ಏ.29ರ ಒಳಗೆ ರೈತರ ಖಾತೆಗೆ ಬಾಕಿ ಹಣ ಜಮಾ ಡಿಸಿ ಭರವಸೆ ಹಿನ್ನೆಲೆ ಧರಣಿ ತಾತ್ಕಾಲಿಕ ಮುಂದೂಡಿಕೆ: ಕುರುಬೂರು ಶಾಂತಕುಮಾರ್

ಮೈಸೂರು: ಬಣ್ಣಾರಿ ಸಕ್ಕರೆ ಕಾರ್ಖಾನೆಗೆ 9000 ರೈತರು ಕಬ್ಬು ಸರಬರಾಜು ಮಾಡಿದ್ದು ಅವರ ಬ್ಯಾಂಕ್ ಖಾತೆಗಳನ್ನು ಹೊಂದಿಸಿಕೊಂಡು ಹಣ ಜಮಾ ಮಾಡಲು ಸಮಯ ಬೇಕಾಗಿರುವುದರಿಂದ ಏ.29ರ ಒಳಗೆ ಜಮಾ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ತಿಳಿಸಿದ್ದರಿಂದ ಎರಡನೇ ದಿನ ನಡೆಯುತ್ತಿದ್ದ ಧರಣಿಯನ್ನು ತಾತ್ಕಾಲಿಕವಾಗಿ ಮುಂದೂಡಿದ್ದೇವೆ ಎಂದು ಕಬ್ಬುಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.

ಕಬ್ಬಿಗೆ ಸರ್ಕಾರ ಘೋಷಣೆ ಮಾಡಿರುವ ಹೆಚ್ಚುವರಿ ನೂರು ರೂಪಾಯಿ ಬಾಬ್ತು ಸರ್ಕಾರದ 50 ರೂಪಾಯಿಗಳನ್ನು ಏ.29ರ ಒಳಗಾಗಿ ರೈತರ ಖಾತೆಗೆ ಜಮಾ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಧರಣಿ ನಿರತ ರೈತರಿಗೆ ಇಂದು ಭರವಸೆ ನೀಡಿದ್ದಾರೆ.
ಕಬ್ಬಿಗೆ ರಾಜ್ಯ ಸರ್ಕಾರ ಹೆಚ್ಚುವರಿ ನೂರು ರೂಪಾಯಿ ನಿಗದಿ ಮಾಡಿ ಸಕ್ಕರೆ ಕಾರ್ಖಾನೆಗಳು 50 ರೂ. ಸರ್ಕಾರದಿಂದ 50 ರೂಪಾಯಿ ಪಾವತಿಸ ಬೇಕೆಂದು ಆದೇಶ ಮಾಡಿತ್ತು. ಆದರೆ, ದಕ್ಷಿಣ ಭಾರತ ಸಕ್ಕರೆ ಕಾರ್ಖಾನೆಗಳ ಒಕ್ಕೂಟದವರು ಸರ್ಕಾರದ ಆದೇಶದ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿರುವ ಕಾರಣ ಪ್ರಕರಣ ತೀರ್ಮಾನವಾಗುವವರಿಗೆ ಹಣ ಪಾವತಿ ಸಾಧ್ಯವಿಲ್ಲ ಎಂದು ಕಾರ್ಖಾನೆಯವರು ತಿಳಿಸಿದ್ದಾರೆ.
ಆದರೆ ಸರ್ಕಾರದ ವತಿಯಿಂದ ಪಾವತಿಸಬೇಕಾದ ಟನ್ಗೆ ರೂ.50 ರೈತರ ಖಾತೆಗೆ ಏ.29ರ ಒಳಗಾಗಿ ಜಮಾ ಮಾಡಲಾಗುವುದು ಚಳವಳಿ ಕೈ ಬಿಡಬೇಕು ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದ ಕಾರಣ ತಾತ್ಕಾಲಿಕವಾಗಿ ಎರಡನೇ ದಿನದ ಚಳವಳಿಯನ್ನು ನಿಲ್ಲಿಸಲಾಯಿತು ಎಂದರು.
ಸರ್ಕಾರದ ಎಲ್ಲ ಆದೇಶಗಳಿಗೂ ಕಾರ್ಖಾನೆಯವರು ತಡೆಯಾಜ್ಞೆ ತರುತ್ತಾರೆ. ಈ ರೀತಿ ಆದರೆ, ರೈತರಿಗೆ ನ್ಯಾಯ ಹೇಗೆ ಸಿಗುತ್ತದೆ. ಉಚ್ಚ ನ್ಯಾಯಾಲಯದಲ್ಲಿ ಒಬ್ಬರು ನ್ಯಾಯಾಧೀಶರು ಮೂರು ತಿಂಗಳ ಹಿಂದೆ ಇದೇ ಆದೇಶಕ್ಕೆ ಸಂಬಂಧಿಸಿದಂತೆ ತಡೆಯಜ್ಞೆ ನೀಡುವುದಿಲ್ಲ ಎಂದರು. ಇದೇ ಉಚ್ಚ ನ್ಯಾಯಾಲಯ ಮತ್ತೊಬ್ಬ ನ್ಯಾಯಾಧೀಶರು ಈ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದಾರೆ.
ಈ ರೀತಿ ಆದರೆ ರೈತರಿಗೆ ನ್ಯಾಯ ಕೊಡುವವರು ಯಾರು ಎಂದು ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದ ಶಾಂತಕುಮಾರ್, ಗುಜರಾತ್ನಲ್ಲಿ ಒಂದು ಟನ್ ಕಬ್ಬಿಗೆ 5,000 ರೂ. ಪಾವತಿಸಿದ್ದಾರೆ. ಆದರೆ ಇಲ್ಲಿ ಬಣ್ಣಾರಿ ಕಾರ್ಖಾನೆಯವರು 3400 ರೂ. ಕೊಡಲು ಕಷ್ಟ ಎಂದು ಹೇಳುತ್ತಾರೆ ಇದು ರೈತರಿಗೆ ಮಾಡುವ ಮೋಸ ಅಲ್ಲವೇ ಎಂದು ಪ್ರಶ್ನಿಸಿದರು. ಎಲ್ಲರೂ ರೈತರ ಪರ ಎಂದು ಹೇಳುತ್ತಾರೆ. ಆದರೆ, ಕಾನೂನಿನ ಅಡಿಯಲ್ಲಿ ರೈತರನ್ನು ನುರಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು
ಎರಡನೇ ದಿನದ ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಸೋಮಶೇಖರ್, ಮಾರ್ಬಳ್ಳಿ ನೀಲಕಂಠಪ್ಪ, ವರಕೋಡು ನಾಗೇಶ್, ಕುರುಬೂರು ಸಿದ್ದೇಶ್, ಲಕ್ಷ್ಮೀಪುರ ವೆಂಕಟೇಶ್, ಕೆಂಡಗಣಪ್ಪ, ಪ್ರಸಾದ್ ನಾಯಕ, ಮಹದೇವಸ್ವಾಮಿ, ನಾಗೇಶ್, ಬಸವರಾಜ, ಮಹಾದೇವು, ನಾಗೇಂದ್ರ, ಅಂಬಳೆ ಮಂಜುನಾಥ್, ಸುನೀಲ್, ಜಯರಾಮು, ನಂಜುಂಡಸ್ವಾಮಿ, ಶಿವಣ್ಣ, ಬಾಲು, ಸತೀಶ್, ಕಮಲಮ್ಮ ಸೇರಿದಂತೆ ಮತ್ತಿತ್ತರರು ಇದ್ದರು.
Related









