KKRTC: ಸುಳ್ಳು ಕಾರಣ ನೀಡಿ ಚಾಲಕನ ಅಮಾನತು- ನೊಂದ ಚಾಲಕ ಕುಟುಂಬ ಸಹಿತ ಘಟಕಕ್ಕೆ ಬಂದು ಆತ್ಮಹತ್ಯೆ ಯತ್ನ
- ಡಿಎಂಗೆ ಏರು ಧ್ವನಿಯಲ್ಲಿ ಮಾತನಾಡಿದ್ದೀಯೆ ಎಂದು ಅಮಾನತು ಮಾಡಿದ ಡಿಸಿ ಸಾಹೇಬರು
- ಲಿಂಗಸುಗೂರು ಘಟಕದಲ್ಲಿ ಚಾಲನಾ ಸಿಬ್ಬಂದಿ ಗೆ ನಿಲ್ಲ ದ ಹಿಂಸೆ
- ಹಳೇ ಬಸ್ ಕೊಟ್ಟು ಕೆಎಂಪಿಎಲ್ ತರುವಂತೆ ಒತ್ತಡ
ಲಿಂಗಸುಗೂರು: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ರಾಯಚೂರು ವಿಭಾಗದ ಲಿಂಗಸುಗೂರು ಘಟಕದಲ್ಲಿ ನೌಕರರ ಹಿಂಸಿಸುವುದನ್ನೇ ಘಟಕ ವ್ಯವಸ್ಥಾಪಕರು ವೃತ್ತಿಮಾಡಿಕೊಂಡಿದ್ದಾರೆ. ಇದರಿಂದ ಮಾನಸಿಕವಾಗಿ ನೊಂದ ನೌಕರನೊಬ್ಬ ತಮ್ಮ ಕುಟುಂಬ ಸಹಿತ ಘಟಕಕ್ಕೆ ಬಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶನಿವಾರ ನಡೆದಿದೆ.
ಲಿಂಗಸೂಗುರು ಘಟಕ ವ್ಯವಸ್ಥಾಪಕರು ಕೆಎಂಪಿಎಲ್ ತಂದಿಲ್ಲ ಎಂದು ಹಾಗೂ ರೂಟ್ ಪೂರ್ತಿ ಮಾಡಿಲ್ಲ ಎಂಬ ಕಾರಣನೀಡಿ ಚಾಲಕನಿಗೆ ಹಿಂಸೆ ಕೊಟ್ಟಿದ್ದಾರೆ. ಅಲ್ಲದೆ ನನಗೆ ಎದುರುತ್ತರ ಕೊಟ್ಟಿದ್ದಾನೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ವರದಿ ನೀಡಿ ಅವರನ್ನು ಕೆಲಸದಿಂದ ಅಮಾನತು ಮಾಡಿಸಿದ್ದಾರೆ.
ಇದರಿಂದ ಮಾನಸಿಕವಾಗಿ ನೊಂದ ಚಾಲಕ ಅಬ್ದುಲ್ ರಫೀ ಎಂಬುವರು ಕುಟುಂಬ ಸಮೇತ ಘಟಕಕ್ಕೆ ಬಂದು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಷ್ಟರಲ್ಲಿ ಬಂದ ಸಾರಿಗೆ ಘಟಕದ ಭದ್ರತಾ ಸಿಬ್ಬಂದಿ ಅದನ್ನು ಕಸಿದುಕೊಂಡು ಆಗುತ್ತಿದ್ದ ಅನಾಹುತವನ್ನು ತಪ್ಪಿಸಿದ್ದಾರೆ.
