KSRTC: ಸಿಬ್ಬಂದಿಗಳಿಗೆ 38 ತಿಂಗಳ ಹಿಂಬಾಕಿ, ವೇತನ ಹೆಚ್ಚಳ ಮಾಡೋಕೆ ಹಣವಿಲ್ಲವೆನ್ನೋ ಸಚಿವರಿಗೆ ಅನಾವಶ್ಯ ಖರ್ಚು ಮಾಡೋಕೆ ಮಾತ್ರ ಹಣ ಎಲ್ಲಿಂದ ಬರುತ್ತೋ..!?

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತ ಸಾರಿಗೆ ಸಂಸ್ಥೆಯ ನೌಕರರಿಗೆ ವೇತನ ಹೆಚ್ಚಳದ ಹಿಂಬಾಕಿ ನೀಡೋಕೆ ನಷ್ಟ ತೋರಿಸುತ್ತಿರುವ ಸಂಸ್ಥೆ ಕೋಟಿ ಕೋಟಿ ಖರ್ಚು ಮಾಡಿ ಮಧುಗಿರಿ ವಿಭಾಗ (ಮಧುಗಿರಿ ಡಿವಿಜನ್) ಮಾಡುವುದಕ್ಕೆ ಉತ್ಸಾಹ ತೋರುತ್ತಿದೆ. ಇದಕ್ಕೆ ಮಾತ್ರ ವಹಣ ಎಲ್ಲಿಂದ ಬರುತ್ತದೆ ಸಾರಿಗೆ ಸಚಿವರೇ?

ಹೌದು! ತುಮಕೂರು ವಿಭಾಗದಿಂದ ಪ್ರತ್ಯೇಕವಾಗಿ ಮಧುಗಿರಿ ಡಿವಿಜನ್ ಮಾಡುವುದು ಅವಶ್ಯಕತೆ ಇದೆಯಾ… ಹಗಲು ರಾತ್ರಿ ಎನ್ನದೆ ದುಡಿಯುವ ನೌಕರರಿಗೆ ಸಂಬಳ ಕೊಡುವುದಕ್ಕೂ ಬಡವ ಆಗಿರುವ ಕೆಎಸ್ಆರ್ಟಿಸಿ ಸಂಸ್ಥೆ ಕೋಟಿ ಕೋಟಿ ಹಣ ಖರ್ಚು ಮಾಡಿ ಮಧುಗಿರಿ ಡಿವಿಜನ್ ಮಾಡುವುದಕ್ಕೆ ಸಾರ್ವಜನಿಕರ ತೆರಿಗೆ ಹಣವನ್ನು ಹೀಗೇ ಪ್ರಯೋಜನವಿಲ್ಲದ ಕಾರ್ಯಗಳಿಗೆ ಫೋಲು ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ..?
ತುಮಕೂರು ಜಿಲ್ಲಾಧಿಕಾರಿಗಳು 11 ತಾಲೂಕನ್ನು ನೋಡಿಕೊಳ್ಳುವುದಕ್ಕೆ ಯಾವುದೇ ತೊಂದರೆ ಇಲ್ಲ. ಆದರೆ ತುಮಕೂರು ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಏಳು ಘಟಕಗಳನ್ನು ನಿಯಂತ್ರಿಸಲಾಗದೆ ತತ್ತರಿಸುತ್ತಿದ್ದಾರೆ ಎಂದರೆ ಎಂತಹ ವಿಪರ್ಯಾಸ ನೋಡಿ.
ಇದನ್ನು ಈ ಸೌಲಭ್ಯಗಳ ಮಾಡಿಕೊಡಿ: ಮಾರ್ಗಗಳ ಮಧ್ಯೆ ಕೆಟ್ಟು ನಿಲ್ಲುವ ವಾಹನಗಳನ್ನು ಮೊದಲು ಸರಿಪಡಿಸಿ.. * ತುಮಕೂರು ವಿಭಾಗದಲ್ಲಿ ಉಳಿದ ತಾಲೂಕಿನಲ್ಲಿ ಘಟಕ ತೆರೆಯುವ ಕೆಲಸ ಮಾಡಿ.
