KSRTC ತುಮಕೂರು ಡಿಸಿಗೆ ಲಂಚ ಸಂಗ್ರಹ ಆರೋಪ: ಸಂಬಂಧಿಕರ ಫೋನ್ ಪೇ ಬಳಸಿ ಸಿಕ್ಕ ಬಿದ್ದ ನೌಕರ ಆತ್ಮಹತ್ಯೆಗೆ ಯತ್ನ- ಪಾರು
ಕೆಎಸ್ಆರ್ಟಿಸಿ ತಿಪಟೂರು ಸಾರಿಗೆ ಘಟಕದಲ್ಲಿ ಹಿರಿಯ ಶೀಘ್ರಲಿಪಿಗಾರರಾಗಿರುವ ( ಆಪ್ತ ಸಹಾಯಕ) ನವೀನ್ ಎಂಬುವರೆ ಕಳೆದ ಗುರುವಾರ ಸಂಸ್ಥೆಯ ತುಮಕೂರು ವಿಭಾಗೀಯ ಕಚೇರಿಯಲ್ಲಿ ಆತ್ಮಹತ್ಯೆಗೆ ಯತ್ನಸಿದ್ದವರು.

ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರನೊಬ್ಬ ನಗರದ ಸಾರಿಗೆಯ ಡಿಸಿ ಕಚೇರಿಯ ಶೌಚಾಲಯದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಲಂಚಾರೋಪದಡಿ ತನಿಖೆ ಎದುರಿಸುತ್ತಿರುವ ಈತ ಹಿರಿಯ ಅಧಿಕಾರಿಗಳ ಕಿರುಕುಳದಿಂದ ಮಾನಸಿಕವಾಗಿ ಭಾರಿ ನೋವು ಅನುಭವಿಸಿದ್ದು, ಮತ್ತೆ ಅಧಿಕಾರಿಗಳು ಕಿರುಕುಳ ಮುಂದುವರಿಸಿದ್ದರಿಂದ ಈ ನಿರ್ಧಾರ ತೆಗೆದುಕೊಂಡಿದ್ದರು ಎನ್ನಲಾಗುತ್ತಿದೆ.
ಕೆಎಸ್ಆರ್ಟಿಸಿ ತಿಪಟೂರು ಸಾರಿಗೆ ಘಟಕದಲ್ಲಿ ಹಿರಿಯ ಶೀಘ್ರಲಿಪಿಗಾರರಾಗಿರುವ ( ಆಪ್ತ ಸಹಾಯಕ) ನವೀನ್ ಎಂಬುವರೆ ಕಳೆದ ಗುರುವಾರ ಸಂಸ್ಥೆಯ ತುಮಕೂರು ವಿಭಾಗೀಯ ಕಚೇರಿಯಲ್ಲಿ ಆತ್ಮಹತ್ಯೆಗೆ ಯತ್ನಸಿದ್ದವರು.
ಇಲ್ಲಿ ನನಗೆ ಕಿರುಕುಳ ನೀಡಲಾಗುತ್ತಿದೆ ಎಂದು ತನ್ನ ಆಪ್ತರ ಬಳಿ ಹೇಳಿಕೊಂಡು , ಈ ಕಿರುಕುಳ ಸಹಿಸಿಕೊಳ್ಳಲಾಗುತ್ತಿಲ್ಲ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುದೊಂದೆ ನನಗಿರುವ ದಾರಿ ಎಂದು ಹೇಳಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಇನ್ನು ಈ ಎಲ್ಲದರ ಬಗ್ಗೆ ಯೋಚಿಸಿದ ಬಳಿಕ ಆತ್ಮಹತ್ಯೆ ಪ್ರಯತ್ನ ನಡೆಸಿದ್ದಾರೆ. ಸಹಕಾಲಕ್ಕೆ ನವೀನ್ ಕುಟುಂಬದವರು ಹಾಗೂ ವಿಭಾಗದ ಭದ್ರತಾ ಶಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರಿಂದ ಸದ್ಯ ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಆತ್ಮಹತ್ಯೆಗೆ ಯತ್ನಕ್ಕೆ ಕಾರಣ ಏನು?: ಪ್ರಸ್ತುತ ತಿಪಟೂರು ಘಟಕದಲ್ಲಿ ಸಿಬ್ಬಂದಿ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ನವೀನ್ ಅವರು ಆತ್ಮಹತ್ಯೆಗೆ ಪ್ರಯತ್ನಿಸಿರುವುದಕ್ಕೆ ಬಲವಾದ ಕಾರಣವೂ ಇದೆ.
