KSRTC ಪ್ರಮುಖ ಬೇಡಿಕೆಗಳ ಸರ್ಕಾರ ಇನ್ನೂ ನೌಕರರ ಶ್ರಮಕ್ಕನ್ವಯ ಇತ್ಯರ್ಥಪಡಿಸಿಲ್ಲ: ಜ್ಯೋತಿ ಅನಂತಸುಬ್ಬರಾವ್ ಅಸಮಾಧಾನ
ನನ್ನ ತಂದೆ ಅಗಲಿ ಏ.28ಕ್ಕೆ ಮೂರು ತಿಂಗಳುಗಳಾದವು ಆದರೂ ನಮ್ಮ ಸಾರಿಗೆ ನೌಕರರ ವೇತನ ಪರಿಷ್ಕರಣೆ ಮತ್ತು 38 ತಿಂಗಳ ವೇತನ ಹಿಂಬಾಕಿ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಸರ್ಕಾರ ಇನ್ನೂ ನೌಕರರ ಶ್ರಮಕ್ಕನ್ವಯ ಇತ್ಯರ್ಥಪಡಿಸಿಲ್ಲ ಎಂದು ಅನಂತಸುಬ್ಬರಾವ್ ಅವರ ಪುತ್ರಿ ಹಾಗೂ ಕೆಎಸ್ಆರ್ಟಿಸಿ ಸ್ಟಾಫ್ ಆ್ಯಂಡ್ ಫೆಡರೇಷನ್ ನೂತನ ಅಧ್ಯಕ್ಷರೂ ಆದ ಜ್ಯೋತಿ ಅನಂತಸುಬ್ಬರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ

ಬೆಂಗಳೂರು: ನನ್ನ ತಂದೆ ಕಾಮ್ರೇಡ್ ಎಚ್.ವಿ. ಅನಂತಸುಬ್ಬರಾವ್ ನಮ್ಮನ್ನಗಲಿ ಇಂದಿಗೆ ಮೂರು ತಿಂಗಳುಗಳಾದವು. ಜನವರಿ 29ರಂದು ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದ್ದ ಬೃಹತ್ ಹೋರಾಟದ ತಯಾರಿಯಲ್ಲಿದ್ದ ಅವರು ದಿಢೀರನೆ ಹೃದಯ ಸ್ತಂಭನಕ್ಕೆ ಒಳಗಾಗಿ ನಮ್ಮಿಂದ ಭೌತಿಕವಾಗಿ ದೂರವಾಗಿದ್ದಾರೆ.

ಅವರನ್ನು ತೀವ್ರವಾಗಿ ಕೊರೆಯುತ್ತಿದ್ದ ನಮ್ಮ ಸಾರಿಗೆ ನೌಕರರ ವೇತನ ಪರಿಷ್ಕರಣೆ ಮತ್ತು 38 ತಿಂಗಳ ವೇತನ ಹಿಂಬಾಕಿ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಸರ್ಕಾರ ಇನ್ನೂ ನೌಕರರ ಶ್ರಮಕ್ಕನ್ವಯ ಇತ್ಯರ್ಥಪಡಿಸಿಲ್ಲ ಎಂದು ಅನಂತಸುಬ್ಬರಾವ್ ಅವರ ಪುತ್ರಿ ಹಾಗೂ ಕೆಎಸ್ಆರ್ಟಿಸಿ ಸ್ಟಾಫ್ ಆ್ಯಂಡ್ ಫೆಡರೇಷನ್ ನೂತನ ಅಧ್ಯಕ್ಷರೂ ಆದ ಜ್ಯೋತಿ ಅನಂತಸುಬ್ಬರಾವ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಏ.29ರಂದು ಸಂಧಾನ ಮಾತುಕತೆಗೆ ಕೆಎಸ್ಆರ್ಟಿಸಿ ಆಡಳಿತ ವರ್ಗ ಸಚಿವರ ಅಧ್ಯಕ್ಷತೆಯಲ್ಲಿ ಜಂಟಿ ಕ್ರಿಯಾ ಸಮಿತಿಯನ್ನು ಕರೆದಿದೆ. ಕೆಎಸ್ಆರ್ಟಿಸಿ ಸ್ಟಾಫ್ ಆ್ಯಂಡ್ ಫೆಡರೇಷನ್ ಅಧ್ಯಕ್ಷರಾಗಿದ್ದ ಮತ್ತು ತಮ್ಮ ಬದುಕಿನ ಪ್ರತಿ ಕ್ಷಣವೂ ಸಾರಿಗೆ ಸಂಸ್ಥೆಯನ್ನೇ ಉಸಿರಾಡುತ್ತಿದ್ದ ನನ್ನೊಲವಿನ ತಂದೆಯೂ ಆಗಿದ್ದ ಕಾಮ್ರೇಡ್ ಎಚ್.ವಿ. ಅನಂತಸುಬ್ಬರಾವ್ ಅವರನ್ನು ಯಾವ ಗಳಿಗೆಯೂ ನಾವೂ ಮರೆಯಲಾಗದು ಎಂದಿದ್ದಾರೆ.