ಈಗಿರುವ ವಾಹನ ನಿಲ್ದಾಣಗಳಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಿ. ಕುಡಿಯುವ ನೀರಿಲ್ಲದೆ ಪ್ರಯಾಣಿಕರು ನಿಲ್ದಾಣಗಳಲ್ಲಿ ಕಂಗಾಲಾಗಿದ್ದಾರೆ.
ಮೊದಲು ಇರುವ ಘಟಕಗಳನ್ನು ಅಭಿವೃದ್ಧಿ ಮಾಡಿ ಅವುಗಳಲ್ಲಿ ಸ್ವಚ್ಚತೆ ಕಾಪಾಡಿ. ಪ್ರಸ್ತುತ ಘಟಕಗಳಿಗೆ ಹೊಸ ವಾಹನಗಳನ್ನು ಖರೀದಿ ಮಾಡಿ, ಕೆಟ್ಟು ನಿಂತ ವಾಹನಗಳಿಂದ ಸಾರ್ವಜನಿಕರಿಗೆ ಮುಕ್ತಿಗೊಳಿಸಿ.
ಸಿಬ್ಬಂದಿಗಳಿಗೆ ಮೂಲಭೂತ ಸೌಲಭ್ಯಗಳನ್ನು ನೀಡಿ, ಜತೆಗೆ ಸಂಬಳ ಕೊಡಲು ಆರ್ಥಿಕ ನಷ್ಟದಲ್ಲಿ ಸಂಸ್ಥೆ ಇದೆ ಎಂದು ಹೇಳಿದ್ದೀರಾ ಅದನ್ನು ಸರಿಪಡಿಕೊಳ್ಳಿ. ಅದನ್ನು ಬಿಟ್ಟು ಇಂಥ ವ್ಯರ್ಥ ಕೆಲಸ ಮಾಡಲು ಸಂಸ್ಥೆಯಲ್ಲಿ ಕೋಟಿಗಟ್ಟಲೆ ಹಣ ಇದೆ ಎಂದು ವರದು ಕೊಡುವುದನ್ನು ನಿಲ್ಲಿಸಿ.
ಏನ್ರೀ ಸ್ವಾಮಿ…. ಮಾಡುವುದಕ್ಕೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಇದ್ದರೂ ಆ ಕಡೆ ಗಮನ ಹರಿಸದೆ ತುಮಕೂರಿಗೆ ಕೇವಲ 45 ಕಿಲೋಮೀಟರ್ ಅಂತರ ಇರುವ ಮಧುಗಿರಿಗೆ ಪ್ರತ್ಯೇಕ ವಿಭಾಗ ಕಚೇರಿ ತೆರೆಯಲು ಹೊರಟಿರುವ ನಿಮಗೆ ಜಿಲ್ಲೆಗೆ 70 ಕಿಲೋಮೀಟರ್ ಅಂತರ ಇರುವ ತಿಪಟೂರು ಕಣ್ಣಿಗೆ ಕಾಣುತ್ತಿಲ್ಲವೇ!!!
ಅಭಿವೃದ್ಧಿಯಲ್ಲಿ ಬೆಳವಣಿಗೆ ಕಂಡಿರುವ ಕುಣಿಗಲ್ ನೆನಪಿಗೆ ಬರುತ್ತಿಲ್ಲವೇ!!! ಅವಶ್ಯಕತೆ ಇರೋ ಕಡೆ ಗಮನ ಹರಿಸಿ ಸಾರ್ವಜನಿಕರ ತೆರಿಗೆ ಹಣವನ್ನು ಸದುಪಯೋಗ ಪಡಿಸಿ ಅದನ್ನು ಬಿಟ್ಟು ಯಾವುದೇ ಪ್ರಯೋಜನ ಇಲ್ಲದ ಕೆಲಸಗಳಿಗೆ ಸಾರ್ವಜನಿಕರ ತೆರಿಗೆ ಹಣವನ್ನು ವ್ಯಯ ಮಾಡಬೇಡಿ.
