- ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜಕೀಯದಲ್ಲಿ ಹೊಸ ಬದಲಾವಣೆ ತರಬೇಕು ಎಂದು ಪ್ರವೇಶ ಮಾಡಿರುವ ನಮಗೆ ವಿಧಾನ ಪರಿಷತ್ ಉಪಸಭಾಪತಿ ಧರ್ಮೇಗೌಡ ಅವರ ಆತ್ಮಹತ್ಯೆ ಸುದ್ದಿ ನಿಜಕ್ಕೂ ಆಘಾತಕಾರಿ ಎಂದು ಆಮ್ ಆದ್ಮಿ ಪಕ್ಷ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಸಂತಾಪ ಸೂಚಿಸಿದ್ದಾರೆ.
ವಿಧಾನ ಪರಿಷತ್ನಲ್ಲಿ ಇತ್ತೀಚೆಗೆ ನಡೆದ ಕೋಲಾಹಲದ ಕಾರಣಕ್ಕೆ ಧರ್ಮೇಗೌಡರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದು ನಿಜವೇ ಆಗಿದ್ದರೆ ನಿಜಕ್ಕೂ ಇದು ಅತ್ಯಂತ ಕರಾಳ ಹಾಗೂ ಇಡೀ ರಾಜ್ಯದ ಎಲ್ಲಾ ರಾಜಕಾರಣಿಗಳು ತಲೆ ತಗ್ಗಿಸುವಂತಹ ವಿಚಾರ. ಇಂತಹ ಕೆಟ್ಟ ಘಟನೆಗೆ ಯಾರು ಹೊಣೆ? ಇದು ರಾಜಕಾರಣ ಮಾತನಾಡುವ ಹೊತ್ತಲ್ಲ, ಒಂದು ಜೀವದ ಪ್ರಶ್ನೆ ಎಂದಿದ್ದಾರೆ.
ರಾಜಕಾರಣದಲ್ಲೂ ಅತ್ಯಂತ ಸೂಕ್ಷ್ಮ ಮನಸ್ಸಿನ ವ್ಯಕ್ತಿಗಳಿದ್ದಾರೆ ಎನ್ನುವುದಕ್ಕೆ ಇದೇ ನಿದರ್ಶನ. ಇಂತಹ ಘಟನೆಗಳಿಂದ ಹೊಸಬರು, ಯುವ ಜನಾಂಗದಲ್ಲಿ ರಾಜಕೀಯಕ್ಕೆ ಬರಬೇಕೆ ಬೇಡವೇ ಎನ್ನುವ ಜಿಜ್ಞಾಸೆ ಮೂಡುವುದಂತು ನಿಜ. ಈ ಹೊತ್ತಿನಲ್ಲಿ ಎಲ್ಲಾ ಪಕ್ಷದ ರಾಜಕಾರಣಿಗಳ ಜವಾಬ್ದಾರಿ ಹೆಚ್ಚಿದೆ. ಇಂತಹ ಘಟನೆ ಮರುಕಳಿಸದಂತಹ ವಾತಾವರಣ ನಿರ್ಮಿಸುವುದು ನಮ್ಮಗಳ ಮುಂದಿರುವ ಸವಾಲು ಎಂದು ಪತ್ರಿಕೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಂತಹ ಸಂಕಷ್ಟದ ಸಮಯದಲ್ಲಿ ಧರ್ಮೇಗೌಡರ ಕುಟುಂಬದ ಜತೆ ಆಮ್ ಆದ್ಮಿ ಪಕ್ಷ ಇರುತ್ತದೆ ಎಂದು ದಾಸರಿ ಹೇಳಿದ್ದಾರೆ.