KSRTC ನೌಕರರ ಸರಿಸಮಾನ ವೇತನ ವಿಚಾರ: ಮಠದ ಪರಮ ಭಕ್ತ ಸಿಎಂಗೆ ಸಲಹೆ ನೀಡಿ ಅಂತ ಅಜ್ಜಯ್ಯನವರಲ್ಲಿ ನಿವೇದಿಸಿಕೊಂಡ ಕೂಟ
ಪ್ರಸಿದ್ಧ ಪುಣ್ಯಕ್ಷೇತ್ರ ನೊಣವಿನಕೆರೆ ಕಾಡುಸಿದ್ದೇಶ್ವರ ಮಠದ ಪರಮ ಭಕ್ತ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಕೊಟ್ಟ ಭರವಸೆ ಈಡೇರಿಸಲು ಸಲಹೆ ನೀಡಿ ಎಂದು ಅಜ್ಜಯ್ಯನವರ ಮೊರೆ ಹೋದ ಸಾರಿಗೆ ನೌಕರರು

ತಿಪಟೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರನ್ನು ಸರ್ಕಾರಿ ನೌಕರರಿಗೆ ಇರುವ ವೇತನ ಆಯೋಗ ಮಾದರಿಯಲ್ಲೇ ಸರಿಸಮಾನ ವೇತನ ನೀಡಬೇಕು ಎಂಬುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸುವಂತೆ ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳು ಪ್ರಸಿದ್ಧ ಪುಣ್ಯಕ್ಷೇತ್ರ ನೊಣವಿನಕೆರೆ ಕಾಡುಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಶ್ರೀ ಅಜ್ಜಯ್ಯನವರಲ್ಲಿ ಧಾರ್ಮಿಕ ಪ್ರಾರ್ಥನೆ ಸಲ್ಲಿಸಿ, ನೆರವಿಗಾಗಿ ಮನವಿ ಮಾಡಿದ್ದಾರೆ.
ಇಂದು ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆ ಕಾಡುಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದ ಕೂಟದ ಪದಾಧಿಕಾರಿಗಳು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶ್ರೀಮಠದ ಪರಮಭಕ್ತರು ಅಲ್ಲದೆ, ನಿಮ್ಮ ಆಜ್ಞೆಯನ್ನು ಅವರು ಮೀರುವುದಿಲ್ಲ. ಹೀಗಾಗಿ ಕಳೆದ ವಿಭಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಭರವಸೆ ಕೊಟ್ಟಿರುವಂತೆ ಸಾರಿಗೆ ನೌಕರರಿಗೆ ಸರಿಸಮಾನ ವೇತನ ಕೊಡಲು ನೀವು ಸಲಹೆ ನೀಡಿ ಎಂದು ನಿವೇದಿಸಿಕೊಂಡರು.
ಶ್ರೀ ಅಜ್ಜಯ್ಯನವರ ಭರವಸೆ: ಸಾರಿಗೆ ನೌಕರರ ಅಹವಾಲನ್ನು ಆಲಿಸಿದ ಶ್ರೀ ಕಾಡುಸಿದ್ದೇಶ್ವರ ಮಠದ ಅಜ್ಜಯ್ಯನವರು “ಮೊದಲು ನಿಮ್ಮ ಬೇಡಿಕೆಗಳನ್ನೊಳಗೊಂಡ ಸಮಗ್ರ ಮನವಿ ಪತ್ರವನ್ನು ಸಿದ್ಧಪಡಿಸಿಕೊಂಡು ಬನ್ನಿ, ಅದನ್ನು ಖುದ್ದಾಗಿ ನಾನೇ ಮುಖ್ಯಮಂತ್ರಿಯವರಿಗೆ ತಲುಪಿಸಿ ಮಾತನಾಡುತ್ತೇನೆ,” ಎಂದು ಅಭಯ ನೀಡಿದರು.
