ್ಮನಹಳ್ಳಿ ವಲಯ: * ಎಚ್.ಎಸ್.ಆರ್ ಲೇಔಟ್ 6 ಮತ್ತು 7ನೇ ಸೆಕ್ಟರ್ ಮತ್ತು ಬನ್ನೇರುಘಟಟ್ಟ ಬಿಳೇಕಲ್ಲಹಳ್ಳಿ ಸಿಗ್ನಲ್ ನ ರಸ್ತೆಯಲ್ಲಿ ನೀರು ನಿಂತಿರುವುದು, ಯಲಚೇನಹಳ್ಳಿಯಲ್ಲಿ ಮನೆಗಳಿಗೆ ನೀರು ನುಗ್ಗಿರುವುದನ್ನು ನಿರ್ವಹಣಾ ತಂಡ ಹಾಗೂ ಪಂಪ್‌ಗಳ ವ್ಯವಸ್ಥೆ ಮಾಡಿ ಸಮಸ್ಯೆ ಬಗೆಹರಿಸಲಾಗಿದೆ.

ದಕ್ಷಿಣ ವಲಯ: * ಕೆ-100, ಕೆ-200 ಬೃಹತ್ ನೀರುಗಾಲುವೆಗಳು ಸಂಪರ್ಕ ಕಲ್ಪಿಸುವ ಸ್ಥಳದಲ್ಲಿ ಅಗಲೀಕರಣ ಕಡಿಮೆ ಇರುವ ಪರಿಣಾಮ ನಿರಿನ ಹರಿವಿನ ಮಟ್ಟ ಹೆಚ್ಚಾಗಿ ಮಡಿವಾಳ ಡಾಲರ್ಸ್ ಕಾಲೋನಿ, ಕೋರಮಂಗಲದ 6ನೇ ಬ್ಲಾಕ್, ಈಜೀಪುರ ಪ್ರದೇಶಗಳು ಜಲಾವೃತವಾಗಿದೆ. ಈ ಸಂಬಂಧ ಬೆಳ್ಳಂದೂರು ಬಳಿ ಮಳೆ ನೀರಿನ ಹರಿವಿನ ಮಟ್ಟವನ್ನು ಕಡಿಮೆ ಮಾಡಲು ತಾತ್ಕಾಲಿಕವಾಗಿ ಜೆಸಿಬಿ ಮೂಲಕ ಬಂಡ್ ತೆರವುಗೊಳಿಸಿ ನೀರು ಸರಾಗವಾಗಿ ಹರಿದು ಹೋಗಲು ಅನುವು ಮಾಡಲಾಗಿದ್ದು, ಈ ಪ್ರದೇಶಗಳಲ್ಲಿ ಜಲಾವೃತ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತಿದೆ.

* ವೃಷಭಾವತಿ ವ್ಯಾಲಿ ಗಾಳಿ ಆಂಜನೇಯ ದೇವಸ್ಥಾನದ ಬಳಿ ಜಲಾವೃತವಾಗಿ ಮನೆಗಳಿಗೆ ನೀರು ನುಗ್ಗಿದ್ದು, ಸಮಸ್ಯೆ ಬಗೆಹರಿಸಲಾಗಿದೆ.

ಯಲಹಂಕ ವಲಯ: * ಚೌಡೇಶ್ವರಿ ನಗರದ ಅಟ್ಟೂರು ವ್ಯಾಪ್ತಿಯಲ್ಲಿ ಸುಮಾರು 15 ಮನೆಗಳಿಗೆ, ಡಿಫೆನ್ಸ್ ಲೇಔಟ್ ಹಾಗೂ ದ್ವಾರಕಾ ನಗರದಲ್ಲಿ ಸುಮಾರು 5 ಮನೆಗಳಿಗೆ ನೀರು ನುಗ್ಗಿದ್ದು, ಸದರಿ ಸ್ಥಳಗಳಲ್ಲಿ ಪಂಪ್ ಗಳನ್ನು ಅಳವಡಿಸಿ ನೀರು ತೆರವು ಮಾಡಲಾಗಿದೆ. ಇನ್ನು ಟಾಟಾ ನಗರ ಮುಖ್ಯರಸ್ತೆಯಲ್ಲಿ ನಿಂತಿದ್ದ ನೀರನ್ನು ತೆರವುಗೊಳಿಸಲಾಗಿದೆ.