ನಮ್ಮ ತುಮಕೂರು ವಿಭಾಗಕ್ಕೆ ಬೇಕಾಗಿರುವುದು ಇನ್ನೊಂದು ವಿಭಾಗದ ಕಚೇರಿ ಅಲ್ಲ ಬದಲಿಗೆ ಇರುವ ಘಟಕಗಳ ಅಭಿವೃದ್ಧಿ ಮತ್ತು ಇರುವ ವಾಹನ ನಿಲ್ದಾಣಗಳಲ್ಲಿ ಮೂಲಭೂತ ಸೌಕರ್ಯಗಳು.
ಆದರೆ ಅಭಿವೃದ್ಧಿಯ ಕಡೆ ಒಲವು ಇಲ್ಲದೆ ವಿಭಾಗದ ಕಚೇರಿ ತೆರೆಯುವ ಕಡೆ ಉತ್ಸಾಹ ತೋರಿಸುತ್ತಿರುವ ಹಿಂದಿನ ಮರ್ಮವಾದರೂ ಏನೂ? ಮಧುಗಿರಿಗೆ ಬೇಕಾಗಿರೋದು ಕೆಎಸ್ಆರ್ಟಿಸಿ ವಿಭಾಗ ಅಲ್ಲ, ಮಧುಗಿರಿ ಅಭಿವೃದ್ಧಿ ಕಾರ್ಯಗಳು.
ಎಲ್ಲಾ ಇಲಾಖೆಯನ್ನು ನಿಭಾಯಿಸುತ್ತಿರುವ ಜಿಲ್ಲಾಧಿಕಾರಿಗಳಿಗೇ ಇಲ್ಲದ ತೊಂದರೆ ಕೇವಲ ಸಾರಿಗೆ ಸಂಸ್ಥೆಯ ಒಂದೇ ವಿಭಾಗವನ್ನು ನೋಡಿಕೊಳ್ಳಲಾಗುತ್ತಿಲ್ಲ.. ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸಮಸ್ಯೆ ಆಗುತ್ತಿದೆ ಎಂದು ಒಡೆಯಲು ಹೊರಟಿರುವ ನಿಮ್ಮ ನಡೆಗೆ ನಾವು ಏನು ಹೇಳಬೇಕು.
ಸಾರ್ವಜನಿಕರ ಆಗ್ರಹ ಏನು?: ಒಂದು ವಿಭಾಗವು ಕಾರ್ಯಾಚರಣೆಗೊಳ್ಳಬೇಕಾದರೆ ಸುಮಾರು ನೂರು ಜನ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಅವಶ್ಯಕತೆ ಇದ್ದು ಅವರ ಪ್ರತಿ ತಿಂಗಳ ಸಂಬಳ ಹಾಗೂ ಸವಲತ್ತುಗಳು ಅವಶ್ಯಕತೆಗಾಗಿ ಒಂದು ಕೋಟಿಗೂ ಅಧಿಕ ಹಣ ವ್ಯಯವಾಗುತ್ತದೆ. ಒಂದು ವಿಭಾಗದ ಕಾರ್ಯ ಚಟುವಟಿಕೆಯಿಂದ ಪ್ರತಿ ವರ್ಷ ಹತ್ತರಿಂದ ಹದಿನೈದು ಕೋಟಿಗಳು ಸಂಸ್ಥೆಗೆ ಆರ್ಥಿಕ ಹೊರೆ ಉಂಟಾಗುತ್ತದೆ.
ಪ್ರಸ್ತುತ ವಿಭಾಗ ಅದರ ರಚನೆ ಮಾಡಲು ಕಟ್ಟಡ ಯಂತ್ರೋಪಕರಣಗಳು ಜಾಗ ಪೀಠೋಪಕರಣಗಳು ತಾಂತ್ರಿಕ ಸಿಬ್ಬಂದಿಯ ಸಲಕರಣೆಗಳು ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ವಾಹನಗಳ ಸೌಲಭ್ಯ ಎಲ್ಲ ಅಂದಾಜು 50 ರಿಂದ 100 ಕೋಟಿ ಖರ್ಚಾಗುವ ಸಂಭವವಿದೆ. ಈ ವಿಭಾಗದಿಂದ ಸಂಸ್ಥೆಗೆ ಯಾವುದೇ ರೀತಿಯ ಹೆಚ್ಚಿನ ಆದಾಯ ಬರುವ ನಿರೀಕ್ಷೆ ಇಲ್ಲ.
