- ಸಾರಿಗೆ ನೌಕರರತ್ತ ಒಮ್ಮೆ ನೋಡಿ l ವೇತನ ಹೆಚ್ಚಳ ಸಮಸ್ಯೆಗೆ ಇತಿಶ್ರೀ ನಿಮ್ಮಿಂದ ಸಾಧ್ಯ
ಬೆಂಗಳೂರು: ತಿಂಗಳು ಪೂರ್ತಿ ದುಡಿದರೂ ಸರಿಯಾದ ಸಮಯಕ್ಕೆ ವೇತನ ಸಿಗದೆ, ಸಿಕ್ಕ ವೇತನ ಅರ್ಧವಾಗಿದ್ದರೂ, ಅದು ಸಂಸಾರ ನಡೆಸುವುದಕ್ಕೆ ಸಾಲದಿದ್ದರೂ ಸಾರಿಗೆ ನೌಕರರು ನಿಷ್ಠೆ, ಪ್ರಾಮಾಣಿಕತೆ ಮಾತ್ರ ಮರೆತಿಲ್ಲ.
ಯಾವುದೇ ಪ್ರಯಾಣಿಕರು ತಮ್ಮ ವಸ್ತುಗಳನ್ನು ಕಳೆದುಕೊಂಡರೂ ಅದನ್ನು ಕಳೆದುಕೊಂಡ ಪ್ರಯಾಣಿಕರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸವನ್ನು ನೌಕರರು ಮಾಡುತ್ತಾರೆ. ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ಕಳೆದುಕೊಂಡ ಪ್ರಯಾಣಿಕರು ಸಿಗದೆ ಹೋದರೆ ಅದನ್ನು ಅಷ್ಟೇ ನಿಷ್ಠೆಯಿಂದ ಪೊಲೀಸ್ ಠಾಣೆಗೆ ಒಪ್ಪಿಸಿ ಅದರ ಮಾಲೀಕರಿಗೆ ತಲುಪಿಸುವ ಪ್ರಯತ್ನ ಮಾಡುತ್ತಾರೆ.
ಈ ನಡುವೆ ನಮಗೆ ಕೊಡುತ್ತಿರುವ ವೇತನ ಕುಟುಂಬ ನಿರ್ವಾಹಣೆಗೆ ಸಾಲುತ್ತಿಲ್ಲ ಎಂದು ವೇತನ ಹೆಚ್ಚಳಕ್ಕಾಗಿ ಸರ್ಕಾರ ಮತ್ತು ಸಾರಿಗೆ ಆಡಳಿತ ವರ್ಗಕ್ಕೆ ತಮ್ಮ ನೋವನ್ನು ನಿವೇದಿಸಿಕೊಳ್ಳುವ ಸಲುವಾಗಿ ಕಳೆದ 2021ರ ಏಪ್ರಿಲ್ನಲ್ಲಿ ಮುಷ್ಕರ ಮಾಡಿದರು. ಆ ಪರಿಣಾಮ ಹಲವು ಅಮಾಯಕ ನೌಕರರು ವಜಾ, ಅಮಾನತು, ವರ್ಗಾವಣೆಯಂತಹ ಶಿಕ್ಷೆಗೆ ಗುರಿಯಾಗಿದ್ದಾರೆ.
ಇದರಿಂದ ನೊಂದ ನೂರಾರು ನೌಕರರು ತಮ್ಮ ಜೀವವನ್ನೇ ಜವರಾಯನಿಗೆ ಒಪ್ಪಿಸಿದ್ದಾರೆ. ಆದರೂ ಸರ್ಕಾರ ಮತ್ತು ನಿಗಮದ ಆಡಳಿತ ಇಂಥ ನೊಂದ ನೌಕರರ ಬಗ್ಗೆ ಯಾವುದೇ ಮೃದುಧೋರಣೆ ತಾಳದೆ ಈವರೆಗೂ ಅವರನ್ನು ಕೆಟ್ಟದಾಗಿಯೇ ನಡೆಸಿಕೊಳ್ಳುತ್ತಿದೆ. ಇದು ಸರಿಯಲ್ಲ. ನೌಕರರನ್ನು ಈ ರೀತಿ ಕಾಡುವುದು ನಿಮಗೆ ಶ್ರೇಯಸಲ್ಲ.
ನೀವು ಏನೇ ಶಿಕ್ಷೆ ಕೊಟ್ಟರೂ ಅದನ್ನು ತಲೆಬಾಗಿ ಸ್ವೀಕರಿಸುವ ಮೂಲಕ ಸಾರ್ವಜನಿಕರ ಸೇವೆಯಲ್ಲಿ ನಿರತರಾಗಿದ್ದಾರೆ. ಆ ಮೂಲಕ ನಿಮ್ಮ ಸರ್ಕಾರಕ್ಕೆ ಒಳ್ಳೆ ಹೆಸರು ತರುತ್ತಿದ್ದಾರೆ. ಜತೆಗೆ ಸಂಸಾರದ ನೊಗವನ್ನು ಬಹಳ ಕಷ್ಟದಿಂದಲೇ ಎಳೆಯುತ್ತ ಮುಂದೆ ಸಾಗುತ್ತಿದ್ದಾರೆ.