ಈ ನವೀನ್ ವಿರುದ್ಧ ಲಂಚಾರೋಪದಡಿ ವಿಚಾರಣೆ ನಡೆಯುತ್ತಿದ್ದು ಕೋಟ್ಯಂತರ ರೂಪಾಯಿ ಹಣವನ್ನು ಫೋನ್ ಪೇ ಮುಖಾಂತರ ತಮ್ಮ ಸಂಬಂಧಿಕರ ಖಾತೆಗೆ ಹಾಕಿಸಿಕೊಂಡಿರುವ ದೂರು ಬಂದಿದೆ. ಈ ವಿಚಾರಣೆಯಲ್ಲಿ ವಿಭಾಗೀಯ ನಿಯಂತ್ರಣ ಅಧಿಕಾರಿ ಚಂದ್ರಶೇಖರ್ ಅವರಿಗೆ ನೀಡಲು ಈ ಲಂಚ ಪಡೆದಿರುವುದಾಗಿ ನವೀನ್ ತನಿಖಾಧಿಖಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಆದರೆ ವಿಚಾರಣಾಧಿಕಾರಿಗಳಾದ ದಾವಣಗೆರೆ ಭದ್ರತಾ ಮತ್ತು ಜಾಗೃತಾಧಿಕಾರಿ ಅವರು ಅದಕ್ಕೆ ಆಸ್ಪದ ನೀಡದೆ ಪೂರ್ತಿ ಹಣಕಾಸು ವ್ಯವಹಾರವನ್ನು ನಾನೇ ನನ್ನ ಸ್ವಂತಕ್ಕೆ ನಡೆಸಿರುವುದಾಗಿ ಹೇಳಿಕೆ ನೀಡಬೇಕು ಎಂದು ಒತ್ತಡ ಹಾಕಿದ್ದರು. ಅದಕ್ಕೆ ಸ್ಪಂದಿಸದಿದ್ದಾಗ ನವೀನ್ ವಿರುದ್ಧ ಇನ್ನಷ್ಟು ಒತ್ತಡ ಹೇರಿದ್ದರು. ಹೀಗಾಗಿ ಮಾನಸಿಕವಾಗಿ ನೊಂದು ಈ ನಿರ್ಧಾರಕ್ಕೆ ಬಂದಿದ್ದರು ಎಂಬ ಬಗ್ಗೆ ಆರೋಪ ಕೇಳಿ ಬಂದಿದೆ.
ಇಲ್ಲಿ ನವೀನ್ ತಮ್ಮ ಸಂಬಂಧಿಕರ ಫೋನ್ ಪೇ ಬಳಸಿ ನೌಕರರಿಂದ ಹಣ ಸಂಗ್ರಹಿಸಿರುವುದು ಬೆಳಕಿಗೆ ಬಂದಿದೆ. ಆದರೆ, ಈತ ತುಮಕೂರು ಡಿಸಿಗೆ ಆ ಸಂಗ್ರಹಿಸಿದ್ದ ಹಣವನ್ನು ವರ್ಗಾವಣೆ ಮಾಡಿರುವ ಬಗ್ಗೆ ಯಾವುದೇ ದಾಖಲೆ ಈವರೆಗೂ ಲಭ್ಯವಾಗಿಲ್ಲ. ಹೀಗಾಗಿ ತನಿಖಾಧಿಕಾರಿಗಳು ಇದಕ್ಕೆ ದಾಖಲೆ ಒದಗಿಸು ಎಂದು ಕೇಳಿದ್ದಾರೆ. ಇಲ್ಲ ನಾನು ನಗದು ರೂಪದಲ್ಲಿ ಆ ಲಂಚದ ಹಣವನ್ನು ಡಿಸಿಗೆ ತಲುಪಿಸಿದ್ದೇನೆ ಎಂಬ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇಲ್ಲಿ ನಿಜವಾಗಲು ಲಂಚ ಪಡೆದವರು ಯಾರು ಎಂಬುದರ ಬಗ್ಗೆ ಈಗ ಪ್ರಾಮಾಣಿಕವಾಗಿ ತನಿಖೆ ನಡೆದರೆ ಲಂಚ ಕೋರರು ಯಾರು ಎಂಬುವುದು ಸಾಬೀತಾಗುತ್ತದೆ. ಜತೆಗೆ ಭ್ರಷ್ಟರಿಗೆ ಕಾನೂನಾತ್ಮಕವಾಗಿ ಶಿಕ್ಷೆ ನೀಡುವುದಕ್ಕೂ ಸಾಕ್ಷ್ಯ ಒದಗಿಸಿದಂತಾಗುತ್ತದೆ ಎಂದು ಪ್ರಜ್ಞಾವಂತ ನೌಕರರು ಹೇಳುತ್ತಿದ್ದಾರೆ.
Related









