ಬೆಂಗಳೂರು: ಪತ್ನಿ ಹಾಗೂ ಪತ್ನಿ ತಂದೆಯ ಅಂದರೆ ಮಾನನ ಕಿರುಕುಳದಿಂದ ಮಾನಸಿಕವಾಗಿ ಭಾರಿ ನೋವು ಅನುಭವಿಸಿದ ಹೆಡ್ಕಾನ್ಸ್ಟೇಬಲ್ ಒಬ್ಬರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜ್ಯದ ರಾಜಧಾನಿಯಲ್ಲಿ ನಡೆದಿದೆ.
ಹುಳಿಮಾವು ಪೊಲೀಸ್ ಠಾಣೆಯಲ್ಲಿ ಹೆಡ್ಕಾನ್ಸ್ಟೇಬಲ್ ಎಚ್.ಸಿ.ತಿಪ್ಪಣ್ಣ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಪೊಲೀಸ್. ಮೃತದೇಹವನ್ನು ಸಿವಿ ರಾಮನ್ ನಗರ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಘಟನೆ ಸಂಬಂಧ ಬೈಯ್ಯಪ್ಪನಹಳ್ಳಿ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಿಪ್ಪಣ್ಣ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಹೆಡ್ಕಾನ್ಸ್ಟೇಬಲ್ ಆಗಿದ್ದರು. ಹೆಂಡತಿ ಹಾಗೂ ಮಾವನ ಕಿರುಕುಳ ತಾಳಲಾರದೆ ನಿನ್ನೆ ರಾತ್ರಿ ಬೈಯ್ಯಪ್ಪನಹಳ್ಳಿ ರೈಲ್ವೇ ನಿಲ್ದಾಣಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೂ ಮುನ್ನ ಬರೆದ ಪತ್ರದಲ್ಲೇನಿದೆ?: ನಾನು ನನ್ನ ಹೆಂಡತಿಯ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಹೆಂಡತಿಯ ತಂದೆಯಾದ ಯಮುನಪ್ಪ ಇವನು ನನಗೆ ಜೀವ ಬೆದರಿಕೆ ಹಾಕಿರುತ್ತಾನೆ.
ಅಲ್ಲದೆ ಡಿ.12 ರಂದು ದೂರವಾಣಿ ಕರೆ ಮಾಡಿ ಕೂಡ ಬೆದರಿಕೆ ಹಾಕಿರುತ್ತಾನೆ. ಬೆಳಗ್ಗೆ ನಾನು ಕಾಲ್ ಮಾಡಿದಾಗಲೂ ಕೂಡ, ‘ನೀನು ಸತ್ತು ಹೋಗು ನನ್ನ ಮಗಳು ಚೆನ್ನಾಗಿರುತ್ತಾಳೆ’ ಎಂದು ಹೇಳಿ ಅವಾಚ್ಯ ಪದಗಳಿಂದ ಬೈದಿದ್ದಾನೆ ಎಂದು ಡೆತ್ನೋಟ್ ಬರೆದಿದ್ದಾರೆ.