ವಿಜಯಪಥ ಸಮಗ್ರ ಸುದ್ದಿ
ಬೆಳಗಾವಿ: ಸಾರಿಗೆ ನೌಕರರು 6ನೇ ವೇತನ ಆಯೋಗ ಶಿಫಾರಸ್ ನಮಗೂ ಜಾರಿ ಮಾಡಿ ಎಂಬ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಇಂದು ಬೆಳಗಾವಿಯಲ್ಲಿ ಸಾರಿಗೆ ನೌಕರರ ಸಭೆಯನ್ನು ನಗರ ಹೋಟೆಲ್ ಒಂದರಲ್ಲಿ ಮಧ್ಯಾಹ್ನ 12 ಗಂಟೆಗೆ ಕರೆದಿದ್ದು, ಈ ಹಿನ್ನೆಲೆಯಲ್ಲಿ ಅವರು ಆ ಖಾಸಗಿ ಹೋಟೆಲ್ ನಲ್ಲಿ ಇದ್ದ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
ಈ ವೇಳೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್ ಇದು ದಮನಕಾರಿ, ಈ ರೀತಿ ನಡೆದುಕೊಂಡರೆ ಮುಂದೆ ಪಶ್ಚಾತಾಪ ಪಡಬೇಕಾಗುತ್ತದೆ ಎಂದು ಪೊಲೀಸರು ಮತ್ತು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ನನ್ನ ಬಂಧನಕ್ಕೆ ಪೊಲೀಸರು ಸಕಾರಣ ನೀಡಿಲ್ಲ, ಇದು ಅಕ್ರಮವಾಗಿ ಬಂಧಿಸಲಾಗಿದೆ. ಇದು ಸರಿಯಲ್ಲ ಇದರ ಫಲವನ್ನು ಮುಂದೆ ಸರ್ಕಾರ ಮತ್ತು ಅಧಿಕಾರಿಗಳು ಅನುಭವಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಬಂಧನವನ್ನು ಖಂಡಿಸಿರುವ ನೌಕರರ ಮತ್ತು ಜನರು ಇದೇನು ಸರ್ಕಾರ ಪ್ರಜಾಪ್ರಭುತ್ವದಡಿ ಆಡಳಿತ ನಡೆಸುತ್ತಿದೆಯೋ ಅಥವಾ ಹಿಟ್ಲರ್ ಸರ್ಕಾರ ಇದೆಯೋ ಎಂದು ಕಿಡಿಕಾರಿದ್ದಾರೆ.