- ಅನುಮತಿ ಇಲ್ಲದೆ ರಜೆ ಪಡೆದು ಕರ್ತವ್ಯಕ್ಕೆ ಗೈರಾದರೆ ಅಂತಹ ನೌಕರರ ವಿರುದ್ಧ ಶಿಸ್ತು ಕ್ರಮದ ಎಚ್ಚರಿಕೆ
ಬೆಂಗಳೂರು: ವೇತನ ಹೆಚ್ಚಳ, ವೇತನ ಹಿಂಬಾಕಿ ಪಾವತಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಇದೇ ಡಿ. 9ರಂದು ಬೆಳಗಾವಿ ಚಲೋ ನಡೆಸುತ್ತಿರುವುದರಿಂದ ಬಸ್ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಡಿ. 9ರಂದು ರಜೆ ತೆಗೆದುಕೊಳ್ಳದೆ ನೌಕರರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿಗಮಗಳು ಸೂಚಿಸಿವೆ.
ಕೆಎಸಾರ್ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಸಾರಿಗೆ ನೌಕರರು ವಿಧಾನಮಂಡಳ ಅಧಿವೇಶನ ಆರಂಭವಾಗುವ 9ರಂದು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಸಮಿತಿಯ ಪಪಾಧಿಕಾರಿಗಳು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಡಿ.8ರ ಭಾನುವಾರದಿಂದಲೇ ನೌಕರರು ಬೆಳಗಾವಿಗೆ ತೆರಳುವ ಸಾಧ್ಯತೆಗಳಿವೆ. ಇದರಿಂದಾಗಿ ಭಾನುವಾರ ಮತ್ತು ಸೋಮವಾರ ರಾಜ್ಯದಲ್ಲಿ ಬಸ್ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿವೆ. ಹೀಗಾಗಿ ಅನಿವಾರ್ಯ ಕಾರಣ ಹೊರತುಪಡಿಸಿ ಭಾನುವಾರ ಮತ್ತು ಸೋಮವಾರ ರಜೆ ತೆಗೆದುಕೊಳ್ಳದಂತೆ ನೌಕರರಿಗೆ ಸೂಚಿಸಿವೆ.
ಅಲ್ಲದೆ, ಅನುಮತಿ ಪಡೆಯದೇ ರಜೆ ಪಡೆದು ಕರ್ತವ್ಯಕ್ಕೆ ಗೈರಾದರೆ ಅಂತಹ ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ನಿಗಮಗಳು ನೀಡಿವೆ.