
- ಇದು ಅಧಿಕಾರಿಗಳ ಒಣ ಪ್ರತಿಷ್ಠೆ ಸಂಘಟನೆಗಳ ಬಣ ಬಡಿದಾಟಕ್ಕೆ ಸಾಕ್ಷಿ
- ಸಭೆ ನಿಗದಿಯಾಗಿದ್ದರೂ ಪ್ರವಾಸ ಹೊರಟ ಸಾರಿಗೆ ಸಚಿವರ ನಡೆಯೂ ಅಚ್ಚರಿ ಮೂಡಿಸುತ್ತಿದೆ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಸಂಬಂಧ ನಾಳೆ ಅಂದರೆ ಏ.5ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯಬೇಕಿದ್ದ ಸಭೆಯನ್ನು ಸಕಾರಣ ನೀಡದೆ ಮುಂದೂಡಲಾಗಿದೆ.
ಈ ಸಂಬಂಧ ಸಿಎಂ ಗೃಹ ಕಚೇರಿಯಿಂದ ಮಾಹಿತಿ ಹೊರಬಿದ್ದಿದ್ದು, ಸಾರಿಗೆ ಇಲಾಖೆಯ ಅಧಿಕಾರಿಗಳು ಸಾರಿಗೆ ನೌಕರರ ಸಂಘಟನೆಗಳ ಪದಾಧಿಕಾರಿಗಳಿಗೆ ಫೋನ್ ಮೂಲಕ ಅಂದರೆ ಮೌಖಿಕವಾಗಿ ಇಂದು ಸಂಜೆ ಮಾಹಿತಿ ನೀಡಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳ ಸಭೆ ಹಾಗೂ ಬೆಳಗ್ಗೆ 11.030ಕ್ಕೆ ಸಾರಿಗೆ ನೌಕರರ ಒಕ್ಕೂಟದ ಪದಾಧಿಕಾರಿಗಳ ಸಭೆಯನ್ನು ಆಯೋಜನೆ ಮಾಡಿ ಸಿಎಂ ಏ.1ರಂದು ಆದೇಶ ಹೊರಡಿಸಿದ್ದರು.
ಆದರೆ ನಡೆಯಬೇಕಿದ್ದ ಸಭೆಯನ್ನುಮುಖ್ಯಮಂತ್ರಿಗಳ ತುರ್ತು ಕಾರ್ಯಕ್ರಮಗಳ ಪ್ರಯುಕ್ತ ಮುಂದೂಡಲಾಗಿದೆ ಎಂದು ಸಿಎಂ ಕಚೇರಿಯಿಂದ ಮಾಹಿತಿ ಬಂದಿದೆ. ಮುಂದೆ ಯಾವಾಗ ಸಭೆ ಮಾಡಲಾಗುತ್ತದೆ ಎಂಬ ದಿನಾಂಕವನ್ನು ಇನ್ನೂ ನಿಗದಿ ಮಾಡಲಾಗಿಲ್ಲ ಎಂದು ಸಿಎಂ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಸಾರಿಗೆ ನೌಕರರ ಸಂಘಟನೆಗಳಲ್ಲಿ ಎರಡು ಬಣಗಳು ಇರುವುದರಿಂದ ಒಂದು ಬಣ ಅಗ್ರಿಮೆಂಟ್ ಮೂಲಕ ವೇತನ ಹೆಚ್ಚಳವಾಗಬೇಕು ಎಂದು ಒತ್ತಾಯ ಮಾಡುತ್ತಿದೆ, ಇದು ಬಹುತೇಕ ಅಧಿಕಾರಿಗಳು/ ನೌಕರರಿಗೆ ವಿರುದ್ಧವಾದ ಒತ್ತಾಯವಾಗಿದೆ. ಇನ್ನು ವೇತನ ಆಯೋಗದಂತೆ ನಮಗೂ ವೇತನ ನಿಗದಿ ಮಾಡಿ ಜತೆಗೆ ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಯಂತೆ ಸರಿ ಸಮಾನ ವೇತನ ಮಾಡಬೇಕು ಎಂದು ಮತ್ತೊಂದು ಬಣ ಆಗ್ರಹ ಮಾಡುತ್ತಿದೆ.
ಈ ಎರಡರ ಕಿತ್ತಾಟದಿಂದಾಗಿ ಈಗಾಗಲೇ ಸಾರಿಗೆ ನೌಕರರು 2020 ಜನವರಿ 1ರಿಂದ ಆಗಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಜತೆಗೆ 2024ರ ಜನವರಿ 1ರಿಂದ ಜಾರಿಗೆ ಬರುವಂತೆ ವೇತನ ಹೆಚ್ಚಳವಾಗಬೇಕಿದೆ. ಅದೂ ಕೂಡ ಈ 15 ತಿಂಗಳುಗಳು ಕಳೆಯುತ್ತ ಬಂದರೂ ಈವರೆಗೂ ಸರ್ಕಾರ ಮಾಡದೆ ಬಣ ಬಡಿದಾಟದ ಲಾಭ ಪಡೆಯುತ್ತಿದೆ.
