ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಆರನೇ ದಿನವೂ ಮುಂದುವರಿದಿದ್ದು, ಇಂದು ತಟ್ಟೆ ಲೋಟ ಬಡಿಯುವ ಚಳವಳಿ ಮಾಡಿದ್ದಾರೆ. ಈ ವೇಳೆ ಹಲವರನ್ನು ಬಂಧಿಸಿದ ಪೊಲೀಸರು ನಂತರ ಬಿಡುಗಡೆ ಮಾಡಿದ್ದಾರೆ.
ಇನ್ನು ನಾಳಿನ (ಏ.13) ರೂಪುರೇಷೆ ಬಗ್ಗೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ನಾಳೆ ಚಂದ್ರಮಾನ ಯುಗಾದಿಯಂದು ನೌಕರರಿಗೆ ಮಾರ್ಚ್ ವೇತನ ಕೊಡದಿರವುದಕ್ಕೆ ತಟ್ಟಿ ಹಿಡಿದು ಭಿಕ್ಷೆ ಬೇಡುವ ಚಳವಳಿ ಮಾಡಲಾಗುವುದು. ಜತೆಗೆ ಮಾರ್ಚ್ ತಿಂಗಳ ವೇತನ ಬಿಡುಗಡೆ ಮಾಡದಿರುವುದಕ್ಕೆ ರಾಜ್ಯದ ಎಲ್ಲಾ ಬಸ್ ಡಿಪೋಗಳ ಘಟಕ ವ್ಯವಸ್ಥಾಪಕರ ವಿರುದ್ಧ ನೌಕರರು ಎಫ್ಐಆರ್ ದಾಖಲಿಸಲಿದ್ದಾರೆ ಎಂದು ತಿಳಿಸಿದರು.
ಇನ್ನು ಕಾನೂನು ಪ್ರಕಾರ ಒಬ್ಬ ಪೊಲೀಸ್ ವಾಹನ ಓಡಿಸುವ ಚಾಲಕರು, ಹೈ ಕೋರ್ಟ್ಗಳ ವಾಹನ ಓಡಿಸುವ ಚಾಲಕರಿಗಿಂತ ಶೇ.32 ರಷ್ಟು ಕಡಿಮೆ ವೇತನ ನೀಡುತ್ತಿದ್ದೀರಿ. ಅವರಂತೆ ನಾವು ವಾಹನಗಳನ್ನು ಚಾಲನೆ ಮಾಡುತ್ತಿಲ್ಲವೆ. ಅವರು ಓಡಿಸುವುದು ಕಾರುಗಳಂತಹ ವಾಹನಗಳು ನಾವು ಓಡಿಸುವುದು ಭಾರಿ ವಾಹನಗಳು, ಅವರಿಗಿಂತ ಹೆಚ್ಚು ಸಮಯ ಕುಳಿತು ಓಡಿಸುತ್ತೇವೆ. ಆದರೂ ನಮಗೆ ಕಡಿವೆ ವೇತನ. ಇದು ಸರಿಯಾದ ಕ್ರಮವಲ್ಲ, ನಮಗೂ ಸರಿಸಮ ವೇತನ ಕೊಡಬೇಕು ಎಂದು ಆಗ್ರಹಿಸಿದರು.
ಮಾಡಿರುವ ಕೆಲಸಕ್ಕೂ ನೀವು ವೇತನವನ್ನು ಇನ್ನೂ ಬಿಡುಗಡೆ ಮಾಡಿಲ್ಲ ಎಂದರೆ ನೀವೆ ಕಾನೂನನ್ನು ಉಲ್ಲಂಘಿಸಿದ್ದೀರಿ, ಇನ್ನು ಕೊರೊನಾ ಜಾಗೃತಿ ವಹಿಸಿ ಅಂತರ ಕಾಯ್ದುಕೊಂಡು ಚಳವಳಿ ನಡೆಸುತ್ತಿದ್ದರೆ ನಮ್ಮನ್ನು ನೀವು ಗೊಬ್ಬರಂತೆ ಒಟ್ಟುಹಾಕಿಕೊಂಡು ಎಳೆದುಕೊಂಡು ಹೋಗುತ್ತೀರಿ ಇದು ಕೊರೊನಾ ನಿಯಮದ ವೈಲೇಷನ್ ಆಗುವುದಿಲ್ಲ ಎಂದು ಪ್ರಶ್ನಿಸಿದರು.
ಇನ್ನು ಕೆಲ ನೌಕರರು ತಮ್ಮನ್ನು ಒತ್ತಾಯಪೂರ್ವಕವಾಗಿ ಕೆಲಸಕ್ಕೆ ಕರೆಸಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ. ಈ ರೀತಿ ಸರ್ಕಾರ ನಡೆಸಿಕೊಳ್ಳುವುದು ಸರಿಯಲ್ಲ. ನೀವು ಕೊಟ್ಟ ಮಾತಿನಂತೆ ಬೇಡಿಕೆ ಈಡೇರಿಸಿ ಇಲ್ಲದಿದ್ದರೆ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.