KSRTC: ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಮರೆತಿದ್ದ ಬಿಜೆಪಿಯವರು ಈಗ ಬಸ್ ದರ ಹೆಚ್ಚಳ ಖಂಡಿಸುತ್ತಾರೆ- ರಾಮಲಿಂಗಾರೆಡ್ಡಿ
ಬೆಂಗಳೂರು: ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಜನರನ್ನು ಹಾಗೂ ಅಭಿವೃದ್ಧಿಯನ್ನು ಮರೆತಿದ್ದರು. ಈಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಸ್ ದರ ಹೆಚ್ಚಳ ಖಂಡಿಸಿ, ಬಿಜೆಪಿಯವರು ಪ್ರತಿಭಟನೆ ಮಾಡಿ ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಕೇಂದ್ರ ಸರ್ಕಾರದಲ್ಲಿರುವ ಬಿಜೆಪಿ ಡಾಲರ್ ಬೆಲೆ ಕಡಿಮೆಯಾದರೂ ಪೆಟ್ರೋಲ್, ಡೀಸೆಲ್ ಬೆಲೆ ಕಳೆದ 9 ವರ್ಷಗಳಿಂದ ಕಡಿಮೆ ಮಾಡಿಲ್ಲ ಹಾಗೂ ಇದೇ ಬಿಜೆಪಿ ತಾನು ಆಡಳಿತದಲ್ಲಿದ್ದಾಗ 2020ರಲ್ಲಿ ಬಸ್ ದರ ಹೆಚ್ಚಳ ಮಾಡಿದ್ದರು. ಆಗ ಅವರಿಗೆ ಜನರ ತೊಂದರೆ ತಿಳಿಯಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಇನ್ನು ಬಡಜನರ ಗ್ಯಾಸ್ ಸಬ್ಸಿಡಿಯನ್ನು ನಿಲ್ಲಿಸಿದರು. ಆಗ ಬಿಜೆಪಿ ಅವರಿಗೆ ಜನರ ಕಷ್ಟ ತಿಳಿಯಲಿಲ್ಲವೆ? ಅಧಿಕಾರದಲ್ಲಿದ್ದಾಗ ಒಳ್ಳೆ ಆಡಳಿತ ನೀಡಿ ನಾಲ್ಕೂ ನಿಗಮಗಳನ್ನು ಅಭಿವೃದ್ಧಿ ಮಾಡಲು ಪ್ರಯತ್ನಿಸಿದ್ದರೆ ಈ ತೊಂದರೆ ನಮಗೆ ಬರುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಸಮಯಕ್ಕೆ ತಕ್ಕನಾಗಿ ಬಸ್ ಖರೀದಿ ವೇತನ ಪರಿಷ್ಕರಣೆ, ನೇಮಕಾತಿ ಸೇರಿದಂತೆ ಎಲ್ಲವನ್ನು ಸಮಯ ತಕ್ಕನಾಗಿ ಮಾಡಿದರೆ ಇವಾಗ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಬಿಜೆಪಿಯವರು ಮಾಡಿರುವ ಆಡಳಿತ ಲೋಪದಿಂದ ಈಗ ನಮ್ಮ ತಲೆ ಮೇಲೆ ₹5900 ಕೋಟಿ ಸಾಲ ಇಟ್ಟು ಹೋಗಿದ್ದಾರೆ.
ಅವರಿಗೆ ಮುಂಚೆನೇ ತಿಳಿದಿತ್ತೋ ಏನೋ 2023ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಅಧಿಕಾರಿಕೆ ಬರವಲ್ಲ ಎಂದು. ಹೀಗಾಗಿ ಈ ರೀತಿಯ ಎಲ್ಲ ಕೆಟ್ಟ ಆಡಳಿತ ನಡೆಸಿ ನಮ್ಮ ತಲೆ ಮೇಲೆ ಕಟ್ಟಿದರು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ನಾನು ಸಾರ್ವಜನಿಕರ ಗಮನ ಸೆಳೆಯಲು ಇಚ್ಛೆಸುತ್ತೇನೆ.. ನಾವು ಬಸ್ ದರ ಹೆಚ್ಚಿಸಿರುವುದು ಎಲ್ಲದಕ್ಕಿಂತ ಕಡಿಮೆ. ಬೇರೆ ರಾಜ್ಯಗಳಿಗೆ ಹೋಲಿಸಿ ನೋಡಿದರೆ ನಮ್ಮ ರಾಜ್ಯದಲ್ಲೇ ಕಡಿಮೆ ಇದೆ ಹಾಗೂ ಉತ್ತಮ ಸಾರಿಗೆ ವ್ಯವಸ್ಥೆ ಇಡೀ ದೇಶದಲ್ಲಿ ಕರ್ನಾಟಕ ರಾಜ್ಯ ನಂಬರ್ 1 ಇದನ್ನು ಜನರು ಅರಿತು ಸಹಕರಿಸಬೇಕು ಎಂದು ಹೇಳಿದ್ದಾರೆ.
ಈ ನಡುವೆ ಈಗಲಾದರೂ ಬಿಜೆಪಿಯವರು ಕೇವಲ ಸುಳ್ಳು ಹೇಳಿ ತನ್ನ ಟ್ವಿಟ್ಟರ್, ಫೇಕ್ ವಾಟ್ಸಪ್ ಸೋಷಿಯಲ್ ಮೀಡಿಯಾ ಯುನಿವರ್ಸಿಟಿಯಿಂದ ಜನರ ದಾರಿ ತಪ್ಪಿಸುವುದನ್ನು ಬಿಡಬೇಕು ಎಂದು ಸಲಹೆ ನೀಡಿದ್ದಾರೆ.