ವಿಜಯಪಥ ಸಮಗ್ರ ಸುದ್ದಿ
ಚಿಕ್ಕಮಗಳೂರು: 6ನೇ ವೇತನ ಆಯೋಗ ಶಿಫಾರಸು ನಮಗೂ ಜಾರಿ ಮಾಡಿ ಎಂಬ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಕಳೆದ ಮೂರು ದಿನದಿಂದ ನಡೆಸುತ್ತಿರುವ ಹೋರಾಟಕ್ಕೆ ಚಿಕ್ಕಮಗಳೂರಿನ ಸಾರಿಗೆ ನೌಕರರ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಬೆಂಬಲಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಸಾರಿಗೆ ನೌಕರರ ಸಮಸ್ಯೆಗಳನ್ನು ಬಹಳ ಹತ್ತಿರದಿಂದ ಗಮನಿಸಿ ನಮ್ಮನ್ನು ಬೆಂಬಲಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಇದೇ ರೀತಿ ಸಾರ್ವಜನಿಕರು, ವಿದ್ಯಾರ್ಥಿಗಳು, ಜನಪ್ರತಿನಿಧಿಗಳು ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಬೇಕು ನೌಕರರು ಕೇಳಿಕೊಂಡಿದ್ದಾರೆ.
ಈ ವೇಳೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಪೊಲೀಸರು ಬಂಧಿಸಿದ್ದನ್ನು ಖಂಡಿಸಿದ್ದಾರೆ. ಇಂದು ಬೆಳಗಾವಿಯಲ್ಲಿ ಸಾರಿಗೆ ನೌಕರರ ಸಭೆಯನ್ನು ನಗರ ಹೋಟೆಲ್ ಒಂದರಲ್ಲಿ ಕರೆಯಲಾಗಿತ್ತು. ಅದಕ್ಕಾಗಿ ಖಾಸಗಿ ಹೋಟೆಲ್ ಹೋಗಿ ಅವರಿದ್ದ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು.
ಕೋಡಿಹಳ್ಳಿ ಚಂದ್ರಶೇಖರ್ ಅವರ ಬಂಧನವನ್ನು ಖಂಡಿಸಿರುವ ನೌಕರರ ಕುಟುಂಬದವರು ಇದೇನು ಸರ್ಕಾರ ಪ್ರಜಾಪ್ರಭುತ್ವದಡಿ ಆಡಳಿತ ನಡೆಸುತ್ತಿದೆಯೋ ಅಥವಾ ಹಿಟ್ಲರ್ ಸರ್ಕಾರ ಇದೆಯೋ ಎಂದು ಕಿಡಿಕಾರಿದ್ದಾರೆ. ಅಲ್ಲದೇ ಇಂಥ ಗೊಡ್ಡು ಬೆದರಿಕೆಗಳಿಗೆಲ್ಲ ನಾವು ಜಗ್ಗುವುದಿಲ್ಲ ಎಂಬ ಎಚ್ಚರಿಕೆಯನ್ನು ಸಿಎಂ ಯಡಿಯೂರಪ್ಪ ಮತ್ತು ಸಾರಿಗೆ ಸಚಿವ ಸವದಿ ಅವರಿಗೂ ನೀಡಿದ್ದಾರೆ.
ನಾವು ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೆ ಅತ್ತ ನೀವು ಉಪಚುನಾವಣೆ ಪ್ರಚಾರದಲ್ಲಿ ನಿರತರಾಗಿದ್ದೀರಿ ಇದು ನಿಮಗೆ ಸರಿ ಎನಿಸುತ್ತಿದೆಯೇ, ಮೊದಲು ನಿಮ್ಮ ಇಲಾಖೆಯಲ್ಲಿ ಇರುವ ಸಮಸ್ಯೆ ಸರಿದೂಗಿಸಿ ಅಮೇಲೆ ಪ್ರಚಾರಕ್ಕೆ ಹೋಗಿ ಎಂದು ಕಿಡಿಕಾರಿದ್ದಾರೆ.