ಘಟನೆ ವಿವರ: ಡಿಸೆಂಬರ್ 2ರಂದು ಕಿಮೀ ಅಪೂರ್ಣ ಮಾಡಿಕೊಂಡು ಬಂದು ಕೆಎಂಪಿಎಲ್ ಕಡಿಮೆ ತಂದಿದ್ದಿರುವ ವಿಚಾರದ ಕುರಿತು ಚಾಲಕ ಹಾಗೂ ಘಟಕದ ವ್ಯವಸ್ಥಾಪಕರ ನಡುವೆ ವಾಗ್ವಾದ ನಡೆದಿದೆ. ಇದನ್ನೇ ಮುಂದಿಟ್ಟುಕೊಂಡು ವ್ಯವಸ್ಥಾಪಕರು ಚಾಲಕರಿಗೆ ನೋಟಿಸ್ ನೀಡಿ ವಿಭಾಗೀಯ ನಿಯಂತ್ರಣಾಧಿಕಾರಿಗೆ ವರದಿ ನೀಡಿದ್ದಾರೆ. ಆ ವರದಿಯ ಆಧಾರದ ಮೇಲೆ ಡಿಸೆಂಬರ್ 6ರಂದು ಘಟಕದ ವ್ಯವಸ್ಥಾಪಕರ ವಿರುದ್ಧ ಏರು ಧ್ವನಿಯಲ್ಲಿ ಮಾತನಾಡಿದಗದೀರ ಎಂದು ಚಾಲಕ ಅಬ್ದುಲ್ ರಫಿ ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಕುಟಂಬ ಸಮೇತ ಆತ್ಮಹತ್ಯೆಗೆ ಯತ್ನ: ಅಮಾನತು ಮಾಡಿರುವ ಆದೇಶ ಪ್ರತಿ ನೋಡಿದ ಚಾಲಕ ಅಬ್ದುಲ್ ರಫಿ ಆಘಾತಕ್ಕೊಳಗಾಗಿ ತನ್ನ ಇಡೀ ಕುಟಂಬವನ್ನು ಕರೆದುಕೊಂಡು ಬಂದು ವಿಷದ ಬಾಟಲ್ ತಂದು ಸಾರಿಗೆ ಘಟಕದ ಎದುರು ಧರಣಿ ಕುಣಿತು ನಮಗೆ ನ್ಯಾಯ ಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಅಲ್ಲದೆ ಘಟಕದ ವ್ಯವಸ್ಥಾಪಕರು ಕೆಎಂಪಿಲ್ ಕಡಿಮೆ ಬಂದಿದೆ ಹಾಗೂ ಇತರೆ ಸಣ್ಣ ಸಣ್ಣ ವಿಚಾರಕ್ಕೂ ಪದೇಪದೇ ನೋಟಿಸ್ ನೀಡಿ ಮಾನಸಿಕ ಹಿಂಸೆ ನೀಡುತ್ತಿದ್ದರೆ ಹೇಗೇ ಕರ್ತವ್ಯ ಮಾಡಲು ಸಾಧ್ಯ, ನಾವು ಮನುಷ್ಯರೇ ತಾನೆ ಇಷ್ಟು ಒತ್ತಡ ಹಾಕಿದರೆ ಕೆಲಸ ಮಾಡಲು ಹೇಗೆ ಸಾಧ್ಯ. ನಾನು ಸೇರಿದಂತೆ 25 ಸಿಬ್ಬಂದಿಗಳಿಗೆ ಇದೇ ರೀತಿ ನೋಟಿಸ್ ನೀಡಿದ್ದಾರೆ ಎಂದು ಆರೋಪಿಸಿದರು.
ಸಣ್ಣ ಪುಟ್ಟ ವಿಚಾರಗಳನ್ನು ಸ್ಥಳೀಯ ಹಂತದಲ್ಲಿ ಪರಿಹರಿಸಬಹುದು. ಆದರೆ ಸಣ್ಣ ಸಣ್ಣ ವಿಚಾರಕ್ಕೂ ನೋಟಿಸ್ ನೀಡಿ ಅಮಾನತು ಮಾಡುವಂತೆ ಮೇಲಧಿಕಾರಿಗಳಿಗೆ ವರದಿ ನೀಡುತ್ತಾರೆ. ಬಳಿಕ ನಾವು ಮೇಲಧಿಕಾರಿಗಳಿಗೆ ಕೈ ಕಾಲು ಮುಗಿದು ತಪ್ಪಾಗಿದೆ ಎಂದು ಕ್ಷಮೆ ಕೇಳಿ ಮತ್ತೆ ಕೆಲಸ ಮಾಡಬೇಕಾದ ಪರಿಸ್ಥಿತಿಯನ್ನು ಘಟಕದ ವ್ಯವಸ್ಥಾಪಕರು ತಂದಿದ್ದಾರೆ.
ಗುಜರಿಗೆ ಹಾಕುವ ಹಳೆಯ ಬಸ್ಸುಗಳನ್ನು ನೀಡುತ್ತಾರೆ. ದೇವರ ಮೇಲೆ ಭಾರ ಹಾಕಿ ನಾವು ಕೂಡ ಅದೇ ಹಳೆಯ ಬಸ್ ಓಡಿಸಿ ಪ್ರಯಾಣಿಕರನ್ನು ಸುರಕ್ಷಿತವಾಗಿ ತಲುಪಿಸುವ ಕೆಲಸ ಮಾಡುತ್ತೇವೆ. ಇದರ ನಡುವೆ ಕೆಎಂಪಿಎಲ್ ತರಬೇಕು ಎಂದು ಕಾರಣ ನೀಡಿ ಮ್ಯಾನೇಜರ್ ನೋಟಿಸ್ ನೀಡಿ ಅಮಾನತು ಮಾಡಿಸುತ್ತಿದ್ದಾರೆ ಎಂದು ನೋವು ತೋಡಿಕೊಂಡಿದ್ದಾರೆ.
ಇನ್ನು ಈ ಘಟಕ ವ್ಯವಸ್ಥಾಪಕರಿಂದ ಚಾಲಕರು ಹಾಗೂ ನಿರ್ವಾಹಕರು ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದೇವೆ. ನಮಗೆ ನ್ಯಾಯ ಸಿಗಬೇಕು, ಈ ಘಟಕದ ವ್ಯವಸ್ಥಾಪಕರು ವರ್ಗಾವಣೆಯಾಗಬೇಕು ಇಲ್ಲವೇ ನಾವು ಜೀವ ಬಿಡುತ್ತೇವೆ. ವಿಭಾಗೀಯ ನಿಯಂತ್ರಣಾಧಿಕಾರಿಗಳು ಸ್ಥಳಕ್ಕೆ ಬರೋವರಿಗೂ ಧರಣಿ ವಾಪಸ್ ಪಡೆಯುವುದಿಲ್ಲ ಎಂದು ಅಮಾನತು ಗೊಂಡಿರುವ ಚಾಲಕ ಅಬ್ದುಲ್ ರಫಿ ಹೇಳಿದರು.