ಶಿರ, ಮಧುಗಿರಿ ಹಾಗೂ ಪಾವಗಡಗಳಿಂದ ಸುಮಾರು 200 ಮಾರ್ಗಗಳು ಕಾರ್ಯಾಚರಣೆಗೊಳ್ಳುತ್ತಿವೆ. ಇದು ಯಾವುದೇ ರೀತಿಯ ಹೆಚ್ಚಿನ ಕರ್ತವ್ಯದ ಒತ್ತಡ ವಿಭಾಗ ಕಚೇರಿಗೆ ಉಂಟಾಗಲು ಸಾಧ್ಯವಿಲ್ಲ. ಈ ಹಿಂದೆ ಕೇಂದ್ರ ವಿಭಾಗದ ಕೆಲವು ಘಟಕಗಳಲ್ಲಿ 200 ಮಾರ್ಗಗಳು ಕಾರ್ಯಾಚರಣೆಗೊಳ್ಳುತ್ತಿದ್ದವು. ಆ ಸಂದರ್ಭದಲ್ಲಿ ಅಲ್ಲಿನ ಆಡಳಿತವನ್ನು ಕೇಂದ್ರೀಯ ವಿಭಾಗದ ವಿಭಾಗ ನಿಯಂತ್ರಣಾಧಿಕಾರಿಗಳೇ ನಿಯಂತ್ರಿಸುತ್ತಿದ್ದರು.
ಪ್ರಸ್ತುತ ಬಿಎಂಟಿಸಿ ಯಲ್ಲಿ ಹತ್ತಕ್ಕೂ ಹೆಚ್ಚು ಘಟಕಗಳಿಗೆ ಒಂದು ವಿಭಾಗವಿದ್ದು ಒಬ್ಬರೇ ವಿಭಾಗೀ ನಿಯಂತ್ರಣಾಧಿಕಾರಿಗಳು ನಿಭಾಯಿಸುತ್ತಾರೆ. ಇಲ್ಲಿನ ಏಳು ಘಟಕಗಳಿಗೆ ಒಬ್ಬ ನಿಯಂತ್ರಣಾಧಿಕಾರಿಗಳು ನಿರ್ವಹಿಸಲು ಸಾಧ್ಯವಿರುವ ಅಂತಹ ಸಂದರ್ಭದಲ್ಲಿಯೂ ಸಹ ಮಧುಗಿರಿ ವಿಭಾಗ ಕೆಎಸ್ಆರ್ಟಿಸಿ ಸಂಸ್ಥೆಯಲ್ಲಿ ಕೇವಲ ಸಾರಿಗೆ ಏಳು ಘಟಕಗಳನ್ನು ನಿರ್ವಹಿಸಲು ಕಷ್ಟವೆಂಬುದು ತುಂಬಾ ಆಶ್ಚರ್ಯಕರವಾಗುತ್ತಿದೆ.
ಪ್ರಸ್ತುತ ಕೆಎಸ್ಆರ್ಟಿಸಿಯ ವ್ಯವಸ್ಥಾಪಕ ನಿರ್ದೇಶಕರು ಮಧುಗಿರಿ ತಾಲೂಕಿನ ಸ್ಥಳೀಯರಾಗಿದ್ದು ಅವರು ಆ ವಿಭಾಗವನ್ನು ರಚಿಸಲು ಉತ್ಸಾಹಕರಾಗಿದ್ದಾರೆ ಏಕೆ? ಅಲ್ಲಿನ ಸ್ಥಳಿಯ ರಾಜಕಾರಣಿಗಳು ಸರ್ಕಾರ ಹಾಗೂ ಸಾರಿಗೆ ಮಂತ್ರಿಗಳ ಮೇಲೆ ಪ್ರಭಾವ ಬೀರಿ ವಿಭಾಗ ರಚಿಸಲು ಮುಂದಾಗಿದ್ದಾರೆಯೇ? ಆದರೆ ಇದರಿಂದ ಸಂಸ್ಥೆಗೆ ಕೋಟ್ಯಂತರ ರೂ.ನಷ್ಟ ಆರ್ಥಿಕ ಹೊರೆಯನ್ನು ಇವರು ಬರಿಸುತ್ತಾರೆಯೇ?