ವೇತನ ಕಡಿಮೆ ಇದ್ದರೂ ಅದು ಹೊತ್ತಿನ ಕೂಳಿಗೆ ಸಾಲದಿದ್ದರೂ ನೌಕರರು ಇಂಥ ಪ್ರಾಮಾಣಿಕ ಸೇವೆ ಮಾಡುತ್ತಿದ್ದಾರೆ. ಅವರಿಗೆ ಈಗಲಾದರೂ ಸರ್ಕಾರ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದಕ್ಕೆ ಮುಂದಾಗಬೇಕು. ಆ ಮೂಲಕ ಸಾರಿಗೆ ಸಂಸ್ಥೆಯ ಪ್ರಾಮಾಣಿಕ ಅಧಿಕಾರಿಗಳು/ನೌಕರರಲ್ಲಿ ಇನ್ನಷ್ಟು ಉತ್ಸಾಹ ತುಂಬುವ ಕೆಲಸ ಮಾಡಬೇಕು.
ಜತೆಗೆ ಮುಷ್ಕರ ವೇಳೆ ವಜಾಗೊಳಿಸಿರುವ ನೌಕರರಲ್ಲಿ ಇನ್ನೂ ಹಲವಾರು ನೌಕರರು ಹೊರಗಿದ್ದಾರೆ. ಅವರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಂಡು ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಕೊಡಬೇಕು. ಇವರಿಗೆ ಒಂದು ಗುಲಗಂಜಿಯಷ್ಟು ಅಂದರೆ ಕಾಳಜಿ ವಹಿಸಿ ಸರಿ ಸಮಾನ ವೇತನ ಘೋಷಣೆ ಮಾಡಿದರೆ ಸರ್ಕಾರಕ್ಕೇನು ತುಂಬಲಾರದ ನಷ್ಟವಾಗುವುದಿಲ್ಲ.
ಆದರೆ ನೀವು ಮಾಡುವ ಘೋಷಣೆ ನೌಕರರಿಗೆ ತುಂಬ ಉಪಯೋಗಕ್ಕೆ ಬರುತ್ತದೆ. ಹೀಗಾಗಿ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಈ ನೌಕರರತ್ತ ಒಂದೇಒಂದು ಬಾರಿ ತಿರುಗಿ ನೋಡಿ. ಅವರ ಹತ್ತಾರು ವರ್ಷಗಳ ಸಮಸ್ಯೆಗೆ ಇತಿಶ್ರೀ ಹಾಡಬಹುದು. ಅದು ಕೂಡ ನಿಮ್ಮ ಕೈಯಲ್ಲೇ ಇದೆ ಆದರೆ ಮನಸ್ಸು ಮಾಡಬೇಕು ಅಷ್ಟೆ.
ಒಮ್ಮೆ ನೌಕರರ ಸರಿ ಸಮಾನ ವೇತನ ಸಮಸ್ಯೆ ನೀಗಿಸಿದರೆ ಅವರು ಮತ್ತೆ ಮತ್ತೆ ಸರ್ಕಾರಕ್ಕೆ ಮುಜುಗರವಾಗುವಂತ ಕೆಲಸ ಮಾಡಲು ಮುಂದೆ ಬರುವುದಿಲ್ಲ. ಜತೆಗೆ ಈ ನೌಕರರ ಹಲವು ಮುಖಂಡರಿಗೆ ಹಣದ ಆಮೀಷ ತೋರಿಸಿ ಪ್ರತಿಭಟನೆಗೆ ಪ್ರಚೋದನೆ ನೀಡುವ ಕೆಲ ಕಾಣದ ಕೈಗಳನ್ನು ಕಟ್ಟಿಹಾಲು ಸಾಧ್ಯವಿದೆ.
ಈಗಲಾದರೂ ಅಂದರೆ ಅಧಿವೇಶನದಲ್ಲಾದರೂ ತಾವೇ ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವುದನ್ನು ಕಾರ್ಯರೂಪಕ್ಕೆ ತಂದರೆ ಈ ನೌಕರರ ನಿತ್ಯದ ಸಮಸ್ಯೆಯನ್ನು ಒಮ್ಮೆಗೆ ನಿವಾರಿಸಿದಂತಾಗುತ್ತದೆ. ಆ ದಿಟ್ಟ ಹೆಜ್ಜೆಯನ್ನು ತಾವು ಇಡಬೇಕಿದೆ. ಇದರಿಂದ ನಿಮಗೂ ಶಾಶ್ವತ ಹೆಸರು ಬರುತ್ತದೆ.