ಕಟಾವುಮಾಡಿ ಕಣದಲ್ಲೇ ಬಿಟ್ಟಿದ್ದ 60 ಕ್ವಿಂಟಲ್ ಭತ್ತ ತಿಂದು ನಾಶ ಮಾಡಿದ ಆನೆಗಳು: ತಲೆಮೇಲೆ ಕೈಹೊತ್ತು ಕುಳಿತ ರೈತರು
ಹಾಸನ: ಬೆಳೆದು ನಿಂತಿದ್ದ ಭತ್ತವನ್ನು ಕಟಾವು ಮಾಡಿ ಗದ್ದೆಯಲ್ಲೇ ಚೀಲಕ್ಕೆ ತುಂಬಿಟ್ಟಿದ್ದ ಸುಮಾರು 60 ಕ್ವಿಂಟಲ್ ಭತ್ತವನ್ನು ಕಾಡಾನೆಗಳ ಹಿಂಡು ತಿಂದುಹಾಕಿ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟಮಾಡಿರುವ ಘಟನೆ ಬೇಲೂರು ತಾಲೂಕಿನ ದೇವಲಾಪುರದಲ್ಲಿ ನಡೆದಿದೆ.
ದೇವಲಾಪುರದ ನಿವಾಸಿ ಮನು, ಹೂವೇಗೌಡ, ಹಾಲೇಗೌಡ, ಹಿರಿಗೌಡ, ಶರತ್ ಹಾಗೂ ರಮೇಶ್ ಸೇರಿದಂತೆ 8 ಮಂದಿ ರೈತರು ಕಟಾವು ಮಾಡಿಟ್ಟಿದ್ದ ಭತ್ತವನ್ನು ಟ್ರ್ಯಾಕ್ಟರ್ ಮೂಲಕ ಸಾಗಿಸಲು ಸಿದ್ಧತೆ ನಡೆಸಿದ್ದರು. ಆದರೆ, ರಾತ್ರಿಯಾಗಿದ್ದರಿಂದ ಬೆಳಗ್ಗೆ ತೆಗೆದುಕೊಂಡು ಹೋಗೋಣವೆಂದು ಕಣದಲ್ಲೇ ಬಿಟ್ಟಿದ್ದರು.
ಆದರೆ, ತಡರಾತ್ರಿ 12 ಕಾಡಾನೆಗಳ ಹಿಂಡು ಕಣಗಳಿಗೆ ದಾಳಿ ಮಾಡಿ ಭತ್ತವನ್ನು ತಿಂದು ಹಾಕಿವೆ. ಅಲ್ಲದೇ ಉಳಿದ ಭತ್ತದ ಚೀಲಗಳನ್ನು ಚೆಲ್ಲಾಪಿಲ್ಲಿ ಮಾಡಿವೆ. ಅಂದಾಜು 3 ಲಕ್ಷ ರೂ. ಮೌಲ್ಯದ ಭತ್ತವನ್ನು ಗಜಪಡೆ ನಾಶ ಮಾಡಿವೆ ಎಂದು ಅಂದಾಜಿಸಲಾಗಿದೆ.
ಕಷ್ಟಪಟ್ಟು ಕಳೆದ 5 ತಿಂಗಳಿಂದ ಬೆಳೆಸಿ ಕಾಪಾಡಿಕೊಂಡು ಬಂದಿದ್ದ ಭತ್ತದ ಫಸಲನ್ನು ಕಳೆದುಕೊಂಡು ರೈತರು ಕಂಗಾಲಾಗಿದ್ದು, ಕಣ್ಣೀರಿಟ್ಟಿದ್ದಾರೆ. ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಅನ್ನದಾತರು ಆಗ್ರಹಿಸಿದ್ದಾರೆ. ಕಾಡಾನೆಗಳ ಹಾವಳಿಗೆ ಕಡಿವಾಣ ಹಾಕದ ಅರಣ್ಯ ಇಲಾಖೆ ಹಾಗೂ ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.