NEWSನಮ್ಮಜಿಲ್ಲೆನಮ್ಮರಾಜ್ಯ

BMTC: ಇದು ನಿರ್ವಾಹಕರ ಮೇಲೆ ಗದಾ ಪ್ರಹಾರ ಮಾಡಲು ಎಡೆಮಾಡಿಕೊಡುವ ಆದೇಶ- ಹಿಂಪಡೆಯಲು ಕೂಟ ಆಗ್ರಹ

ವಿಜಯಪಥ ಸಮಗ್ರ ಸುದ್ದಿ
  • ಈಗಲೇ ನಿರ್ವಾಹಕರ ಹೆದರಿಸಿ ಬಲವಂತದಿಂದ ಶೇ.50ರಿಂದ 60ರಷ್ಟು ಸುಳ್ಳು ಕೇಸ್‌ ಹಾಕುವ ಅಧಿಕಾರಿಗಳು

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಆದಾಯ ಸೋರಿಕೆ ಆಗುತ್ತಿದ್ದು ಸೋರಿಕೆ ಮಾಡುವ ನಿರ್ವಾಹಕ ಹೆಸರನ್ನು ಕೊಡಿ ಎಂದು ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿಗಳು ಹೊರಡಿಸಿರುವ ಆದೇಶ ಪತ್ರ ಹಿಂಪಡೆಯುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಒತ್ತಾಯಿಸಿದೆ.

ಇದೇ ಏ.17ರಂದು ಸಂಸ್ಥೆಯ ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿಗಳು ಈ ಬಗ್ಗೆ ಆದೇಶ ಹೊರಡಿಸಿದ್ದು. ಈ ಆದೇಶ ಪತ್ರದಲ್ಲಿ ನಿರ್ವಾಹಕರಿಂದಲ್ಲೇ ಸಾರಿಗೆ ಆದಾಯ ಸೋರಿಕೆ ಆಗುತ್ತಿದ್ದು, ಈ ಸೋರಿಕೆಯನ್ನು ತಡೆಯಲು ಪ್ರತಿ ತಿಂಗಳು ಘಟಕಗಳಲ್ಲಿ ಸಾರಿಗೆ ಆದಾಯ ಸೋರಿಕೆ ಮಾಡುವ 5 ನಿರ್ವಾಹಕರನ್ನು ಗುರುತಿಸಿ, ಕೇಂದ್ರ ಕಚೇರಿಗೆ ಮಾಹಿತಿ ನೀಡಬೇಕೆಂದು, ಅವರ ಮೇಲೆ ಅನಿರಿಕ್ಷಿತವಾಗಿ ತನಿಖೆ ಮಾಡುವ ಬಗ್ಗೆ ತಿಳಿಸಿದ್ದೀರಿ.

ಸಾರಿಗೆ ಆದಾಯ ಕೇವಲ ನಿರ್ವಾಹಕರಿಂದ ಮಾತ್ರ ಸೋರಿಕೆ ಆಗುತ್ತಿಲ್ಲವೆಂದು ಸಂಸ್ಥೆಯ ಎಲ್ಲ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೂ ತಿಳಿದಿದ್ದು, ನಿಜವಾಗಿ ಸಾರಿಗೆ ಆದಾಯ ಸೋರಿಕೆ ಮಾಡುತ್ತಿರುವ ಕೆಲವು ಸಿಬ್ಬಂದಿಗಳನ್ನು ಘಟಕ, ವಿಭಾಗ ಮತ್ತು ಕೇಂದ್ರ ಕಚೇರಿಗಳಲ್ಲಿ ಇಟ್ಟುಕೊಂಡು, ಅಮಾಯಕ ನಿರ್ವಾಹಕರ ಮೇಲೆ ಗದಪ್ರಹಾರ ಮಾಡುವ ಈ ರೀತಿಯ ಕ್ರಮಗಳು ಎಷ್ಟು ಸರಿ? ಈಗ ಕೇಲವು ತನಿಖಾಧಿಕಾರಿಗಳು ಬರೆಯುತ್ತಿರುವ ಕೇಸುಗಳಲ್ಲಿ 50% ರಿಂದ 60% ರಷ್ಟು ಕೇಸುಗಳು ಬಲವಂತದಿಂದ, ನಿರ್ವಾಹಕರನ್ನು ಹೆದರಿಸಿ ಬರೆಯುತ್ತಿರುವ ಸುಳ್ಳು ಕೇಸುಗಳೆಂದು ತಮಗೆ ತಿಳಿಯದ ವಿಚಾರವಲ್ಲ.