ಇನ್ನು ಈ ಸಂಘಟನಗಳನ್ನು ನಂಬಿರುವ ನೌಕರರು ಈಗ ಬಸ್ ನಿಲ್ಲಿಸಿ ಹೋರಾಟ ಮಾಡುವುದಕ್ಕೆ ಮುಂದಾಗುತ್ತಿಲ್ಲ. ಕಾರಣ ಮುಷ್ಕರ ಮಾಡಲು ನೌಕರರು ಮುಂದಾದರೆ ಸಾರಿಗೆ ನಿಗಮಗಳ ಅಧಿಕಾರಿಗಳೇ ಅವರ ವಿರುದ್ಧ ದೂರು ದಾಖಲಿಸಿ ವಜಾ, ಅಮಾನತು, ವರ್ಗಾವಣೆ, ಪೊಲೀಸ್ ಪ್ರಕಣರ ದಾಖಲಿಸುವ ಜತೆಗೆ ಸಾವಿರಾರು ರೂಪಾಯಿ ದಂಡವನ್ನು ಹಾಕುತ್ತಾರೆ.
ಅಲ್ಲದೆ ವೇತನ ಹೆಚ್ಚಳದ ಲಾಭವನ್ನು ಪಡೆಯುವ ಅಧಿಕಾರಿಗಳು ಈ ಯಾವುದೆ ಮುಷ್ಕರದಲ್ಲಿ ಭಾಗಿಯಾಗದೆ ನೌಕರರ ವಿರುದ್ಧದ ನಿಲುವು ತಾಳುತ್ತಾರೆ. ಜತೆಗೆ ನೌಕರರಿಗೆ ಸಿಗಬೇಕಿರುವ ಮುಂಬಡ್ತಿಗೂ ಕಡಿವಾಣ ಹಾಕುವ ಮೂಲಕ ನೌಕರರನ್ನು ಅಧಿಕಾರಿಗಳೇ ಮೂರನೆ ಗ್ರಹದಿಂದ ಬಂದ ಪ್ರಾಣಿಗಳ ರೀತಿ ನಡೆಸಿಕೊಳ್ಳುತ್ತಾರೆ. ಹೀಗಾಗಿ ಯಾವುದೇ ಕಾರಣಕ್ಕೂ ನೌಕರರು ಮುಷ್ಕರಕ್ಕೆ ಮುಂದಾಗುವುದಿಲ್ಲ ಎಂದು ಹೇಳುತ್ತಿದ್ದಾರೆ.
ಈ ಅಧಿಕಾರಿಗಳ ನಡೆ ಮತ್ತು ಸಂಘಟನೆಗಳ ಬಡಿದಾಟದಿಂದ ಇಲ್ಲಿ ನೌಕರರಿಗಿಂತ ಹೆಚ್ಚಿನ ಲಾಸ್ ಅಧಿಕಾರಿಗಳಿಗೂ ಆಗುತ್ತಿದ್ದೆದರೂ ಅವರು ನೌಕರರ ಪರ ನಿಲ್ಲದ ಪರಿಣಾಮ ಇಂದು ಸರ್ಕಾರ ಮಾಯಬಜಾರ್ ನಾಟಕವಾಡಿಕೊಂಡು ಕಳೆದ 5 ವರ್ಷಗಳಿಂದಲೂ ಸಮಯಕ್ಕೆ ಸರಿಯಾಗಿ ವೇತನ ಹೆಚ್ಚಳ ಮಾಡದೆ ಮುಂದೂಡಿಕೊಂಡು ಬರುತ್ತಿದೆ.
ಇದು ಸದ್ಯಕ್ಕೆ ಮುಗಿಯುವ ಯಾವುದೇ ಸೂಚನೆ ಕಾಣುತ್ತಿಲ್ಲ. ಕಾರಣ ಇಲ್ಲಿ ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು ಎಂಬಂತೆ ಒಂದು ಕಡೆ ಅಧಿಕಾರಿಗಳು ಮತ್ತೊಂದು ಕಡೆ ಸಂಬಂಧವಿಲ್ಲದ ಮತ್ತು ಸಂಬಂಧವಿರುವ ಸಂಘಟನೆಗಳ ಬಣ ಬಡಿದಾಡ. ಇನ್ನು ಇದಕ್ಕೆ ಕಡಿವಾಣ ಬೀಳಬೇಕು ಎಂದರೆ ಇಲ್ಲಿ ಅಧಿಕಾರಿಗಳು/ನೌಕರರು ಭೇದಭಾವ ಮರೆತು ತಮ್ಮ ಬೇಡಿಕೆ ಈಡೇರಿಸಿಕೊಳ್ಳುವುಕ್ಕೆ ಮುಂದಾಗಬೇಕು ಇಲ್ಲದಿದ್ದರೆ ತಿರುಪತಿ ತಿಮ್ಮಪ್ಪನ ನಾಮವೇ ಗತಿಯಾಗುತ್ತದೆ ಅಷ್ಟೆ.