ರಾಜಾರಾಜೇಶ್ವರಿ ನಗರ ವಲಯ: * ಐಡಿಯಲ್ಸ್ ಹೋಮ್ಸ್ 1ನೇ ಎ ಕ್ರಾಸ್ ವೃಷಭಾವತಿ ವ್ಯಾಲಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ಹಿಮ್ಮುಖವಾಗಿ ಚಲಿಸಿದ ಪರಿಣಾಮ 3 ಹಸು, 1 ಕರು ಹಾಗೂ 1 ಎಮ್ಮೆ ಸೇರಿ 5 ಜಾನುವಾರಗಳು ಮೃತಪಟ್ಟಿರುತ್ತವೆ. ಅಲ್ಲದೆ ಸುಮಾರು 12 ಮನೆಗಳಿಗೆ ನೀರು ನುಗ್ಗಿದ್ದು, ಸೈಡ್ ಡೈನ್ ಗಳನ್ನು ಸ್ವಚ್ಚಗೊಳಿಸಿ ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ.

* ವಿಜಯಶ್ರೀ ಬಡವಾಣೆ ಹೆಮ್ಮಿಗೆಪುರ ರಾಜಕಾಲುವೆಯಲ್ಲಿ ನೀರು ಹಿಮ್ಮುಖವಾಗಿ ಚಲಿಸಿದ ಪರಿಣಾಮ ಜಲಾವೃತವಾಗಿದ್ದು, ಪಾಲಿಕೆಯ ತಂಡ ನಿಯೋಜಿಸುವ ಮಾಡಿ ಸಮಸ್ಯೆ ಬಗೆಹರಿಸಲಾಗುತ್ತಿದೆ. ಕೆಂಗೇರಿ ಬಳಿಯ ಕೋಟೆ ಲೇಔಟ್ ನಲ್ಲಿ ಸುಮಾರು 100 ಮನೆಗಳಿಗೆ ನಿರು ನುಗ್ಗಿದ್ದು, 4 ಪಂಪ್‌ಗಳನ್ನು ಅಳವಡಿಸಿ ನೀರು ತೆರವು ಕಾರ್ಯ ಮಾಡಲಾಗುತ್ತಿದೆ.

ದಾಸರಹಳ್ಳಿ ವಲಯ: * ಕೆ.ಜಿ ಹಳ್ಳಿ, ಡಿಫೆನ್ಸ್ ಕಾಲೋನಿ, ಮೇಡರಹಳ್ಳಿಯ ಶ್ರೀದೇವಿ ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ನೀರನ್ನು ತೆರವುಗೊಳಿಸುವ ಕೆಲಸ ಮಾಡಲಾಗುತ್ತಿದೆ. ರುಕ್ಮಿಣಿ ನಗರ, ವಿದ್ಯಾನಗರ, ಬಿ.ಟಿ.ಎಸ್ ಲೇಔಟ್ ಗಳಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಪಂಪ್‌ಗಳನ್ನು ಅಳವಡಿಸಿ ನೀರು ತೆರವುಗೊಳಿಸಲಾಗಿದೆ.

ಪಶ್ಚಿಮ ವಲಯ: * ಕೆ.ಪಿ ಅಗ್ರಹಾರದಲ್ಲಿ ರಾಜಕಾಲುವೆಯಲ್ಲಿ ನೀರಿನ ಹರಿವಿನ ಮಟ್ಟ ಹೆಚ್ಚಾಗಿ 20 ಮನೆಗಳಿಗೆ ನೀರು ನುಗ್ಗಿದ್ದು, ಸದರಿ ಪ್ರದೇಶದಲ್ಲಿ 4 ಪಂಪ್‌ಗಳನ್ನು ಅಳವಡಿಸಿ ನೀರು ತೆರವು ಕಾರ್ಯ ಮಾಡಲಾಗುತ್ತಿದೆ.

ಧರೆಗುರುಳಿದ ಮರಗಳ ತೆರವು ಕಾರ್ಯಾಚರಣೆ: * ನಗರದಲ್ಲಿ ಧರೆಗುರುಳಿದ ಮರಗಳು, ರೆಂಬೆ/ಕೊಂಬೆಗಳು ತೆರವುಗೊಳಿಸಲು 30 ತಂಡಗಳನ್ನು ನಿಯೋಜಿಸಲಾಗಿದ್ದು, ರಾತ್ರಿ ಸುರಿದ ಮಳೆಯಿಂದಾಗಿ 27 ಮರಗಳು, 43 ಮರದ ರೆಂಬೆ/ಕೊಂಬೆಗಳು ಧರೆಗುರುಳಿದ್ದು, ಈಗಾಗಲೇ ಬಹುತೇಕ ಮರ, ಮರದ ರೆಂಬೆ/ಕೊಂಬೆಗಳನ್ನು ತೆರವುಗೊಳಿಸಲಾಗಿದೆ.