ಅಜ್ಜಯ್ಯನವರು ಅಭಯ ನೀಡಿದ್ದು, ಅವರು ಮುಂದೆ ಸೂಚಿಸಿದ ದಿನದಂದೇ ಮನವಿ ಪತ್ರದೊಂದಿಗೆ ಮತ್ತೊಮ್ಮೆ ಮಠಕ್ಕೆ ಭೇಟಿ ನೀಡಿ, ಅಜ್ಜಯ್ಯನವರ ಸಮ್ಮುಖದಲ್ಲೇ ಸಿಎಂ ಅವರಿಗೆ ನಮ್ಮ ಬೇಡಿಕೆಗಳ ತಲುಪಿಸೋಣ ಎಂದು ನಿರ್ಧರಿಸಿದರು.
ಇನ್ನು ಅಜ್ಜಯ್ಯನವರು ದಿನಾಂಕ ನಿಗದಿಪಡಿಸಿದ ದಿನದಂದು ರಾಜ್ಯದ ಮೂಲೆ ಮೂಲೆಗಳಿಂದ ಸಾರಿಗೆ ನೌಕರರು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಮಠಕ್ಕೆ ಆಗಮಿಸಬೇಕು ಎಂದು ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್ ಈ ಸಂದರ್ಭದಲ್ಲಿ ನೌಕರರಿಗೆ ಕರೆ ನೀಡಿದರು.
ನೌಕರರ ನಂಬಿಕೆ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶ್ರೀ ಕಾಡುಸಿದ್ದೇಶ್ವರ ಮಠ ಮತ್ತು ಅಜ್ಜಯ್ಯನವರ ಪರಮ ಭಕ್ತರಾಗಿರುವುದರಿಂದ, ಶ್ರೀಗಳ ಮಾತಿಗೆ ಗೌರವ ಕೊಟ್ಟು ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುತ್ತಾರೆ ಎಂಬ ಬಲವಾದ ನಂಬಿಕೆ ನೌಕರರಲ್ಲಿದೆ.
ಸಿಗುವುದೇ ಐದು ವರ್ಷಗಳ ಹೋರಾಟಕ್ಕೆ ಫಲ?: ಸಾರಿಗೆ ನೌಕರರು ಕಳೆದ ಐದು ವರ್ಷಗಳಿಂದ ಸರ್ಕಾರಿ ನೌಕರರಿಗೆ ಸರಿಸಮಾನವಾದ ವೇತನಕ್ಕಾಗಿ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಕಳೆದ ಸರ್ಕಾರದ ಅವಧಿಯಲ್ಲೂ ಇದೇ ವಿಚಾರವಾಗಿ ಅಜ್ಜಯ್ಯನವರನ್ನು ನಾಲ್ಕು ಬಾರಿ ಭೇಟಿ ಮಾಡಿ ನೌಕರರು ಮನವಿ ಮಾಡಿದ್ದರು. ಆದರೆ, ಅಂದಿನ ಬಿಜೆಪಿ ಸರ್ಕಾರ ಸ್ಪಂದಿಸಲಿಲ್ಲ.
ಚುನಾವಣಾ ಪ್ರಣಾಳಿಕೆ ಭರವಸೆ: ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಸಾರಿಗೆ ನೌಕರರಿಗೆ ಸರಿಸಮಾನ ವೇತನ ನೀಡುವುದಾಗಿ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದು, ಪಕ್ಷ ಅಧಿಕಾರಕ್ಕೆ ಬಂದಿರುವುದರಿಂದ ಆ ಭರವಸೆಯನ್ನು ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ ಈಡೇರಿಸಬೇಕು ಎನ್ನುವುದು ನೌಕರರ ಮುಖ್ಯ ಒತ್ತಾಯವಾಗಿದೆ.
ಭೇಟಿ ಸಂದರ್ಭದಲ್ಲಿ ಬೆಂಗಳೂರು, ಚನ್ನಪಟ್ಟಣ, ಶಿರಾ, ತುರುವೇಕೆರೆ ಹಾಗೂ ರಾಜ್ಯದ ವಿವಿಧ ಭಾಗಗಳ ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳು ಹಾಗೂ ಹಲವು ಸಿಬ್ಬಂದಿ ಇದ್ದು, ಅಜ್ಜಯ್ಯನವರ ಆಶೀರ್ವಾದ ಪಡೆದರು.







