ನಮ್ಮಜಿಲ್ಲೆಸಂಸ್ಕೃತಿ

ಬೀಡನಹಳ್ಳಿ: ವಿಜೃಂಭಣೆಯಿಂದ ನೆರವೇರಿದ ಶ್ರೀನಂದಿಬಸವೇಶ್ವರ ಸ್ವಾಮಿ 13ನೇ ಕೊಂಡೋತ್ಸವ

ವಿಜಯಪಥ ಸಮಗ್ರ ಸುದ್ದಿ

ಬನ್ನೂರು: ಹೋಬಳಿಯ ಬೀಡನಹಳ್ಳಿ ಗ್ರಾಮದ ಧರ್ಮಕ್ಷೇತ್ರ  ಶ್ರೀ ನಂದಿಬಸವೇಶ್ವರ ಸ್ವಾಮಿಯ 13ನೇ ಕೊಂಡ ಮಹೋತ್ಸವ ಸೋಮವಾರ ಮಾ.3ರ ಮುಂಜಾನೆ 6ರಿಂದ 6.45ರವರೆಗೆ ವಿಜೃಂಭಣೆಯಿಂದ ನೆರವೇರಿತು.

ಮೈಸೂರು ಜಿಲ್ಲೆ, ತಿ.ನರಸೀಪುರ ತಾಲೂಕಿನ, ಬನ್ನೂರು ಹೋಬಳಿಯ ಬೀಡನಹಳ್ಳಿ ಗ್ರಾಮದ ಶ್ರೀ ನಂದಿಬಸವೇಶ್ವರ ಸ್ವಾಮಿಯ ಕೊಂಡವನ್ನು ಕಾಶಿವೇಷಧಾರಿ ಮಹದೇವಸ್ವಾಮಿ ಅವರು ಗಜಗಾಂಭೀರ್ಯದಿಂದ ಹಾಯ್ದರು. ಇವರ ನಂತರ ಶ್ರೀಸ್ವಾಮಿಯ ಗುಡ್ಡಪ್ಪನವರಾದ ನಂಜುಂಡೇಗೌಡ ಅವರು ಕೂಡ ಈಬಾರಿ ಭಾರಿ ನಿಧಾನವಾಗಿ ಕೊಂಡ ಹಾಯುವ ಮೂಲಕ ಭಕ್ತರಲ್ಲಿ ಭಕ್ತಿಯ ಸೆಲೆಯನ್ನು ಮೂಡಿಸಿದರು.

ಇನ್ನು ಕೊಂಡ ಹಾಯುವುದಕ್ಕೂ ಮುನ್ನಾ ಮುಂಜಾನೆ ಶ್ರೀಸ್ವಾಮಿಯ ಸನ್ನಿಧಿಯಿಂದ ಶ್ರೀಸ್ವಾಮಿಯ ಬಸವನ ಜತೆಗೆ ಗ್ರಾಮದೇವತೆ ಮಾರಮ್ಮ ಮತ್ತು ಮುತ್ತತ್ತಿರಾಯನ ಪೂಜೆಯೊಂದಿಗೆ ರಾಜ ಬೀದಿಯಲ್ಲಿ ಮೆರವಣಿಗೆ ಮೂಲಕ ಗುರುಸ್ವಾಮಿ ಅವರ ಮನೆಗೆ ಕರೆತರಲಾಯಿತು.

ಗುರುಸ್ವಾಮಿ ಅವರ ಮನೆಯಲ್ಲಿ ಗ್ರಾಮದೇವತೆ ಮಾರಮ್ಮ ಮತ್ತು ಮುತ್ತತ್ತಿರಾಯನ ಪೂಜೆಗಳಿಗೆ ಹೂ ಹೊಂಬಾಳೆ ಮಾಡಿದ ನಂತರ ಶ್ರೀಸ್ವಾಮಿಗೆ ಹರಕೆ ಹೊತ್ತ ಭಕ್ತರು ಬಾಯಿಬೀಗ ಚುಚ್ಚಿಸಿಕೊಂಡರು. ಈ ವೇಳೆ ತಮಟೆ, ಕೊಂಬು ಕಹಳೆಗಳ ಮಂಗಳವಾದ್ಯಗಳೊಂದಿಗೆ ಸಾವಿರಾರು ಭಕ್ತರು ಮೆರವಣಿಗೆ ಮೂಲಕ ಶ್ರೀಸ್ವಾಮಿಯ ಆವರಣ ತಲುಪಿದರು. ರಾತ್ರಿಯಿಡಿ ಹುಣಸೆ ಕಟ್ಟಿಗೆಗಳನ್ನು ಸುಟ್ಟು ಬೇಸಿಗೆ ಸೂರ್ಯನನ್ನು ಮೀರಿಸುವಂತೆ ಸಿದ್ಧಗೊಳಿಸಿದ್ದ ಕೊಂಡದ ಬಳಿ ಎಲ್ಲರೂ ಬಂದು ಸೇರಿದರು.

