ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮವನ್ನು ಖಾಸಗೀಕರಣ ಮಾಡುವ ಉದ್ದೇಶವೇನಾದರೂ ರಾಜ್ಯ ಸರ್ಕಾರಕ್ಕೆ ಇದ್ದರೆ ಆ ಆಲೋಚನೆ ಕೈಬಿಡಿ ಎಂದು ಶಾಸಕರು ಆಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಇನ್ನೊಬ್ಬ ಮುಖಂಡರಾದ ಎಚ್ಎಂ ರೇವಣ್ಣ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಿಗೆ ಇಲಾಖೆ ನೌಕರರ ಬೇಡಿಕೆಗಳ ಪೈಕಿ ಯಾವುದು ಆಗುತ್ತದೆ, ಯಾವುದು ಆಗುವುದಿಲ್ಲವೆಂದು ಸರ್ಕಾರ ಸ್ಪಷ್ಟವಾಗಿ ಹೇಳಬೇಕಿತ್ತು. ಆದರೆ ನೋಡೋಣ ಮಾಡೋಣ ಎಂದು ಹೇಳಿದ್ದರಿಂದ ಇದು ಹೀಗಾಗಿದೆ ಈಗ ಬೀದಿಗಿಳಿದು ಹೊರಾಟ ಮಾಡುತ್ತಿರುವ ನೌಕರರ ಬೇಡಿಕೆ ಈಡೇರಿಸಬೇಕು. ಅದನ್ನು ಬಿಟ್ಟು ಮಲತಾಯಿ ಧೋರಣೆ ಅನುಸರಿಸುವುದು ಸರಿಯಲ್ಲ ಎಂದು ಹೇಳಿದರು.
ಮುಷ್ಕರನಿರತ ನೌಕರರನ್ನು ಕರೆದು ಮಾತನಾಡಬೇಕು. ಮುಖ್ಯಮಂತ್ರಿ ತಂದೆ ಇದ್ದಂತೆ ನೌಕರರು ಮಕ್ಕಳಿದ್ದಂತೆ. ಬೇಡಿಕೆಗಳನ್ನು ಈಡೇರಿಸಲು ಆಗಲ್ಲ ಎಂದಾದರೆ, ಅದನ್ನು ಹೇಳಬೇಕು. ಆರನೇ ವೇತನ ಆಯೋಗದ ಪ್ರಕಾರ ಕೊಡುತ್ತೇವೆ ಎಂದು ಹೇಳಿದ ಸರ್ಕಾರ ಈಗ ಮಾತು ತಪ್ಪುತ್ತಿರುವುದು ಏಕೆ. ಈ ಮೊದಲೇ ಆಗಲ್ಲ ಅಂತ ಹೇಳಬೇಕಿತ್ತು. ಇನ್ನು ಸರ್ಕಾರ ಪ್ರತಿಷ್ಠೆ ಬಿಟ್ಟು ನೌಕರರ ಜೊತೆ ಮಾತುಕತೆ ನಡೆಸಲಿ ಎಂದು ಸಲಹೆ ನೀಡಿದರು.
ಎಸ್ಆರ್ಟಿಸಿ ನೌಕರರು ಸರಕಾರಿ ನೌಕರನಾಗಿ ಮಾಡಿ ಅಂತ ಬೇಡಿಕೆ ಮುಂದಿಟ್ಟಾಗಲೇ ಆಗಲ್ಲ ಎಂದು ಹೇಳಬೇಕಿತ್ತು. ಆದರೆ ನೋಡೋಣ ಮಾಡೋಣ ಅಂದರು. 6ನೇ ವೇತನ ಆಯೋಗದ ಅನ್ವಯ ಮಾಡುತ್ತೇವೆ ಎಂದು ಭರವಸೆ ನೀಡಿ ಈಗ ಆಗಲ್ಲ ಎಂದರೆ ಹೇಗೆ? ಇನ್ನು ಕೆಎಸ್ಆರ್ಟಿಸಿ ಮುಳುಗುತ್ತಿರುವ ಹಡಗು ಎಂದು ಸಚಿವರು ಹೇಳಿರುವುದು ಸರಿಯಲ್ಲ, ಅದೇಗೆ ಮುಳುಗುತ್ತಿರುವ ಹಡಗು ಆಗುತ್ತದೆ ಎಂದು ಪ್ರಶ್ನಿಸಿದರು.