ನಾಗರಿಕರು ಸಹಾಯವಾಣಿ 1533 ಗೆ ಕರೆ ಮಾಡಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆಯಿಂದಾಗುವ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದಲ್ಲಿ ನಾಗರಿಕರು ಕೂಡಲೇ ಬಿಬಿಎಂಪಿ ಸಹಾಯವಾಣಿ ಸಂಖ್ಯೆಯಾದ 1533 ಗೆ ಕರೆ ಮಾಡಿ ಮಾಹಿತಿ ನೀಡಬಹುದು. ಅದಲ್ಲದೆ ಪಾಲಿಕೆ ಕೇಂದ್ರ ಕಛೇರಿ ಹಾಗೂ 8 ವಲಯಗಳಲ್ಲಿರುವ ನಿಯಂತ್ರಣ ಕೊಠಡಿಗಳ ಸಂಖ್ಯೆಗಳಿಗೆ ಕರೆ ಮಾಡಿ ದೂರು ನೀಡಲು ಕೋರಿದೆ.

ಯಲಹಂಕ ವಲಯದ ಎಲ್ಲ ಕೆರೆಗಳು ಭರ್ತಿ: ಯಲಹಂಕ ವಲಯ ವ್ಯಾಪ್ತಿಯಲ್ಲಿ 29 ಕೆರೆಗಳು ಬರಲಿದ್ದು, ಎಲ್ಲಾ ಕೆರೆಗಳು ಕೂಡ ಸಂಪೂರ್ಣವಾಗಿ ತುಂಬಿರುತ್ತವೆ. ಇನ್ನು ಪ್ರಮುಖವಾಗಿ ಚೌಡೇಶ್ವರಿ ಲೇಔಟ್ ವ್ಯಾಪ್ತಿಯಲ್ಲಿ 103 ಮಿ.ಮೀ ಮಳೆಯಾಗಿದ್ದರೂ ಕೂಡ ಕೇಂದ್ರೀಯ ವಿಹಾರ್ ಅಪಾರ್ಟ್ಮ್ಂಟ್ ನಲ್ಲಿ ಈ ಬಾರಿ ಯಾವುದೇ ರೀತಿಯ ಸಮಸ್ಯೆ ಆಗಿರುವುದಿಲ್ಲ. ರಮಣಶ್ರೀ ಕ್ಯಾಲಿಫೋರ್ನಿಯಾ ವ್ಯಾಪ್ತಿಯಲ್ಲಿಯೂ ಯಾವುದೇ ಜಲಾವೃತವಾಗಿರುವುದಿಲ್ಲ.

ವಲಯವಾರು ಹೆಚ್ಚು ಮಳೆಯಾಗಿರುವ ಪ್ರದೇಶಗಳ ವಿವರ:
* ರಾಜರಾಜೇಶ್ವರಿ ನಗರ ವಲಯದ ಕೆಂಗೇರಿಯಲ್ಲಿ 132 ಮಿ.ಮೀ
* ಯಲಹಂಕ ವಲಯದ ಚೌಡೇಶ್ವರಿ ನಗರದಲ್ಲಿ 103 ಮಿ.ಮೀ
* ದಕ್ಷಿಣ ವಲಯದ ಕೋರಮಂಗಲದಲ್ಲಿ 96 ಮಿ.ಮೀ
* ಮಹದೇವಪುರ ವಲಯದ ಎಚ್.ಎ.ಎಲ್ ವ್ಯಾಪ್ತಿಯಲ್ಲಿ 93 ಮಿ.ಮೀ.

* ದಾಸರಹಳ್ಳಿ ವಲಯದ ಬಾಗಲಗುಂಟೆ ವ್ಯಾಪ್ತಿಯಲ್ಲಿ 89 ಮಿ.ಮೀ
* ಪಶ್ಚಿಮ ವಲಯ ಕಾಟನ್ ಪೇಟೆ ವ್ಯಾಪ್ತಿಯಲ್ಲಿ 89 ಮಿ.ಮೀ
* ಪೂರ್ವ ವಲಯದ ಬಾಣಸವಾಡಿ ವ್ಯಾಪ್ತಿಯಲ್ಲಿ 85 ಮಿ.ಮೀ
* ಬೊಮ್ಮನಹಳ್ಳಿ ವಲಯದ ಎಚ್.ಎಸ್.ಆರ್ ಲೇಔಟ್ ನಲ್ಲಿ 73 ಮಿ.ಮೀ

Deva
the authorDeva

Leave a Reply

error: Content is protected !!