ವಿಭಾಗ ಮಾಡಿದರೆ ಯಾವುದೇ ರೀತಿಯ ಲಾಭಗಳಿಲ್ಲ. ಇಲ್ಲಿ ನೂರಕ್ಕೂ ಹೆಚ್ಚು ಜನ ಸಿಬ್ಬಂದಿಗಳು ನೇಮಕವಾದರೂ ಸಹ ಅವರಿಂದ ಸಂಸ್ಥೆಗೆ ಆರ್ಥಿಕ ನಷ್ಟ ಹೊರತು ಯಾವುದೇ ರೀತಿಯ ಆರ್ಥಿಕ ಲಾಭಗಳಿಲ್ಲ. ವಿಭಾಗ ಕಚೇರಿ ಮಧುಗಿರಿಯಲ್ಲಿ ಆಗಲಿ ಎಂಬುದಕ್ಕಾಗಿ ಯಾವುದೇ ಕೆಎಸ್ಆರ್ಟಿಸಿ ಸಿಬ್ಬಂದಿಗಳಾಗಲಿ ಅಥವಾ ಸಾರ್ವಜನಿಕರಾಗಲಿ ಸರ್ಕಾರ ಮಟ್ಟದಲ್ಲಿ ಹಾಗೂ ಸಂಸ್ಥೆಯ ಮಟ್ಟದಲ್ಲಿ ಯಾವುದೇ ರೀತಿಯ ಮನವಿ ಸಲ್ಲಿಸಿಲ್ಲ.. ಇನ್ನು ಕೆಲವು ಕಡೆ ಘಟಕಗಳ ನಿರ್ಮಾಣಕ್ಕಾಗಿ ಸಾರ್ವಜನಿಕರು ಮನವಿ ಸಲ್ಲಿಸುತ್ತಿದ್ದು ಇದರಿಂದ ಹಳ್ಳಿಗಳಿಗೆ ಮಾರ್ಗಗಳನ್ನು ನಿಯೋಜಿಸಲು ಅನುಕೂಲವಾಗುತ್ತದೆ.
ಆದರೆ ವಿಭಾಗೀಯ ಕಚೇರಿಯಿಂದ ಶೇಕಡ 95 ರಷ್ಟು ಕೆಎಸ್ಆರ್ಟಿಸಿ ಸಿಬ್ಬಂದಿಗಳ ಕೆಲಸ ಕಾರ್ಯಗಳನ್ನು ನಿರ್ವಹಿಸುವುದನ್ನು ಹೊರತುಪಡಿಸಿ ಸಾರ್ವಜನಿಕರಿಗೆ ಇದರಿಂದ ಕೇವಲ ಶೇಕಡ ಐದರಷ್ಟು ಮಾತ್ರ ಕೆಲಸ ಕಾರ್ಯಗಳಿರುತ್ತದೆ. ವಿಭಾಗಿಯ ಕಚೇರಿ ಸಾರ್ವಜನಿಕರಿಗೆ ಯಾವುದೇ ರೀತಿಯ ಉತ್ತಮ ಕೆಲಸ ಮಾಡಲು ಅವಕಾಶಗಳಿರುವುದಿಲ್ಲ. ಮಾರ್ಗಗಳನ್ನು ನಿಯೋಜಿಸುವುದು ಘಟಕಗಳ ಕೆಲಸವಾಗಿದ್ದು ಘಟಕಗಳಿಂದಲೇ ನಿರ್ವಹಿಸುವ ಕೆಲಸಕ್ಕಾಗಿ ಖರ್ಚು ಮಾಡಿ ವಿಭಾಗೀಯ ಕಚೇರಿ ಪ್ರಾರಂಭಿಸುವುದು ಅವಶ್ಯಕತೆ ಇಲ್ಲ.