ಯಾರು ಏನೇ ಹೇಳಲಿ, ಅವರು ಸಾರಿಗೆ ನೌಕರರ ಹೋರಾಟದ ಇತಿಹಾಸದಲ್ಲಿ ಮಾತ್ರವಲ್ಲ, ಸಂಸ್ಥೆಯ ಸುದೀರ್ಘ ಚರಿತ್ರೆಯ ಪುಟಗಳಲ್ಲೂ ದಂತಕತೆಯಾಗಿ ಅಚ್ಚಳಿಯದೆ ಉಳಿಯಲಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ನನಗೆ ಪ್ರತಿ ತಿಂಗಳ 28ರ ಸಂಜೆ ಒಂದು ಕರಾಳ ರಾತ್ರಿಯಾಗಿ ಭಾಸವಾಗುತ್ತದೆ. ನನ್ನ ತಂದೆಯ ಪ್ರಾಮಾಣಿಕತೆ, ಸರಳತೆ, ಸಜ್ಜನಿಕೆ, ನಿರ್ಮಲ ಮತ್ತು ನಿಷ್ಕಲ್ಮಶ ಮನಸ್ಸು, ಸೈದ್ಧಾಂತಿಕ ಬದ್ಧತೆ, ನುಡಿದಂತೆ ನಡೆಯುವ ವ್ಯಕ್ತಿತ್ವ, ನಿಷ್ಠುರತೆ, ಶಿಸ್ತಿನ ಹಾಗೂ ಎಲ್ಲರನ್ನೂ ಪ್ರೀತಿಸುವ ಮಾನವೀಯ ಗುಣಗಳು ನಮ್ಮನ್ನು ರೂಪಿಸಿವೆ.
ಕಾಮ್ರೇಡ್ ಅನಂತಸುಬ್ಬರಾವ್, ಅಣ್ಣಾ, ನಿನ್ನನ್ನು ತುಂಬಾ… ತುಂಬಾ… ಮಿಸ್ ಮಾಡಿಕೊಳ್ಳುತ್ತಿದ್ದೇನೆ… ಪ್ರತಿ ಕ್ಷಣವೂ… ನಿನ್ನ ಕಾಯಕವೇ ನನ್ನದೂ… ಅದನ್ನು ಶ್ರದ್ಧೆಯಿಂದ ಮುಂದುವರೆಸುತ್ತೇನೆ ಎಂದು ಜ್ಯೋತಿ ಅನಂತಸುಬ್ಬರಾವ್ ಸಾಮಾಜಿಕ ಜಾಲತಾಣದ ಮೂಲಕ ಭರವಸೆಯ ಸ್ಫೂರ್ತಿದಾಯಕ ಆಶಯ ವ್ಯಕ್ತಪಡಿಸಿದ್ದಾರೆ.
Related