ವಿಷದ ಬಾಟಲ್ ಕಸಿದುಕೊಂಡ ಸಿಬ್ಬಂದಿ: ಮಾನಸಿಕ ಹಿಂಸೆಯಿಂದ ನೊಂದಿರುವ ಚಾಲಕ ಅಬ್ದುಲ್ ರಫಿ ತನ್ನ ಕುಟಂಬದೊಂದಿಗೆ ಸಾರಿಗೆ ಘಟಕದ ಎದುರು ವಿಷ ಕುಡಿಯಲು ಯತ್ನಿಸಿದ್ದರು ಅಷ್ಟರಲ್ಲಿ ಸಾರಿಗೆ ಘಟಕದ ಭದ್ರತಾ ಸಿಬ್ಬಂದಿ ಅದನ್ನು ಕಸಿದುಕೊಂಡು ಮಾತಿನ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳುವಂತೆ ಸಲಹೆ ನೀಡಿದರು.
ಘಟಕದಲ್ಲಿ ನೌಕರರ ಮೇಲೆ ಈ ರೀತಿ ದಂಡಾಸ್ತ್ರ ಹೂಡುವುದು ಸರಿಯೇ? ಈ ಬಗ್ಗೆ ಮೇಲಧಿಕಾರಿಗಳು ಏಕೆ ಕೇಳುತ್ತಿಲ್ಲ. ಹೀಗಾಗಿ ಲಿಂಗಸುಗೂರು ಘಟಕದಲ್ಲಿ ಚಾಲಕರಿಗೆ ಕೊಡುತ್ತಿರುವ ಹಿಂಸೆಯನ್ನು ವ್ಯವಸ್ಥಾಪಕ ನಿರ್ದೇಶಕರು ಗಮನ ಹರಿಸಿ ತಪ್ಪಿಸಬೇಕು. ಇನ್ನು ನಿಗಮಗಳಲ್ಲಿ ಇರುವ ನಿಯಮಗಳನ್ನೇ ಗಾಳಿಗೆ ತೂರಿ ರೀತಿ ನೌಕರರ ಮೇಲೆ ದಬ್ಬಾಳಿಕೆ ನಡೆಸುವ ಅಧಿಕಾರಿಗಳ ವಿರುದ್ಧವು ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಮುಖವಾಗಿ ತುರ್ತು ಸಂದರ್ಭದಲ್ಲಿ ನೌಕರರು ಒಂದೆರಡು ದಿನ ರಜೆ ಹಾಕಿದರೆ ನೌಕರರ ಕೊರತೆಯಿದೆ ಹೀಗಾಗಿ ನಿಮಗೆ ರಜೆ ಕೊಡಲು ಬರುವುದಿಲ್ಲ ಎಂದು ಹೇಳುತ್ತಾರೆ. ಆದರೂ ತುರ್ತು ಸಂದರ್ಭವಾಗಿದ್ದರಿಂದ ರಜೆ ಹಾಕಿದರೆ ಗೈರು ಹಾಜರಿ ತೋರಿಸಿ ಅದಕ್ಕೂ ಮೆಮೋ ಕೊಡುತ್ತಾರೆ.
ಇನ್ನು ಇಲ್ಲ ಸಲ್ಲದ ಆರೋಪ ಮಾಡಿ 3-6 ತಿಂಗಳು ಅಮಾನತು ಮಾಡುತ್ತಾರಲ್ಲ ಆಗ ನೌಕರರ ಕೊರತೆ ಆಗುವುದಿಲ್ಲವೆ. ಅವರ ಬದಲಿಗೆ ಬೇರೆ ಯಾರನ್ನು ಹಾಕುತ್ತಾರೆ ಈ ಅಧಿಕಾರಿಗಳು. ಈ ರೀತಿ ಅಮಾನತು ಮಾಡಿ ಹಿಂಸೆ ನೀಡುವ ಬದಲಿಗೆ ಆಗಿರುವ ಸಣ್ಣಪುಟ್ಟ ಸಮಸ್ಯೆಗಳನ್ನು ಕುಳಿತು ಬಗೆಹರಿಸಿಕೊಂಡು ನೌಕರರಿಗೆ ಉತ್ತಮ ವಾತಾವರಣ ಸೇಷ್ಟಿಸಿದರೆ ಅವರಿಗೂ ಖುಷಿ ಆಗುತ್ತದೆ. ಅಂಥ ವಾತಾವರಣ ಘಟಕದಲ್ಲಿ ನಿರ್ಮಾಣವಾಗಬೇಕಿದೆ.