ಮಧುಗಿರಿ ಘಟಕದಲ್ಲಿಯೇ ಕುಡಿಯುವ ನೀರಿಲ್ಲ: ಸಾರಿಗೆ ಸಂಸ್ಥೆಯಲ್ಲಿ ಸಿಬ್ಬಂದಿಗಳಿಗೆ ಮೂಲಭೂತ ಸೌಕರ್ಯಗಳ ಕೊರತೆಯಿದ್ದು ಮಧುಗಿರಿ ಘಟಕದಲ್ಲಿಯೇ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಇದರಿಂದ ಸಿಬ್ಬಂದಿಗಳು ತುಂಬಾ ತೊಂದರೆ ಪಡುತ್ತಿದ್ದಾರೆ. ರಾಜ್ಯದ ವಿವಿಧ ಘಟಕಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿಲ್ಲ. ಹೀಗಾಗಿ ಸಿಬ್ಬಂದಿಗಳು ಬದಲಿ ವ್ಯವಸ್ಥೆ ಮಾಡಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಸಾರಿಗೆ ಸಿಬ್ಬಂದಿಗಳು ರಾತ್ರಿ ತಂಗೂವ ಸ್ಥಳಗಳಲ್ಲಿ ಶೌಚಾಲಯ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳು ಇಲ್ಲದೆ ಪರದಾಡುತ್ತಿದ್ದಾರೆ.
ಅದು ಸಹ ಅಲ್ಲದೆ ಸಾರ್ವಜನಿಕರಿಗಾಗಿ ನಿರ್ಮಿಸಿರುವ ಬಸ್ ನಿಲ್ದಾಣಗಳಲ್ಲಿ ಹೆಚ್ಚಿನ ಕಡೆ ಕುಡಿಯುವ ನೀರಿನ ವ್ಯವಸ್ಥೆ ಸರಿ ಇಲ್ಲ. ಈ ರೀತಿಯ ಮೂಲಭೂತ ಸೌಕರ್ಯಗಳಿಗೆ ಸಂಸ್ಥೆ ಹೆಚ್ಚಿನ ಹಣವನ್ನು ಖರ್ಚು ಮಾಡಿದರೆ ಅದು ಪ್ರಯೋಜನವಾಗುತ್ತದೆ. ಅದರ ಬದಲಾಗಿ ಈ ರೀತಿ ವೆಚ್ಚ ಮಾಡಿ ವಿಭಾಗಿಯ ಕಚೇರಿಗಳನ್ನು ನಿರ್ಮಿಸಲು ಹೊರಟರೆ ಸಾರ್ವಜನಿಕರ ಹಣ ಪೋಲಾಗುತ್ತದೆ.
ಈ ಎಲ್ಲ ಅಂಶಗಳನ್ನು ಪರಿಶೀಲಿಸಿ ಸರ್ಕಾರ ಹಾಗೂ ಸಾರಿಗೆ ಸಚಿವರು ವಿಭಾಗಿಯ ಕಚೇರಿ ಪ್ರಾರಂಭಿಸಿ ಸಾರ್ವಜನಿಕ ಹಣ ಪೋಲಾಗುವುದನ್ನು ತಪ್ಪಿಸಬೇಕು. ಆ ಬಗ್ಗೆ ಕೆ ಎಸ್ ಆರ್ ಟಿ ಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಕ್ತ ರೀತಿಯ ಸೂಚನೆ ನೀಡಬೇಕು ಎಂದು ಜಿಲ್ಲೆಯ ಲೋಕೇಶ್ ಎಂಬುವರು ಮನವಿ ಮಾಡಿದ್ದಾರೆ.
Related