ಈ ಮಧ್ಯ ತಾವು ಈ ರೀತಿಯ ಆದೇಶಗಳನ್ನು ಹೊರಡಿಸುವುದರಿಂದ ಘಟಕ ಮಟ್ಟದಲ್ಲಿ ಕೆಲವು ಅಧಿಕಾರಿಗಳು ಈ ಆದೇಶವನ್ನು ದುರುಪಯೋಗ ಪಡಿಸಿಕೊಂಡು, ಅವರು ಮಾಡುತ್ತಿರುವ ಭ್ರಷ್ಟಾಚಾರ ಕೆಲಸಗಳಿಗೆ ಘಟಕಗಳಲ್ಲಿ ವಿರೋಧ ವ್ಯಕ್ತಪಡಿಸುವ ಹಾಗೂ ಸಂಸ್ಥೆಯ ಕಾನೂನು ಮತ್ತು ನಿಯಮಗಳ ಅನುಸಾರವಾಗಿ ಕರ್ತವ್ಯ ನಿರ್ವಹಿಸುವ ನಿರ್ವಾಹಕರನ್ನು ಗುರಿಯಾಗಿಸಿ, ಘಟಕ ಮಟ್ಟದಿಂದ ಕೇಂದ್ರ ಕಚೇರಿಗೆ ಹೆಸರುಗಳನ್ನು ನೀಡಬಹುದು.

ಉದಾ: ಇತ್ತೀಚೆಗೆ ಒಂದು ಘಟಕದಲ್ಲಿ ಚಾಲನಾ ಸಿಬ್ಬಂದಿ ಮೇಲೆ ವೈಯಕ್ತಿಕ ದ್ವೇಷದ ಕಾರಣ ಅಧಿಕಾರಿಗಳೇ ಬಸ್ಸಿನ ಗೌಪ್ಯ ಸ್ಥಳದಲ್ಲಿ ಹಣವಿಟ್ಟು, ತನಿಖಾಧಿಕಾರಿಗಳಿಗೆ ಆ ಗೌಪ್ಯ ಸ್ಥಳದ ಮಾಹಿತಿ ನೀಡಿ, ಆ ಚಾಲನಾ ಸಿಬ್ಬಂದಿ ಮೇಲೆ ಕೇಸು ಬರೆದು, ಬಸ್ಸಿನ ಸಿ.ಸಿ ಕ್ಯಾಮರ ಪರಿಶೀಲಿಸಿದಾಗ ಸತ್ಯಾಂಶ ಹೊರಬಂದಿತ್ತು.

ಈಗ ಆ ಎಲ್ಲ ಆಧಿಕಾರಿಗಳು ಈ ಪ್ರಕರಣದಲ್ಲಿ ಸಿಕ್ಕಿ ಅವರ ವಿರುದ್ಧ ತನಿಖೆ ನಡೆಯುತ್ತಿದೆ ಹಾಗೂ 2021 ರ ಸಾರಿಗೆ ಮುಷ್ಕರದ ಸಮಯದಲ್ಲಿ ಸಹಾ ಇದೆ ರೀತಿ ಮುಷ್ಕರದಲ್ಲಿ ಭಾಗವಹಿಸದ ಎಷ್ಟೋ ಅಮಾಯಕ ಸಿಬ್ಬಂದಿಗಳನ್ನು ಕೆಲ ಆಧಿಕಾರಿಗಳು ತಮ್ಮ ವೈಯಕ್ತಿಕ ದ್ವೇಷದ ಕಾರಣ ಕೇಂದ್ರ ಕಚೇರಿಗೆ ಅವರ ಹೆಸರುಗಳನ್ನು ನೀಡಿ ಆಮಾನತು, ವರ್ಗಾವಣೆ ಮತ್ತು ವಜಾ ಆಗುವಂತೆ ಮಾಡಿದ್ದರು. ಇದನ್ನೂ ಓದಿ: BMTC- ಆದಾಯ ಸೋರಿಕೆ ಮಾಡುವ ನಿರ್ವಾಹಕರ ಪಟ್ಟಿಕೊಡಿ: ಜಾಗೃತಾಧಿಕಾರಿ