ಬಾಯಿಬೀಗ ಹರಕೆ ಹೊತ್ತಿದ್ದ ಭಕ್ತರು ಪಂಜಿನ ಸೇವೆಯನ್ನು ಮೆರವಣಿಗೆ ಸಾಗಿದ ದಾರಿಯುದ್ದಕ್ಕೂ ಮಾಡಿ ಶ್ರೀಸ್ವಾಮಿಗೆ ಭಕ್ತಿಯಿಂದ ನಮಿಸಿದರು. ಇನ್ನು ಕೊಂಡದ ಬಳಿ ಬರುತ್ತಿದ್ದಂತೆ ಕೊಂಗ ಬೀಸಿ ಕೆಂಡದ ಮೇಲೆ ಇದ್ದ ಬೂದಿಯನ್ನು ತೆರವುಗೊಳಿಸಲಾಯಿತು. ಬಳಿಕ ಕಾಶಿಯ ವೇಷಧಾರಿ ಮಹದೇವಸ್ವಾಮಿ, ಅವರ ಹಿಂದೆ ಶ್ರೀಸ್ವಾಮಿಯ ದೇವರ ಗುಡ್ಡಪ್ಪನವರಾದ ನಂಜುಂಡೇಗೌಡ ಅವರು ಕೊಂಡ ಹಾಯ್ದರು.

ಕೊಂಡ ಹಾಯುವುದನ್ನು ಪ್ರತಿಯೊಬ್ಬರೂ ನೋಡಲೆಂದು ಬೆಳ್ಳಿ ಪರದೆಯ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಶ್ರೀ ಸ್ವಾಮಿಯ ಸನ್ನಿಧಿಯಲ್ಲಿ ನೆರೆದಿದ್ದ ಸಾವಿರಾರು ಭಕ್ತರು ಕೊಂಡ ಹಾಯುವುದನ್ನು ತಮ್ಮ ಕಣ್ತುಂಬಿಕೊಂಡು ಶ್ರೀಸ್ವಾಮಿಯ ಕೃಪೆಗೆ ಪಾತ್ರರಾದರು.

ಇನ್ನು ಭಾನುವಾರ ಬಂಡಿಯುತ್ಸವ ನಡೆಯಿತು. ಇಂದು ಕೊಂಡೋತ್ಸವ ನೆರವೇರುವ ಮೂಲಕ ಬಂಡಿಕೊಂಡೋತ್ಸವ ಪೂರ್ಣಗೊಂಡಿತು. ಒಟ್ಟಾರೆ ಕಳೆದ 12 ವರ್ಷದಲ್ಲೇ  ಇಂದು ನಡೆದ 13ನೇ ಕೊಂಡೋತ್ಸವ ಭಾರಿ ವಿಜೃಂಭಣೆಯಿಂದ ಕೂಡಿತ್ತು.

Deva
the authorDeva

Leave a Reply

error: Content is protected !!
Latest news
ನಡದು ಹೋಗುತ್ತಿರುವ ನಮ್ಮ ನೌಕರರಿಗೆ ಕೃತಜ್ಞತೆ ಸಲ್ಲಿಸಿ: ಸಾರಿಗೆ ನೌಕರ ಮನವಿ ಸಾರಿಗೆ ನೌಕರರ 2ನೇ ದಿನದ ಪಾದಯಾತ್ರೆ: 30 ಕಿಮೀ ನಡಿಗೆ ಯಶಸ್ವಿ- ಹಿರಿಯೂರಿನಲ್ಲಿ ವಾಸ್ತವ್ಯ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ- ಯಾವ ಜಿಲ್ಲೆಗೆ ಯಾವ ಸ್ಥಾನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ: ಶೇ.84ರಷ್ಟು ವಿದ್ಯಾರ್ಥಿಗಳು ಪಾಸ್‌ ಮೊದಲ ದಿನದ ಸಾರಿಗೆ ನೌಕರರ ಪಾದಯಾತ್ರೆ ಯಶಸ್ವಿ, ನಾಳೆ ಬೆಳಗ್ಗೆ 6 ಗಂಟೆಯಿಂದ ಮುಂದುವರಿಕೆ KSRTC: ಇಂದು ಸಾರಿಗೆ ಸಚಿವರ ಭೇಟಿಯಾದ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು KSRTC: ಸಾರಿಗೆ ನೌಕರರ ಪಾದಯಾತ್ರೆ ಯಶಸ್ವಿಗಾಗಿ ಬೇರೆ ಸಂಘಟನೆಗಳೂ ಸಾಥ್‌! ಆಟೋ ಗ್ಯಾಸ್ ಕೊರತೆ - ವದಂತಿಗಳಿಗೆ ಕಿವಿಗೊಡಬೇಡಿ - ಸಾರ್ವಜನಿಕರಿಗೆ ಕರೆ ಚಿತ್ರದುರ್ಗ: ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಸಾರಿಗೆ ನೌಕರರ ಪಾದಯಾತ್ರೆ ಆರಂಭ ಮುಳ್ಳಯ್ಯನಗಿರಿಗೆ ಪ್ರವಾಸಕ್ಕೆ ಬಂದಿದ್ದ 16 ವರ್ಷದ ವಿದ್ಯಾರ್ಥಿನಿ ನಾಪತ್ತೆ