ಬೆಂಗಳೂರು: ರಾಜ್ಯ ಸರ್ಕಾರದ 5 ಮಹತ್ವದ ಗ್ಯಾರಂಟಿ ಗಳಲ್ಲಿ ಶಕ್ತಿ ಯೋಜನೆ ಕೂಡ ಒಂದು. ಕರ್ನಾಟಕದಲ್ಲಿ ಮಹಿಳೆಯರು ಸರ್ಕಾರಿ ಬಸ್ಗಳಲ್ಲಿ ಎಲ್ಲಿ ಬೇಕಾದರೂ ಉಚಿತವಾಗಿ ಪ್ರಯಾಣಿಸಬಹುದಾದ ಯೋಜನೆ ಇದಾಗಿದೆ.
ಶಕ್ತಿ ಯೋಜನೆ ಜಾರಿ ಆದಾಗಿನಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂಬ ಮಾತಿದೆ. ಆದರೆ ಈ ಮಾತನ್ನು CAG ವರದಿ ತಳ್ಳಿ ಹಾಕಿದ್ದು, ಬೇರೆನೆ ಕಾರಣ ಕೊಟ್ಟಿದೆ.
ಹೌದು! ಪ್ರಯಾಣ ದರ 2014ರಿಂದ ಹೆಚ್ಚಿಸದಿದ್ದಕ್ಕೆ 649.79 ಕೋಟಿ ರೂ.ಗಳು ಸಂಭಾವ್ಯ ಸಂಚಾರ ಆದಾಯ ಕಳೆದುಕೊಂಡಿದೆ. ಜತೆಗೆ ಕರ್ನಾಟಕ ಸರ್ಕಾರವು ಆರ್ಥಿಕ ನೆರವು ನೀಡದೆ ಇರುವುದರಿಂದ ಬೆಂಗಳೂರು ಮಹಾನಗರ ಸಾರಿಗೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಿಲ್ಲ ಎಂದು ತಿಳಿಸಿದೆ.,
ಅಲ್ಲದೆ ಇದು ಬಿಎಂಟಿಸಿ ಆರ್ಥಿಕವಾಗಿ ಕುಸಿಯಲು ಕಾರಣವಾಗಿದೆ ಎಂದು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರ ವರದಿ ಬಯಲು ಮಾಡಿದೆ.
ಸಿಎಜಿ ವರದಿ ಗುರುವಾರ ವಿಧಾನಸಭೆಯಲ್ಲಿ ಮಂಡನೆಯಾಯಿತು. ಹಿರಿಯ ನಾಗರೀಕರು, ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರ ಪ್ರಯಾಣಿಕರಿಗೆ ರಿಯಾಯಿತಿ ಬಸ್ ಪಾಸ್ಗೆ ರಾಜ್ಯ ಸರ್ಕಾರ ಅನುದಾನ ನೀಡುತ್ತಿರುವುದರಿಂದ ಬಿಎಂಟಿಸಿಗೆ ಆರ್ಥಿಕ ನೆರವು ನೀಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಬಿಎಂಟಿಸಿ ಆರ್ಥಿಕವಾಗಿ ಕುಸಿಯಲು ಇದು ಒಂದು ಕಾರಣವಾಗಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ರಿಯಾಯಿತಿ ಪಾಸ್ ಯೋಜನೆಗಳಲ್ಲಿ ಸರ್ಕಾರದ ಪಾಲು ಮರುಪಾವತಿಸಬೇಕು. ಬಿಎಂಟಿಸಿ ಘಟಕಗಳಲ್ಲಿ ಬಸ್ಗಳ ಸಮರ್ಪಕ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಇಂಜಿನ್, ಬ್ಯಾಟರಿ, ಬಿಡಿಭಾಗ ಕಾರ್ಯಕ್ಷಮತೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಇದನ್ನು ಸರಿಪಡಿಸಲು ಸರ್ಕಾರ ಬಿಎಂಟಿಸಿಗೆ ಕಾಲಕಾಲಕ್ಕೆ ಆರ್ಥಿಕ ಬೆಂಬಲ ನೀಡಬೇಕು ಎಂದು ಸಿಎಜಿ ವರದಿ ತಿಳಿಸಿದೆ.