ಸಂಸ್ಥೆಯ ಎಲ್ಲ ಬಸ್ಸುಗಳಲ್ಲಿ ಈಗಾಗಲೇ ಸಿಸಿ ಕ್ಯಾಮರಾ ಅಳವಡಿಸಿದ್ದು, ಚಾಲನಾ ಸಿಬ್ಬಂದಿಗಳ ಪ್ರತಿಯೊಂದು ಚಲನವಲನಗಳನ್ನು ಗಮನಿಸುತ್ತಿದ್ದು, ಇತ್ತೀಚೆಗೆ ಸಂಸ್ಥೆಯಲ್ಲಿ ಬಳಸುತ್ತಿರುವ ಇಟಿಎಂ ಟಿಕೆಟ್ ಯಂತ್ರಗಳು ಜಿಪಿಎಸ್ ತಂತ್ರಾಂಶ ಒಳಗೊಂಡ ಅತ್ಯಾಧುನಿಕ ಯಂತ್ರಗಳಿದ್ದು, ಈ ಎರಡು ತಂತ್ರಾಂಶಗಳನ್ನು ಬಳಸಿಕೊಂಡು ಸಿಸಿ ಕ್ಯಾಮರಾದ ಮೂಲಕ ಬಸ್ಸಿನಲ್ಲಿ ಪ್ರಯಾಣಿಸಿದ ಪ್ರಯಾಣಿಕರು ಮತ್ತು ಇಟಿಎಂ ಟಿಕೆಟ್ ಯಂತ್ರಗಳಲ್ಲಿ ನಿರ್ವಾಹಕರು ವಿತರಣೆ ಮಾಡಿರುವ ಟಿಕೆಟ್‌ಗಳನ್ನು ತಾಳೆ ಮಾಡಿ ಕೂತ ಜಾಗದಿಂದಲೇ ನೈಜವಾಗಿ ಯಾವ ನಿರ್ವಾಹಕರು ಆದಾಯ ಸೋರಿಕೆ ಮಾಡುತ್ತಿದ್ದಾರೆ ಎಂದು ಪರಿಶೀಲಿಸಬಹುದು.

ಅಲ್ಲದೆ ಇದರಿಂದ ತನಿಖೆ ಮಾಡಲು ತಾವುಗಳು ಸಂಸ್ಥೆ ವತಿಯಿಂದ ವಾರ್ಷಿಕವಾಗಿ ಖರ್ಚು ಮಾಡುತ್ತಿರುವ ಕೋಟ್ಯಂತರ ರೂಪಾಯಿಗಳನ್ನು ಉಳಿಸಬಹುದು. ಜತೆಗೆ ಎನ್ಐಎನ್ಸಿ ಪದ್ಧತಿ ಜಾರಿಗೆ ತರುವುದರಿಂದ ಪ್ರತಿಯೊಬ್ಬ ಪ್ರಯಾಣಿಕರಿಗೂ ತಾವೂ ಟಿಕೆಟ್ ಪಡೆದಿಲ್ಲವೆಂದರೆ ತಾವೇ ದಂಡ ಕಟ್ಟಬೇಕೆಂದು ಅರಿತಾಗ ನಿರ್ವಾಹಕರು ಟಿಕೆಟ್ ನೀಡಲಿಲ್ಲವೆಂದರೆ ಪ್ರಯಾಣಿಕರೆ ಟಿಕೆಟ್ ಕೇಳಿ ಪಡೆಯುತ್ತಾರೆ.

ಶಕ್ತಿ ಯೋಜನೆ ಜಾರಿಯಿಂದ ನಿರ್ವಾಹಕರು ಕರ್ತವ್ಯ ನಿರ್ವಹಿಸುವುದೇ ಕಷ್ಟವಾಗಿರುವ ಈ ಸಂದರ್ಭದಲ್ಲಿ ಈ ರೀತಿಯ ಆದೇಶಗಳಿಂದ ತನಿಖಾಧಿಕಾರಿಗಳು ನಿರ್ವಾಹಕರನ್ನು ಸುಖಸುಮ್ಮನೆ ಶೋಷಣೆ ಮಾಡುವುದರಿಂದ ನಿರ್ವಾಹಕರು ಕರ್ತವ್ಯ ನಿರ್ವಹಿಸುವುದು ಕಷ್ಟವಾಗುವ ಜೊತೆಗೆ ಅವರ ಮಾನಸಿಕ ಹಾಗೂ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುವ ಸಂಭವವಿದೆ. ಹೀಗಾಗಿ ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕೆಂದು ಕೂಟದ ರಾಜ್ಯಾಧ್ಯಕ್ಷ ಆರ್‌. ಚಂದ್ರಶೇಖರ್ ಆಗ್ರಹಿಸಿದ್ದಾರೆ.

Deva
the authorDeva

Leave a Reply

error: Content is protected !!