ಖಾಸಗಿಯವರು ಲಾಭ ಇದ್ದರೆ ಮಾತ್ರ ಬಸ್ ಓಡಿಸುತ್ತಾರೆ. ಆದರೆ ಸಾರಿಗೆ ಇಲಾಖೆ ಹಾಗಲ್ಲ. ಇಲ್ಲಿ ಶೇಕಡ 40ರಷ್ಟು ಬಸ್ಸುಗಳಿಂದ ನಷ್ಟವಾಗುತ್ತದೆ. ಆದರೂ ಜನರ ಅನುಕೂಲಕ್ಕಾಗಿ ನಡೆಸಬೇಕಾಗುತ್ತದೆ ಎಂದರು
ರೇವಣ್ಣ ಮಾತನಾಡಿ, ಕಳೆದ ಬಾರಿ ಸಾರಿಗೆ ನೌಕರರು ಮುಸ್ಕರ ನಡೆಸಿದಾಗಲೇ ಈ ಸಮಸ್ಯೆಯನ್ನು ಬಗೆಹರಿಸಬಹುದಿತ್ತು. ಆದರೆ ಹಠಮಾರಿ ಮುಖ್ಯಮಂತ್ರಿ, ಅನನುಭವಿ ಸಚಿವರಿಂದ ಇಂಥ ಸ್ಥಿತಿ ನಿರ್ಮಾಣವಾಗಿದೆ. ಕೆಎಸ್ಆರ್ಟಿಸಿ ಇರಬಾರದು ಎನ್ನುವುದು ಬಿಜೆಪಿ ಅವರವರ ಚಿಂತನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್ಮಾ ಪೂಜಾರಿ ಮಾಡುತ್ತೇವೆ, ಪ್ರಮಾಣ ಪತ್ರ ಕೊಡಿ ಎಂದೆಲ್ಲಾ ಕೇಳುವ ಬದಲು ಮಾತುಕತೆ ನಡೆಸಲು ಸಿಎಂ ಮುಂದಾಗಬೇಕು. ಈಶ್ವರಪ್ಪನವರ ಇಲಾಖೆಯ ಹಣ ಕೊಡಲು ಮುಖ್ಯಮಂತ್ರಿಗೆ ಸಾಧ್ಯವಿದೆ. ಕೆಎಸ್ಆರ್ಟಿಸಿ ನೌಕರರ ಸಮಸ್ಯೆ ಬಗೆಹರಿಸಲು ಆಗುವುದಿಲ್ಲವೇ ಎಂದು ಕಿಡಿಕಾರಿದ್ದಾರೆ.
ಎಲ್ಲಾ ವಿಚಾರಗಳಲ್ಲೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗೊಂದಲ ಮೂಡಿಸುತ್ತಿದ್ದಾರೆ. ನಷ್ಟದಲ್ಲಿರುವ ಸಂಸ್ಥೆಯಾದ ನೌಕರರಿಗೆ 6ನೇ ವೇತನ ಆಯೋಗ ಮಾಡಲು ಆಗಲ್ಲ ಅಂತ ಹೇಳಬೇಕಿತ್ತು. ಖಾಸಗಿ ಬಸ್ ಓಡಿಸಿ ಅನ್ನೋದು, ಒಂದು ಸರ್ಕಾರ ಹೇಳುವ ಮಾತು. ವಿಮೆ ಇಲ್ಲದಿದ್ದರೂ ಓಡಿಸಿ ಅಂತಾರೆ. ಅಂದರೆ ಉದ್ದೇಶವೇನು, ಅಪಘಾತ ಸಂಭವಿಸಿದರೆ ಯಾರು ಹೊಣೆ ಎಂದು ಕಿಡಿಕಾರಿದರು
ಸಾರಿಗೆ ಸಚಿವರಿಗೆ ಇಲಾಖೆ ನಡೆಸುವ ಸಾಮರ್ಥ್ಯ ಇಲ್ಲ ಇಂದಿನ ಸಾರಿಗೆ ಸಚಿವರನ್ನು ಕರೆದು ಮಾತನಾಡಲಿ. ಸರ್ವಪಕ್ಷ ಸಭೆ ಕರೆಯಲಿ ಎಂದು ಸಲಹೆ ನೀಡಿದರು. ಇನ್ನು ಇಷ್ಟೆಲ್ಲಾ ಆದರೂ ಸಾರಿಗೆ ನೌಕರರು ಬೀದಿಗಿಳಿದು ಹೋರಾಟ ಮಾಡುತ್ತಿದ್ದರೂ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ. ಈ ಬಗ್ಗೆ ಕಣ್ಣುತೆರೆದು ನೌಕರರ ಸಮಸ್ಯೆಯನ್ನು ಆಲಿಸಬೇಕು ಎಂದು ಆಗ್ರಹಿಸಿದರು.